Powered By Blogger

Sunday, April 14, 2024

ಬೆಳಗೋಡು ರಮೇಶ್ ಭಟ್- ಕೊರ್ಗಿ ಶಂಕರ ನಾರಾಯಣ ಉಪಾಧ್ಯಾಯರ " ಅಪ್ಪಯ್ಯನ ಆಸ್ತಿ ಕತೆ "{2022 }

ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು, ಪ್ರಯೋಗ, ಪಾರಾಯಣ, ಪೌರೋಹಿತ್ಯಗಳ ಜಗತ್ತಿಗೆ ಭೂಷಣಪ್ರಾಯರಾಗಿದ್ದ ತಮ್ಮ ತಂದೆ ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯರ ಇತಿವೃತ್ತವನ್ನು, ಅವರೊಂದಿಗೆ ಬದುಕಿದ, ಬಾಳುಸವೆಸಿದ ವ್ಯಕ್ತಿಗಳಿಂದ, ಮತ್ತು ಅಂಥವರಿಂದ ಕೇಳಿದ್ದನ್ನು ನೆನಪಿಸಿಕೊಳ್ಳುತ್ತಿರುವವರಿಂದ ಕಲೆಹಾಕಲು ನಡೆಸಿದ ಅಮೂಲ್ಯ ಕ್ಷೇತ್ರಕಾರ್ಯದ ಫಲಶ್ರುತಿ ಈ ಕೃತಿ. ಇದು ಆತ್ಮಚರಿತ್ರೆಯಲ್ಲ. ಬಹುತೇಕ ಜೀವನ ಚರಿತ್ರೆ ಮತ್ತು ಸ್ಮೃತಿ ಸಂಚಯಗಳ ನಡುವೆ ಗುರುತಿಸಬಹುದಾದ ಒಂದು ಮಹತ್ವದ ಕೃತಿ. ಮಹತ್ವದ್ದು ಏಕೆಂದರೆ ಇಲ್ಲಿ ದಾಖಲಾಗಿರುವುದು ಕೇವಲ ಚರಿತ್ರೆ ಮಾತ್ರವಲ್ಲ. ಇದು ಒಂದು ತಲೆಮಾರಿನ ನಂಬಿಕೆ, ಪರಂಪರೆಯ ಮೇಲಣ ಅಭಿಮಾನ, ಜೀವನ್ಮುಖಿ ಚೈತನ್ಯ, ಆತ್ಮವಿಶ್ವಾಸ ಮತ್ತು ಸೃಜನಶೀಲತೆಯ ದಾಖಲೆಯೂ ಹೌದು. ಸೂರ್ಯನಾರಾಯಣ ಉಪಾಧ್ಯಾಯರು ’ನಂಬುವವರು’ ಮತ್ತು ಕೊನೆಯ ತನಕ ಆ ನಂಬಿಕೆಯನ್ನೇ ಬದುಕಿಗೆ ಆಧಾರವಾಗಿ ಇರಿಸಿಕೊಂಡವರು ಎಂಬ ಕಾರಣಕ್ಕೆ ಈ ಪುಸ್ತಕದ ಹೆಸರು ’ಅಪ್ಪಯ್ಯನ ಆಸ್ತಿಕತೆ.’ ಆಸ್ತಿ ಮತ್ತು ಕತೆಯ ನಡುವೆ ಸ್ವಲ್ಪ ಗ್ಯಾಪ್ ಕೊಟ್ಟಾಗ ಪುಸ್ತಕದ ಹೆಸರಿಗೆ, ಸೂರ್ಯನಾರಾಯಣ ಉಪಾದ್ಯಾಯರ ಜೀವಿತವನ್ನು ಬಲ್ಲವರಿಗೆ ವಿಶೇಷ ಅರ್ಥವೂ ಹೊಳೆಯುತ್ತದೆ. ಇದು ಆ ಅಪ್ಪಯ್ಯ ಮತ್ತು ಅವರ ಮಕ್ಕಳು ತಮ್ಮದಲ್ಲ ಎಂದು ತ್ಯಜಿಸಿದ ಆಸ್ತಿಯ ಕತೆಯೂ ಹೌದು ಎನ್ನುವುದು ಈ ಕೃತಿಯ ಕೊನೆಯ ಭಾಗವನ್ನು ಓದುವಾಗ ಮನದಟ್ಟಾಗುತ್ತದೆ. ಈ ಭಾಗದಲ್ಲಿ ಡಾ ಭಾಸ್ಕರಾನಂದ ಕುಮಾರರು ಹೇಳುವ ಮಾತೊಂದಿದೆ, "ಉಪಾಧ್ಯಾಯರೇ, ನಿಮ್ಮ ದೊಡ್ಡ ಆಸ್ತಿ ಎಂದರೆ ನಿಮ್ಮ ಮಕ್ಕಳೇ. ಅವರೆಲ್ಲ ಕಮ್ಮಿಯಾಗಲಿಕ್ಕೆ ನೀವೇನು ಕಮ್ಮಿಯಾ? ನೀವು ಸಂಪಾದಿಸಿದ ಕಾವ್ಯದ ಆಸ್ತಿಯಲ್ಲಿ, ಸಹೃದಯತೆಯ ಆಸ್ತಿಯಲ್ಲಿ ನನಗೂ ಸ್ವಲ್ಪ ಪಾಲು ಕೊಡಬೇಕು. ಆ ಆಸ್ತಿಯಲ್ಲಿ ಕೃಷಿ ಮಾಡಲಿಕ್ಕೆ ಆಗ್ತದಾ ನೋಡ್ತೇನೆ.” ಕೊರ್ಗಿ ಉಪಾಧ್ಯಾಯರು ಕಳೆದ ಶತಮಾನದ ೨೦ರ ದಶಕದಲ್ಲಿ ಆ ಭಾಗದಲ್ಲಿದ್ದ ಏಕಮಾತ್ರ ಬ್ರಾಹ್ಮಣ ಕುಟುಂಬ. ಯಾವುದೋ ಪಾಳೆಗಾರನ ಕಾಲದಲ್ಲಿ ಮಂಜೂರಾದ ಬಹುತೇಕ ಇಡೀಗ್ರಾಮದ ಉಂಬಳಿ ಕೂಡು ಕುಟುಂಬದ ಈ ಮನೆತನದ್ದು. ಪಾರಂಪರಿಕ ಕುಲವೃತ್ತಿಯಾದ ಜ್ಯೌತಿಷ, ಪೌರೋಹಿತ್ಯ , ಮಂತ್ರವಾದಗಳಲ್ಲಿ ವ್ಯಸ್ತ ಕುಟುಂಬ. ಯಾವುದೋ ಸಂದರ್ಭದಲ್ಲಿ ಚಿಕ್ಕಮ್ಮನ ಭರ್ತ್ಸನೆಗೆ ರೋಸಿಹೋಗಿ ಸೂರ್ಯನಾರಾಯಣ ಉಪಾಧ್ಯಾಯರು ಕೊರ್ಗಿಯ ಮನೆ, ಆಸ್ತಿಯನ್ನೆಲ್ಲ ಬಿಟ್ಟು ಹೆಂಡತಿ ಮಗಳೊಂದಿಗೆ ಪರಿವ್ರಾಜಕನಂತೆ ಹೊರಟು ಬಿಟ್ಟರು. ಮತ್ತೆ ಅವರ ಬದುಕೆಲ್ಲ ತಿರುಗಾಟದ್ದೇ. ತಲಕಳಲೆಯ ರಾಮಮಂದಿರದ ಅರ್ಚಕವೃತ್ತಿಯ ಸಮಯವನ್ನು ಬಿಟ್ಟರೆ ಉಪಾಧ್ಯಾಯರ ಕುಟುಂಬ ಎಲ್ಲಿಯೂ ನೆಮ್ಮದಿಯನ್ನು ಕಂಡಂತೆ ಕಾಣಿಸುವುದಿಲ್ಲ. ಇರುವ ಎಲ್ಲವನ್ನೂ ಬಿಟ್ಟು ಇಲ್ಲದುದರೆಡೆಗೆ ತುಡಿವ, ಹಾರಬಯಸುವ ಅವರ ಚರಿತ್ರೆಯೇ ಕುತೂಹಲ ಹುಟ್ಟಿಸುವಂತಹದು. ಉಪಾದ್ರು ಭಾರತ ದರ್ಶನ ಮತ್ತು ರಾಮಾಯಣ ಸಂಪುಟಗಳ ಏಜೆಂಟರಾಗಿ ಪುಸ್ತಕಗಳನ್ನು ತಲೆಮೇಲೆ ಹೊತ್ತು ಊರೂರು ತಿರುಗಿದ ಕತೆ ಗಳಗನಾಥರನ್ನು ನೆನಪಿಸುವಂತಹದು. ಜೂನ್ ೦೯, ೧೯೭೫. ವೈಶಾಖ ಮಾಸದ ಅಮಾವಾಸ್ಯೆಯಂದು ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯರು ಮಣಿಪಾಲದ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆಯುವಾಗ ಮಕ್ಕಳಿಗೆಂದು ಯಾವ ಭೌತಿಕ ಆಸ್ತಿಯನ್ನೂ ಬಿಟ್ಟುಹೋಗಿರಲಿಲ್ಲ. ಈ ಕೃತಿಯ ಕೊನೆಯ ಸಾಲು " ಅಪ್ಪಯ್ಯನ ಆಸ್ತಿಕತ್ವ ಮಾತ್ರ ಉಳಿದು, ಆಸ್ತಿ-ಕತೆಯು ಕೇವಲ ನೆನಪಾಗಿ ಚಿತ್ತಭಿತ್ತಿಯಲ್ಲಿ ಮಸುಳಕ್ಕರವಾಗಿ ಮರೆಯಾಗಿತ್ತು" ಎಂಬುದು ಹಲವು ಅರ್ಥಗಳಲ್ಲಿ ಅವರ ಬದುಕು ಕೊಟ್ಟ ಸಂದೇಶವೂ ಆಗಿದೆ. *** ಈ ಬೃಹದ್ ಗ್ರಂಥದ ಮೂಲಕ ಶಂಕರನಾರಾಯಣ ಉಪಾಧ್ಯಾಯರು ಸುಮ್ಮನೆ, ತಮ್ಮ ತಂದೆಯ ಕತೆ ಹೇಳುತ್ತಿಲ್ಲ. ಅವರು ತಮ್ಮ ಹಿರಿಯರು ಅಭಿಮಾನದಿಂದ ನಡೆಸಿಕೊಂಡು ಬಂದ ಪ್ರತಿಯೊಂದು ಕ್ರಿಯೆಯ ಅರ್ಥ ಮತ್ತು ಮಹತ್ವವನ್ನು ಗುರುತಿಸುತ್ತಾರೆ. ಉದಾಹರಣೆಗೆ ಉತ್ತರಕ್ರಿಯೆಯ ಕರ್ಮಕಲಾಪಗಳ ಮಂತ್ರಗಳ ಹಿಂದಿರುವ ಅಭಿಮಾನ ತತ್ತ್ವವನ್ನು ಗುರುತಿಸುವುದು. ’ಯಾವ ವಂಶ, ಯಾವ ಪಥ, ಯಾವ ಪ್ರವರ, ಯಾರ ಮಗ/ಮೊಮ್ಮಗ/ಮರಿಮಗ ಇತ್ಯಾದಿ ವಿವರ ನಮ್ಮ ಸಾಮಾಜಿಕ ಜೀವನಕ್ಕೆ ಒಂದು ಘನತೆಯನ್ನು ತಂದುಕೊಡುತ್ತದೆ. ಈ ವಿವರ ಯಾರೋ ನಮಗೆ ಹೇಳಿ ಬಾಯಿಪಾಠಮಾಡಿ ದೈನೇಸಿ ಸ್ಥಿತಿಗೆ ನಾವು ಹೋಗಬಾರದು. ಅದಕ್ಕಾಗಿ ಕನಿಷ್ಠ ಮೂರು ತಲೆಮಾರಿನ ಪಿತೃಗಳ ಹೆಸರಾದರೂ ನಾಲಗೆಯಲ್ಲಿ ನೆಲಸಲಿ ಎಂದು ಔರ್ಧ್ವದೈಹಿಕ ಕರ್ಮಕಲಾಪಗಳನ್ನು ರೂಢಿಸಿದ್ದಾರೆ. ಅಪ್ಪಯ್ಯನ ಹಿಂದಿನ ಏಳು ತಲೆಮಾರುಗಳ ಹೆಸರು ವಿಳಾಸ ಗೊತ್ತಿಲ್ಲದಿದ್ದರೂ, ಪಿತೃ, ಪಿತಾಮಹ, ಪ್ರಪಿತಾಮಹರ ನಾಮಗೋತ್ರೋಲ್ಲೇಖದಿಂದ ಪೂರ್ವಪಿತೃಪಂಕ್ತಿಯನ್ನು ಪತ್ತೆಮಾಡಲಾಗುವುದು ಎನ್ನುವುದನ್ನು ಅವರಿಲ್ಲಿ ಅರ್ಥಪೂರ್ಣವಾಗಿ ವಿವರಿಸುತ್ತಾರೆ. *** ಈ ಕತೆಯಲ್ಲಿ ಕೋಟಕನ್ನಡದ ವೈಭವವೂ ಬರುತ್ತದೆ. ವೈದೇಹಿ, ಮಿತ್ರಾ ವೆಂಕಟ್ರಾಜ್ ಬಳಸಿದ ಕ್ರಮಕ್ಕಿಂತ ಬೇರೆಯಾಗಿ. ಕತೆಯನ್ನು ಗ್ರಾಂಥಿಕ ಸಂಸ್ಕೃತ ಭೂಯಿಷ್ಠ ಕನ್ನಡದಲ್ಲಿ ಹೇಳಿದರೂ ಸಂಭಾಷಣೆ ಮಾತ್ರ ಕೋಟ ಕನ್ನಡದಲ್ಲಿ. ಕೊರ್ಗಿಯವರ ಕತೆಯಲ್ಲಿ ಮುದುಕಿಯೊಬ್ಬಳು - "ಹ್ವಾಯ್ ಮಳಿ ಶ್ರಾಯ ಅಲ್ದಾ. ಒಂದೇ ಕೊಡಿ ಹಿಡ್ಕಂಡಿರಿ. ಮಗಿನ ತಲೆ ಚಂಡಿ ಆರೆ ಜರಾ ಗಿರ ಬಪ್ಕೂ ಸಾಕ್. ಇಗಣಿ, ಈ ಮರ್ಸಣ್ಗೆ ಎಲೆ ತಕಣಿ. ಕೊಣಕೊಟ ಮಳಿಗೆ ತಡ್ಕಣತ್ ಒಡಿಯಾ." ಬಲಾಡಿಯಲ್ಲಿ ’ಸೂರಯ್ಯ ಲಾಯ್ಕ್ ಜಾತ್ಕ ಬರ್ದಿ ಕೊಡ್ತ್ರಂಬ್ರು ಎನ್ನುವ ಸುದ್ದಿ ಕರ್ಣಾಂತರ ಹಬ್ಬಿ ಅಬ್ರಾಹ್ಮಣರು ಜಾತಕ ಬರೆಸಿಕೊಳ್ಳಲಿಕ್ಕೆ ಬರುತ್ತಿದ್ದ ವಿವರ ಒಂದೆಡೆ ಬರುತ್ತದೆ (ಪು.೪೫) ಮಗು ಹುಟ್ಟಿದ ಹೊತ್ತನ್ನು ಹೇಳುವಲ್ಲಿಬಂದ ಆಸಾಮಿ ಎಷ್ಟು ಟೆಟ್ಟೆಟ್ಟೆ ಮಣೂರು (ಒಂದಕ್ಕೆ ಇನ್ನೇನೋ ಹೇಳುವುದು) ಅಂತಿದ್ದನೋ, ಜಾತ ಮುಹೂರ್ತ ನಿರ್ಣಯಿಸುವಲ್ಲಿ ಉಪಾದ್ರೂ ಸುಟ್ಸುಣ್ಣ ಆಗುತ್ತಿದ್ದರು. ಬೈಯಾಪಾಂಗೆ ಕೋಲ್ ತಾರ್ಕಿ (ಮೃಗಶಿರಾ ನಕ್ಷತ್ರ) ಪಡ್ಲಾಯಿಲಿ ಮೂರ್ ಮಾರ್ ಮೇಲ್ ತೋರ್ತಿತ್ ಕಾಣಿ. ಇನ್ನೊಂದೆಡೆ ನಗೆ ಉಕ್ಕಿಸುವ ವಿವರಣೆ. "ಮುಕ್ಳಿಗೆ ಮುಳ್ ಹೆಟ್ರೆ ಅಲ್ಲಲ್ಲಿಗೇ ಅಡ್ಚ್’ಕಂಡ್ ಅನ್ಬೈಸ್ಕ್ ಅಷ್ಟೆ. ಶಿವಾಯ್, ಕ್ವಾಣ್ಕ್ ಎತ್ತಿ ಊರಿಗೆಲ್ಲ ತೋರ್ಸುಕಾತ್ತಾ? ಮೊದ್ಮೊದ್ಲ್ ನೋವು ತಡುಕಾತ್ತಿಲ್ಲೆ ಅನ್ಸತ್. ಕಡಿಕಡೆಗೆ ಅದೇ ರೂಢಿ ಆತ್. ಎಷ್ಟ್ರವರೆಗೆ ಒಗ್ಗಿ ಹೋತ್ ಅಂದ್ರೆ, ಅಕಸ್ಮಾತ್ ಮುಕ್ಳಿಗೆ ಹೆಟ್ಟುದ್ ಕಮ್ಮಿ ಆರೆ, ಎಲ್ಲಿಂದಾರೂ ಒಂದ್ ಮುಳ್ಳನ್ ತಂದ್ ಕುತ್ಕಣ್ಕ್ ಅಂಬಷ್ಟ್" *** ಸೂರ್ಯನಾರಾಯಣ ಉಪಾಧ್ಯಾಯರ ಯಕ್ಷಗಾನ, ತಾಳಮದ್ದಳೆ ಪ್ರೀತಿಯಿಂದಾಗಿ ಹಲವು ರಸಭರಿತ ಪ್ರಸಂಗಗಳು ಮೇಲಿಂದಮೇಲೆ ಕಾಣಸಿಗುತ್ತವೆ. (೧) ಕೃಷ್ಣಸಾರಥ್ಯ - ಮಲಗಿದ ಕೃಷ್ಣನಿಗೆ ಕಾಲಬುಡದ ಅರ್ಜುನ ಮೊದಲು ಕಾಣುತ್ತಾನೆ. ಆಮೇಲೆ ಶಿರೋಭಾಗದ ಅರ್ಜುನ. ಕ್ಯಾತೆ ತೆಗೆವ ಕೌರವ ಅರ್ಥದಾರಿಯಾದರೆ ‘ಮಲಗಿದವ ಕಣ್ಣುಬಿಟ್ಟರೆ ಮೊದಲು ಕಾಣುವುದು ತಲೆಯ ಭಾಗದಲ್ಲಿರುವವನೋ, ಕಾಲ ಭಾಗದಲ್ಲಿರುವವನೋ’ ಎಂದು ಕಾಯಿಸಿಪ್ಪೆ ಗುದ್ದುತ್ತಾ ಇರುತ್ತಾನೆ. ಉಪಾದ್ರು ಒಮ್ಮೆ ಕೃಷ್ಣನಾಗಿದ್ದಾಗ ‘ಹರಹರ ನೀವಿಬ್ಬರೊಂದಾಗಿ ಬಂದುದಚ್ಚರಿಯಾಯ್ತು’ ಎಂಬ ಪದ್ಯಕ್ಕೆ ‘ಆಹಾ ನೀವಿಬ್ಬರು ಒಟ್ಟಾಗಿ ಬಂದುದನ್ನು ನೋಡಿ ಆಶ್ಚರ್ಯವಾಯಿತು’ ಎಂದು ಅರ್ಥಹೇಳಿದರಂತೆ. (೨)ಕೃಷ್ಣ ಸಂಧಾನದಲ್ಲಿ ಬಿಲ್ಲನ್ನು ಮುರಿವ ವಿದುರ ಕೌರವನನ್ನು ಛೇಡಿಸುವ ಭರದಲ್ಲಿ ‘ಮುನ್ನ ನೀನಜಪುತ್ರ ಕಾಣೆಲೋ’ ಎನ್ನುತ್ತಾನೆ. ಗಾಂಧಾರಿಯ ವೈಧವ್ಯ ನಿವೃತ್ತಿಗೆ ವಿವಾಹ ಸಂದರ್ಭದಲ್ಲಿ ಮಾಡಿದ ಪ್ರಾಯಶ್ಚಿತ್ತ ಆಡಿನೊಂದಿಗೆ ಮದುವೆಯೆಂಬ ಅನಾಧಾರಿತ ಕಾಗಕ್ಕನ ಕತೆ ಸತ್ಯವೇ ಆದರೂ ಕೌರವ ಅಜಪುತ್ರನಾಗುವುದಿಲ್ಲವಲ್ಲ ಎಂದು ಉಪಾದ್ರು ವ್ಯಥಿಸಿದ್ದು ಇದೆ. (೩) ಸೂರ್ಯ ಉಪಾದ್ರು ಹೊಗೆಸೊಪ್ಪಿನ ಕುರಿತು ‘ಮೋಹಿನಿ ಕಲಾವಿಲಾಸ’ ಎಂಬ ಯಕ್ಷಗಾನ ಪ್ರಸಂಗ ರಚಿಸಿದ್ದರು. ಎಂತಹ ವಿಡಂಬನೆಯೆಂದರೆ, ಈ ಕತೆಯಲ್ಲಿ ‘ತಲೆಯಲ್ಲಿ ಗಂಗೆಯನ್ನು ಹೊತ್ತದ್ದರಿಂದ ಒಮ್ಮೆ ಶಿವನಿಗೆ ವಿಪರೀತ ನೆಗಡಿಯಾಗಿ ಕಣ್ಣು, ಮೂಗು, ಬಾಯಿಗಳು ಸೋರುತ್ತಿರುವಾಗ ನಾರದರು ತಂಬಾಕಿನ ಎರಡು ಎಸಳನ್ನು ತಂದುಕೊಟ್ಟು ಹೊಗೆ ಹೀರಲು ತೋರಿಸಿಕೊಟ್ಟ. ಮುಕ್ಕಣ್ಣನ ಮೂಗುರಿ ಮಾಯವಾಯ್ತು. ಪ್ರಸನ್ನನಾದ ಪರಮೇಶ್ವರನು "ಭೂತಳದ ಮನುಜರೊಳ್ ಇದೆರಡಂ ನೋತು ಸೇವಿಪರಿಂಗೆ ಸಂಚಿತ ಪಾತಕವು ಪರಿಹಾರವಾಗುವುದೆನುತ ವರವಿತ್ತ" ‘ಕಲೆಗೆ ನಮ್ಮಿಂದ ಸಂದಾಯವಾದದ್ದು ಲೊಳಲೊಟ್ಟೆಯಾದರೂ ಕಲೆಯು ನಮಗೆ ತೆರೆಗೈಯಾಗಿ ನೀಡುವ ಸಾಂತ್ವನದ ಬೆಲೆಕಟ್ಟಲು ಸಾಧ್ಯವೆ?’ ಎಂಬಮಾತು ಈ ಕೃತಿಯ ೨೦೬ನೆಯ ಪುಟದಲ್ಲಿ ಬರುತ್ತದೆ. ತಮ್ಮ ಅನಪೇಕ್ಷಿತ ದುರ್ವ್ಯಸನಗಳಿಂದ ಕಲಾವಿದರು ಬರ್ಬಾದಾಗಿ ಹೋಗಿರಬಹುದಾದರೂ, ಜೀವನಸಂಧ್ಯೆಯಲ್ಲಿ ನಿರಾಪದವಾಗಿ ಅವರ ಜೊತೆಗೆ ಉಳಿಯುವ ಏಕೈಕ ಸಖನೆಂದರೆ ಕಲೆಯೇ. ಅದು ಭಾವದೊಳಗಿನ ಭಾವಲೋಕ. ಸೂರ್ಯನಾರಾಯಣ ಉಪಾದ್ರ ಒಳಗೊಬ್ಬ ಕಲಾವಿದನಿದ್ದ. ಕವಿಯೂ ಇದ್ದ. ಅವರು ಕೃಷ್ಣ ಸಂಧಾನ, ಪಾರಿಜಾತ, ಕಂಸವಧ, ಸತ್ಯ ಹರಿಶ್ಚಂದ್ರ ಮೊದಲಾದ ಪೌರಾಣಿಕ ನಾಟಕಗಳೊಂದಿಗೆ ಸಾಮಾಜಿಕ ನಾಟಕಗಳನ್ನೂ ರಚಿಸಿದ್ದರು. ಅವರು ರಚಿಸಿದ ಯಕ್ಷಗಾನ ಪ್ರಸಂಗಗಳು - ಭದ್ರಾಯು ಚರಿತ್ರೆ, ಅಶೋಕಸುಂದರಿ, ಗುರುದಕ್ಷಿಣೆ, ಗುರುದ್ರೋಣ ಇತ್ಯಾದಿ ಇತ್ಯಾದಿ. *** ಈ ಪ್ರಶಂಸನೀಯ ಸಂಸ್ಮರಣೆಯ ಕುರಿತು ಇವತ್ತು (೧೧.೦೪.೨೦೨೪) ಕೋಟದಲ್ಲಿ ಮಾತನಾಡಲಿದ್ದೇನೆ.

Day - 3/3 ಅರ್ಜುನ್ ಭಾರದ್ವಾಜ್ --- ದೇವಾಲಯ ಸಂಸ್ಕೃತಿ ಮತ್ತು ಮೂರ್ತಿ ಶಿಲ್ಪ

Friday, April 12, 2024

ಡಾ / ಚಿನ್ನಪ್ಪ ಗೌಡ - ವಿವೇಕ ರೈ ಅವರ " ಬದುಕು ಕಟ್ಟಿದ ಬಗೆಗಳು "{2024 }

ಡಾ. ಬಿ. ಎ. ವಿವೇಕ ರೈ ಬದುಕು ಕಟ್ಟಿದ ಬಗೆಗಳು ಕಳೆದ ಹಲವು ವರ್ಷಗಳಿಂದ ವರ್ಷಕ್ಕೆ ಒಂದು ಅಥವಾ ಎರಡರಂತೆ ನಿರಂತರವಾಗಿ ಮಹತ್ವದ ಕೃತಿಗಳನ್ನು ಲೋಕಾರ್ಪಣೆ ಮಾಡುತ್ತಾ ಬಂದವರು ಗುರುಗಳಾಗಿರುವ ಡಾ. ಬಿ. ಎ. ವಿವೇಕ ರೈಯವರು. ಈ ಸಾಲಿನಲ್ಲಿ ಬಂದ ಇತ್ತೀಚೆಗಿನ ಕೃತಿ " ಬದುಕು ಕಟ್ಟಿದ ಬಗೆಗಳು". 'ನೆನಪಿನ ಸಂಸ್ಕೃತಿಯ ಬರಹಗಳು' ಎಂಬುದಾಗಿ ಈ ಕೃತಿಯಲ್ಲಿರುವ ಲೇಖನಗಳನ್ನು ಅವರೇ ಹೇಳಿದ್ದಾರೆ. ಪ್ರೊ. ರೈಯವರ ನೆನಪಿನ ಶಕ್ತಿ ಅಗಾಧವಾದುದು. ಅವರು ಭಾಷಣ ಮತ್ತು ಮಾತಿಗೆ ತೊಡಗಿದರೆ ಘಟನೆಗಳನ್ನು ಅವುಗಳ ದಿನಾಂಕ, ವರ್ಷ ಮತ್ತು ಸಂದರ್ಭಗಳನ್ನು ಕರಾರುವಾಕ್ಕಾಗಿ ಉಲ್ಲೇಖಿಸುವುದನ್ನು ನೋಡಿದರೆ ಅಚ್ಚರಿಯಾಗುತ್ತದೆ. ಓದು ಮತ್ತು ಬದುಕಿನ ಅನುಭವಗಳನ್ನು ಗಾಢವಾಗಿ ಅನುಭವದ ತೆಕ್ಕೆಗೆ ತೆಗೆದುಕೊಂಡು ನೆನಪಿನ ಕೋಶವನ್ನು ಅವರು ಕಟ್ಟುತ್ತಾ ಬಂದಿರುವುದಕ್ಕೆ ಬದುಕು ಕಟ್ಟಿದ ಬಗೆಗಳು ಕೃತಿಯ ಬರಹಗಳು ಸಾಕ್ಷಿಗಳಾಗಿವೆ. ವರ್ತಮಾನ ಕಾಲಘಟ್ಟದಲ್ಲಿ ಶಿಕ್ಷಣ ವ್ಯವಸ್ಥೆ, ಶೈಕ್ಷಣಿಕ ಸಂಸ್ಥೆಗಳು, ಸಾಂಸ್ಕೃತಿಕ ವಿದ್ಯಮಾನ ಇವು ವ್ಯಕ್ತಿ , ರಾಜಕೀಯ ಮತ್ತು ಸಾಮಾಜಿಕ ನೆಲೆಗಳಲ್ಲಿ ನೈತಿಕವಾಗಿ ಪತನಗೊಂಡು ತಲ್ಲಣ ಉಂಟುಮಾಡುತ್ತಿರುವ ಬಗ್ಗೆ ಅವರು ಮಾತುಕತೆಯ ನಡುವೆ ವಿಷಾದ ವ್ಯಕ್ತಪಡಿಸಿದ್ದುಂಟು, " ಒಳ್ಳೆಯ ಕಾಲಘಟ್ಟ ಮರೆಯಾಗುತ್ತಿದೆ. ನಮ್ಮ ಕಾಲವೇ ಅನೇಕ ಸಂಗತಿಗಳಲ್ಲಿ ಒಳ್ಳೆಯದಿತ್ತು. ಸದ್ಯಕ್ಕೆ ನಾವು ನಮ್ಮ ಕಾಲದ ಅನುಭವಗಳು ಮತ್ತು ನೆನಪುಗಳನ್ನು ಮನಸ್ಸಿಗೆ ತಂದುಕೊಂಡರೆ ಅವು ನಮಗೆ ಒಂದು ಬಗೆಯ ಸಾಂತ್ವನವನ್ನು ನೀಡಬಲ್ಲವು ಹಾಗೂ ನಮ್ಮನ್ನು ಜೀವಂತವಾಗಿ ಇಡಬಲ್ಲವು" . ಈ ಮಾತುಗಳು ಇಲ್ಲಿನ ಲೇಖನಗಳ ಆಶಯಗಳನ್ನು ಗುರುತಿಸಲು ಸಹಾಯಕವಾಗಿವೆ. ಭಾಷೆ- ಸಾಹಿತ್ಯ- ಸಂಸ್ಕೃತಿ ಮತ್ತು ಅಗಲಿದವರ ನೆನವರಿಕೆ ಎಂಬ ಎರಡು ಭಾಗಗಳಲ್ಲಿ 39 ಲೇಖನಗಳನ್ನು ಮರುಜೋಡಿಸಿ ಕೊಟ್ಟ ಉದ್ದೇಶ ಕೂಡ ಸ್ಪಷ್ಟವಾಗುತ್ತದೆ. ಲೇಖಕರ ಮಾತುಗಳು ಇಂತಿವೆ: " ಇಲ್ಲಿನ ಲೇಖನಗಳ ಒಳಗೆ ಅಂತರ್ಗತವಾದ ನನ್ನ ಚಿಂತನಾಕ್ರಮದಲ್ಲಿ ಸಾಮ್ಯಗಳಿವೆ. ಅಧ್ಯಯನ ಮತ್ತು ಅನುಭವಗಳನ್ನು ಒಟ್ಟಿಗೆ ಇಟ್ಟುಕೊಂಡು ಬದುಕಿದ ನನಗೆ ಭಾಷೆ ಸಾಹಿತ್ಯ ಸಂಸ್ಕೃತಿ ಮತ್ತು ಜನರನ್ನು ಬೇರೆ ಬೇರೆಯಾಗಿ ನೋಡಲು ಸಾಧ್ಯವಾಗುವುದಿಲ್ಲ. ನನ್ನ ಅನುಭವಕ್ಕೆ ಬಾರದ ಯಾವುದರ ಬಗ್ಗೆಯೂ ಯಾರ ಬಗ್ಗೆಯೂ ಬರೆಯಲು ನನಗೆ ಸಾಧ್ಯ ಇಲ್ಲ. "ಬದುಕು ಕಟ್ಟಿದ ಬಗೆಗಳು" ಎನ್ನುವ ಪದಪುಂಜ ಇಲ್ಲಿನ ಬರಹಗಳಲ್ಲಿ ಪ್ರಸ್ತಾವಿತವಾದ ವ್ಯಕ್ತಿಗಳಿಗೆ ಅನ್ವಯ ಆಗುವಷ್ಟೇ ನನಗೂ ಅನ್ವಯ ಆಗುತ್ತದೆ. ನನಗೆ ಬದುಕಿನಲ್ಲಿ ದೊರೆತ ಅವಕಾಶಗಳು, ವ್ಯಕ್ತಿಗಳ ಸಂಸರ್ಗಗಳು ಅಪಾರ, ಅಸಾಮಾನ್ಯ ಮತ್ತು ಆಕಸ್ಮಿಕ. ಅವುಗಳ ದಾಖಲೆಗಳ ತುಣುಕುಗಳು ಇಲ್ಲಿ ಬರಹಗಳ ರೂಪದಲ್ಲಿ ಒಟ್ಟು ಸೇರಿವೆ". ಈ ಕೃತಿಗೆ ಇಟ್ಟಿರುವ " ಬದುಕು ಕಟ್ಟಿದ ಬಗೆಗಳು" ಎಂಬ ಹೆಸರಿನ ವ್ಯಾಪ್ತಿ ಹಿರಿದಾದುದು, ವಿಸ್ತಾರವಾದುದು. ಹಲವು ಆಯಾಮಗಳನ್ನು ಸೂಚಿಸುವಷ್ಟು ಸಮರ್ಥವಾಗಿವೆ. ೧. ಕನ್ನಡ, ತುಳು, ಇಂಗ್ಲೀಷ್ ಮೊದಲಾದ ಭಾಷೆಗಳು , ತುಳುನಾಡು, ಕರ್ನಾಟಕ ಮತ್ತು ಪಾಶ್ಚಿಮಾತ್ಯ ಮೊದಲಾದ ಪ್ರಾದೇಶಿಕ ವಲಯಗಳು, ಸಾಹಿತ್ಯ ,ಸಂಸ್ಕೃತಿ , ಯಕ್ಷಗಾನ ಇತ್ಯಾದಿ ಕಲಾಪ್ರಕಾರಗಳು - ಇವುಗಳಿಗೆ ಸಂಬಂಧಿಸಿದ ಚಿಂತನೆಗಳು ಲೇಖಕರ ಬದುಕನ್ನು ರೂಪಿಸಿದ್ದು, ಕಟ್ಟಿದ್ದು, ಅವರಿಗೆ ಬದುಕನ್ನು ಕಟ್ಟಿಕೊಳ್ಳಲು ನೆರವಾದದ್ದು. ೨. ಕೃತಿಗಳ ಓದು, ಶೈಕ್ಷಣಿಕ ಸಂಪರ್ಕ, ನೇರ ಒಡನಾಟ ಹೀಗೆ ಬೇರೆ ಬೇರೆ ರೀತಿಗಳಲ್ಲಿ ಪ್ರೊ. ರೈಯವರು ಸಂಪರ್ಕ ಸಂಬಂಧ ಸಾಧಿಸಿದ ೧೮ ಮಂದಿ ಮಹನೀಯರ ನೆನವರಿಕೆಗಳಿವೆ. ಇವರಲ್ಲಿ ಹಿರಿಯರಿದ್ದಾರೆ, ಕವಿಗಳಿದ್ದಾರೆ, ಸಂಶೋಧಕರಿದ್ದಾರೆ, ಭಾಷಾವಿಜ್ಞಾನಿಗಳಿದ್ದಾರೆ, ಸಾಹಿತ್ಯ ಪರಿಚಾರಕರಿದ್ದಾರೆ, ಜ್ಞಾನಿಗಳಿದ್ದಾರೆ, ಗುರುಗಳಿದ್ದಾರೆ, ಸಾಹಿತಿಗಳಿದ್ದಾರೆ, ಗೆಳೆಯರಿದ್ದಾರೆ. ಹೀಗೆ ಬೇರೆ ಬೇರೆ ಜ್ಞಾನ ಶಿಸ್ತು, ವಲಯ ಮತ್ತು ವರ್ಗಕ್ಕೆ ಸೇರಿದ ಸಾಧಕರ ಕೆಲಸಗಳು ಮತ್ತು ಜೀವನಮೌಲ್ಯಗಳ ಕುರಿತ ಈ ಬರಹಗಳು ಬರಿಯ ಶ್ರದ್ಧಾಂಜಲಿ ರೂಪದವುಗಳಲ್ಲ. ಇಂತಹ ಹಿರಿಯರು ಅವರ ಬದುಕನ್ನು ಅನನ್ಯವಾಗಿ ಕಟ್ಟಿಕೊಂಡ ಬಗೆಗಳನ್ನು ಅಷ್ಟೇ ಅನನ್ಯವಾದ ರೀತಿಯಲ್ಲಿ ಲೇಖಕರು ಕಟ್ಟಿಕೊಟ್ಟಿದ್ದಾರೆ. ಹಿರಿಯರ ಮತ್ತು ಸಮಕಾಲೀನರ ಬದುಕಿನ ಬಗೆಗಳು ಲೇಖಕರಿಗೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ನೆರವಾಗಿವೆ. ೩. ಸಾಂಸ್ಕೃತಿಕ ಕರ್ನಾಟಕವು ಬಹುಮಾದರಿಯ ಬದುಕುಗಳನ್ನು ಕಟ್ಟಿಕೊಂಡಿದ್ದ ವಿನ್ಯಾಸಗಳು ಬೆಸೆದುಕೊಂಡ ಒಂದು ಆಯಾಮ ಇಲ್ಲಿನ ಬರಹಗಳಿಗಿವೆ. ೪. ಹಿರಿಯರು ಬದುಕು ಕಟ್ಟಿದ ಬಗೆಗಳು ಕಣ್ಮರೆಯಾಗುತ್ತಿವೆ ಮತ್ತು ಬದುಕನ್ನು ಕಟ್ಟಿಕೊಳ್ಳಬೇಕಾದ ಜೀವಪರ ಬಗೆಗಳು ಕಾಣುವುದಿಲ್ಲ ಎಂಬ ವಿಷಾದವನ್ನು ಈ ಸೂಕ್ಷ್ಮಸಂವೇದೀ ಬರಹಗಳು ವ್ಯಕ್ತಪಡಿಸುತ್ತವೆ. ೫. ಸಾಧಕರು ಮತ್ತು ಲೇಖಕರ ಬದುಕು, ಲೇಖಕರ ಬರಹಗಳ ಮೂಲಕ ಅನಾವರಣಗೊಂಡ ಬದುಕು, ಲೇಖಕರ ವೈಯಕ್ತಿಕ ಬದುಕು ಮತ್ತು ಅವರದ್ದೇ ಬರಹಗಳು ತೆರೆದಿಡುವ ಬದುಕು ಹೀಗೆ ಮೂರು ಸ್ತರಗಳ ಬದುಕು ಇಲ್ಲಿನ ಬರಹಗಳಲ್ಲಿ ಬೆಸೆದುಕೊಂಡಿರುವುದನ್ನು ಕಾಣಬಹುದು. ೬. ಮಾನವೀಯತೆ, ಸಹನೆ, ಸೌಹಾರ್ದತೆ, ವ್ಯಕ್ತಿ ಘನತೆ, ಸಾಮಾಜಿಕ ನ್ಯಾಯಪರತೆ ಮೊದಲಾದ ಜೀವನ ಮೌಲ್ಯಗಳನ್ನು ವಿವರಿಸುವ ಮತ್ತು ಸಂಸ್ಥೆಗಳನ್ನು ಪ್ರಜಾಸತ್ತಾತ್ಮಕವಾಗಿ ಕಟ್ಟಿದ ಪ್ರಯತ್ನಗಳನ್ನು ನಿರೂಪಿಸುವ ಇಲ್ಲಿನ ಬರಹಗಳು ನಾಡಿನ ಸಾಂಸ್ಕೃತಿಕ ಇತಿಹಾಸವನ್ನು ಕಟ್ಟಿಕೊಡುತ್ತವೆ. ಈ ಅಂಶಗಳಿಗೆ ನಿದರ್ಶನ ಎಂಬಂತಿರುವ ಲೇಖನಗಳು : ದಕ್ಷಿಣ ಕನ್ನಡ ಎಂಬ ಭಾಷಾ ಬಾಂಧವ್ಯದ ಪ್ರಯೋಗಶಾಲೆ, ಭವಿಷ್ಯಕ್ಕಾಗಿ ಕನ್ನಡ ಕಹಳೆ, ದೇರಾಜೆ ಸೀತಾರಾಮಯ್ಯ: ಸಂಸ್ಕೃತಿ ಆಲಯದ ನ್ಯಾಯವಾದಿ, ಭಾಷಾ ವಿಜ್ಞಾನ ಮತ್ತು ತುಳು ನಿಘಂಟುವಿನ ಕೊಪ್ಪರಿಗೆ: ಡಾ.ಯು.ಪಿ. ಉಪಾಧ್ಯಾಯ, ಪ್ರೊ. ಕು.ಶಿ . ಹರಿದಾಸ ಭಟ್ಟರ ತುಳು ಜಾನಪದ ಕೊಡುಗೆ, ಸತ್ತವರ ಸಂಗದಲಿ ಹೊತ್ತು ಹೋಗುವುದು ಎನಗೆ: ಏರ್ಯ, ತುಳುವಿಗೆ ಮಾನಾದಿಗೆ ತಂದುಕೊಟ್ಟ ಡಿ.ಕೆ. ಚೌಟರು, ವಿದ್ವತ್ ಗುರು ಪ್ರೊ. ಎಚ್.ಜೆ. ಲಕ್ಕಪ್ಪ ಗೌಡರು, ಬಹುಶ್ರುತ ವಿದ್ವಾಂಸ ಗೆಳೆಯ ಪ್ರೊ.ಬಿ. ಸುರೇಂದ್ರ ರಾವ್, ಒಲುಮೆಯ ಆಪ್ತ ಸಾಹಿತಿ ಪ್ರೊ. ಅಮೃತ ಸೋಮೇಶ್ವರರು. ದೀರ್ಘವಾಗಿರುವ ಈ ಲೇಖನಗಳಲ್ಲಿ "ಬದುಕು ಕಟ್ಟಿದ ಬಗೆಗಳ" ವಿವರಗಳಿವೆ. " ... ಹಿರಿಯರ ಬದುಕಿನ ಹೆದ್ದಾರಿ ಕಣ್ಮರೆಯಾಗಿದೆ. ವೈಯಕ್ತಿಕ ಮತ್ತು ಸಾರ್ವತ್ರಿಕ ಬದುಕಿನಲ್ಲಿ ನೈತಿಕತೆ ಮರೆಯಾಗಿದೆ. ಹೊರನೋಟದ ಪ್ರದರ್ಶನಪ್ರಿಯತೆ ವ್ಯಕ್ತಿತ್ವದ ಮಾಪಕವಾಗಿದೆ. ತೋರಿಕೆಯ ಸಿದ್ಧಾಂತದ ಛದ್ಮವೇಷದಲ್ಲಿ ಮನುಷ್ಯ ಸಂಬಂಧಗಳು ಹೋಳು ಹೋಳಾಗಿವೆ. .... ವಿಚಾರಗಳ ಮುಖವಾಡದಲ್ಲಿ ಜನರನ್ನು ಹೊರಗಿಡುವ ಮನೋಧರ್ಮ ಬೆಳೆಯುತ್ತಿದೆ. ಸಾಮಾಜಿಕ ಮಾಧ್ಯಮಗಳು ಇಂತಹ ಒಡೆಯುವ ಪ್ರವೃತ್ತಿಗೆ ಮುಕ್ತ ಅವಕಾಶಗಳನ್ನು ಕಲ್ಪಿಸುತ್ತಿವೆ. ಕಲ್ಪಿತ ಪೂರ್ವಗ್ರಹಗಳಿಂದಾಗಿ ಜನರನ್ನು ಸಂಶಯದಿಂದ ನೋಡುವ ಕಣ್ಣುಗಳು ಕ್ರಿಯಾಶೀಲವಾಗಿವೆ....ದೊಡ್ಡ ಗಂಟಲಿನಲ್ಲಿ ಮಾತನಾಡುವುದನ್ನು ಶಕ್ತಿಯ ಪ್ರದರ್ಶನ ಎಂದು ಭ್ರಮಿಸಲಾಗುತ್ತದೆ. ಮೌನವಾಗಿ ಇರುವವರನ್ನು ನಿಷ್ಪ್ರಯೋಜಕರು ಎಂದು ಟೀಕಿಸಲಾಗುತ್ತದೆ‌. ಸಂಘರ್ಷದ ಸಂದರ್ಭದಲ್ಲಿ ಸಂಯಮವೇ ಅನೇಕ ಸಮಸ್ಯೆಗಳನ್ನು ಪರಿಹಾರ ಮಾಡುತ್ತವೆ ಎನ್ನುವ ತಿಳುವಳಿಕೆ ಕಡಿಮೆಯಾಗಿದೆ" ( ಪು. 184). ಹಿರಿಯರು ಕಟ್ಟಿದ ಸಂಸ್ಕೃತಿಯ ಮನೆ ಕುಸಿಯುತ್ತಿದೆ ಎಂಬ ಆತಂಕ ಮತ್ತು ವಿಷಾದ !! ಹಿಂದಣ ಬದುಕಿನ ಸಾರ್ಥಕತೆ , ಸಂಭ್ರಮ, ವೈವಿಧ್ಯ , ಸೃಜನಶೀಲತೆ ಮತ್ತು ಮುಂದಣ ಬದುಕಿನ ಹಿಂಸೆ, ಕ್ರೌರ್ಯ, ತುಳಿತ, ಅತ್ಯಾಸೆ, ದುರಾಸೆ ಇವುಗಳ ನಡುವೆ ಇರುವ ನಾವೆಲ್ಲರೂ ಮುಂದೆ ಕಟ್ಟಬೇಕಾದ ಸಾಂಸ್ಕೃತಿಕ ಮಹಾಮನೆಯ ಬಗ್ಗೆ ಸಾವಧಾನವಾಗಿ ಯೋಚಿಸುವಂತೆ "ಬದುಕು ಕಟ್ಟಿದ ಬಗೆಗಳು" ಕೃತಿ ಒತ್ತಾಯಿಸುತ್ತದೆ. ಈ ಕೃತಿಯನ್ನು ಪ್ರಕಟಿಸಿರುವ ಅಂಕಿತದ ಪ್ರಕಾಶ್ ಕಂಬತ್ತಳ್ಳಿಯವರಿಗೆ ಅಭಿನಂದನೆಗಳು. ಕೆ. ಚಿನ್ನಪ್ಪ ಗೌಡ