Powered By Blogger

Thursday, December 30, 2021

8 Kannada books that trended in 2021 | ಕನ್ನಡ ಪುಸ್ತಕಗಳು 2021

8 Kannada books that trended in 2021 | Deccan Herald

ಟಿ. ಪಿ. ಅಶೋಕ - ಮಲ್ಲಿಕಾರ್ಜುನ ಹಿರೇಮಠ ಅವರ ಹೊಸ ಕಾದಂಬರಿ ‘ಹಾವಳಿ’/ Mallikarjana Hirematha

ಮಲ್ಲಿಕಾರ್ಜುನ ಹಿರೇಮಠ ಅವರ ಹೊಸ ಕಾದಂಬರಿ ‘ಹಾವಳಿ’ | ಅವಧಿ । AVADHI

ಲೋಕೇಶ ಅಗಸನಕಟ್ಟೆ ಅವರ ಹೊಸ ಕಾದಂಬರಿ ವೈಷ್ಣವ ಜನತೋ’ | LOKESH AGASANAKATTE/ Kannada Books2021

ಲೋಕೇಶ ಅಗಸನಕಟ್ಟೆ ಅವರ ಹೊಸ ಕಾದಂಬರಿ ವೈಷ್ಣವ ಜನತೋ’ | ಅವಧಿ । AVADHI

ಡಿ.ಎಸ್.ನಾಗಭೂಷಣ್ ಅವರ 'ಗಾಂಧಿ ಕಥನ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ | D S Nagabhushana

ಡಿ.ಎಸ್.ನಾಗಭೂಷಣ್ ಅವರ 'ಗಾಂಧಿ ಕಥನ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ | Prajavani

The River Has No Fear of Memories: Girish Karnad/ಗಿರೀಶ್ ಕಾರ್ನಾಡ್

ಡಿಜಿಟಲ್ ಸಾಹಿತ್ಯ ಕ್ರಾಂತಿ : Readers to Writers: The Online Revolution

Sunday, December 26, 2021

ನಟರಾಜ್ ಹುಳಿಯಾರ್ ಅವರ ಕವಿಜೋಡಿಯ ಆತ್ಮಗೀತ (ಕಥಾಕಾವ್ಯ){ Nataraj Huliyar }

ಒಳನೋಟ: ಘನ ಉದ್ದೇಶದ ನಿರ್ಲಕ್ಷ್ಯ, ವಿಶೇಷ ವಿಶ್ವವಿದ್ಯಾಲಯಗಳ ಅವಸ್ಥೆ, ಅವ್ಯವಸ್ಥೆ | { special Universities in Karnataka }

ಒಳನೋಟ: ಘನ ಉದ್ದೇಶದ ನಿರ್ಲಕ್ಷ್ಯ, ವಿಶೇಷ ವಿಶ್ವವಿದ್ಯಾಲಯಗಳ ಅವಸ್ಥೆ, ಅವ್ಯವಸ್ಥೆ | Prajavani

ಒಳನೋಟ: ಜನಪ್ರಿಯತೆ ಜತೆಗೆ ವಿದ್ಯಾರ್ಥಿಗಳ ಸಂಖ್ಯೆಯೂ ಏರಿಕೆ! { Panchayath Raj university Karnataka }

ಒಳನೋಟ: ಜನಪ್ರಿಯತೆ ಜತೆಗೆ ವಿದ್ಯಾರ್ಥಿಗಳ ಸಂಖ್ಯೆಯೂ ಏರಿಕೆ! | Prajavani

Sunday, December 19, 2021

ಗುರುಪ್ರಸಾದ್ ಕಂಟಲಗೆರೆ | ಕೆಂಡದ ಬೆಳದಿಂಗಳು | ಕಥಾ ಸಂಕಲನ 2021 | Guruprasad K...

ಮಾಕೋನ ಏಕಾಂತ -ಕಾವ್ಯಾ ಕಡಮೆ { ಕಥಾ ಸಂಕಲನ -2021 }

ಮಾಕೋನ ಏಕಾಂತ | ಸಂಪದ

ರಾಜಶೇಖರ ಅಕ್ಕಿ - ಎಮ್. ಎಸ್. ಶ್ರೀರಾಮ್ ಅವರ " ಬೇಟೆಯಲ್ಲ ಆಟವೆಲ್ಲ " { 2021}

undefined

ಆಧುನಿಕ ತಂತ್ರಜ್ಞಾನದ ಮೂಲಕ ಕುಮಾರವ್ಯಾಸ ಭಾರತ - ಜಿ. ಎನ್. ನರಸಿಂಹಮೂರ್ತಿ /Kumaravyasa.

Saturday, December 18, 2021

ರಘುನಾಥ ಚ ಹ -: ಸಂಸ್ಕೃತಿ ಚಿಂತನೆಗೊಂದು ಬೆಳಕಿಂಡಿ |ಲೋಕದ ರೂಡಿಯ ಮೀರಿ _ ಚೇತನ ಸೋಮೇಶ್ವರ/A N Moorthy Rao

ಪುಸ್ತಕ ವಿಮರ್ಶೆ: ಸಂಸ್ಕೃತಿ ಚಿಂತನೆಗೊಂದು ಬೆಳಕಿಂಡಿ | Prajavani

ಸಂಪಾದಕೀಯ | ಮದುವೆಯ ವಯಸ್ಸು: ಜಾಗೃತಿ ಮೂಡಿಸುವ ಕೆಲಸವೇ ಮುಖ್ಯ |

ಸಂಪಾದಕೀಯ | ಮದುವೆಯ ವಯಸ್ಸು: ಜಾಗೃತಿ ಮೂಡಿಸುವ ಕೆಲಸವೇ ಮುಖ್ಯ | Prajavani

'ಎಲ್ಲಾ ತಿಳಿದು ನೋಡಿದಲ್ಲಿ' - ಭಾವಗೀತೆ • ಸಿಂಚನಾ ಮೂರ್ತಿ || ವಿ ಸಿ ಐರಸಂಗ

ಎಸ್‌ ಜಿ ಸಿದ್ದರಾಮಯ್ಯ ಅವರ ಸ್ಪೆಷಲ್ ಕವಿತೆ ‘ದರವಾಜ’ |

ಎಸ್‌ ಜಿ ಸಿದ್ದರಾಮಯ್ಯ ಅವರ ಸ್ಪೆಷಲ್ ಕವಿತೆ ‘ದರವಾಜ’ | ಅವಧಿ । AVADHI

Thursday, December 16, 2021

ಎಲ್. ಸಿ ಸುಮಿತ್ರಾ -- ಸಾತ್ವಿಕ ಆತ್ಮವಿಶ್ವಾಸದ ಪ್ರತೀಕ -ರಾಜೇಶ್ವರಿ ತೇಜಸ್ವಿ /Rajeshvari Tejasvi

ಸಾತ್ವಿಕ ಆತ್ಮವಿಶ್ವಾಸದ ಪ್ರತೀಕ | ಕೆಂಡಸಂಪಿಗೆ

ಪಾರ್ವತಿ ಜಿ ಐತಾಳ್ ಓದಿದ ‘ಆನಂದಾನುಭೂತಿ’ { ಹಯವದನ ಉಪಾಧ್ಯರ ಕೃತಿ }

ಪಾರ್ವತಿ ಜಿ ಐತಾಳ್ ಓದಿದ ‘ಆನಂದಾನುಭೂತಿ’ | ಅವಧಿ । AVADHI

Sagri Raghavendra Upadhyaya--ಸರ್ವಮೂಲ ಗ್ರಂಥಗಳ ಸಂಪಾದಕ ಬನ್ನಂಜೆ ಗೋವಿಂದಾಚಾರ್ಯರು

Bannanje Sanjeeva Suvarna - Yakshagana { Hindi } Nala Karkotaka{ Selecte...

Saturday, October 23, 2021

ಅಕ್ಷತಾ ಕೃಷ್ಣಮೂರ್ತಿ- ಗಜಲ್… | ಅವಧಿ । Akshatha krishnamoorthy

ಅಕ್ಷತಾ ಕೃಷ್ಣಮೂರ್ತಿ- ಗಜಲ್… | ಅವಧಿ । AVADHI

ಇಗ್ಗಪ್ಪ ಹೆಗಡೇ ವಿವಾಹ ಪ್ರಸಂಗ | ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ | ಡಾ. ಶ್ರೀಪಾದ ಭಟ್ /KARKAKIVENKATARAMANA SHASTRI / Dr Sripada Bhat

ಬಳೆ.ಡಾ.ಪಿಬಿ ಪ್ರಸನ್ನ ಕಥೆಗೆ ಸುರೇಶ ಹೆಗಡೆ ಪ್ರಸ್ತುತಿ.Bale.Dr PB Prasanna stor...

ಪಾರ್ವತಿ ಜಿ ಐತಾಳ್ - ಚಾಂದ್ರಿಯಾಣದ ಸುಯಾತ್ರಿ } ಪ್ರೊ/ ಶ್ರೀಪತಿ ತಂತ್ರಿಯವರ ಕೃತಿಗಳ ಕುರಿತ ಉಪನ್ಯಾಸಗಳ ಸಂಕಲನ } Sripati Tantri

ಕೃತಿಯ ಹೆಸರು : ಚಾಂದ್ರಿಯಾಣದ ಸುಯಾತ್ರಿ ( ಪ್ರೊ.ಶ್ರೀಪತಿ ತಂತ್ರಿಯವರ ಕೃತಿಗಳ ಕುರಿತಾದ ಉಪನ್ಯಾಸಗಳ ಸಂಕಲನ) ಸಂಪಾದಕರು : ಮಂಜುನಾಥ ಭಟ್ ಹಾರ್ಯಾಡಿ ಪ್ರಕಾಶಕರು : ಆರ್ ಜಿ.ಪೈ ಸಂಶೋಧನಾ ಕೇಂದ್ರ ಉಡುಪಿ. ಪ್ರೊ.ಪಿ.ಶ್ರೀಪತಿ ತಂತ್ರಿಯವರು ನಾಡಿನ ಶ್ರೇಷ್ಠ ಸಾಂಸ್ಕೃತಿಕ ಚಿಂತಕರು, ಲೇಖಕರು ಮತ್ತು ಸಮಾಜಶಾಸ್ತ್ರಜ್ಞರು. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಇವರು ನಿವೃತ್ತಿಯ ನಂತರವೂ ನಿರಂತರವಾಗಿ ಚಟುವಟಿಕೆಯಲ್ಲಿದ್ದವರು. ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿ, ಕಾಲೇಜುಗಳ ಪ್ರಾಂಶುಪಾಲರಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ಸ್ಥಾಪನೆಯಿಂದ ತೊಡಗಿ ಇಂದಿನ ತನಕವೂ ಒಂದಿಲ್ಲೊಂದು ಜವಾಬ್ದಾರಿಗಳನ್ನು ನಿರ್ವಹಿಸುತ್ತ ಬಂದವರು. ಸಮಾಜಶಾಸ್ತ್ರಜ್ಞರಾಗಿ ಅವರು ಬರೆದ ಅಪೂರ್ವ ಕೃತಿಗಳನ್ನು ಪರಿಗಣಿಸಿ ಕಳೆದ ವರ್ಷ ಮಂಗಳೂರು ವಿಶ್ವವಿದ್ಯಾನಿಲಯವು ಅವರಿಗೆ ಡಿ.ಲಿಟ್ ಪದವಿಯನ್ನು ನೀಡಿ ಗೌರವಿಸಿತ್ತು. ಅವರಿಗೆ 75 ವರ್ಷಗಳು ತುಂಬಿದಾಗ ಉಡುಪಿಯ ಜನತೆ ಅವರ ಅಭಿನಂದನಾ ಸಮಾರಂಭ ಏರ್ಪಡಿಸಿ 'ಶ್ರೀಪದ'ಎಂಬ ಗ್ರಂಥವನ್ನೂ ಹೊರತಂದಿದ್ದರು. ಈಗ ಅವರ ಎಂಬತ್ತನೆಯ ವರ್ಷವನ್ನು ಅವರ ಸಲಹೆಯಂತೆ ಅವರ ಅಮೂಲ್ಯ ಕೃತಿಯಾದ 'ಆಜೀವಿಕರು' ಇದರ ಕುರಿತಾದ ಚರ್ಚೆಯ ಮೂಲಕ ಆಚರಿಸಿ 'ಚಾಂದ್ರಿಯಾಣದ ಸುಯಾತ್ರಿ' ಎಂಬ ಸುಂದರ ಶೀರ್ಷಿಕೆಯುಳ್ಳ ಕೃತಿಯನ್ನು ಪ್ರಕಟಿಸಿದ್ದಾರೆ. ನಾಡಿನ ಸುಪ್ರಸಿದ್ಧ ಚಿಂತಕರು ಹಾಗೂ ವಿದ್ವನ್ಮಣಿಗಳು ಮಾತನಾಡಿದ ಈ ವಿಚಾರಸಂಕಿರಣದಲ್ಲಿ ಅವರು ಮಾಡಿದ ಭಾಷಣಗಳನ್ನು ಸಂಪಾದನೆ ಮಾಡುವ ಗುರುತರ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದವರು ಮಂಜುನಾಥ ಭಟ್, ಹಾರ್ಯಾಡಿ ಅವರು. 'ಆಜೀವಿಕರು' ಬೌದ್ಧ ಹಾಗೂ ಜೈನಧರ್ಮಗಳ ಹಾಗೆಯೇ ಒಂದು ಪಂಥ. ಆದರೆ ಬೌದ್ಧ-ಜೈನ ಪಂಥಗಳಿಗೆ ಸಿಕ್ಕಿದ ಪ್ರಚಾರ ಅದಕ್ಕೆ ಸ್ವಲ್ಪವೂ ಸಿಗಲಿಲ್ಲ. ಮಸ್ಕಿರಿ ಗೋಶಾಲ ಅನ್ನುವವನು ಸ್ಥಾಪಿಸಿದ ಈ ಪಂಥವು ಬದುಕನ್ನು ಮುಖ್ಯವಾಗಿ ನಿಯತಿವಾದದ ದೃಷ್ಟಿಯಿಂದ ವ್ಯಾಖ್ಯಾನಿಸುತ್ತದೆ. ತಂತ್ರಿಯವರು ಬರೆದ ಈ ಕೃತಿಯು ಅವರ ಭಾರತೀಯ ಪ್ರಾಚೀನ ಸಾಹಿತ್ಯ ಮೂಲದ ಸಮಾಜ ಶಾಸ್ತ್ರೀಯ ಚಿಂತನೆಗಳ ಮೂಲಕ ಬಂದಿದೆ. 'ಆಜೀವಿಕರು-ವೇದೋತ್ತರ ದಾರ್ಶನಿಕ ಬೆಳವಣಿಗೆಗಳು'ಎಂಬ ಶೀರ್ಷಿಕೆಯುಳ್ಳ ಇದು ವೇದಕಾಲದ ಬಗೆಗೂ ವಾಸ್ತು, ತಂತ್ರ ಮತ್ತು ಆಗಮಶಾಸ್ತ್ರಗಳ ಬಗೆಗೂ ಬಹಳಷ್ಟು ಹೊಸ ವಿಚಾರಗಳನ್ನು ಹೇಳುತ್ತದೆ. ಪ್ರಾಚೀನ ಕೃತಿಗಳಲ್ಲಿ ಕಾಣುವ ಭಾಷಾ ಕ್ಲಿಷ್ಟತೆಯಿಲ್ಲದೆ ಆಸಕ್ತಿಯಿರುವ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಸರಳವಾಗಿ ಹೇಳಲು ಪ್ರಯತ್ನಿಸುತ್ತದೆ ಅನ್ನುವುದು ಇಲ್ಲಿನ ಉಪನ್ಯಾಸಕರ ಅಭಿಪ್ರಾಯ. ಹಿಂದಿನ ವ್ಯಾಖ್ಯಾನಕಾರರಿಗಿಂತ ಭಿನ್ನವಾಗಿ ತಮ್ಮ ಅಭಿಪ್ರಾಯಗಳನ್ನು ತಾರ್ಕಿಕ ಸಮರ್ಥನೆಯೊಂದಿಗೆ ತಮ್ಮ ಇತರ ಕೃತಿಗಳಲ್ಲಿ ಮಾಡಿದಂತೆ ತಂತ್ರಿಯವರು ಇಲ್ಲಿಯೂ ಮಂಡಿಸಿದ್ದಾರೆ. ವೇದಗಳು ಎಲ್ಲರೂ ನಂಬಿರುವಂತೆ 'ಪರಾವಿದ್ಯೆ'ಯಲ್ಲ, ಬದಲಾಗಿ ಇತಿಹಾಸ, ಪುರಾಣ, ಸಾಮಾಜಿಕ ಶಾಸ್ತ್ರಗಳನ್ನು ಆಳವಾಗಿ ಅಭ್ಯಸಿಸಿದ ನಂತರ ಅಧ್ಯಯನ ಮಾಡಬೇಕಾದ 'ಅಪರಾವಿದ್ಯೆ' ಅನ್ನುತ್ತಾರೆ. 'ಸನಾತನ' ಅನ್ನುವ ಪದಕ್ಕೆ ಎಲ್ಲರೂ ತಿಳಿದಿರುವಂತೆ ಪ್ರಾಚೀನ ಎಂಬ ಅರ್ಥ ಮಾತ್ರವಲ್ಲ, ನೂತನ ಎಂಬ ಅರ್ಥವೂ ಇದೆ. ಆದ್ದರಿಂದ ಹಿಂದೂ ಧರ್ಮವನ್ನು ಸನೂತನ ಧರ್ಮ, ಅಂದರೆ ಸದಾ ಹರಿಯುವ ನದಿಯಂತೆ ಹೊಸದನ್ನು ಸೇರಿಸಿಕೊಳ್ಳಲು ಸಿದ್ಧವಿರುವ ಧರ್ಮ ಅನ್ನಬಹುದು ಅನ್ನುತ್ತಾರೆ. ಜಾತಿ ಜಾತಿಯೆಂದು ಬಡಿದಾಡಿಕೊಳ್ಳುವವರು ವೇದ- ಉಪನಿಷತ್ತುಗಳ ಕಾಲದಿಂದಲೂ ಚಾತುರ್ವಣ್ಯ ಪದ್ಧತಿಯಿತ್ತು ಮತ್ತು ಜಾತಿಯ ಹೆಸರಿನಲ್ಲಿ ಬ್ರಾಹ್ಮಣರು ಇತರರನ್ನು ಶೋಷಿಸುತ್ತಿದ್ದರು ಅನ್ನುವವರು ವೇದ ಮತ್ತು ಉಪನಿಷತ್ರುಗಳಲ್ಲಿ ಹೇಳಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಅನ್ನುತ್ತಾರೆ. ಉಪನಿಷತ್ ವ್ಯಾಖ್ಯಾನಕಾರ ಸಾಯಣರೇ ಛಾಂದೋಗ್ಯೋಪನಿಷತ್ತಿನಲ್ಲಿ ಬರುವ ಪಂಚಜನಾಃ ಎಂಬ ಪದವನ್ನು ಚಾತುರ್ವಣ್ಯಕ್ಕೆ ತಳಕು ಹಾಕಿದ್ದಾರೆ, ಆದರೆ ಅದು ತಪ್ಪು ಎಂದು ತಂತ್ರಿಯವರು ಸ್ಥಾಪಿಸುತ್ತಾರೆ. ಬೌದ್ಧ ಧರ್ಮವನ್ನು ಕೊಂಡಾಡುವವರು ಅದರ ತತ್ವಗಳು ಮತ್ತು ಉಪನಿಷತ್ತಿನ ತತ್ವಗಳ ನಡುವಣ ಸ್ಪಷ್ಟ ಸಾಮ್ಯವನ್ನೇಕೆ ಗಮನಿಸುವುದಿಲ್ಲ , ತತ್ವಮಸಿ(ನೀನು ಅದೇ ಆಗಿರುವೆ)ಎಂಬ ಹೇಳಿಕೆಯಲ್ಲಿ ಭ್ರಮನಿರಸನದ ಸೂಚನೆಯಿದೆ ಅನ್ನುವವರು ಆ ಭ್ರಮನಿರಸನವನ್ನೇ ಭ್ರಮೆಯಿಂದ ಮುಕ್ತಿ ಎಂದು ಧನಾತ್ಮಕವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಕೇಳುತ್ತಾರೆ. ಇಂಥ ನೂರಾರು ಚರ್ಚೆಗಳಿಗೆ ಆಸ್ಪದ ನೀಡುವ 'ಆಜೀವಿಕರು'ಕೃತಿಯ ಬಗ್ಗೆ ನಾಡಿನ ಹೆಸರಾಂತ ವಿದ್ವಾಂಸರುಗಳಾದ ಲಕ್ಷ್ಮೀಶ ತೋಳ್ಪಾಡಿ, ಡಾ.ರಾಜಾರಾಂ ತೋಳ್ಪಾಡಿ, ಡಾ.ಪ್ರಭಾಕರ ಜೋಷಿ, ಸುಬ್ರಹ್ಮಣ್ಯಭಟ್ ಗುಂಡಿಬೈಲು, ಪ್ರೊ.ವರದೇಶ್ ಹಿರೇಗಂಗೆಯವರ ಅಭಿಪ್ರಾಯಗಳು ಈ ಕೃತಿಯಲ್ಲಿವೆ. ತಮ್ಮ ಪ್ರಧಾನ ಕ್ಷೇತ್ರವಾದ ಸಮಾಜಶಾಸ್ತ್ರ ಮಾತ್ರವಲ್ಲದೆ ಸಂಸ್ಕೃತ ಸಾಹಿತ್ಯದ ಬಗೆಗೂ ಅಪಾರ ಜ್ಞಾನ ರಾಶಿಯನ್ನು ತಮ್ಮದಾಗಿಸಿದ ತಂತ್ರಿಯವರನ್ನು ವಿಶ್ವೇಶತೀರ್ಥ ಶ್ರೀಪಾದಂಗಳವರು 'ಚಲಿಸುವ ವಿಶ್ವಕೋಶ'ಎಂಬುದಾಗಿ ವ್ಯಾಖ್ಯಾನಿಸುತ್ತಾರೆ. ಮುಂದಿನ ಭಾಗದಲ್ಲಿ ತಂತ್ರಿಯವರ ಶೈಕ್ಷಣಿಕ ಚಿಂತನೆಗಳು ಮತ್ತು ಅವರು ಸಮಾಜ ಶಾಸ್ತ್ರವನ್ನು ಪಾಶ್ಚಾತ್ಯ ಶೈಲಿಯನ್ನು ಅನುಸರಿಸುವ ಇತರರಿಗಿಂತ ಭಿನ್ನ ರೀತಿಯಲ್ಲಿ ಅಧ್ಯಯನ ಮಾಡಿ ಅರ್ಥೈಸಿಕೊಳ್ಳುವ ವಿಧಾನದ ಕುರಿತು ಡಾ.ಸುಧಾರಾವ್, ಪ್ರೊ.ಭೈರಪ್ಪ, ಪ್ರೊ.ಎಡಪಡಿತ್ತಾಯರ ನಿಲುವುಗಳಿವೆ. ಅಲ್ಲದೆ ಓರ್ವ ಗುರುಗಳಾಗಿ, ಸ್ನೇಹಿತರಾಗಿ , ಮಾರ್ಗದರ್ಶಕರಾಗಿ ತಂತ್ರಿಯವರನ್ನು ಕಂಡ ಅಮೆರಿಕದ ಅಭಿಮಾನಿಗಳು ಬರೆದ ಲೇಖನಗಳೂ ಇವೆ. ತಂತ್ರಿಯವರ ಗುರುಗಳಾದ ಇರಾವತಿ ಕರ್ವೆಯವರ ಬಹು ಮುಖ್ಯ ಮಹಾ ಕಾದಂಬರಿ 'ಯುಗಾಂತ'(ಮಹಾಭಾರತದ ಕುರಿತಾದ ಕಥೆ)ವನ್ನು ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿದ ಬಗ್ಗೆಯೂ ಇಲ್ಲಿ ಎಲ್ಲ ಭಾಷಣಕಾರರು ಉಲ್ಲೇಖಿಸಿದ್ದಾರೆ. ಧ್ವನಿಮುದ್ರಿಕೆಯಿಂದ ಭಾಷಣಗಳನ್ನು ಸಂಗ್ರಹಿಸುವುದು, ವಾಕ್ಯಗಳಿಗೆ ಸರಿಯಾದ ರೂಪ ಕೊಡುವುದು ಸುಲಭದ ಕೆಲಸವಲ್ಲ. ಆದ್ದರಿಂದ ಇಲ್ಲಿ ಎಲ್ಲ ಭಾಷಣಗಳನ್ನು ತಮ್ಮದೇ ಭಾಷೆಯಲ್ಲಿ ಅಚ್ಚುಕಟ್ಟಾಗಿ ಅಕ್ಷರಕ್ಕಿಳಿಸಿದ ಮಂಜುನಾಥ ಭಟ್ಟರ ಪ್ರತಿಭೆ- ಪರಿಶ್ರಮಗಳು ಅಭಿನಂದನೀಯ. ಪಾರ್ವತಿ ಜಿ.ಐತಾಳ್

Sunday, October 17, 2021

ಶೂದ್ರ ಶ್ರೀನಿವಾಸ್ -ರಾಮಚಂದ್ರ ಶರ್ಮ / Ramachandra Sharma / Shudra Srinivas/

ರಾಮಚಂದ್ರ ಶರ್ಮ ನಾಲ್ಕು ಮಾತು ಬಿ.ಸಿ.ರಾಮಚಂದ್ರ ಶರ್ಮ ಎಂದಾಕ್ಷಣ ನೆನಪಿನ ನಾನಾ ಸಂಗತಿಗಳು ಗರಿಗೆದರಿ ನಿಲ್ಲುತ್ತವೆ. ಯಾಕೆಂದರೆ ಅಷ್ಟರಮಟ್ಟಿಗೆ ಅವರು ತಮ್ಮ ಬದುಕಿನ ಕಾಲಘಟ್ಟದಲ್ಲಿ ಕ್ರಿಯಾಶೀಲರಾಗಿದ್ದವರು.ಅದರಲ್ಲೂ ನವ್ಯಕಾವ್ಯದ ಪ್ರಾರಂಭದ ಹಂತದಲ್ಲಿ ಅದರ ಬಗ್ಗೆ ನಡೆಯುತ್ತಿದ್ದ ಎಲ್ಲಾ ವಿಧವಾದ ವಾಗ್ವಾದ , ಸಂವಾದಗಳಲ್ಲಿ ಗೋಪಾಲಕೃಷ್ಣ ಅಡಿಗರು ಮತ್ತು ರಾಮಚಂದ್ರ ಶರ್ಮ ಅವರು ಅದಕ್ಕೆ ಚೇತೋಹಾರಿತನ ತುಂಬಿದವರು. ಇವರಿಗೆ ಪೂರಕವಾಗಿ ಯು.ಆರ್.ಅನಂತಮೂರ್ತಿ , ಲಂಕೇಶ್, ಶಾಂತಿನಾಥ ದೇಸಾಯಿ ,ಕೆ.ವಿ.ತಿರುಮಲೇಶ್, ಹೆಚ್.ಎಂ.ಚನ್ನಯ್ಯ ಮುಂತಾದವರ ಮಾತು ಮತ್ತು ಬರವಣಿಗೆ ಆ ಎಲ್ಲಾ ವಾಗ್ವಾದಗಳಿಗೆ ಚೈತನ್ಯಶೀಲತೆಯನ್ನು ತಂದುಕೊಡುತ್ತಿತ್ತು. ನಾವು ಸಾಹಿತ್ಯದ ವಿದ್ಯಾರ್ಥಿಗಳಾಗಿದ್ದಾಗ ರಾಮಚಂದ್ರ ಶರ್ಮ ಅವರು ವಿದೇಶದ ಇಥಿಯೋಪಿಯಾದಿಂದ ವರ್ಷಕ್ಕೊಮ್ಮೆ ಬೆಂಗಳೂರಿಗೆ ಬಂದಾಗ ಕಡ್ಡಾಯವಾಗಿ ನಾವು ಅವರ ಕವಿತೆಗಳ ಓದು ಮತ್ತು ಮಾತು ಕೇಳಿಸಿಕೊಳ್ಳುವ ಸದಾವಕಾಶ ಲಭಿಸಿತ್ತು.ಅದರಲ್ಲೂ ನಾನು ಆನರ್ಸ್ ವಿದ್ಯಾರ್ಥಿಯಾಗಿದ್ದಾಗ ಅವರ ಕವಿತೆಗಳ ಚರ್ಚೆ ಎಷ್ಟು ಗಂಭೀರವಾಗಿ ನಡೆಯುತ್ತಿತ್ತು. ಇಪ್ಪತ್ಮೂರು ವರ್ಷ ಇಥಿಯೋಪಿಯಾ , ಜಾಂಬಿಯಾ ಮುಂತಾದ ದೇಶಗಳಲ್ಲಿ ಉನ್ನತಮಟ್ಟದ ಶಿಕ್ಷಣ ತಜ್ಞರಾಗಿ ಕೆಲಸ ನಿರ್ವಹಿಸಿದ ಮೇಲೆ ಭಾರತಕ್ಕೆ ಹಿಂದಿರುಗಿ ಬಂದರು. ಇಲ್ಲಿಗೆ ಬಂದ ಮೇಲೆ ಸುಮಾರು ಇಪ್ಪತ್ನಾಲ್ಕು ವರ್ಷಗಳಿಗೂ ಮೇಲ್ಪಟ್ಟು ಅವರ ಜೊತೆಗಿನ ಸ್ಮರಣೀಯ ಒಡನಾಟವನ್ನು ಮರೆಯಲು ಸಾದ್ಯವಿಲ್ಲ. ಇದಕ್ಕೆ ಕೇಂದ್ರ ವ್ಯಕ್ತಿಯಾಗಿ ಲಂಕೇಶ್ ಅವರು ಸಾಂಸ್ಕೃತಿಕ ಸಂಪರ್ಕ ಸೇತುವೆಯಾಗಿದ್ದರು.ಅಲ್ಲಿ ಕೆ.ಮರುಳಸಿದ್ದಪ್ಪ, ಡಿ.ಆರ್.ನಾಗರಾಜ್ , ಕವಿ ಸಿದ್ಧಲಿಂಗಯ್ಯ , ಡಾ.ಕೆ.ಎಂ.ಶ್ರೀನಿವಾಸ ಗೌಡ , ಬಸವರಾಜ ಅರಸ್ ,ಅಗ್ರಹಾರ ಹಾಗೂ ಹೊರಗಡೆಯಿಂದ ತೇಜಸ್ವಿ ,ಕೆ.ರಾಮದಾಸ್, ಯು.ಆರ್.ಅನಂತಮೂರ್ತಿ, ಲಕ್ಷ್ಮೀಶ ತೊಳ್ಪಾಡಿ ,ಕೆ.ವಿ.ತಿರುಮಲೇಶ್ ,ಕಿ.ರಂ.ನಾ ಮುಂತಾದವರು ಬಂದಾಗ ಮಾತುಕತೆಗೆ ಎಂಥ ಅನನ್ಯತೆ ತುಂಬಿಕೊಳ್ಳುತ್ತಿತ್ತು.ಆಗ ಸಾಹಿತ್ಯ ಕುರಿತ ಲವಲವಿಕೆಯ ಮಾತು ಮತ್ತು ಕಾವ್ಯದ ಓದು ಆಪ್ತವಾಗಿರುತ್ತಿತ್ತು. ಶರ್ಮ ಅವರಿಗೆ ಕಾವ್ಯದ ಓದು ಮತ್ತು ಅದನ್ನು ಕುರಿತ ಮಾತುಕತೆ ಎಂದರೆ ಎಲ್ಲಿಲ್ಲದ ಚೈತನ್ಯ ಶೀಲತೆ ತುಂಬಿಕೊಳ್ಳುತ್ತಿತ್ತು.ಅಂದರೆ : ಕಾವ್ಯ ಮತ್ತು ಸಾಹಿತ್ಯದ ಬಗ್ಗೆ ಅವರಿಗೆ ಅಷ್ಟೊಂದು ಆರಾಧನೆಯ ಭಾವ ಇತ್ತು.ಈ ಕಾರಣದಿಂದ ಅವರು ತಮ್ಮೊಂದಿಗೆ ವಿದೇಶದಿಂದ ತಂದ ಕಾರಿನಲ್ಲಿ ಡಿ.ಆರ್ ಮತ್ತು ನಾನು ಕರ್ನಾಟಕದ ಎಂತೆಂಥ ಕಡೆ ಸುತ್ತಾಡಿದ್ದೇವೆ. ಕಾರು ಓಡಿಸುವಾಗ ಅತ್ಯಂತ ಮೌನಿಯಾಗಿ ನಮ್ಮ ತುಂಟತನದ ಮಾತುಗಳಿಗೆ ಸ್ಪಂದಿಸುತ್ತಿದ್ದ ಕ್ರಮವೇ ಅಪೂರ್ವವಾದದ್ದು. ' ಶೂದ್ರ ' ದ ಎಲ್ಲಾ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.ಹಾಗೆ ನೋಡಿದರೆ ಅವರ ' ಈ ಶತಮಾನದ ನೂರು ಇಂಗ್ಲೀಷ್ ಕವಿತೆಗಳು ' ಸಂಕಲನವನ್ನು ಶೂದ್ರ ವೇದಿಕೆ ಮೂಲಕ ಬಿಡುಗಡೆ ಮಾಡುವಾಗ ಎಂಥ ಹಿರಿಯ ಲೇಖಕರೆಲ್ಲ ಭಾಗಿಯಾಗಿದ್ದರು. ಮುಂದೆ ' ಜಾಗೃತ ಸಾಹಿತ್ಯ ಸಮಾವೇಶ ' ನಡೆದಾಗ ನಮ್ಮೊಂದಿಗೆ ಎಷ್ಟು ಉತ್ಸಾಹದಿಂದ ತೊಡಗಿಸಿಕೊಂಡಿದ್ದರು. ಅವರೊಂದಿಗೆ ಅವರ ' ಅನನ್ಯ ' ವೇದಿಕೆಯ ಜೊತೆ ' ಶೂದ್ರ ' ಸೇರಿಸಿಕೊಂಡು ತಿಂಗಳ ಕೊನೆಯ ಶನಿವಾರ ಎಂತೆಂಥ ಅರ್ಥಪೂರ್ಣ ಸಂವಾದಗಳನ್ನು ನಡೆಸಿದೆವು. ಇದಕ್ಕೆ ಡಿ.ಆರ್ ಮತ್ತು ಕಿ.ರಂ ಅವರ ಮಾರ್ಗದರ್ಶನ ಇತ್ತು.ಮತ್ತೊಂದು ‌ ಲವಲವಿಕೆಯ ಭಾಗವಹಿಸುವಿಕೆ ಎಂದರೆ : ಪ್ರತಿವಾರ ಎರಡು ದಿವಸ ನಾವು ಕಾರ್ಡ್ಸ್ ಆಡಲು ಲಂಕೇಶ್ ಅವರ ಕಛೇರಿಯಲ್ಲಿ ಸೇರಿದಾಗ ಎಷ್ಟು ತನ್ಮಯತೆಯಿಂದ ಭಾಗಿ ಯಾಗುತ್ತಿದ್ದರು.ಅವರಿಗೆ ಕಾವ್ಯದಷ್ಟೇ ಕಾರ್ಡ್ಸ್ ಆಡುವುದರ ಬಗ್ಗೆ ಗಾಢವಾದ ವ್ಯಾಮೋಹವಿತ್ತು.ಇಂಥ ತುಂಬು ಮನಸ್ಸಿನ ವ್ಯಕ್ತಿತ್ವದ ಶರ್ಮ ಅವರು ಡಿ.ಆರ್ ಮತ್ತು ಲಂಕೇಶ್ ನಿಧನರಾದಾಗ ತುಂಬಾ ವೇದನೆಗೆ ಒಳಗಾಗಿದ್ದರು.ಹಾಗೆಯೇ ನಾನು ಅವರ ಕೊನೆಯ ದಿನಗಳ ದೈಹಿಕ ನೋವನ್ನು ಹತ್ತಿರ ದಿಂದ ಕಂಡವನು.ಈ ಕೃತಿಯನ್ನು ನನಗೆ ನಾನಾ ಕಾರಣಗಳಿಗಾಗಿ ಪ್ರಿಯರಾದ ಶಾ.ಬಾಲೂರಾವ್ ಅವರ ಬಹುದೊಡ್ಡ ವ್ಯಕ್ತಿತ್ವಕ್ಕೆ ಅರ್ಪಿಸುತ್ತಿರುವೆ.ಅವರು ಶರ್ಮ ಅವರಿಗೂ ಆಪ್ತರಾಗಿದ್ದವರು. ಇಂಥ ಮಹತ್ವದ ಲೇಖಕ ಮತ್ತು ಕವಿ ರಾಮಚಂದ್ರ ಶರ್ಮ ಅವರನ್ನು ಕುರಿತು ಕೇಂದ್ರ ಸಾಹಿತ್ಯ ಅಕಾಡೆಮಿಗೆ ಬರೆದು ಕೊಡಲು ಕವಿ ಸಿದ್ದಲಿಂಗಯ್ಯ ಮತ್ತು ಅದರ ಪ್ರಾದೇಶಿಕ ಕಾರ್ಯದರ್ಶಿ ಮಹಾಲಿಂಗೇಶ್ವರ ಭಟ್ ಅವರು ಸೂಚಿಸಿದಾಗ ಸಂತೋಷದಿಂದ ಒಪ್ಪಿಕೊಂಡೆ. ಆದರೆ ಮತ್ತೆ ಮತ್ತೆ ಒತ್ತಡ ತರುತ್ತಿದ್ದವರು ಕವಿ ಸಿದ್ದಲಿಂಗಯ್ಯ ಅವರು. ಕೊನೆಗೆ ನಾನು ಸಿದ್ದಪಡಿಸಿ ಕೊಟ್ಟಾಗ ಸಂತೋಷದಿಂದ ನನಗೆ ಧನ್ಯವಾದ ಸೂಚಿಸಿದ್ದರು.ಅವರು ಆಸ್ಪತ್ರೆಗೆ ಹೋಗುವ ನಾಲ್ಕು ದಿವಸಗಳ ಮುಂಚೆ " ಗುರುಗಳೇ ಜಾಗ್ರತೆ ಪುಸ್ತಕ ಹೊರ ತರುತ್ತೇವೆ.ಬಿಡುಗಡೆಯ ಕಾರ್ಯಕ್ರಮ ಇಟ್ಟುಕೊಳ್ಳೋಣ " ಎಂದಿದ್ದರು.ಅವರಿಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸುವೆ. ಹಾಗೆಯೇ ಮತ್ತೆ ಮತ್ತೆ ಒತ್ತಡ ತಂದು ಬರೆಸಿದ ಮಹಾಲಿಂಗೇಶ್ವರ ಭಟ್ ಅವರಿಗೆ ಋಣಿಯಾಗಿರುವೆ. ಇದನ್ನು ಬರೆಯುವ ವಿಷಯ ತಿಳಿದು ನನ್ನ ಗುರುಗಳು ಮತ್ತು ಮಾರ್ಗದರ್ಶಕರಾದ ಡಾ.ಕೆ.ಮರುಳಸಿದ್ದಪ್ಪ ಅವರು " ಶೂದ್ರ ಸಂತೋಷ ನೀವು ಬರೆಯುತ್ತಿರುವುದು. ಜಾಗ್ರತೆ ಬರೆದು ಕೊಡಿ " ಎಂದಿದ್ದರು.ಇದೇ ಸಮಯದಲ್ಲಿ ಗೆಳೆಯರಾದ ಪ್ರೊ.ದಂಡಪ್ಪ , ಡಾ.ಎಚ್.ಎಸ್.ಮಾಧವರಾವ್ ಮತ್ತು ಬಸವರಾಜ ಮೇಗಲಕೇರಿ ಅವರಿಗೆ ಕೃತಜ್ಞತೆ ಗಳನ್ನು ಅರ್ಪಿಸುವೆ.ಹಾಗೆಯೇ ಸುಂದರವಾದ ಶರ್ಮರ ಭಾವಚಿತ್ರ ಕೊಟ್ಟ ಪ್ರಸಿದ್ಧ ಛಾಯಾಗ್ರಾಹಕ ಎ.ಎನ್.ಮುಕುಂದ್, ಅಕಾದೆಮಿಯ ಸುರೇಶ್ ಅವರಿಗೆ. ಶೂದ್ರ ಶ್ರೀನಿವಾಸ್ ಬೆನ್ನುಡಿ ಬಿ.ಸಿ.ರಾಮಚಂದ್ರ ಶರ್ಮ ಅವರು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಸಂದರ್ಭದಲ್ಲಿ ಬಹುಮುಖೀ ವ್ಯಕ್ತಿತ್ವವನ್ನು ಹೊಂದಿದ್ದವರು. ಕವಿಯಾಗಿ ,ಕಥೆಗಾರರಾಗಿ ಹಾಗೂ ಅನುವಾದಕರಾಗಿ ಅತ್ಯಂತ ಮಹತ್ವದ ಲೇಖಕರು.( 1925-2005 ) ಅಷ್ಟೇ ಅಲ್ಲ ಶಿಕ್ಷಣ ತಜ್ಞರಾಗಿ ಇಪ್ಪತ್ಮೂರು ವರ್ಷ ಇಥಿಯೋಪಿಯಾ ಜಾಂಬಿಯಾ ಮುಂತಾದ ದೇಶಗಳಲ್ಲಿ ಉನ್ನತ ಮಟ್ಟದಲ್ಲಿ ಸೇವೆ ಸಲ್ಲಿಸಿ ವಾಪಸ್ಸು ಬಂದರು.ನವ್ಯಕಾವ್ಯ ಸಂದರ್ಭಕ್ಕೆ ಬಹು ದೊಡ್ಡ ಕೊಡುಗೆಯನ್ನು ಕೊಟ್ಟವರು.ಅವರ ಶ್ರೀಮತಿ ಪದ್ಮ ಮತ್ತು ಶರ್ಮ ಅವರು ಜೊತೆಗೂಡಿ ಕನ್ನಡದ ಕೆಲವು ಮುಖ್ಯ ಕೃತಿ ಗಳನ್ನು ಇಂಗ್ಲೀಷ್ ಭಾಷೆಗೆ ಅಚ್ಚುಕಟ್ಟಾಗಿ ಅನುವಾದಿಸಿ ವಿಮರ್ಶಕರ ಮೆಚ್ಚಿಗೆ ಪಡೆದರು.ತಮ್ಮ ಬದುಕಿನ ಕಾಲಘಟ್ಟದಲ್ಲಿ ಸಾಂಸ್ಕೃತಿಕ ಲೋಕಕ್ಕೆ ಕೆಲವು ಅಪೂರ್ವ ಮೆಲುಕು ಹಾಕಬಹುದಾದ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ------ ಸಾಹಿತ್ಯ ಅಕಾದೆಮಿಯ ' ಭಾರತೀಯ ಸಾಹಿತ್ಯ ನಿರ್ಮಾಪಕರು ' ಮಾಲಿಕೆಗಾಗಿ ಬಿ.ಸಿ.ರಾಮಚಂದ್ರ ಶರ್ಮ ಅವರ ವ್ಯಕ್ತಿತ್ವ ಮತ್ತು ಬರವಣಿಗೆಯನ್ನು ಕುರಿತು ಬರೆದು ಕೊಟ್ಟಿರುವ ಶೂದ್ರ ಶ್ರೀನಿವಾಸ್ ಅವರು ಕನ್ನಡದ ಹಿರಿಯ ಲೇಖಕರು.' ಶೂದ್ರ ' ಸಾಹಿತ್ಯ ಪತ್ರಿಕೆಯ ಮೂಲಕ ನಾಲ್ಕು ದಶಕಗಳಿಗೂ ಮೇಲ್ಪಟ್ಟು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂದರ್ಭದಲ್ಲಿ ಮುಖ್ಯರಾಗಿರು ವಂಥವರು.ಲೇಖಕರಾಗಿ ,ಕಾದಂಬರಿಕಾರ ರಾಗಿ ,ಕಥೆಗಾರರಾಗಿ , ಅಂಕಣಕಾರ ರಾಗಿ, ಜೀವನಚರಿತ್ರೆಕಾರರಾಗಿ ಗಂಭೀರವಾಗಿ ತೊಡಗಿಸಿಕೊಂಡವರು. ಪ್ರವಾಸ ಕಥನ ಕೂಡ ಇವರಿಗೆ ಪ್ರಿಯವಾದ ವಿಷಯ. ಮಾನವ ಹಕ್ಕುಗಳ ಹೋರಾಟಗಾರರಾಗಿ ಗುರ್ತಿಸಿಕೊಂಡಿದ್ದಾರೆ.

ಉದಯಕುಮಾರ ಹಬ್ಬು- " ಅಸಂಗ " { ರಾಘವೇಂದ್ರ ಪ್ರಭು ಅವರ ಕಥಾ ಸಂಕಲನ }

"ಅಸಂಗ" ಎಂಬ ವಿಶಿಷ್ಟ ಶೀರ್ಷಿಕೆಯನ್ನು ಹೊತ್ತ ಈ ಕಥಾಸಂಲನವನ್ನು ಬರೆದವರು ಶ್ರೀ ರಾಘವೇಂದ್ರ ಪ್ರಭುಗಳು, ಕೆನರಾ ಕಾಲೇಜು, ಮಂಗಳೂರಿನಲ್ಲಿ ಮೂರು ದಶಕಗಳ ಕಾಲ ಇತಿಹಾಸ ಪ್ರಾಧ್ಯಾಪಕರಾಗಿ ೧೯೯೮ ರಲ್ಲಿ ನಿವೃತ್ತಿಗೊಂಡವರು. ಈ ಕೃತಿಕಾರನ ವಿಶೇಷತೆ ಏನೆಂದರೆ ತಮ್ಮ‌,೮೦ ರ ಪ್ರಾಯದಲ್ಲಿ ಇಂಥದೊಂದು ಅಚ್ಚುಕಟ್ಟಾದ ಅರ್ಥಪೂರ್ಣ ಕಥಾಸಂಕಲನ ಪ್ರಕಟಿಸಿದ್ದುದು. ಈ ಸಣ್ಣ ಕತೆಗಳನ್ನು ಬರೆಯಲು ಹಲವಾರು ಗ್ರಂಥಗಳನ್ನು ಓದಿದ್ದಲ್ಲದೆ ಡಾ ನಾ ದಾಮೋದರ ಶೆಟ್ಟರ ಶಿಷ್ಯತ್ವ ಪಡೆದು ಬರವಣಿಗೆಯ ಬಗ್ಗೆ ತರಬೇತು ಪಡೆದವರು. ಇಷ್ಟಲ್ಲದೆ ಜನಪ್ರಿಯ ಕಾದಂಬರಿಕಾರ, ಕಥೆಗಾರ ಡಾ. ಕೆ. ಎನ್.‌ಗಣೇಶಯ್ಯ ಅವರ ಬೆಂಬಲ ಮತ್ತು ಪ್ರೇರಣೆ. ಈ ಕಥಾಸಂಕಲನದ ಶೀರ್ಷಿಕೆ "ಅಸಂಗ". ಈ ಪದ ಬೃಹದಾರಣ್ಯಕೋಪಷನಿತ್ತನಲ್ಲಿ ಬರುವ ಪದ. ಅಸಂಗ ಎಂದರೆ ಸಂಗರಹಿತ, ಏಕಾಂಗಿ.unattached ಎಂಬೀ ಅರ್ಥವನ್ನು ಈ ಕತೆಗಳ ಮೂಲಕ ಹೇಳಲು ಪ್ರಭುಗಳು ಪ್ರಯತ್ನಿಸಿದ್ದಾರೆ. ಪ್ರಭುಗಳ ಓದಿನ ಹರಹು ತುಂಬ ವಿಶಾಲವಾದುದು. ಸನಾತನ ಧರ್ಮದ ಉದ್ಗ್ರಂಥಗಳನ್ನು ಅಧ್ಯಯನ ಮಾಡಿರುವರಲ್ಲದೆ ಜಿಡ್ಡು ಕೃಷ್ಣಮೂರ್ತಿ, ಓಶೋ ಇವರ ವಿಚಾರಗಳನ್ನು ಕೂಡ ಇಲ್ಲಿನ ಕತೆಗಳಲ್ಲಿ ಬಳಕೆಯಾಗಿವೆ. ಮನುಷ್ಯ ಏಕಾಂಗಿಯಾಗಿಯೆ ಈ ಭೂಮಿಯಲ್ಲಿ ಹುಟ್ಟುತ್ತಾನೆ, ಏಕಾಂಗಿಯಾಗಿಯೆ ಇಲ್ಲಿಂದ ನಿರ್ಗಮಿಸುತ್ತಾನೆ.‌ವ್ಯಕ್ತಮಧ್ಯದಲ್ಲಿ ನಾನಾ ಆಸೆ, ಅಕಾಂಕ್ಷೆಗಳಿಗೆ ಬಲಿಯಾಗಿ ತನ್ನತನವನ್ನು ಅರಿಯಲು ಸೋಲುತ್ತಾನೆ. ಅಸಂಗೋಹಂ ಕಮಲದ‌ ಎಲೆಗಳಂತೆ ಯಾವ ಆಕರ್ಷಣೆಗೂ ಪಕ್ಕಾಗದೆ ಬದುಕಿನ ನಿಜ ಗುರಿಯ ಸಾಕ್ಷಾತ್ಕಾರ ಪಡೆಯಬೇಕು ಎಂಬುದೆ ಈ ಕತೆಗಾರನ ಅಂಬೋಣ. ಈ ಕತಾಸಂಲನದಲ್ಲಿ ಒಂಬತ್ತು ಕತೆಗಳಿವೆ. ಪ್ರತಿಯೊಂದು ಕತೆ ಗಂಡು- ಹೆಣ್ಣಿನ ಸಂಬಂಧಗಳ ವಿವಿಧ ಆಯಾಮಗಳನ್ನು ಅಭಿವ್ಯಕ್ತಿಸಲಾಗಿವೆ. " ಅಸಂಗ" ಕತೆಯಲ್ಲಿ ಸಂಧ್ಯಾಕಾಲೇಜಿನ ಪ್ರಾಧ್ಯಾಪಕನೊಬ್ಬ ಮದುವೆಯಾದ ಕೆಲವೆ ದಿವಸಗಳಲ್ಲಿ ಹೆಂಡತಿ ದುರ್ಘಟನೆಯಲ್ಲಿ ಮೃತಪಡುತ್ತಾಳೆ. ಅವನು ದಿನಕಳೆದ ಹಾಗೆ ಓರ್ವ ವಿವಾಹಿತ ಹೆಣ್ಣಿನ ಸಂಪರ್ಕಕ್ಕೆ ಬರುತ್ತಾನೆ. ಅವಳು ಅವನ ವಿದ್ಯಾರ್ಥಿನಿಯೂ ಆಗಿರುತ್ತಾಳೆ. ಅವಳ ವೈವಾಹಿಕ ಬದುಕು ಸುಗಮವಾಗಿರುವುದಿಲ್ಲ. ಈ ಪ್ರಾಧ್ಯಾಪಕ ಅವಳ ಕುರಿತು ಮೋಹ ಬೆಳೆಸಿಕೊಳ್ಳುತ್ತಾನೆ. ಆದರೆ ಅವಳಿಗೆ ಇವನ ಬಗ್ಗೆ ಮೋಹ ಇರುವುದಿಲ್ಲ. ಅವನು ಮುಂದುವರಿದಂತೆ ಅವಳು ಅವನನ್ನು ತಪ್ಪು ತಿಳಿಯುತ್ತಾಳೆ.‌ಮತ್ತು ಒಂದು ದಿನ ಅವನ ಬದುಕಿನಿಂದ ನಿರ್ಗಮಿಸಿಬಿಡುತ್ತಾಳೆ.ಕುಸಿದು ಹೋದ ಪ್ರಾಧ್ಯಾಪಕನಿಗೆ ಅವನ ಗೆಳೆಯರು ಧೈರ್ಯ ತುಂಬುತ್ತಾರೆ. ಮತ್ತು ಅವನು ಸ್ವಾಮೀಜಿಯ ಅಸಂಗೋಹಂ ಪ್ರವಚನ ಕೇಳಿ ಕಮಲದ ಎಲೆಯಂತಾಗಬೇಕೆಂದು ಪ್ರವಚನ ಕೇಳುತ್ತಾನೆ. ಅಂತ್ಯ ಏನೆಂದಯ ಕತೆ ಹೇಳುವುದಿಲ್ಲ. ಅದು ಓದುಗರ ಊಹೆಗೆ ಬಿಟ್ಟದ್ದು‌ ಈ ಕತೆಯಎಂದೆನಿಸಿತು ಬೇಕಿದ್ದರೆ ಒಂದು ಕಾದಂಬರಿಯನ್ನಾಗಿಯೂ ಕೂಡ ಬೆಳೆಸಬಹುದು. ಎರಡನೆಯ ಕತೆ ಘಂಟಾನಾದ ಗುಜರಾತಿನ ಬೆಟ್ ದ್ವಾರಕ್ ಎಂಬಲ್ಲಿನ ಅರಬ್ಬಿ ಸಮುದ್ರದಲ್ಲಿ ಸಾವಿರಾರು ವರ್ಷಗಳ ಹಿಂದೆ ಮುಳುಗಿ ಹೋಗಿದ್ದ ದೇವಾಲಯಗಳ ಘಂಟಾನಾದ ಕೇಳಿಸುತ್ತಿದೆಯಂತೆ. ಇದನ್ನು ಜಾಲತಾಣದಲ್ಲಿ ನೋಡಿದ ಅವಿನಾಶ್ ಎಂಬ ಮೂವತ್ತಾರರ ತರುಣ ಅದಕ್ಕಾಗಿ ಗುಜರಾತಿಗೆ ಹೊರಟು ನಿಲ್ಲುತ್ತಾನೆ. ಅಲ್ಲಿ ಜಪ್ಪಯ್ಯ ಎಂದರೂ ಘಂಟಾನಾದ ಕೇಳುವುದಿಲ್ಲ.ಆದರೆ ಅಲ್ಲಿ ಕುಂದನ್ ಎಂಬ ಸುಂದರ ಯುವತಿಯ ಸಂಪರ್ಕಕ್ಕೆ ಬಂದು ಅವರಿಬ್ಬರೂ ಒಂದಾಗುತ್ತಾರೆ. ಅಧ್ಯಾತ್ಮದಲ್ಲಿ ಭಕ್ತಿಪರವಶನಾದ ಅವಿನಾಶ್ ನಿಗೆ ಅಪರಾಧಿ ಪ್ರಜ್ಞೆ ಕಾಡುತ್ತದೆ. ತನ್ನ ಬ್ರಹ್ಮಚರ್ಯ ನಷ್ಟಗೊಂಡಿತು ಎಂದು ಚಿಂತಿಸುತ್ತಾನೆ. ತನ್ನ ಈ ಹೀನ ಸ್ಥಿತಿಗೆ ಕುಂದನ್ ಕಾರಣಳೆ? ಇದು ಮಾಯೆಯಲ್ಲದೆ ಮತ್ತೇನು? ಎಂದು ಚಿಂತನೆ ನಡೆಸಿ ಗುರುಗಳಿಗೆ ಸಂಪೂರ್ಣ ಶರಣಾಗುತ್ತಾನೆ‌ ಹೀಗೆ ಭಕ್ತಿ ಮಾರ್ಗದಿಂದ ಇಂದ್ರಿಯ ಆಸೆಗಳನ್ನು ನಿಯಂತ್ರಿಸಿಕೊಳ್ಳುತ್ತಾನೆ. ನಾಡುನುಡಿಯ ವಿಧ್ವಂಸಕರು ಈಕತೆ ಲವ್ ಜೇಹಾದ್ ಇದರ ದುಷ್ಪರಿಣಾಮಗಳನ್ನು ಹೇಳುವ ಕತೆ. ಚಿಗುರೆಲೆಯೊಡನೆ ಸಂವಾದ ಕತೆಯು ತತ್ವಶಾಸ್ತ್ರ ಪರಿಣಿತರಾದ ವಯಸ್ದಾದ ಪ್ರಾಧ್ಯಾಪಕ ಮತ್ತು ಅವರ ಹದಿಹರೆಯದ ಶಿಷ್ಯೆಯ ನಡುವೆ ನಡೆದ ಅಧ್ಯಾತ್ಮಿಕ ಚರ್ಚೆ. ಇದೆ‌ ಈ ಕತೆಯಲ್ಲಿ ಜಿಡ್ಡುಕೃಷ್ಣ ಮೂರ್ತಿಯವರ ತತ್ವದ ಚಿಂತನ ಮಂಥನವಿದೆ. ಹುಡುಗಿ ಜಿಡ್ಡು ಕೃಷ್ಣಮೂರ್ತಿ ಅವರ ಆಶ್ರಮಕ್ಕೆ ಪ್ರಾಧ್ಯಾಪಕರೊಟ್ಟಿಗೆ ಹೋಗಿ ಪ್ರಬುದ್ಧಳಾಗಿ ಬದುಕನ್ನು ರೂಪಿಸಿಕೊಳ್ಳುವ ಕತೆ ಇದೆ. ಪಕ್ಷಾಂತರಿ ಕತೆಯಲ್ಲಿ ಎಡಪಂಥೀಯ ಬುದ್ಧಿಜೀವಿಗಳ ದ್ವಿಮುಖ ವ್ಯಕ್ತಿತ್ವವನ್ನು ವಿಡಂಬನೆಗೊಳಪಡಿಸಲಾಗಿದೆ. ಜೋಡಿಕಾಮನ ಬಿಲ್ಲು ಈ ಕತೆಯಲ್ಲಿ ಪ್ರೀತಿಸಿ ಮದುವೆಯಾಗಬೇಕೆಂದಿರುವ ಜೋಡಿಯಲ್ಲಿ ಯುವಕ ದುರ್ಘಟನೆಗೊಳಗಾಗಿ ಕೈಕಾಲು ಮುರಿದು ನಪುಂಸಕನಾಗಿಬಿಡುತ್ತಾನೆ. ಈ ದುರಂತವನ್ನು ಹೆಣ್ಣು ಹೇಗೆ ಸ್ವೀಕರಿಸುತ್ತಾಳೆ. ಇದುವೆ ಕತೆಯ ಸಾರ. ಅವಳು ತಾನು ಅವಿವಾಹಿತೆಯಾಗಿದ್ದುಕೊಂಡು, ಸ್ವತಂತ್ರವಾಗಿದ್ದುಕೊಂಡು, ಒಂಟಿತನವೆಂಬ ಅದ್ಭುತ ವಿದ್ಯಮಾನವನ್ನು ಹೇಗಿದೆಯೊ ಹಾಗೆ ವೀಕ್ಷಿಸುತ್ತ ಜೀವನ ಕಳೆಯಲೇ?" ಈ ಪ್ರಶ್ನೆಯೊಂದಿಗೆ ಕತೆ ಕೊನೆಗೊಳ್ಳುತ್ತದೆ. ಇದನ್ನು ಒಂದು ಕಾದಂಬರಿಯನ್ನಾಗಿ ಬೆಳೆಸಿಕೊಳ್ಖುವ ಎಲ್ಲ ಅವಕಾಶವಿದೆ. ಈ ಕತಾಸಂಕಲನದಲ್ಲಿ ಮುಂದಿನ ಕತೆ ಗೋಪುರದ ಗಂಟೆ. ಇದು ಒಂದು ಪರಿಣಾಮಕಾರಿ ಕತೆ. ಥಾಮಸ್ ಇವನು ಇಗರ್ಜಿಯ ಗಂಟೆ ಬಾರಿಸುವವ. ಅಪ್ಪ ಕುಡುಕ. ತಾಯಿ ಮಲ್ಲಿಗೆಯನ್ನು ಬೆಳೆದು ಮಾರಿ ಜೀವನ ಸಾಗಿಸುತ್ತಿದ್ದಳು. ಥಾಮಸ್ ಎಂಟು ವರ್ಷ ಪ್ರಾಯದವನಾಗುವಾಗ ಪೋಲಿಯೊ ರೋಗಬಡಿದು ಎರಡು ಕಂಕುಳಲ್ಲಿ ಊರುಗೋಲು ಇಲ್ಲದೆ ನಡೆಯಲಾರ. ಅವನು ಪರಿಸ್ಥಿತಿಯನ್ನು ಕಂಡು ಇಗರ್ಜಿಯ ಪಾಲನಾ ಸಮೀತಿಯ ಉಪಾಧ್ಯಕ್ಷರು ಅನುಕಂಪದ ನೆಲೆಯಲ್ಲಿ ಥಾಮಸ್ ನಿಗೆ ಇಗರ್ಜಿಯ ಮಿರ್ ನ್ಯಾಮ್ ನೌಕರಿಯನ್ನು ದಯಪಾಲಿಸಿತ್ತಾರೆ. ಇಗರ್ಜಿಯ ಗಂಟೆ ಬಾರಿಸುವ ಕೆಲಸ. ಅವನು ಯುವಕನಾಗುತ್ತಿದ್ದಂತೆ ಜ್ಯೂಲಿಯಾನಾ ಎಂಬ ಹುಡುಗಿ ಥಾಮಸ್ ನನ್ನು ಪ್ರೀತಿಸತೊಡಗುತ್ತಾರೆ. ಘಂಡಾಗೋಪುರದಲ್ಲಿ ಪರಸ್ಪರ ಆಲಿಂಗನ ಚುಂಬನ ಕೊಟ್ಟು ಕೊಳ್ಳುತ್ತಾರೆ. ಇದನ್ನು ಕಂಡ ಪಾದರಿ ಕ್ಲೆಮಂಟನಿಗೆ ಹೊಟ್ಟೆಕಿಚ್ಚು. ಹೊಂಚು ಹಾಕಿ ಪಾದರಿ ತನ್ನ ಕಾಮತೃಷೆ ತೀರಿಸಿಕೊಳ್ಳುತ್ತಾನೆ. ಮತ್ತು ಜ್ಯೂಲಿಯಾನಾ ಅಲ್ಲಿಂದ ಹೊರಬಿದ್ದಾಗ ಪಾದರಿಗೆ ಹೆದರಿಕೆ. ಜ್ಯೂಲಿಯಾನಾ ಪೋಲಿಸ್ ಕಂಪ್ಲೇಂಟ್ ಕೊಟ್ಟರೆ ತನ್ನ ಮುಖಭಂಗವಾಗುವುದೆಂದು ತಿಳಿದು. ಆ ಅತ್ಯಾಚಾರ ಆರೋಪವನ್ನು ಥಾಮಸ್ ನ ತಲೆಗೆ ಕಟ್ಡಿತ್ತಾನೆ.ಇದರಿಂದ ಘಾಸಿಗೊಂಡ ಥಾಮಸ್ ನೇಣುಹಾಕಿಕೊಂಡು ಸಾಯುತ್ತಾನೆ.‌ಜ್ಯೂಲಿಯಾನಾ ಕೂಡ ನೇಣು ಹಾಕಿಕೊಂಡು ಸಾಯುತ್ತಾಳೆ. ಮತ್ತೆ ಈ ಅತ್ಯಾಚಾರದ ಹಿಂದೆ ಪಾದ್ರಿಯ ಕೈವಾಡವಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ಬಿಷಪ್ಪರು ಇದನ್ನು ಹೇಗಾದರೂ ಮಾಡಿ ಮುಚ್ಚಿಹಾಲು ನೋಡಿದರು. ಆದರೆ ಜನರ ಒತ್ತಡದ ಮೇತೆಗೆ ಪಾದರಿಯನ್ನು ಪೋಕಿಸರು ಅರೆಸ್ಟ್ ಮಾಡುವುದರೊಂದಿಗೆ ಕತೆ ಅಂತ್ಯಗೊಳ್ಳುತ್ತದೆ. ಕೊನೆಯ ಕತೆ ಮೃಗಜಲದ ಬೆಂಬತ್ತಿ ಈ ಕತೆಯಲ್ಲಿ ಜಿಡ್ಡು ಕೃಷ್ಣಮೂರ್ತಿ ಮತ್ತು ಓಶೋನ ಸೆಕ್ಸ್ ಕುರಿತ ವಿಚಾರಗಳ ಕುರಿತಾದ ಅವರ ಪ್ರೇಮದ‌ ಪ್ರೀತಿಯ ವ್ಯಾಖ್ಯಾನದ ಸಂಕಥನವಿದೆ. ಡ್ರಗ್ಸ್ ಮಾಫಿಯಾದಲ್ಲಿ ಕೈಯಾಡಿಸಿ ನಾರಾಯಣ ಪ್ರಭು ಎಂಬವನು ಒಂದು ವರ್ಷ ಜೈಲುಶಿಕ್ಷೆಗೆ ಒಳಗಾಗುತ್ತಾನೆ..ಅವನು ಜೈಲಿನಿಂದ‌ ಹೊರಬಂದ ಮೇಲೆ ಅಣ್ಣನ ಮನೆಗೆ ಹೋಗುತ್ತಾನೆ. ಹೆಂಡತಿ ಅಹಲ್ಯಾ ತನ್ನನ್ನು ಹೇಗೆ ಸ್ವೀಕರಿಸಿಯಾಳು ಎಂಬ ಬಗ್ಗೆ ಅವನಿಗೆ ಅನುಮಾನವಿರುತ್ತದೆ‌.‌ಜಿಡ್ಡು ಕೃಷ್ಣಮೂರ್ತಿಯವರ ಉಪನ್ಯಾಸ ಮತ್ತು ಓಶೋನ ಉಪನ್ಯಾಸ ನಾರಾಯಣ ಪ್ರಭು ಮೇಲೆ ತುಂಬ ಪ್ರಭಾವ ಬಿದ್ದಂತೆ ತೋರುತ್ತದೆ. ಅವನು ಹೆಂಡತಿಗೆ ಹೇಳುತ್ತಾನೆ:"'ಅಹಲ್ಯಾಬಾಯಿ. ನೀನು ಎಂದಾದರೂ ಒಂದು ತೊಟ್ಟು ಪ್ರೀತಿ ನೀಡಿದ್ದೀಯಾ? ನಿನ್ನ ಪ್ರಪಂಚವೆಂದರೆ ನೀನು ಮಗು ಮತ್ತು ಶಾಲೆಯ ಸಂಬಳ. ನೀನು ಎಂದೋ ನನ್ನನ್ನು ಮಾನಸಿಕವಾಗಿ ಡೈವೋರ್ಸ್ ಮಾಡಿದ್ದಿ‌. ಪ್ರೀತಿಯ ಅರ್ಥ ತಿಳಿಯದೆ ನೀನು ಪ್ರೀತಿಯನ್ನು ಹೇಗೆ ಕೊಡಬಲ್ಲೆ! " ಇಷ್ಟು ಹೇಳಿ "ನಾನು ಹಿಮಾಲಯಕ್ಕೆ ಹೋಗಿ ಕೊನೆಗಾಲದವರೆಗೂ ಅಲ್ಲೇ ಇರುತ್ತೇನೆ‌" ಎಂದು ಹೇಳಿ ಹೊರಟುಬಿಡುತ್ತಾನೆ. ತಮ್ಮ ೮೦ ರ ಹರೆಯದಲ್ಲಿ ಕತೆ ಹೇಳಬೇಕು ಜನರಿಗೆ ತಲುಪಿಸಬೇಕು ಎಂಬ ಹಂಬಲವುಳ್ಳ ಪ್ರಭುಗಳ ಕತೆಗಳಿಗೆ ವಿಮರ್ಶೆ ಬೇಕೆ? ಚೆನ್ನಾಗಿ ಬರೆದಿದ್ದಾರೆ. ಉದಯಕುಮಾರ ಹಬ್ಬು

Through the poet's eye | ಎ . ಕೆ . ರಾಮಾನುಜನ್ ಸಂದರ್ಶನ { ಎಚ್. ಎಸ್. ಶಿವಪ್ರಕಾಶ್ }

Through the poet's eye | Deccan Herald: An interview of AKR by renowned Kannada poet and playwright H S Shivaprakash was aired on All India Radio, Bengaluru, on August 9, 1988. The stalwarts’ discussion on literature, translation and poetry is as relevant today as it was on the day they spoke and continues to provide us insights well into the 21st century. This is the transcript translated from the Kannada by

Monday, October 11, 2021

ಸುಧಾ ಅಡುಕಳ - ಶಯ್ಯಾ ಗೃಹದ ಸುದ್ದಿಗಳು { ಕವನ ಸಂಕಲನ - ಶೋಭಾ ನಾಯಕ }

ಸುದ್ದಿಯಾದ ಶಯ್ಯಾಗೃಹದ ಸುದ್ದಿಗಳು.... ಲೈಂಗಿಕ ಮಡಿವಂತಿಕೆಯೆಂಬುದು ನಮ್ಮ ದೇಶದಲ್ಲಿ ಲಿಂಗಾಧಾರಿತವಾಗಿ ರೂಪುಗೊಂಡಿದೆ. ಶೃಂಗಾರದ ರೂಪು ತಳೆಯದೇ ಅವೆಂದಿಗೂ ಹೊರಬರಲಾರವು. ಬರುವ ಸುದ್ದಿಗಳೆಲ್ಲವೂ ಗಂಡಿನ ನೋಟಗಳೇ ಹೊರತು ಹೆಣ್ಣ ಮಾತುಗಳಲ್ಲ. ಹಾಗೆ ನೋಡಿದರೆ ನಮ್ಮ ಹಿಂದಿನ ತಲೆಮಾರುಗಳೇ ವಾಸಿ. ಗುಟ್ಟಾಗಿಯಾದರೂ ರಾತ್ರಿಯ ಅನುಭವಗಳನ್ನು ತಮ್ಮೊಳಗೆ ಹಂಚಿಕೊಂಡು ಹಗುರಾಗುತ್ತಿದ್ದರು. ಆದರೆ ಈ ಗಾಂವ್ಟಿ ಅನುಭವ ಬರಹವಾದದ್ದಂತೂ ಇಲ್ಲ. ತೊರವೆ ರಾಮಾಯಣದ ರಾಮಸೀತೆಯರ ಶಯ್ಯಾಗಾರದಿಂದ ಹಿಡಿದು ಇಂದಿನ ಬೆಡ್ ರೂಮ್ ಕಥೆಗಳೆಲ್ಲವೂ ಗಂಡಿನ ನೆಲೆಯಲ್ಲೇ ನಿರೂಪಿತ. ಆಧುನಿಕ ಕಾವ್ಯದಲ್ಲಿ ಅಲ್ಲಲ್ಲಿ ಮಿಂಚಂತೆ ಸುಳಿಯುತ್ತಿದ್ದ ಹೆಣ್ಣ ಲೈಂಗಿಕತೆಯ ಒಳನೋಟಗಳು ಈ ಕವನಸಂಕಲನದಲ್ಲಿ ಬಿರುಮಳೆಯಾಗಿ ಸುರಿದಿವೆ. ಸಂಕೋಚ ಮತ್ತು ಹಿಂಜರಿಕೆಯ ಭಯಬಿಟ್ಟು ಕಾವ್ಯನಾಯಿಕೆ ತನ್ನ ಶಯ್ಯಾಗಾರದ ಖಾಸ್ ಅನುಭವಗಳನ್ನು ಬಿಚ್ಚಿಟ್ಟಿದ್ದಾಳೆ. ಎಷ್ಟು ಬೇಕೋ ಅಷ್ಟೇ ಕ್ವಚಿತ್ ಮಾತುಗಳಲ್ಲಿ ಹೇಳಬೇಕಾದುದನ್ನು ಹೇಳಿ ಮುಗಿಸುತ್ತಾಳೆ. ಸ್ವೀಕಾರದ ಹಂಗು ಮೀರಿ ಹೊರಬಂದ ಸಾಲುಗಳಿವು. ಹಾಗೆ ನೋಡಿದರೆ ಅಕ್ಕನೂ ಏನನ್ನೂ ಬಚ್ಚಿಟ್ಟುಕೊಂಡವಳಲ್ಲ. ವಸನವಳಿದ ದೇಹಕ್ಕೆ ಕೇಶರಾಶಿಯ ಮರೆಮಾಡುವ ಲೋಕ ಅದನ್ನು ಕೇಳಿಸಿಕೊಂಡಿರಲಿಲ್ಲ ಅಷ್ಟೆ. ಕವಯತ್ರಿ ಶೋಭಾನಾಯಕ ಕೇಳಿಸುವ ಛಾತಿಯಲ್ಲೇ ಹೇಳಿದ್ದಾರೆ. ಹೆಣ್ಣ ಅಭಿವ್ಯಕ್ತಿಗೆ ಹೊಸದೊಂದು ಕಾಲುದಾರಿಯನ್ನು ತೆರೆದಿದ್ದಾರೆ. ಬಟ್ಟೆಯುಟ್ಟವರ ಮುಂದೆ ಬೆತ್ತಲೆ ಕವಿತೆಗಳ ಕತ್ತು ಹಿಸುಕುವುದೂ ಒಂದು ಕೊಲೆಯೆ ಬ್ರೈಲ್ ಲಿಪಿಯಲ್ಲಿ ಬರೆದ ಶೃಂಗಾರ ಕಾವ್ಯ ನಾನು ದುರಂತವೆಂದರೆ, ಓದಬೇಕಾದ ನೀನು ಕುರುಡನಲ್ಲ ನಾನು ನರಳುವಾಗ ನಿನಗೆ ಸಿಗುವ ಸುಖದ ಹೆಸರು: ಅಹಂ ಶಯ್ಯಾಗಾರದ ಸುದ್ದಿಗಳು ಇನ್ನೊಬ್ಬರ ಬಾಯಿಯ ತಾಂಬೂಲವಾಗುವುದು ಅವರವರ ಶಯ್ಯಾಗೃಹಗಳು ಶವಾಗಾರಗಳಾದಾಗಲೇ! ಈ ನನ್ನ ಮೊಲೆಗಳು; ಸದಾ ಉರಿವ ಒಲೆಗಳು ಬರೀಹಾಲು ಬಯಸುವ ನಿನಗೆ ಬೆಂಕಿಯ ಭುಗಿಲನ್ನೂ ಕುಡಿಸಬಲ್ಲವು ಬರಿಯ ಪತಿಯಂದಿರ ಹೆಸರಿನ ವ್ರತ ಮಾಡಲೆಂದು ಪತಿವ್ರತೆಯಾದರೆ ಏನು ಬಂತು? ಅವನು ಅನುಭವ ನಾನು ಮಂಟಪ! ............... ಹ್ಹಹ್ಹಾ..... ಕವನಸಂಕಲನವನ್ನೇ ಇಲ್ಲಿ ಮತ್ತೆ ಬರೆಯಲಾರೆ. ನೀವೂ ಸಾಧ್ಯವಾದರೆ ಕೇಳಿ ಹೆಣ್ಣಿನ ಶಯ್ಯಾಗಾರದ ಸುದ್ದಿಗಳನ್ನು....

Sunday, October 3, 2021

ಗಿರಿಜಾ ಶಾಸ್ರಿ - ಕೆ. ಸತ್ಯನಾರಾಯಣ ಅವರ " ಅವರವರಭವಕ್ಕೆ , ಓದುಗರ ಭಕುತಿಗೆ "/ GIRIJA SHASTRY / K. Satyanarayana

ಕೆ. ಸತ್ಯನಾರಾಯಣ ಅವರ "ಅವರವರ ಭವಕ್ಕೆ ಓದುಗರ ಭಕುತಿಗೆ..." ನಮಗೆ ಗೊತ್ತಿರುವುದು ಭಾವ ಮತ್ತು ಭಕ್ತಿ. 'ಭವಿ' ಎನ್ನುವ ಶಬ್ದ ಕೂಡ ಇದೆ. ಆದರೆ ಅದು ಭಕ್ತಿಗೆ ವಿರುದ್ಧನೆಲೆಯದು. ಇಲ್ಲಿ ಭವ ಮತ್ತು ಭಕ್ತಿ ಎರಡನ್ನೂ ಒಟ್ಟಿಗೆ ತಂದಿದ್ದಾರೆ. ಅವು ಪ್ರತ್ಯೇಕವಾಗಿ ಇರುವುದಿಲ್ಲ. ಬದುಕಿನಲ್ಲಿ ಒಟ್ಟಿಗೇ ಇರುತ್ತವೆ. ಭೌತಿಕ ಮತ್ತು ಅಭೌತಿಕ ಸಂಘರ್ಷಗಳು ( ಇದು ಒಂದರೊಳಗೆ ಇನ್ನೊಂದು ಹೊಗುವ, ಸೃಜನಶೀಲ ಮತ್ತು ಆತ್ಮ ಕಥನದ ನಡುವಿನ ಸಂಘರ್ಷವೂ ಇರಬಹುದು) ಬದುಕಿನ ವಾಸ್ತವಗಳು. ಎನ್ನುವುದನ್ನು ಹೇಳುತ್ತಿದ್ದಾರೇನೋ ಎಂದೆನಿಸುತ್ತದೆ. ಸ್ವ ದ ಪರಿವೀಕ್ಷಣೆಯ ಪರಿಯನ್ನು ಪರೀಕ್ಷೆಗೆ ಒಡ್ಡಿದ್ದಾರೆ ಎಂದೂ ಎನಿಸುತ್ತದೆ. ಅವರ ಇತರ ಸೃಜನಾತ್ಮಕ ಮತ್ತು ಗದ್ಯ ಕೃತಿಗಳಲ್ಲಿ ಎದ್ದು ಕಾಣುವ ಮಧ್ಯಮ ಮಾರ್ಗ( grey area) ಮೇಲಿನ ಯೋಚನೆಗೆ ಸಮರ್ಥನೆ ನೀಡುತ್ತದೆ. 'ಓದುಗರ ಭಕುತಿಗೆ' ಎಂದಿದ್ದರೂ ಕೂಡ ಅದು ಓದುಗರ ಭವವನ್ನೂ ನಿರ್ದೇಶಿಸುತ್ತಿದೆ ಎಂದೆನಿಸುತ್ತದೆ. ಲೇಖಕರ ಭವವನ್ನು ಓದುಗರು ತಮ್ಮ ಭವಗಳ ಮೂಲಕವಾಗಿಯೇ ಅರ್ಥಮಾಡಿಕೊಳ್ಳುತ್ತಾರೆ.ನಾವು ಓದುವುದೆಂದರೆ ನಮಗೆ ಪರಿಚಯವಾದದ್ದರ ಮೂಲಕವೇ ಅಪರಿಚಿತವಾದದ್ದರಕಡೆಗೆ ಸಾಗುವುದಲ್ಲವೇ? ಇಲ್ಲಿ ಓದುಗ ಮತ್ತು ಲೇಖಕರನ್ನು ಒಟ್ಟಾಗಿಯೇ ಅಧ್ಯಯನದ ಗ್ರಹಿಕೆಗೆ ತೆಗೆದುಕೊಂಡಿರುವುದು ಈ ಕೃತಿಯ ಮಹತ್ವ ಮತ್ತು ಹೊಸತನ. ಇಲ್ಲಿ ಕಾಣುವುದು ಆತ್ಮಚರಿತ್ರೆಗೆ ಸಂಬಂಧಿಸಿದಂತೆ ಅವರ ವ್ಯಾಪಕ ಓದು. (ಗಾಂಧಿ, ವರ್ಜೀನಿಯಾ ವುಲ್ಫ್ , ಡಾಲಸ್ಟಾಯ್ ಮುಂತಾದವರ ಬರಹಗಳ ಮಹತ್ವವನ್ನು ಪ್ರಸ್ತಾಪಿಸಿರುವುದು) ಅವುಗಳ ಜೊತೆಗೆ ಕನ್ನಡ ಏಳು ಲೇಖಕರ ಗೋಪಾಲಕೃಷ್ಣ ಅಡಿಗ, ಯು.ಆರ್ . ಅನಂತಮೂರ್ತಿ, ಭೈರಪ್ಪ, ಲಂಕೇಶ್, ಸಿದ್ಧಲಿಂಗಯ್ಯ ತೇಜಸ್ವಿ ( ಜೀವನ ಚರಿತ್ರೆ) ಅವರ ಆತ್ಮಕಥಾನಕಗಳ ಭಾಗಗಳನ್ನು ತುಲನಾತ್ಮಕವಾಗಿ ನೋಡಿರುವುದು. ಬರಹಗಾರನೊಬ್ಬನಿಗೆ ಆತ್ಮಚರಿತ್ರೆ ಬರೆಯುವ ಅಗತ್ಯವಾದರೂ ಏನು? ಯಾವ ಕಾರಣಕ್ಕಾಗಿ ಬರೆಯಬೇಕು? ಆತ್ಮಚರಿತ್ರೆ ಮತ್ತು ಜೀವನ ಚರಿತ್ರೆ ಇವುಗಳ ನಡುವಿನ ಅಂತರವಾದರೂ ಏನು? ಅವುಗಳ ಸಾಮ್ಯ ಮತ್ತು ಭಿನ್ನತೆ, ಆತ್ಮಚರಿತ್ರೆ ಯ ಇತಿಹಾಸ, ಸ್ವರೂಪ ವ್ಯಾಖ್ಯೆ ಮುಂತಾದ ತಾತ್ವಿಕ ಚರ್ಚೆ ಈ ಕೃತಿಯ ಮೊದಲ ಭಾಗದಲ್ಲಿದೆ. ಪ್ರತಿಯೊಬ್ಬ ಲೇಖಕನೂ ತನ್ನ ಬಾಲ್ಯ, ಯೌವ್ವನ ವೃದ್ಧಾಪ್ಯ , ಸಾವಿನ ವಾಸನೆ ( ಸಿದ್ಧಲಿಂಯ್ಯನವರ ಹೊರತಾಗಿ) ಮುಂತಾದವುಗಳನ್ನು ಹೇಗೆ ಅನುಸಂಧಾನ ಮಾಡುತ್ತಾನೆ? ಹಾಗೆ ಮಾಡುವಾಗ ಏಳು ಜನರಲ್ಲಿ ಕಂಡು ಬರುವ ವೈಶಿಷ್ಟ್ಯ ಮತ್ತು ಭಿನ್ನತೆಗಳನ್ನು ಬಹಳ ವಿವರವಾಗಿ ಚರ್ಚಿಸಿದ್ದಾರೆ. ಇವುಗಳನ್ನು ನಿರ್ವಹಿಸುವುದರಲ್ಲಿ ಲೇಖಕರ ಅಪ್ರಜ್ಞಾಪೂರ್ವಕ ವೆಂದು ಮೇಲು ನೋಟಕ್ಕೆ ಕಾಣಿಸುವ ಆದರೆ ಪ್ರಜ್ಞಾಪೂರ್ವಕವಾದ ವಿಸ್ಮೃತಿ ಮತ್ತು ನೆನಪುಗಳು ಕಣ್ಣಾಮುಚ್ಚಾಲೆಯಾಡುವ ( ಜಾಣಮರೆವು) ಸ್ವರೂಪವನ್ನು ಬಹಳ ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ. ಈ ಅವಲೋಕನೆಯಲ್ಲಿ ಲೇಖಕರು ತಮ್ಮ ಆತ್ಮಚರಿತ್ರೆಯನ್ನೂ ಗಮನಕ್ಕೆ ತೆಗೆದುಕೊಂಡಿರುವುದು ವಿಶೇಷ. ಎಲ್ಲವನ್ನೂ ಬಿಚ್ಚಿಡಬೇಕೇ? ಯಾವುದನ್ನು ಬಚ್ಚಿಡಬೇಕು? ಆತ್ಮಚರಿತ್ರೆ ಬರಹ ಒಡ್ಡುವ ಆರಂಭ ಮತ್ತು ಮುಕ್ತಾಯದ ಸವಾಲುಗಳು ಯಾವ ಸ್ವರೂಪದ್ದು? ಲೇಖಕನ ಬರಹದ ಶೈಲಿಯಲ್ಲಿಯೇ ಸತ್ಯದ ಅನಾವರಣಕ್ಕಿಂತ ಹೆಚ್ಚಾಗಿ ಓದುಗರನ್ನು ಮೆಚ್ಚಿಸುವ ಧೋರಣೆಯೇ ಅಡಗಿದೆಯೇ? ಸ್ವಾನುಕಂಪದಿಂದ ಆಗುವ ಮಾನಸಿಕ ವಾಸ್ತವ ಪ್ರಯೋಜನಗಳಾದರೂ ಏನು? ಹೀಗೆ ಬಿಚ್ಚಿಡುವ ಮತ್ತು ಬಚ್ಚಿಡುವ ಯತ್ನದಲ್ಲಿ ಲೇಖಕನಿಗೆ ಸಾಮಾಜಿಕ ಬದ್ಧತೆಯೇನಾದರೂ ಇರಬೇಕೇ? ಲೇಖಕನ ಸ್ವಾತಂತ್ರ್ಯ ದ ಹುರುಪನ್ನು ಓದುಗರು ಹೇಗೆ ಸ್ವೀಕರಿಸಬಲ್ಲರು? ಮುಂತಾದ ಅನೇಕ ಪ್ರಶ್ನೆಗಳನ್ನು ಈ ಕೃತಿ ಎತ್ತುತ್ತದೆ. ತಮ್ಮ ಕಾಲದ ಮಹತ್ವ ದ ಸಂದರ್ಭಗಳಾದ, ಬೂಸ ಪ್ರಕರಣ, ತುರ್ತು ಪರಿಸ್ಥಿತಿ, ಬರಹಗಾರ ರ ಒಕ್ಕೂಟದ ಸಂದರ್ಭಗಳಲ್ಲಿ ಕೆಲವು ಲೇಖಕರ ಪ್ರತಿಕ್ರಿಯೆಗಳನ್ನು ದಾಖಲಿಸಿರುವುದು ಬಹಳ ಮುಖ್ಯವಾದ ಸಂಗತಿ. ನನಗೆ ಇರುವ ಒಂದೇ ಆಕ್ಷೇಪವೆಂದರೆ ಇಲ್ಲಿನ ಲೇಖಕಿಯರ ಗೈರು ಹಾಜರಿ. ಇಲ್ಲಿರುವ ಲೇಖಕರೆಲ್ಲ ತಮ್ಮ ಬದುಕಿನಲ್ಲಿ ಸುಳಿದ ಹೆಣ್ಣುಗಳ ಬಗ್ಗೆ ಅವರೊಡನೆ ಇದ್ದ ಸಂಬಂಧಗಳ ಬಗ್ಗೆ ಕೆಲವರು ನಿರ್ಭಿಡೆಯಾಗಿ, ಪ್ರಬುದ್ಧವಾಗಿ ( ಗಿರೀಶ್ ಕಾರ್ನಾಡ್, ಯು.ಆರ್.ಅನಂತಮೂರ್ತಿ) ಇನ್ನೂ ಕೆಲವರು ಸೂಕ್ಷ್ಮ ವಾಗಿ, (ಅಡಿಗರು)ಮತ್ತೊಬ್ಬರು ಹಸಿ ಹಸಿಯಾಗಿ, ವಕ್ರವಾಗಿ ನೋಡಿದ್ದಾರೆ. ಭೋಗದ ಸಾಮಾಗ್ರಿಯಾಗಿ ಕಂಡಿದ್ದಾರೆ. (ಲಂಕೇಶ್), ಬೇರೆಯವರ ಬಂಧಗಳ ಮೂಲಕ ಕಂಡಿದ್ದಾರೆ ( ಸಿದ್ದಲಿಂಗಯ್ಯ) ಭೈರಪ್ಪನವರಿಗೆ ಬಾಲ್ಯದ ಬಡತನವೇ ಮುಖ್ಯವಾಗಿ ಕೌಟುಂಬಿಕ ಬಿರುಕುಗಳೇ ಹೆಚ್ಚಾಗಿ ಕಂಡಿವೆ. ಆದರೂ ಇವರು ಯಾರೂ ಹೆಣ್ಣನ್ನು ಗಂಭೀರವಾಗಿ ತೆಗೆದುಕೊಂಡವರಲ್ಲ ಎಂಬ ಲೇಖಕರ ಧ್ವನಿಯನ್ನು ಬಸವರಾಜ ಕಲ್ಗುಡಿಯವರು ಮುನ್ನುಡಿಯಲ್ಲಿ ಸರಿಯಾಗಿಯೇ ಗಮನಿಸಿದ್ದಾರೆ. ಅಲ್ಲಲ್ಲಿ ಇಂದಿರಾ ಲಂಕೇಶ್ ಮತ್ತು ರಾಜೇಶ್ವರಿಯವರ ಬರಹಗಳನ್ನು ಉಲ್ಲೇಖಿಸಿರುವುದು ಸಮಾಧಾನಕರವಾಗಿ ಕಂಡರೂ ಅವರು ಪೂರ್ಣಪ್ರಮಾಣದ ಲೇಖಕಿಯರಲ್ಲ,‌ ಅಲ್ಲದೇ ಏಳು ಲೇಖಕರ ಜೀವನ ಚರಿತ್ರೆ ಯ ಬಗ್ಗೆ ನಡೆಸಿರುವ ಗಂಭೀರ ಅಧ್ಯಯನಕ್ಕೆ ಆನುಷಂಗಿಕವಾಗಿ ಒದಗಿ ಬಂದಿರುವ ಭಾಗಗಳಂತೆ ಮಾತ್ರ ಅವು ಕಾಣುತ್ತವೆ ಈ ನೆಲೆಯಲ್ಲಿ ಅನುಬಂಧದಲ್ಲಿ ಒದಗಿಸಲಾಗಿರುವ ಸಂಗೀತ ಕೋಣೆ ಮತ್ತು ಜೆ.ಕೆ. ಅವರಬಗ್ಗೆ ಬರೆದ ರಾಧಾಹೇಳಿದ ಕತೆ ಬಹಳ ಮಹತ್ವವಾದುದು. ಕನ್ನಡದ ಮಹಿಳಾ ಆತ್ಮ /ಜೀವನ ಚರಿತ್ರೆ ‌ಮತ್ತು ಇತರ ಭಾಷೆಗಳಿಂದ ಕನ್ನಡಕ್ಕೆ ಬಂದಿರುವ ಜೀವನ ಚರಿತ್ರೆ ಗಳಲ್ಲಿ ಒಂದನ್ನಾದರೂ ಪೂರ್ಣ ಅಧ್ಯಯನಕ್ಕೆ ಒಳಪಡಿಸಿದ್ದರೆ ಅಧ್ಯಯನಕ್ಕೆ ಒಂದು ಅಖಂಡವಾದ ದೃಷ್ಟಿ ಪ್ರಾಪ್ತವಾಗುತ್ತಿತ್ತು ಎಂಬುದು ನನ್ನ humble ಆದ ಅನಿಸಿಕೆ. ಮಹಿಳಾ ಆತ್ಮ ‌ಚರಿತ್ರೆಯನ್ನು ದಲಿತ ಆತ್ಮ ಚರಿತ್ರೆಯೊಂದಿಗೆ ( ಇದರ ಉಲ್ಲೇಖ ಕ್ವಚಿತ್ತಾಗಿ ಈ ಕೃತಿಯಲ್ಲಿ ಬಂದಿದೆ) ತೌಲನಿಕವಾಗಿ ಯಾರಾದರೂ ಅಭ್ಯಾಸಮಾಡಿದರೆ ಅದು ಒಂದು ಸಾಂಸ್ಕೃತಿಕ ಅಧ್ಯಯನವಾದೀತು. ಭಾರತೀಯ ಭಾಷೆಗಳ ಮಹಿಳಾ ಆತ್ಮ ಚರಿತ್ರೆಗಳು ( ಉದಾ: ಊರ್ಮಿಳಾ ಪವಾರ್, ಬಾಮಾ, ಮಾಧವಿ ದೇಸಾಯಿ,ಅಮೃತಾಪೀತಂ ಮುಂತಾದವರು) ಪ್ರತ್ಯೇಕ ಅಧ್ಯಯನವನ್ನೇ ಬೇಡುತ್ತದೆ. ಇದು ನಮ್ಮ ಕಾಲದ ತುರ್ತುಕೂಡಾ ಆಗಿದೆ ಎಂದಷ್ಟೇ ಹೇಳ ಬಯಸುವೆ. ಕೆ. ಸತ್ಯನಾರಾಯಣ ಅವರು ಆತ್ಮಚರಿತ್ರೆಗೆ ಸಂಬಂಧಿಸಿದಂತೆ ಬಹಳ ಮಹತ್ವದ ಚರ್ಚೆಯನ್ನು ಹುಟ್ಟುಹಾಕಿದ್ದಾರೆ ಎಂದು ಶ್ರೀಧರ್ ಅವರು ಹೇಳಿರುವ ಮಾತು ಸರಿಯಾಗಿಯೇ ಇದೆ. ಮುಂದಿನ‌ವರು ಕೈಗೊಳ್ಳುವ ಅಧ್ಯಯನಗಳಿಗೆ ಇದು ದಾರಿಮಾಡಿ ಕೊಡಲಿ ಎಂದು ಆಶಿಸುತ್ತೇನೆ. ಮುಖ್ಯವಾಗಿ ಈ ಕೃತಿಯ ಅಧ್ಯಯನದ ಶಿಸ್ತು, ಕೃತಿಯ ಕೊನೆಗೆ ಅವರು ಕೊಟ್ಟಿರುವ ಆಕರಗಳು, ಅಧ್ಯಯನದ ವಿಭಾಗ ಕ್ರಮ ಎಲ್ಲವೂ ಹೊಸದೆಂದೆನಿಸಿ ಇದೊಂದು ಎಂಫಿಲ್ ಅಥವಾ ಪಿ.ಎಚ್.ಡಿ ಪ್ರಬಂಧದ ಹಾಗೆ ಕಂಡಿತು. ಅವರ ಮಾತುಗಳಲ್ಲೇ ಹೇಳುವುದಾದರೆ ಈಗ ಈ ಪದವಿಗಳನ್ನು ಕಟ್ಟಿಕೊಂಡು ಅವರು ಏನು ಮಾಡಬೇಕಾಗಿದೆ? ಈಗಾಗಲೇ ಅವರಿಗೆ ಗೌರವ ಡಾಕ್ಟರೇಟ್ ದೊರಕಿದೆ. ಇಂತಹ ಅಧ್ಯಯನಶೀಲ ಪುಸ್ತಕವನ್ನು ಪ್ರಕಟಿಸಿದ, ಅದನ್ನು ಪ್ರೀತಿಯಿಂದ ನಮಗೂ ಕಳುಹಿಸಿದ ಮಿತ್ರರಾದ ಕೆ.ಸತ್ಯನಾರಾಯಣ ಅವರನ್ನು ಅಭಿನಂದಿಸುತ್ತೇನೆ. ಅವರಿಗೆ ಶುಭಾಶಯಗಳು ಮತ್ತು ಧನ್ಯವಾದಗಳು. ಪರಸ್ಪರ ಪ್ರಕಾಶನ: ೧೯೨೧.ಬೆಂಗಳೂರು ಅಧಿಕೃತ ಮಾರಾಟಗಾರರು ವಂಶಿ ಪಬ್ಲಿಕೇಷನ್ಸ್ ನೆಲಮಂಗಲ 97430 5511

Saturday, September 18, 2021

75ರ ಮೆಲುಕು: ವ್ಯಕ್ತಿ ಸ್ನೇಹಿ, ವಿಚಾರ ನಿಷ್ಠುರಿ ಜಿ. ರಾಜಶೇಖರ್ -- ಎಸ್.ಆರ್. ವಿಜಯಶಂಕರ

75ರ ಮೆಲುಕು: ವ್ಯಕ್ತಿ ಸ್ನೇಹಿ, ವಿಚಾರ ನಿಷ್ಠುರಿ | Prajavani

ಸಾಹಿತಿ ಕೆ.ಸತ್ಯನಾರಾಯಣ ಕೃತಿಗೆ ವಿ.ಎಂ.ಇನಾಂದಾರ್ ಪ್ರಶಸ್ತಿ

ಸಾಹಿತಿ ಕೆ.ಸತ್ಯನಾರಾಯಣ ಕೃತಿಗೆ ವಿ.ಎಂ.ಇನಾಂದಾರ್ ಪ್ರಶಸ್ತಿ | Vartha Bharati- ವಾರ್ತಾ ಭಾರತಿ

ಕೆ. ಪಿ. ರಾವ್ -ವರ್ಣಕ [ ತಕ್ಷಶಿಲೆಯಲ್ಲಿ ಅರಳಿದ ಭಾಷಾ ವಿಲಾಸ } { ಕಾದಂಬರಿ -2021 } Kannada Prabha Bengaluru, Sun, 19 Sep 21

Kannada Prabha Bengaluru, Sun, 19 Sep 21

ವೈವಿಧ್ಯ, ಬಹುರೂಪ, ಬಹುಮುಖ, ಬಹುವಚನ – ಇವು ಭಾರತದ ಪ್ರಮುಖ ಲಕ್ಷಣ – ಜಿ . ರಾಜಶೇಖರ /G Rajashekhar

ವೈವಿಧ್ಯ, ಬಹುರೂಪ, ಬಹುಮುಖ, ಬಹುವಚನ – ಇವು ಭಾರತದ ಪ್ರಮುಖ ಲಕ್ಷಣ – ಜಿ . ರಾಜಶೇಖರ – ಋತುಮಾನ

Friday, September 17, 2021

ವಿಸ್ಲಾವಾ ಸಿಂಬೋರ್ಸ್ಕಾ- ನಮ್ಮ ಕಾಲದ ಮಕ್ಕಳು { ಎಚ್. ಎಸ್. ರಾಘವೇಂದ್ರ ರಾವ್ } H. S Raghavendra Rao /Wislava Szymborska/

ವಿಸ್ಲಾವಾ ಸಿಂಬೋರ್ಸ್ಕಾ- ಇವರು ಪೋಲೆಂಡ್ ದೇಶದ ನೊಬೆಲ್ ಪ್ರಶಸ್ತಿ ಪಡೆದ ಕವಿ. ನಮ್ಮ ಕಾಲದ ಮಕ್ಕಳು ನಮ್ಮ ಕಾಲದ ಮಕ್ಕಳು ನಾವು. ನಮ್ಮದು, ರಾಜಕೀಯದ ಕಾಲ. ಹಗಲು ಇರುಳು, ನಾವು, ನೀವು, ಅವರು ಎಲ್ಲರು ಮಾಡುವ ಎಲ್ಲ ಕೆಲಸಗಳು, ರಾಜಕೀಯ ವಿದ್ಯಮಾನ! ನೀವು ಇಷ್ಟಪಟ್ಟರೂ ಅಷ್ಟೆ, ಪಡದಿದ್ದರೂ ಅಷ್ಟೆ. ನಿಮ್ಮ ವಂಶವಾಹಿಗಳಲ್ಲಿ ಇತಿಹಾಸದ ರಾಜಕೀಯವಿದೆ ಚರ್ಮದ ಬಣ್ಣಕ್ಕೆ ರಾಜಕೀಯದ ಅಂಟಿದೆ ಕಣ್ಣಿನ ನೋಟದಲ್ಲಿ ರಾಜಕೀಯದ ನಂಟಿದೆ. ನೀವಾಡುವ ಮಾತುಗಳಿಗೆ ರಾಜಕೀಯದ ಗಂಧವಿದೆ, ನಿಮ್ಮ ಮೌನದ ಒಳಗೆ ಮಾತಿನ ಮಸಲತ್ತಿದೆ. ಬಡಬಡಿಸಿದರು ಸರಿಯೆ, ಸುಮ್ಮನಿದ್ದರು ಸರಿಯೆ ಅದು ಕೂಡ ಇದು ಕೂಡ ರಾಜಕೀಯ. ಊರೆಲ್ಲ ಬಿಟ್ಟು, ಬೆಟ್ಟಗಳ ಕಡೆಗೆ ಹೊರಟಿರಾ? ಸರಿ ಮತ್ತೆ, ಹಾಗಾದರೆ ನೀವು ರಾಜಕೀಯದ ನೆಲದ ಮೇಲೆ ರಾಜಕಾರಣಿಯಂತೆ ನಡೆಯುತ್ತಿದ್ದೀರಿ. ರಾಜಕೀಯದ ಸುಳಿವಿಲ್ಲದ ಕವಿತೆಗಳೂ ರಾಜಕೀಯವೆ. ಮೇಲೆ ಹೊಳೆಯುತ್ತಿದೆ ಚಂದ್ರಬಿಂಬ ಅವನು ಕೂಡ ಈಗ ಚಂದ್ರನಲ್ಲ. ‘To be or not to be. That is the question’ ಪ್ರಶ್ನೆಯೇ? ಅದು ಎಂಥ ಪ್ರಶ್ನೆ! ಮುದ್ದು ಗೆಳೆಯನೆ ಕೇಳು, ಇಲ್ಲೊಂದು ಸಲಹೆಯಿದೆ, ಅದು ರಾಜಕೀಯದ ಭಾರಹೊತ್ತ ಪ್ರಶ್ನೆ. ರಾಜಕೀಯ ಮಹತ್ವ ಪಡೆಯುವುದಕ್ಕೆ ಮನುಷ್ಯನಾಗಿರುವುದು ಕೂಡ ಅನಿವಾರ್ಯವಲ್ಲ. ಕಚ್ಚಾ ಪೆಟ್ರೋಲ್ ಅದರೂ ಸಾಕು ಅಥವಾ ರಸಗೊಬ್ಬರ ಅಥವಾ ಮಾರುವ ಕೊಳ್ಳುವ ಯಾವುದೇ ಸರಕು. ಅಥವಾ ಶೃಂಗಸಭೆಯಲ್ಲಿ ಬಳಸುವ ಮೇಜು ಹೇಗಿರಬೇಕು? ಇದನು ಕುರಿತೂ ಚರ್ಚೆ ಹಲವು ಕಾಲ. ಸಾವುಬದುಕಿನ ಚರ್ಚೆ ಮಾಡಬೇಕಿದೆ ನಾವು, ಮೇಜು ಗುಂಡಗೆ ಇರಲೊ ಚಚ್ಚೌಕವೋ! ಇದೆಲ್ಲದರ ನಡುವೆ, ಜನ ಸಾಯುತ್ತಿದ್ದರು, ಪಶುಪಕ್ಷಿ ನಶಿಸುತ್ತಿದ್ದವು, ಮನೆಗಳು ಉರಿಯುತ್ತಿದ್ದವು, ಹೊಲಗಳು ಒಣಗುತ್ತಿದ್ದವು, ಇಷ್ಟೆಲ್ಲ ರಾಜಕೀಯ ಇಲ್ಲದಿದ್ದ, ಈಗ ಮರವೆಗೆ ಸಂದ ಆ ಕಾಲದಂತೆಯೇ.... ಹೀಗೆ ಬಂದು ಹಾಗೆ ಹೋಗುವ ಈ ದಿನವನ್ನು ನಾವೇಕೆ ಇಷ್ಟೊಂದು ಭಯದಿಂದ, ವಿಷಾದದಿಂದ ಎದುರಿಸುತ್ತೇವೆ? ಉಳಿಯದಿರುವುದೆ ಅದರ ಸಹಜಗುಣವಲ್ಲವೇ? ನಿಜ, ನಾವು ಬೇರೆ ಬೇರೆ, ಎರಡು ಹನಿ ನೀರಿನಂತೆ. ಆದರೂ, ಉಳಿವ ತಾರೆಯ ಕೆಳಗೆ ಬಿಡದೆ ಹುಡುಕುತ್ತೇವೆ ಪ್ರೀತಿ ಒಗ್ಗಟ್ಟುಗಳ ರೀತಿಯನ್ನು ಮುಗುಳುನಗೆ ಹರಿಸುತ್ತ, ಮುದ್ದಿಸುತ್ತ. ವಿಸ್ಲಾವಾ ಸಿಂಬೋರ್ಸ್ಕಾ 16 Comments Mukunda AN ತುಂಬಾ ಚೆನ್ನಾಗಿದೆ. ಧಿಗಿಲಾಗುತ್ತದೆ. 😔

ರಹಮತ್ ತರೀಕೆರೆ - ರಾಜಶೇಖರ್ ಜತೆ ಒಂದು ದಿನ/ G. Rajashekhar / Rahamath Tarikere/

ರಾಜಶೇಖರ್ ಜತೆ ಒಂದು ದಿನ (ಅವರಿಗೆ 75 ತುಂಬಿದ ನೆಪದಲ್ಲಿ ಈ ಹಳೆಯ ಲೇಖನ) ಖುಶವಂತ ಸಿಂಗರ `ಟ್ರೈನ್ ಟು ಪಾಕಿಸ್ತಾನ್’ ಕೃತಿ ಕುರಿತ ಸಂವಾದ ಕಾರ್ಯಕ್ರಮಕ್ಕೆಂದು ಮಂಗಳೂರಿಗೆ ಹೋದವನು, ಮಾರನೇ ದಿನ ಜಿ. ರಾಜಶೇಖರ್ ಅವರ ಮನೆಗೆ ಹೋದೆ. ಭೇಟಿಯ ನೆಪದಲ್ಲಿ ಅವರ ಸಂದರ್ಶನವನ್ನೂ ಮಾಡಬೇಕಿತ್ತು. ನಮ್ಮಿಬ್ಬರ ಭೇಟಿಗೆ ಗೆಳೆಯರಾದ ಫಣಿರಾಜ್ ಹಾಗೂ ಸಂವರ್ತ ಸಾಹಿಲ್, ಪೂರ್ವಭಾವಿ ಭೂಮಿಕೆ ಕಲ್ಪಿಸಿದ್ದರು. ನಾನು ಹೋದ ದಿನ ಉಡುಪಿಯಲ್ಲಿ ಆಗಸಕ್ಕೆ ಹುಚ್ಚು ಹಿಡಿದಂತೆ ಪ್ರಳಯಕಾಲದ ಮಳೆ. ಬಳ್ಳಾರಿಯ ಬಿಸಿಲಿನಿಂದ ಹೋಗಿದ್ದ ನಾನು ಥಂಡಿಗೆ ಥರಥರಿಸುತ್ತಿದ್ದೆ. ಆಟೊದಲ್ಲಿ ಇರುವಾಗಲೇ ಇರಿಸಲು ಬಡಿದು ಅರ್ಧ ಒದ್ದೆಯಾಗಿದ್ದೆ; ಆಟೊ ಇಳಿದು, ಗೇಟುತೆಗೆದು ಮನೆಬಾಗಿಲಿಗೆ ಹೋಗುವಷ್ಟರಲ್ಲಿ ಇನ್ನರ್ಧ ತೊಯ್ದುಹೋದೆ. ರಾಜಶೇಖರ್ ಅವರ ಮನೆ, ಉಡುಪಿಯ ದಕ್ಷಿಣದಿಕ್ಕಿನ ಅಂಚಿನಲ್ಲಿರುವ ಕೊಳಂಬೆ ಪ್ರದೇಶದಲ್ಲಿದೆ; ನೀರು ಜುಳುಜುಳಿಸುವ ತೋಡುಗಳೂ ಹಸಿರುಹೊಮ್ಮಿಸುವ ಭತ್ತದ ಗದ್ದೆಗಳೂ ಕಂಗು-ತೆಂಗಿನ ತೋಟಗಳೂ ಅದನ್ನು ಸುತ್ತುವರೆದಿವೆ. ಹಾಡುಹಗಲೇ ಜೀರುಂಡೆಯ ಜೀಕಾರವೂ ನವಿಲಿನ ಪರಾಕೂ ಅಲ್ಲಿ ಕೇಳಿಸುತ್ತದೆ. ಕಾಂಪೌಂಡಿನ ಗೋಡೆಯ ಮೇಲೆ ಹಸಿರುಪಾಚಿ ಹಬ್ಬಿಕೊಂಡು ನಡುನಡುವೆ ಫರ್ನ್ ಸಸ್ಯಗಳು ಬೆಳೆದಿವೆ; ಇನ್ನು ಕಾಂಪೌಂಡಿನೊಳಗೆ ಬೆಳೆದಿದ್ದ ಹೂಗಿಡಗಳ ಹಳುವಿನಲ್ಲಂತೂ, ಒಂದು ಹುಲಿ ಆರಾಮಾಗಿ ಅಜ್ಞಾತವಾಸ ಮಾಡಬಹುದಿತ್ತು. ನಾನು ಸೋಜಿಗದಿಂದ ಅವನ್ನೆಲ್ಲ ನೋಡುವಾಗ, ರಾಜಶೇಖರ್ ಸಂಕೋಚ ಬೆರೆತ ಅಭಿಮಾನದಿಂದ "ಇದು ಆರ್ಡರ್ ಇನ್ ಡಿಸ್ಆ ರ್ಡರ್" ಎಂದು ವರ್ಣಿಸಿದರು. ಅದೊಂದು ಚಿಕ್ಕಮನೆ; ಹಾಲಿನ ಮೂಲೆಯಲ್ಲಿ ಮೇಜು; ಬಗಲಿಗೇ ಒಟ್ಟಿದ ಪುಸ್ತಕರಾಶಿ. ಇನ್ನೊಂದು ಮೂಲೆಯ ಗೂಡಿನಲ್ಲಿ ಆಂಜನೇಯನ ಚಿತ್ರಪಟ. ಅದರ ಮುಂದೆ ಅವರ ಹೆಂಡತಿ ಸುಮತಿ, ಪೂಜೆ ಮಾಡಿದ ಕುರುಹು. ಅದನ್ನು ನೋಡುತ್ತ ನನಗೆ ಕಾರಂತರ`ಅಳಿದಮೇಲೆ’ ನೆನಪಾಯಿತು. ಅದು ರಾಜಶೇಖರ್ ಬಹಳ ಆಸ್ಥೆಯಿಂದ ಮತ್ತೆಮತ್ತೆ ವಿಶ್ಲೇಷಣೆ ಮಾಡಿರುವ ಕಾದಂಬರಿ. 'ನಾವು ವೈಯಕ್ತಿಕವಾಗಿ ನಾಸ್ತಿಕರಾಗಿರಬಹುದು. ಆದರೆ ಇಂಟಿಗ್ರಿಟಿಯುಳ್ಳ ಆಸ್ತಿಕರ ಶ್ರದ್ಧೆಯನ್ನು ಗೌರವಿಸುವುದು ಒಂದು ದೊಡ್ಡಮೌಲ್ಯ' ಎಂದು ಪ್ರತಿಪಾದಿಸುವ ಕೃತಿ. ನಮ್ಮ ಮಾತುಕತೆಯದ್ದಕ್ಕೂ ಸೋನೆ ಶೃತಿ ಹಿಡಿದಿತ್ತು. ಸುಮತಿಯವರು ನನಗೆ ಬಿಸಿಬಿಸಿ ಅನ್ನ ಸಾರು, ಹುರಿದ ಹಪ್ಪಳ, ಕುಂದಾಪುರ ಕಡೆಯ ಉಪ್ಪಿನಕಾಯಿಯ ಊಟ ಬಡಿಸಿದರು; ನಡುನಡುವೆ ರಾಜಶೇಖರ್ `ನಮ್ಮನೇಲಿ ಯಾರಿಗೂ ಒಳ್ಳೇ ಟೀ ಮಾಡೋಕೆ ಬರೋಲ್ಲಾರಿ; ನಾನೇ ಮಾಡಬೇಕು. ಅಣ್ಣನಿಗೆ (ಮಗ ವಿಷ್ಣುವಿಗೆ ಅವರು ಕರೆಯುವುದು ಹಾಗೆ.) ಈಗ ಟೀಬೇಕು’ ಎಂದು ಎದ್ದುಹೋಗಿ, ಕೈಯಾರೆ ಟೀಮಾಡಿ ತರುತ್ತಿದ್ದರು; ಅವರ ಕೈಚಹ ಕುಡಿಯಲು `ಅಪ್ಪ ಟೀ ಚೆಂದ ಮಾಡ್ತಾರೆ’ ಎಂದು ವಿಷ್ಣು ಕಣ್ಣುಮಿಟುಕಿಸಿ ಪುಸಲಾಯಿಸುತ್ತಿದ್ದರು. ನಾನು ರಾಜಶೇಖರ್ ಅವರನ್ನು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹತ್ತಾರು ಸಲ ಕಂಡಿದ್ದೇನೆ. ಯಾವಾಗಲೂ ಅವರ ಚಹರೆ ಸರಿಸುಮಾರು ಒಂದೇ ತರಹ; ಹೇಗೆಂದರೆ-ತುಸು ಬಿಗಿದುಕೊಂಡ ಮುಖ; ಹಳೇಮಾದರಿಯ ದಪ್ಪ ಫ್ರೇಮಿನ ಕನ್ನಡಕದೊಳಗೆ ತೀಕ್ಷ್ಣನೋಟ ಹರಿಸುವ ಗಾಬರಿಗೊಂಡಂತೆ ತೋರುವ ಕಣ್ಣು; ಸರಿಯಾಗಿ ಬಾಚದ ತಲೆಗೂದಲು; ಕಪ್ಪು ಚೌಕಳಿಯ ಶರ್ಟು. ಆರ್ಡರ್ ಇನ್ ಡಿಸಾರ್ಡರ್. ಹಾಲಿನ ಇನ್ನೊಂದು ಭಾಗದಲ್ಲಿ ಅವರು ಹೆಂಡತಿ ಜತೆ ತೆಗೆಸಿಕೊಂಡ ಎರಡು ಚಿತ್ರಪಟಗಳಿದ್ದವು.‌ ಒಂದು-ಮದುವೆಯಾದ ಹೊಸತರಲ್ಲಿ ತೆಗೆಸುಕೊಂಡಿದ್ದು. ನಗುಮುಖದ ಯುವಕನ ಸೌಮ್ಯತೆ ಲಾಸ್ಯವಾಡುತ್ತಿದೆ. ಇನ್ನೊಂದು-ನಿವೃತ್ತಿಯ ದಿನ ತಾಂತ್ರಿಕ ಕಾರಣಕ್ಕೆ ತೆಗೆಸಿಕೊಂಡಿದ್ದಿರಬೇಕು- ನೆರಿಗೆ ಸಡಿಲಗೊಂಡಿರದ ಬಿಗುಮುಖ ಗುರುಗುಟ್ಟುತಿದೆ. ರಾಜಶೇಖರರ ಮುಖದ ಚಿಂತನಶೀಲ ಗಾಂಭೀರ್ಯಕ್ಕೆ ಅವರ ಸ್ವಭಾವದಲ್ಲಿ ಅರ್ಧ ಕಾರಣವಿದ್ದರೆ, ಅವರ ಹೆಚ್ಚಿನ ಕಾರ್ಯಕ್ರಮಗಳೆಲ್ಲ ಪ್ರತಿಭಟನೆಗೆ ಸಂಬಂಧಿಸಿದವೇ ಆಗಿರುವುದು ಇನ್ನರ್ಧ ಕಾರಣ. ಅವರ ನನ್ನ ಮೊದಲ ಭೇಟಿ ನೆನಪಾಗುತ್ತಿದೆ. ಮಡಿಕೇರಿಯಲ್ಲಿ ಪಟ್ಟಾಭಿರಾಮ ಸೋಮಯಾಜಿಯವರು ಸಂಘಟಿಸಿದ್ದ ಕಾರ್ಯಕ್ರಮವದು. ರಾಜಶೇಖರ ಅವರನ್ನು ಮೊದಲ ಸಲ‌ ಕಾಣುವ ಪುಳಕದಲ್ಲಿ ನಾನು ಭೇಟಿಯಾದೆ. ಅವರು ಕೈಕುಲುಕಿ ನಿರ್ಭಾವುಕವಾಗಿ `ಹ್ಞಾ! ಯಾವಾಗ ಬಂದ್ರಿ?’ ಎಂಬ ವಾಕ್ಯಬಿಟ್ಟರೆ ಹೆಚ್ಚೇನೂ ಆಡಲಿಲ್ಲ. ನನಗೆ ತುಸು ನಿರಾಶೆಯಾಗಿತ್ತು. ಬಹುಶಃ ಅವರು ಅಂದಿನ ಕಾರ್ಯಕ್ರಮದ ಬಗ್ಗೆ ತವಕಿತರಾಗಿದ್ದರು. ಕಾರಣ, ಕಾರ್ಯಕ್ರಮ ತಡೆಯಲು ಎದುರಾಳಿಗಳು ಭಯಂಕರ ತಯಾರಿ ಮಾಡಿಕೊಂಡಿದ್ದರಿಂದ, ವಾತಾವರಣ ಬಿಗುವಾಗಿತ್ತು. ಪೋಲಿಸರ ಸಂಖ್ಯೆ ನಮ್ಮನ್ನು ಮೀರಿಸುವಷ್ಟಿತ್ತು. ರಾಜಶೇಖರರ ಆತಂಕ ನಿಜವಾಗುವಂತೆ ಅಂದಿನ ಕಾರ್ಯಕ್ರಮ ನಡೆಯಲಿಲ್ಲ. ಸುರು ಆಗುತ್ತಿದ್ದಂತೆಯೇ ಪಡ್ಚ. ನಾವೆಲ್ಲ ಪೆಟ್ಟುತಿನ್ನದೇ ಮರಳಿದ್ದೇ ದೊಡ್ಡ ಸಂಗತಿ. ನಾನು ಮಾತುಕತೆಗೆ ಮನೆಗೆ ಹೋದ ದಿನ ಅವರು, ಕರಿಬಿಳಿಯ ಉದ್ದಗೆರೆಯಿರುವ ಅಂಗಿ ಹಾಗೂ ಆಗಸನೀಲಿಯ ಚೌಕುಳಿಲುಂಗಿ ಧರಿಸಿದ್ದರು. ವಯಸ್ಸಿನ ಕಾರಣದಿಂದ ದೇಹ ನಸುಬಾಗಿತ್ತು. ಆದರೆ ಲವಲವಿಕೆಯಿತ್ತು. ನಾಲ್ಕೈದು ತಾಸು ಕಾಲ, ಸಾಹಿತ್ಯದ ಬಗ್ಗೆ, ಭಾರತದ ರಾಜಕೀಯ ವಿದ್ಯಮಾನಗಳ ಬಗ್ಗೆ, ಒಳನೋಟಗಳಿಂದ ಕೂಡಿದ ಮಾತುಕತೆಯನ್ನು ನಡೆಸಿಕೊಟ್ಟರು. ನಾನು ಕಳೆದ ೨೫ ವರುಷಗಳಲ್ಲಿ ಮಾಡಿದ ಅತ್ಯತ್ತಮ ಸಂದರ್ಶನವದು. ಇದು 'ನ್ಯಾಯ ನಿಷ್ಠುರಿಗಳ ಜತೆಯಲ್ಲಿ' ಸಂಪುಟದಲ್ಲಿ ಅಚ್ಚಾಯಿತು. ಎದುರು ನಾನೊಬ್ಬನೇ ಇದ್ದರೂ, ರಾಜಶೇಖರ್ ದೊಡ್ಡಸಭೆಯನ್ನು ಸಂಬೋಧಿಸುವಂತೆ ಏರುದನಿಯಲ್ಲಿ ಮಾತಾಡುತ್ತಿದ್ದರು; ಮತೀಯ ರಾಜಕಾರಣದ ಚರ್ಚೆ ಬಂದಾಗಲೆಲ್ಲ ಉದ್ವಿಗ್ನತೆಯಿಂದ ಅವರ ದನಿ ವ್ಯಗ್ರಗೊಳ್ಳುತ್ತಿತ್ತು. ಆದರೆ ಹುಟ್ಟೂರಾದ ಗುಂಡ್ಮಿ, ತಮ್ಮ ಬಾಲ್ಯ, ತಾಯಿ, ತಂದೆ, ಅಲ್ಲಿನ ಪರಿಸರ, ಅಡುಗೆ ಇತ್ಯಾದಿ ವಿಷಯ ಬಂದಾಗ, ದನಿ ಮೃದುಗೊಂಡು ಆಪ್ತತೆ ತನ್ಮಯತೆ ಪಡೆಯುತ್ತಿತ್ತು-ಕುವೆಂಪು ಮಲೆನಾಡಿನ ವಿಷಯ ಬಂದರೆ ಭಾವುಕರಾಗುವ ಹಾಗೆ. ಬದುಕಿನ ಸಣ್ಣಸಂಗತಿಗಳಿಗೆ ಮಿಡಿಯುವ ಅವರ ಆಸ್ಥೆ ಮತ್ತು ಜೀವನ ಪ್ರೀತಿಗಳು, ಅವರಲ್ಲಿರುವ ಪ್ರತಿರೋಧ ಪ್ರಜ್ಞೆಯಷ್ಟೇ ತೀವ್ರವಾಗಿದ್ದವು. ರಾಜಶೇಖರ್ ಆದಿನ ಒಳ್ಳೇ ಮೂಡಲ್ಲಿದ್ದರು. ಅವರಲ್ಲಿರುವ ಹಾಸ್ಯಪ್ರಜ್ಞೆ ಸುಳಿಸುಳಿಯಾಗಿ ಹೊರಹೊಮ್ಮುತಿತ್ತು. ಅವರು ಸಾಮಾನ್ಯವಾಗಿ ಉಡುಪಿ ಬಿಟ್ಟು ಹೆಚ್ಚು ಹೊರ ಹೋದವರಲ್ಲ. ಉಡುಪಿಯ ಜತೆ ಅವರಿಗೆ ಆಪ್ತವಾದ ಗಾಢವಾದ ನಂಟಿತ್ತು. ಹಿಂದೊಮ್ಮೆ ನನ್ನ ಗುರುಗಳಾದ ಪುಣೇಕರ್ ಅವರು ಉಡುಪಿಯಲ್ಲಿ ವಾಸವಿದ್ದ ವಿಷಯ ಪ್ರಸ್ತಾಪಕ್ಕೆ ಬಂತು. ಆಗ ರಾಜಶೇಖರ್ ಹೇಳಿದರು: "ಅವರು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿದ್ದು ಗೊತ್ತಲ್ಲ? ಅವರಿದ್ದ ಮನೆಯಲ್ಲಿಯೇ ಅಡಿಗರು ಇದ್ರು. ಅದೊಂದು ಹಳೇ ಕಾಲದ ಮನೆ. ಅದರ ಎದುರು ಒಂದಿಷ್ಟು ಖಾಲಿ ಜಾಗ ಇತ್ತು. ಅದನ್ನು ಹಾಗೇ ಹಾಳು ಬಿಟ್ಟಿದ್ರು. ಪುಣೇಕರ್ ಆಗಲಿ, ಅವರ ನಂತರ ಬಂದ ಅಡಿಗರಾಗಲಿ, ಇವರಿಬ್ಬರಿಗಿಂತ ಮೊದಲಿದ್ದ ವಿ.ಎಂ.ಇನಾಂದಾರ್ ಆಗಲಿ, ಮೂರೂ ಪುಣ್ಯಾತ್ಮರು ಒಂದು ಗಿಡಾನೂ ಅಲ್ಲಿ ನೆಡಲಿಲ್ಲ. ಆ ಮನೆಗೊಂದು ಮೊಗಸಾಲೆ ಇತ್ತು. ಅಲ್ಲಿ ಈ ಮೂವರು ಸಂಜೆ ವಿರಾಜಮಾನರಾಗಿರುತ್ತಿದ್ದರು. ಅಡಿಗರಂತೂ ಒಂದಾದ ಮೇಲೊಂದು ಸಿಗರೇಟ್ ಸುಡ್ತಾ ಇದ್ದರು." ಮಾತಿನ ಮಧ್ಯೆ ಕೆಲವು ಪತ್ರಿಕೆಗಳ ವಿಷಯ ನುಸುಳಿತು. "ನಾನು ಅವನ್ನು ಓದುವುದಿಲ್ಲ" ಎಂದೆ. ಅವರು ತುಸು ಅಸೂಯೆಯಿಂದ ``ನೀವು ಅದೃಷ್ಟವಂತರು ಕಂಡ್ರಿ. ದಾರೀಲಿ ನಡೀವಾಗ ಸೈಡಲ್ಲಿ ಬಿದ್ದಿರೋ ಮಲಕ್ಕೆ ಬೇಡವೆಂದೂ ನಮ್ಮ ದೃಷ್ಟಿಹೋಗುತ್ತೆ'' ಎಂದು ಸ್ವಗೇಲಿ ಮಾಡಿಕೊಂಡರು. ರಾಜಶೇಖರ್ ಗೆ, ಸಾಹಿತ್ಯ ಕ್ಷೇತ್ರದಾಚೆ ಇರುವ ಸಾರ್ವಜನಿಕ ವ್ಯಕ್ತಿಗಳ ಬರೆಹ-ಮಾತುಗಾರಿಕೆ ಬಗ್ಗೆ ಬಹಳ ಆಸಕ್ತಿಯಿತ್ತು "ನೀವು ಗದುಗಿನ ತೋಂಟದಾರ್ಯ ಸ್ವಾಮಿಗಳ ಭಾಷಣದಿಂದ, ಅದರಲ್ಲೂ ಅವರ ಕನ್ನಡದಿಂದ ಬಹಳ ಪ್ರಭಾವಿತರಾಗಿದ್ದಿರಿ ಅಂತ ಕೇಳೀದೀನಿ. ಯಾವ ಸನ್ನಿವೇಶ ಅದು?" ಎಂದು ಕೇಳಿದೆ. `` ತೋಂಟದಾರ್ಯ ಸ್ವಾಮಿಗಳೂ, ನಿಡುಮಾಮಿಡಿ ಸ್ವಾಮಿಯವರೂ ಮತ್ತು ನಾನೂ, ಮಂಗಳೂರಿನ ಕೋಮು ಸೌಹಾರ್ದ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿದ್ದೆವು. ಇಬ್ಬರದೂ ಒಂದು ಜುಗಲಬಂದಿ ನಡೀತು ಸ್ವಲ್ಪಹೊತ್ತು-'ಎಷ್ಟು ಸೊಗಸಾಗಿ ಮಾತಾಡಿದಿರಿ ತಾವು' ಅಂತ ಒಬ್ಬರು. 'ಇಲ್ಲಿಲ್ಲ. ತಾವು ತುಂಬ ಚೆನ್ನಾಗಿ ಮಾತಾಡಿದಿರಿ' ಅಂತ ಇನ್ನೊಬ್ಬರು. ಅದರೆ ಇಬ್ಬರೂ ಸೊಗಸಾಗಿ ಮಾತಾಡಿದ್ದರು. ಗದುಗಿನ ಸ್ವಾಮಿಗಳಂತೂ ಬಹಳ ಸಹಜವಾಗಿ ಮಾತಾಡಿದ್ದರು'' ಎಂದು ಸಂತೋಷದಲ್ಲಿ ನೆನೆದರು. ಹಳೇ ಉಡುಪಿ ಶಹರಿನ ಚಹರೆ ಚರ್ಚೆಗೆ ಬಂತು. ಆಗ ರಾಜಶೇಖರ್ ಬನ್ನಂಜೆಯಲ್ಲಿದ್ದ ಒಂದು ಗುಡಿಯನ್ನು ನೆನೆಸಿಕೊಂಡು ನುಡಿದರು: ``ಅಲ್ಲೊಂದು ಬಹಳ ಸುಂದರವಾದ ದೇವಸ್ಥಾನ ಇತ್ತು. ಸರಳವಾದ ಜಾಮಿಟ್ರಿಕಲ್ ಆದ ವಾಸ್ತು ಅದು. ಈಗ ಆ ಟೆಂಪಲ್ನ ವರಿಗೆ ಬುದ್ಧಿ ಬಂದು, ಅದರ ಮೂಲ ಆಕೃತಿ ಮರವೆ ಆಗುವ ಹಾಗೆ ಸುತ್ತ ಒಂದು ತಗಡಿನ ಚಪ್ಪರ ಎಬ್ಬಿಸಿ, ಅದರ ಎದುರುಗಡೆ ಶಿಲೆಯ ಕಾಂಕ್ರೀಟಿನಲ್ಲಿ ಏನೆಲ್ಲವನ್ನು ಮಾಡಬಹುದೊ ಅದನ್ನೆಲ್ಲ ಮಾಡಿದಾರೆ'' ಎಂದರು. ಮಸೀದಿ ಕೆಡವಿ ಗುಡಿ ಕಟ್ಟುವುದನ್ನು ಸಾಂಸ್ಕøತಿಕ ಅಪಚಾರವೆಂದು ಭಾವಿಸಿರುವ ಚಿಂತಕನಿಗೆ, ತನ್ನೂರಿನ ಗುಡಿಯ ವಾಸ್ತುವಿನ ಬಗ್ಗೆ ಇದ್ದ ಆಸಕ್ತಿ ಪ್ರೀತಿ ಸೋಜಿಗ ಹುಟ್ಟಿಸಿತು. ಚಿಕ್ಕಮಗಳೂರಿನಲ್ಲಿ ನಡೆದ ಬಾಬಾಬುಡನಗಿರಿ ಕುರಿತ ಕಾರ್ಯಕ್ರಮದಲ್ಲಿ, ಶಬನಂ ವೀರಮಾನ್ವಿ ಹಾಡಿದ ಕಬೀರ್ ಭಜನನ್ನು ಕೇಳಿ ಅವರು `ಹಾ! ಎಂಥಾ ಎನರ್ಜಿ ಮತ್ತು ತನ್ಮಯಗೊಳಿಸುವ ಶಕ್ತಿಯಿದೆ ಈ ಕಂಠಕ್ಕೆ’ ಎಂದು ಆನಂದಪಟ್ಟಿದ್ದನ್ನು ನೆನೆಸಿಕೊಂಡೆ. ನಾಸ್ತಿಕರು ಅಥವಾ ಕೋಮುವಾದ ಮೂಲಭೂತವಾದ ವಿರೋಧ ಮಾಡುವವರು, ಜನತೆಯ ಧಾರ್ಮಿಕ ಲೋಕಗಳ ಬಗ್ಗೆ ಗೌರವವುಳ್ಳವರು; ಅಲ್ಲಿರುವ ಕಲೆ ಸೌಂದರ್ಯಗಳ ಬಗ್ಗೆ ಪ್ರೀತಿಯುಳ್ಳವರು- ಎಂದರೆ ಕೆಲವರು ನಂಬುವುದಿಲ್ಲ. ಶಕ್ತಿ ರಾಜಕಾರಣವು ಧರ್ಮವನ್ನು ತನ್ನ ಹತ್ಯಾರದಂತೆ ಬಳಸುವುದನ್ನು ವಿರೋಧಿಸುವುದು ಬೇರೆ: ನಿತ್ಯ ಜೀವನದಲ್ಲಿ ಸಾಮಾನ್ಯ ಜನ ಬದುಕುವ ಧರ್ಮವನ್ನು ಮನ್ನಿಸುವುದು ಬೇರೆ ಎಂದರೆ, ಅವರಿಗೆ ಅರ್ಥವಾಗುವುದಿಲ್ಲ. ಅರ್ಥವಾಗುವ ಕೆಲವರು ಇವುಗಳ ನಡುವಿನ ಫರಕನ್ನು ಉದ್ದೇಶಪೂರ್ವಕವಾಗಿ ಮರೆಯಿಸಿ, 'ವಿಚಾರವಾದಿ' 'ಬುದ್ಧಿಜೀವಿ' ಲೇಖಕರು' ಎಂಬುವರನ್ನು 'ಸಮಾಜದ ಕ್ಷೇಮಕ್ಕಾಗಿ ನಿವಾರಿಸಬೇಕಾದ ಪೀಡೆಗಳು' ಎಂಬ ಗೊಂದಲದ ಸನ್ನಿವೇಶವನ್ನು ನಿರ್ಮಾಣ ಮಾಡಿರುವರು. ಈ ಸನ್ನಿವೇಶವೇ ಲೇಖಕರ ಹತ್ಯೆಗಳಿಗೂ ಕಾರಣವಾಗುತ್ತಿದೆ. ಆದರೆ ನಿಜವಾದ ವಿಚಾರವಾದವು, ಧರ್ಮದ ಹೆಸರಲ್ಲಿರುವ ಮತೀಯ ರಾಜಕಾರಣವನ್ನು ನಿರಾಕರಿಸುತ್ತಲೇ, ಪರಂಪರೆಯಿಂದ ಬಂದ ಜೀವನ ಕ್ರಮಗಳ ಬಗ್ಗೆ, ಅದು ಸೃಷ್ಟಿಮಾಡಿರುವ ಅಡುಗೆ, ವಾಸ್ತು, ಇತ್ಯಾದಿ ಕ್ಷೇತ್ರಗಳಲ್ಲಿರುವ ಕುಶಲತೆ ಬಗ್ಗೆ ಅಪಾರ ಶ್ರದ್ಧೆ ತೋರುತ್ತದೆ. ಇದು ಕಾರಂತ ಕುವೆಂಪು ಅವರಿಂದ ಕನ್ನಡದಲ್ಲಿ ಹರಿದು ಬಂದಿರುವ ಪರಂಪರೆ. ಲೋಹಿಯಾ ಅವರು ಮಹಾನ್ ವಿಚಾರವಾದಿ. ಆದರೆ ಅವರ `ರಾಮಕೃಷ್ಣಶಿವ' ಲೇಖನ ಸಾಂಸ್ಕøತಿಕ ಆಸ್ಥೆಯಿರುವ ಮನಸ್ಸು ಮಾತ್ರ ಬರೆಯುವಂಥದ್ದು. ರಾಜಶೇಖರ್ ಇಂಥಾ ಪರಂಪರೆಗೆ ಸೇರಿದ ಚಿಂತಕರು. ರಾಜಶೇಖರ್ ಜೀವವಿಮಾ ಕಛೇರಿಯಲ್ಲಿ ಸಹಾಯಕರಾಗಿ ಸೇವೆ ಸಲ್ಲಿಸಿದವರು. ಕಳೆದ ದಶಕದಿಂದ ಕೋಮಸೌಹಾರ್ದ ಚಳುವಳಿಯಲ್ಲಿ ಗುರುತಿಸಿಕೊಂಡಿದ್ದ ಅವರು, ಜೀವಮಾನ ಉದ್ದಕ್ಕೂ ಬೇರೆಬೇರೆ ಜನಪರ ಚಳುವಳಿಗಳ ಭಾಗವಾದವರು; ಸಾವಿರಾರು ಬೀದಿಭಾಷಣಗಳನ್ನು ಮಾಡಿದವರು. ಅವರ ವಿಮರ್ಶೆ ಓದುವುದು ಮತ್ತು ಭಾಷಣ ಕೇಳುವುದು ಎಂದರೆ, ಸಾಹಿತ್ಯವನ್ನೂ ಅದರ ಘನತೆಯಲ್ಲಿ, ಸಮಾಜವನ್ನು ಅದರ ಸಂಕೀರ್ಣತೆಯಲ್ಲಿ, ಅರಿಯುವ ಕ್ರಮವೇ ಆಗಿದೆ. ಅವರ ಚಿಂತನೆ ಮತ್ತು ಭಾಷೆಗಳಲ್ಲಿರುವ ತೀಕ್ಷ್ಣತೆಗೂ ವ್ಯಕ್ತಿತ್ವದಲ್ಲಿರುವ ತಳಮಳಿಕೆಗೂ ಕಾರಣ, ಅವರ ಸೂಕ್ಷ್ಮಸಂವೇದನೆ ಮಾತ್ರವಲ್ಲ, ಹಾಲಿ ಕರಾವಳಿ ಕರ್ನಾಟಕದ ಪ್ರಕ್ಷುಬ್ಧ ಸನ್ನಿವೇಶ ಕೂಡ. ಮಾತುಕತೆಯಲ್ಲಿ ನಾನು ಕೇಳುತ್ತಿದ್ದ ಪ್ರಶ್ನೆಗಳಿಗೆ ಅವರು ಬಹಳ ಸಲ `ನನಗೆ ಗೊತ್ತಿಲ್ಲ' ಎಂದು ವಿವರಣೆ ಶುರುಮಾಡುತ್ತಿದ್ದರು. ಆದರೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಅವರಷ್ಟು ಓದಿದವರು ಕನ್ನಡದಲ್ಲಿ ಕಡಿಮೆ. ಅವರಷ್ಟು ಆಳವಾದ ವ್ಯಾಪಕವಾದ ಓದನ್ನು ವಿಶ್ವವಿದ್ಯಾಲಯಗಳಲ್ಲಿರುವ ನಾವು ಮಾಡಿದ್ದರೆ, ನಮ್ಮ ವಿದ್ಯಾರ್ಥಿಗಳು ಏನೇನಾಗಿರುತ್ತಿದ್ದರೊ? ಆ ದಿನದ ಮಾತುಕತೆಯಲ್ಲಿ ನನಗೆ ಅವರು ಆಂಗ್ಲ ಶಿಕ್ಷಕರಾಗಿದ್ದ ಸಂಗತಿ ಆಕಸ್ಮಿಕವಾಗಿ ತಿಳಿಯಿತು. ಅವರ ಇಂಗ್ಲೀಶ್ ಓದು ಕೂಡ ವ್ಯಾಪಕ. ಅವರೊಬ್ಬ ಅದ್ಭುತ ಕನ್ನಡ ಗದ್ಯಕಾರ. ಕನ್ನಡದಲ್ಲಿ ಅವರಂತೆ ಮುಕ್ಕಾಗದ ನೈತಿಕ ಪ್ರಜ್ಞೆ ಮತ್ತು ಧೀಮಂತಿಕೆಯುಳ್ಳ ಚಿಂತಕರು ವಿರಳ. ಕನ್ನಡ ಬರೆಹದಲ್ಲಿರುವ ಜಡತೆ ಮತ್ತು ಲಯಗೇಡಿತನ ಕಂಡಾಗಲೆಲ್ಲ ಹರಿಹಾಯುತ್ತಿದ್ದ ಲಂಕೇಶ್, ತಮ್ಮ ಸಾಯುವ ಕೊನೆಯ ಕ್ಷಣಗಳಲ್ಲಿ ಬರೆದ ಟಿಪ್ಪಣಿ, ರಾಜಶೇಖರ ಅವರ ಪ್ರಾಂಜಲವಾದ ಕನ್ನಡವನ್ನು ಕುರಿತಾಗಿತ್ತು. ಬಾಳಿಡೀ ಪ್ರತಿರೋಧ‌ ಮತ್ತು ಆಕ್ಟಿವಿಸಂನಿಂದ ಜಗಜಗಿಸಿದ ರಾಜಶೇಖರ್ ಅವರಲ್ಲಿ, ಮತೀಯವಾದವು ದೇಶವನ್ನು ಈ ಪರಿಯಲ್ಲಿ ಆವರಿಸಿಕೊಂಡಿರುವ ಬಗ್ಗೆ ನಿರಾಶೆಯಿತ್ತು; ಅವರು ಮತ್ತಷ್ಟು ಹತಾಶೆಯ ಗಳಿಗೆಗಳಿಗೆ ತಮ್ಮನ್ನು ಸಿದ್ಧಗೊಳಿಸಿಕೊಳ್ಳುತ್ತಿದ್ದಾರೆ ಎಂದೂ ಅನಿಸಿತು. ಒಳ್ಳೆಯ ಮಾತುಗಾರರಾದ ಅವರು, ಮಾತು ಮತ್ತು ಬರೆಹದ ನಿಷ್ಫಲತೆಯನ್ನೂ ಅರಿತವರು. ಸದ್ಯದ ಚಾರಿತ್ರಿಕ ಸನ್ನಿವೇಶವೇ ಅವರ ಬರೆಹ ಮತ್ತು ಮಾತಿಗೆ ತೀವ್ರತೆಯನ್ನೂ ವಿಷಾದದ ಗುಣವನ್ನೂ ತಂದುಕೊಟ್ಟಂತೆ ತೋರಿತು. ``ನೀವು ಅಷ್ಟೊಂದು ಬೀದಿಭಾಷಣ ಮಾಡಿದವರು. ಆದರೆ ಸೆಮಿನಾರುಗಳಲ್ಲಿ ಬರಕೊಂಡು ಬಂದು ಮಾತಾಡ್ತೀರಲ್ಲ, ಯಾಕೆ?" ಎಂದೆ. "ಎಕ್ಸಟೆಂಪರ್ ಮಾತಾಡೋ ಧೈರ್ಯವೇ ಇಲ್ಲ ನನಗೆ. ಮೈಕ್ ಮುಂದೆ ನಿಂತು ಮಾತಾಡುವಾಗ ಯೋಚನೆ ಮಾಡಿಕೊಂಡು ಬಂದಿದ್ದ ಮಾತೆಲ್ಲ ಮರೆತೇ ಹೋಗುತ್ತೆ. ನನಗೆ ಅಲ್ಲಲ್ಲೇ ನಿಂತುಗೊಂಡು ಸೃಷ್ಟಿ ಮಾತಾಡೋವಷ್ಟು ಸೃಜನಶೀಲತೆ ಇಲ್ಲ. ಕಿ.ರಂ. ಮಾಡ್ತಿದ್ದರಂತೆ ಅದನ್ನ. ಕಿ.ರಂ. ಭಾಷಣ ಮಾಡೋಕೆ ಪುಟಗಟ್ಟಲೆ ನೋಟ್ಸ್ ಮಾಡ್ಕೊಂಡು ಹೋಗ್ತಾರೆ. ಮೈಕ್ ಮುಂದೆ ನಿಂತುಕೊಳ್ತಾರೆ. ಆಮೇಲೆ ಅದನ್ನು ನೋಡೋದೇ ಇಲ್ಲವಂತೆ. ಮಾಡ್ಕೊಂಡಿರೋ ನೋಟ್ಸೇ ಬೇರೆ; ಎದುರುಗಡೆ ಬಂದು ಹೇಳೋದೇ ಬೇರೆ. ಆ ತರಹದ ಕುಶಲತೆ ನನ್ನ ಹತ್ತರ ಇಲ್ಲ. ಮಾತಿಗೆ ತಡವರಿಸೋದೇ ಜಾಸ್ತಿ. ಸುಮಾರಷ್ಟು ಡಿಸಾಸ್ಟರಸ್ ಎಕ್ಸ್ ಪೀರಿಯನ್ಸ್ ಆಗಿವೆ ನನಗೆ'' ಎಂದರು. "ನೀವು ಮೇನ್ ಸ್ಟ್ರೀಂ ಪತ್ರಿಕೆಗಳಲ್ಲಿ ಯಾಕೆ ಬರೆಯೋಲ್ಲ?" ಎಂದೆ. "ನಾನು ಬರೆದಿದ್ದನ್ನು ಅವರು ಹಾಕುವುದಿಲ್ಲ. ನಾನು ಹಿಂದೆ ಬರೆಯುತ್ತಿದ್ದುದು `ಲಂಕೇಶ್ ಪತ್ರಿಕೆ'ಗೆ; ನಂತರ 'ಗೌರಿಲಂಕೇಶ್'ಗೆ. ಈಗ ಎರಡೂ ಇಲ್ಲ. ನನಗೆ ಬರೆಸುವವರ ಪ್ರಚೋದನೆಯೇ ಇಲ್ಲವಾಗಿದೆ'' ಎಂದು ಜವಾಬಿಸಿದರು. ಹೊರಡುವಾಗ ಅವರ ಜತೆ ನಿಂತು ಫೋಟೊ ತೆಗೆಸಿಕೊಂಡೆ. ಅವರನ್ನು ನಗಿಸಬೇಕೆಂದು ನಾನೂ ವಿಷ್ಣುವೂ ಯತ್ನಿಸಿದೆವು. ತುಸುವೇ ತುಟಿ ಅರಳಿಸಿದರು. ಆಹೊತ್ತಿಗೆ ಮಳೆನಿಂತಿತ್ತು. ಆಗಸ ಹೊರಪಾಗಿತ್ತು. ಬರುತ್ತ ಅವರ ಕಾನನ ಸದೃಶ ಹಿತ್ತಲಿನಿಂದ ಒಂದು ಹೂಗಿಡದ ಸಸಿಯನ್ನು ಹಿಡಿದುಕೊಂಡು ಬಂದೆ. 53 Comments Chandrashekhar Nangali ನನ್ನನ್ನು ತುಂಬಾ ಪ್ರಭಾವಿಸಿದವರು ಜಿ.ಆರ್.ದ್ವಯರು (ಜಿ.ರಾಮಕೃಷ್ಣ & ಜಿ.ರಾಜಶೇಖರ್ )😍😍

ಜಿ. ರಾಜಶೇಖರ - ಅನುಪಮಾ ಪ್ರಸಾದ್ ಅವರ " ದೂರ ತೀರ " { ಕಥಾ ಸಂಕಲನ }Anupama Prasad ,/ G. Rajashekhar

2012ರಲ್ಲಿ ಪಲ್ಲವ ಪ್ರಕಾಶನದಿಂದ ಬಂದ ಕಥಾಸಂಕಲನಕ್ಕೆ ಜಿ.ರಾಜಶೇಖರರ ಮುನ್ನುಡಿ. `ದೂರ ತೀರ’ಅನುಪಮಾ ಪ್ರಸಾದ್ ಅವರ ಮೂರನೆಯ ಕಥಾ ಸಂಕಲನ. ಇದಕ್ಕೂ ಮೊದಲು ಅವರ `ಚೇತನಾ’ಮತ್ತು `ಕರವೀರದ ಗಿಡ’ಸಂಕಲನಗಳು ಪ್ರಕಟವಾಗಿದ್ದು ಸಹೃದಯಿ ಓದುಗರಿಗೆ ಅವರು ಅಪರಿಚಿತರೇನಲ್ಲ. ಅನುಪಮಾ ಅವರ ಕತೆಗಳು ಕನ್ನಡದ ಹಲವು ಜನಪ್ರಿಯ ಪತ್ರಿಕೆಗಳಲ್ಲೂ ಪ್ರಕಟವಾಗಿವೆ. ಸಣ್ಣಕತೆಯ ಕ್ಷೇತ್ರದಲ್ಲಿ ಅವರಿಗೆ ಈಗಾಗಲೇ ಸಾಕಷ್ಟು ಹೊಕ್ಕು ಬಳಕೆ ಸಾಧಿಸಿದ್ದು ಪ್ರಸ್ತುತ ಸಂಕಲನಕ್ಕೆ ನನ್ನ ಮುನ್ನುಡಿ ರೂಪದ ಹಿತವಚನಗಳ ಅಗತ್ಯವೇನೂ ಇಲ. ಸರಳವೂ ನೇರವೂ ಆಗಿರುವ ಅವರ ಕತೆಗಳು ನಿರಾಭರಣ ಸುಂದರಿಯಂತಿದ್ದು ಅವಕ್ಕೆ ನನ್ನ ಈ ಬರಹದ ಅಲಂಕಾರವೂ ಬೇಕಿಲ್ಲ. ಆದರೆ ಸರಳ ಮಾತುಗಳಲ್ಲಿ ಕತೆಕಟ್ಟಿ ಹೇಳುವÀ ಕಸುಬು ಸರಳವಲ್ಲ. ಹಕ್ಕಿ ತನ್ನ ಗೂಡು ಕಟ್ಟಿಕೊಳ್ಳುವಂತೆ ಅದು. ಪರಿಕರ ಸರಳ; ಆದರೆ ಸಂರಚನೆ ಸಂಕೀರ್ಣ. ಸರಳ ನೇರ ಮಾತುಗಳ ಮುಖಾಂತರವೇ ವಾಚ್ಯಾರ್ಥವನ್ನು ಮೀರಿದ ಧ್ವನ್ಯಾರ್ಥಗಳನ್ನು ಹೊಳೆಯಿಸುವ ಸೂಕ್ಷ್ಮಜ್ಞತೆ ಕೂಡ ಸುಲಭ ಸಾಧ್ಯವಲ್ಲ. ಈ ದೃಷ್ಠಿಯಿಂದ ಅನುಪಮಾ ಮೈ ಗೂಡಿಸಿಕೊಂಡಿರುವ ಕತೆಗಾರಿಕೆಯ ಕೌಶಲವನ್ನು, ಪ್ರಸ್ತುತ ಕತೆಗಳ ನನ್ನ ಓದಿನಿಂದ ವಿವರಿಸಲು ಇಲ್ಲಿ ಯತ್ನಿಸುತ್ತೇನೆ. ಅನುಪಮಾ ಅವರ ಈ ಸಂಕಲನದ ಎಲ್ಲಾ ಕತೆಗಳೂ-ಪ್ರಾಯಶಃ `ಜಾಜಿ ಗಂಧದ ಜಾಡು..’ಒಂದು ಕತೆÉಯನ್ನು ಹೊರತು ಪಡಿಸಿ- ವಾಸ್ತವ ಶೈಲಿಯ ಸೀದಾ ಸಾದಾ ಕಥನಗಳು. ಇಲ್ಲಿ ನಮಗೆ ಎದುರಾಗುವ ಎಲಾ ಪಾತ್ರಗಳು ದಿನ ನಿತ್ಯದ ಕಷ್ಟ ಕಾರ್ಪಣ್ಯ ಮತ್ತು ಅನಿರೀಕ್ಷಿತವಾಗಿ ಎರಗಿ ಬರುವ ಆಘಾತಗಳ ಜೊತೆ ನಮ್ಮ ಕಾಲದ ರಾಜಕೀಯದಲ್ಲಿ ಹಾಸುಹೊಕ್ಕಾಗಿರುವ ಕ್ರೌರ್ಯದ ಜೊತೆ ಸಹ ಏಗಿಕೊಂಡು ತಾಳಿಕೊಂಡು ಬಾಳುವವರು; ಆದರೆ ಯಾರೂ ಒಂಟಿಯಲ್ಲ. ಸಂಕಲನದ ಎಲ್ಲ ಕತೆÉಗಳೂ ಊರು ಮನೆಗಳ ಆವರಣವನ್ನೂ ಕಾಲದೇಶದ ಸಂದರ್ಭವನ್ನೂ ಕಟ್ಟಿಕೊಂಡೇ ನಮ್ಮೆದುರು ಅನಾವರಣಗೊಳ್ಳುವುದು. ಉದಾಹರಣೆಗೆ ಸಂಕಲನದ ಶೀರ್ಷಿಕೆ “ದೂರ ತೀರ” ಕತೆಯ ಶ್ರೀನಿವಾಸ ಪ್ರಕೃತ ದುಡಿಯುತ್ತಿರುವುದು ಗೋವಾದ ಅಪರಿಚಿತ ಊರೊಂದರ ಹೋಟೆಲಿನಲ್ಲಾದರೂ, ಅವನ ಮನಸ್ಸು ನೆಲೆಸಿರುವುದು ತನ್ನ ಹುಟ್ಟೂರಿನ ಬಾಲ್ಯ ಕಾಲದ ನೆನಪುಗಳಲ್ಲೇ. ಅವನು ಚಿಕ್ಕ ಹುಡುಗನಾಗಿದ್ದಾಗ ಅಂದರೆ ಇಪ್ಪತ್ಮೂರು ವರ್ಷಗಳ ಹಿಂದೆ, ಅವನು ಮಾಡಿದ ಒಂದು ಚಿಲ್ಲರೆ ಕಳ್ಳ್ಳತನಕ್ಕೆ ಅವನ ಅಪ್ಪ ತೋರಿದ ರೌದ್ರಾವತಾರದಿಂದಾಗಿ ಮನೆ ಬಿಟ್ಟು ಓಡಿ ಹೋದ ಬಡ ಬ್ರಾಹ್ಮಣ ತರುಣ ಅವನು. ಈಗ ಹೊಸ ಊರು, ಹೊಸ ವೃತ್ತಿ, ಜೊತೆಗೆ ಅಪ್ರಯತ್ನಪೂರ್ವಕವಾಗಿ ಒಲಿದಿರುವ ಹಾಡುಗಾರಿಕೆಗಳಿಂದಾಗಿ ಅವನಲ್ಲಿ ಕೊಂಚ ಆತ್ಮ ವಿಶ್ವಾಸ ಮೂಡಿದೆ. ಆದರೆ ತನ್ನ ಹುಟ್ಟೂರು ಸಮೀಪಿಸುತ್ತಿದ್ದಂತೆ ಅವನು ಅಧೀರನಾಗುತ್ತಾನೆ. ಏನು ಮಾಡಿದರೂ, ತನ್ನ ಮೇಲಿರುವ ಕಳ್ಳತನದ ಆರೋಪದಿಂದ ತಾನು ಕಳಚಿಕೊಳ್ಳಲಾರೆ; ತನ್ನ ಬೆನ್ನು ಹತ್ತಿದ ದೈವ ತನ್ನನ್ನು ಬಿಟ್ಟು ತೊಲಗುವುದಿಲ್ಲ ಎಂದು ಶ್ರೀನಿವಾಸನಿಗೆ ಅರಿವಾಗುತ್ತದೆ. `ಸ್ವ’ ದ ಕುರಿತ ಈ ವಿಷಾದವೇ ಅವನಲ್ಲಿ ನೆನಪುಗಳ ಭಾರದಿಂದ ಬಿಡುಗಡೆಗೊಂಡ ಭಾವವನ್ನು ಸ್ಪುರಿಸುತ್ತದೆ. ಕರಾವಳಿ ಮತ್ತು ಅದರ ಒಳನಾಡಿನ ಭೌಗೋಳಿಕ ಮೇಲ್ ಮೈ ವಿವರಗಳು ಬಡ ಬ್ರಾಹ್ಮಣರ ಕಾರ್ಪಣ್ಯದ ಬದುಕು, ಸೆಖೆ, ಮೊದಲ ಮಳೆಯ ನಂತರದ ಧಗೆ - ಹೀಗೆ ಕತೆ ತನ್ನ ಆವರಣವನ್ನು ಸರಳ ಮಾತುಗಳಲ್ಲಿ ಕಟ್ಟಿಕೊಳ್ಳುತ್ತದೆ. ವರ್ತಮಾನದ ವಾಸ್ತವದಿಂದ ಗತಕಾಲದ ನೆನಪುಗಳಿಗೆ ಮರಳಿ ವರ್ತಮಾನಕ್ಕೆ ಹೊರಳಿಕೊಳ್ಳುವ ನಿರೂಪಣೆ ಸಂಕಲನದ ಹೆಚ್ಚಿನ ಕಥೆಗಳಲ್ಲಿ ಕಂಡು ಬರುವ ವಿನ್ಯಾಸ. `ಖಾದಿ ಅಂಗಿ’ಯ ಸೀತಕ್ಕನಿಗೆ ತನ್ನ ಇಳಿವಯಸ್ಸಿನಲ್ಲೂ ತಾರುಣ್ಯದ ತನ್ನ ಪ್ರೇಮಿಯದ್ದೇ ನೆನಪು. ಅವಳ ಯೌವನ ನಾಡಿನ ಸ್ವಾತಂತ್ರ್ಯ ಹೋರಾಟದ ಏರು ದಿನಗಳ ಕಾಲಘಟ್ಟವೂ ಹೌದು. ಅವಳ ಪ್ರೇಮಿ ಸ್ವಾತಂತ್ರ್ಯ ಹೋರಾಟಗಾರ. ಸೀತಕ್ಕನ ನೆನಪಿನಲ್ಲಿ ತನ್ನ ಹದಿ ಹರೆಯದ ಪುಳಕ, ಪ್ರೇಮದ ರೋಮಾಂಚನ, ಸ್ವಾತಂತ್ರ್ಯ ಹೋರಾಟದ ಆದರ್ಶ ಮತ್ತು ತನ್ನ ಪ್ರಿಯಕರನೊಡನೆ ಯಾವತ್ತೂ ಒಂದಾಗಲಾರದ ವಿಷಾದಗಳೆಲ್ಲ ಬೆರೆತುಕೊಂಡಿವೆ. ಅವಳು ಮನಸಾರೆ ಪ್ರಿತಿಸಿದ ಕೃಷ್ಣಾನಂದ, ಭೂಗತ ಹೋರಾಟಗಾರನಾಗಿ ಅವಳ ಮನೆ ಸೇರಿಕೊಂಡವ. ಅವನಿಗೂ ಅವಳ ಮೇಲೆ ಪ್ರೀತಿ. ಸೀತಕ್ಕ ಬ್ರಾಹ್ಮಣ ಹೆಂಗಸರು ಮುಟ್ಟಾದರೆ ಮೂರುದಿನ ಪ್ರತ್ಯೇಕ ಬಿಡಾರದಲ್ಲಿದ್ದು ಅಕ್ಷರಶಃ ಹೊರಗಾಗುವ ಕಾಲದವಳು. ಅಂತದ್ದರಲ್ಲೂ ಅವಳು ತನ್ನ ಪ್ರೇಮದ ಉತ್ಕಟತೆಯಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಕೈ ಜೋಡಿಸುತ್ತಾಳೆ. ಆದರೆ ಅವಳ ಕೃಷ್ಣಾನಂದ ಮಾತ್ರ ಪೋಲಿಸರ ಗುಂಡೇಟಿಗೆ ಬಲಿಯಾಗಿ ಹುತಾತ್ಮನಾಗುತ್ತಾನೆ. ಸೀತಕ್ಕ ಯಾವ ಜ್ಜೀವ ವಿರಹಿಯಾಗುತ್ತಾಳೆ. ನಾಡಿನ ಸ್ವಾತಂತ್ರ್ಯಕ್ಕೆ ಅವಳ ತ್ಯಾಗದ ಕೊಡುಗೆಯೂ ಇದೆ; ಆದರೆ ಅವಳು ಮಾತ್ರ ಮದುವೆಯಾಗದೆಯೂ ಶಾಶ್ವತ ವೈಧವ್ಯ ಅನುಭವಿಸುತ್ತಾಳೆ. ಸ್ವಾತಂತ್ರ್ಯ ಹೋರಾಟದ ಭಾಗವಾಗಿ ನಡೆದ ಕಾಯಿದೆ ಭಂಗ ಚಳುವಳಿ ಬಿರುಸಾಗಿ ನಡೆದ ಪ್ರದೇಶಗಳಲ್ಲಿ ಈಗಿನ ಉತ್ತರ ಕನ್ನಡ ಜಿಲ್ಲೆಯೂ ಒಂದು. ಹಾಗಾಗಿ ಕತೆಗೆ ಲೇಖಕಿ ಕಲ್ಪಿಸಿರುವ ಭೌಗೋಳಿಕ ಆವರಣ ಮತ್ತು ಸ್ಥಳೀಯ ಹವ್ಯಕ ಆಡುನುಡಿಯ ಬಳಕೆ ಸೂಕ್ತವಾಗಿದೆ. ಆದಾಗ್ಯೂ ಈ ಕುರಿತು ನನ್ನದೊಂದು ತಕರಾರಿದೆ. ಕತೆಯಲ್ಲಿ ಹವ್ಯಕ ಕನ್ನಡದ ಬಳಕೆ, ಕೇವಲ ಕೆಲವು ಶಬ್ದ ಮತ್ತು ಪ್ರತ್ಯಯಗಳಿಗೆ ಮಾತ್ರ ಸೀಮಿತಗೊಂಡಿದೆ- ಅಡುಗೆಗೆ ಹಾಕುವ ಒಗ್ಗರಣೆಯಂತೆ. ಉದಾಹರಣೆಗೆ ಸೀತಕ್ಕ ತಾನು ಹುಟ್ಟಿ ಬೆಳೆದ, ಕಾನ್ತೋಟದ ಮನೆಯನ್ನು ನೆನಪಿಸಿಕೊಂಡು ಹೇಳುವ ಮಾತುಗಳನ್ನು ನೋಡಿ, “....ನಾಲ್ಕು ಜನ ಅಕ್ಕಂದಿರು. ಅವರೆಲ್ಲ ಲಗ್ನವಾಗಿ ಗಂಡನ ಮನೆ ಸೇರಿದ ಮೇಲೆ ಕಾನ್ತೋಟದ ಮನೆ ಬಣಗುಡ್ತಿತ್ತಡ. ಸುತ್ತ ನಾಲ್ಕು ಹಳ್ಳಿಯೊಳ್ಗ ಅಂತ ಇನ್ನೊಂದು ಮನೆ ಇತ್ತಿಲ್ಯಡ. ಮದುವೆ-ಮುಂಜಿ ಇದ್ದು ಅಂದ್ರೆ ಒಂದೇ ಸರ್ತಿ ನೂರೈವತ್ತು ಮಂದಿಗೆ ಆಸ್ರಿಗೆ-ಊಟಕ್ಕೆ ಎಲೆ ಹಾಕೊ ಹಂಗೆ ಉದ್ದಾನುದ್ದ ಜಗಲಿ, ಜಗಲಿ ದಾಟಿ ಒಳಗ್ಹೋದ್ರೆ ಎಡ ಬದಿಗೆ ಬೈಠಕ್ ಖಾನೆ. ಬಲಬದಿಗೆ ಚೌಕಾಕಾರದ ಜಗಲಿ, ಜಗಲಿ ಮೂಲೆಗೆ ಮೆತ್ತು ಹತ್ತಲು ಏಣಿ. ಅಲ್ಲಿಂದಾಚೆ ಉದ್ದಕ್ಕೆ ಪಣ್ತದ ಮನೆ. ಪ್ರಧಾನ ಬಾಗಿಲು ದಾಟಿ ಒಳಹೊಕ್ದೆ ಅಂದ್ರೆ ಒಳಗೆಲ್ಲ ನಡು ಮಧ್ಯಾಹ್ನವೂ ಆವರಿಸಿಕೊಂಡಿರುವ ಕತ್ತಲು..” ಈ ಉದ್ಗøತದಲ್ಲಿ ಹಲವೆಡೆ ಸೀತಕ್ಕ ಆಡುವ ಮಾತು ಮತ್ತು ಅದರ ಲಯ ಕೃತಕವಾಗಿ ಕೇಳಿಸುತ್ತದೆ. `ನಡು ಮಧ್ಯಾಹ್ನವೂ ಆವರಿಸಿಕೊಂಡಿರುವ ಕತ್ತಲು’ ಎಂಬ ಮಾತು ಸುಂದರವಾಗಿದೆ; ಆ ಕಾಲದ ಸಂಪ್ರದಾಯಸ್ಥ ಬ್ರಾಹ್ಮಣರ ಮನೆUಳಿಗೆ ಒಪ್ಪುವಂತಹದ್ದು ಆಗಿದೆ. ಆದರೆ ಜನ- ಅದರಲ್ಲೂ ಸೀತಕ್ಕನಂತವರು-ನಿತ್ಯದ ಸಂಭಾಷಣೆಯಲ್ಲಿ ಹಾಗೆ ಮಾತಾಡುವುದಿಲ್ಲ. ಭಾಷೆಯ ಈ ತೊಡಕು, ಸಂಕಲನದ ಇತರ ಕೆಲವು ಕಥೆಗಳಲ್ಲೂ ನನಗೆ ತಲೆದೋರಿದೆ. ಕತೆಗಳಲ್ಲಿ ನಡೆಯುವ ಘಟನೆಗಳು ಸಹಜವೆನ್ನನಿಸಿದರೂ, ಪಾತ್ರಗಳ ಮಾತು ಮಾತ್ರ ಅಸಹಜವೆನ್ನಿಸುತ್ತದೆ. ಜನ ನಿತ್ಯ ಆಡುವ ಮಾತು, ಹೇಳದೆ ಬಿಟ್ಟ ಮಾತು, ಮಾತಿನ ನಡುವಿನ ಮೌನ-ಇವನ್ನೆಲ್ಲ ಆಲಿಸುವ ಸೂಕ್ಷ್ಮಜ್ಞತೆ ಲೇಖಕಿಗೆ ಇರುವುದರಿಂದ ಅವರು ತಮ್ಮ ಪಾತ್ರಗಳ ಮಾತುಗಳನ್ನು ಬರೆಯುವ ಮುನ್ನ ಆಲಿಸಬೇಕು ಎಂದು ನನ್ನ ಸಲಹೆ. ಅನುಪಮಾ ಮಾತ್ರವಲ್ಲ ಕನ್ನಡದ ಹೊಸ ಪೀಳಿಗೆಯ ಹಲವು ಕತೆಗಾರರ ಭಾಷೆಯ ಬಗ್ಗೆ ನನ್ನದು ಇದೇ ತಕರಾರು. ನನ್ನ ಮನೆ ಮಾತಾಗಿರುವ ಕುಂದಾಪುರದ ಆಡುನುಡಿಯನ್ನೂ ಹೀಗೆ ನೆಪ ಮಾತ್ರಕ್ಕೆ ಕತೆಗಳಲ್ಲಿ ತಂದಿರುವ ಉದಾಹರಣೆಗಳು ಹೇರಳವಾಗಿವೆ. ಆದರೆ ಅದೇ ವೇಳೆ, ಕನ್ನಡದ ಪ್ರಾದೇಶಿಕ ಆಡುಮಾತುಗಳ ಶಬ್ದ ಮಾತ್ರವಲ್ಲ, ಧ್ವನಿ, ಲಯ, ವಾಗ್ರೂಢಿಗಳನ್ನೆಲ್ಲ ಅರ್ಥಪೂರ್ಣವಾಗಿ ಒಳಗೊಂಡಿರುವ ಗದ್ಯಕ್ಕೆ ಸಹ ಕನ್ನಡದಲ್ಲಿ ಸಾಕಷ್ಟು ಉದಾಹರಣೆಗಳಿವೆ. ಅಂತಹವುಗಳಲ್ಲಿ ಒಂದೆರಡನ್ನ ಮಾತ್ರ ಇಲ್ಲಿ ಉದಾಹರಿಸುವುದಾದರೆ ಜಡಭರತರ ನಾಟಕಗಳು, ರಾವ್ ಬಹಾದ್ದೂರರ ಕಾದಂಬರಿ `ಗ್ರಾಮಾಯಣ’,ದೇವನೂರ ಮಹಾದೇವರ ಕಥೆ-ಕಾದಂಬರಿಗಳು. ಹವ್ಯಕ ಕನ್ನಡದಲ್ಲಿ ನನಗೆ ತಕ್ಷಣ ನೆನಪಿಗೆ ಬರುವ ಎರಡು ಉದಾಹರಣೆಗಳೆಂದರೆ ವಿ.ತಿ.ಶೀಗೆಹಳ್ಳಿಯವರ ಕಾದಂಬರಿ `ತಲೆಗಳಿ’ ಮತ್ತು ಗ.ಸು.ಭಟ್ಟ ಬೆತ್ತಗೇರಿ ಅವರ ಕಾವ್ಯ. ಆಡುನುಡಿಯ ಬಳಕೆಯ ಇಂತಹ ಸಾಹಿತ್ಯಿಕ ಮಾದರಿಗಳ ಬಗ್ಗೆ ಅನುಪಮಾ ಯೋಚಿಸಬೇಕು ಎಂದು ಮುನ್ನುಡಿಕಾರನಾಗಿ ಸೂಚಿಸಬಯಸುತ್ತೇನೆ. `ಖಾದಿಅಂಗಿ’ಯ ಸೀತಕ್ಕನಂತೆ `ಜಾಜಿ ಗಂಧದ ಜಾಡು..’ ಕತೆಯ ನಾಯಕಿಯೂ ಚಿರವಿರಹಿ; ಗಂಡನಿದ್ದೂ ಇಲ್ಲದಂತೆ ಬಾಳಿದವಳು. ಭಾವಗೀತಾತ್ಮಕ ಉತ್ಕಟತೆಯ ಈ ಕತೆಯಲ್ಲಿ ಅವಳಿಗೆ ಹೆಸರಿಲ್ಲ. ಅವಳು ಹೆಣ್ಣಿನ ಸಾರ್ವತ್ರಿಕ ಮತ್ತು ಸಾರ್ವಕಾಲಿಕ ಸ್ಥಿತಿಯ ರೂಪಕ-ಅವಳ ಗಂಡ ಜಯಂತ ಕ್ಯಾನ್ವಾಸಿನ ಮೇಲೆ ಮೂಡಿಸುತ್ತಿರುವ ಅಹಲ್ಯೆಯಂತೆ ಅಥವಾ ಸ್ವತಃ ಅವಳೇ ನರ್ತಿಸಿ ಪ್ರದರ್ಶಿಸಿದ ಪಾತ್ರ ಶಕುಂತಲೆಯಂತೆ. ಅವಳನ್ನು ಶಾಸ್ತ್ರೋಕ್ತ ಕೈ ಹಿಡಿದ ಜಯಂತ ಕಲಾವಿದ. ಆದರೆ ಅವನಿಗೆ ಅವಳು ಬೇಕಾಗಿರುವುದು ತನ್ನ ವರ್ಣಚಿತ್ರಕ್ಕೆ ಮಾಡೆಲ್ ಆಗಿ ಮಾತ್ರ. ಅವಳ ಮೈ-ಮನಗಳ ಬಯಕೆಗೆ ಅವನು ಜಡ. ಅವಳ ನೃತ್ಯ ಗುರು ಮಾರ್ತಾಂಡವರ್ಮನ ಬಳಿ ಆಕೆ ಪ್ರೇಮಕ್ಕಾಗಿ ಅಂಗಲಾಚಿದರೂ ಅವರು ನಿರಾಸಕ್ತರು. ಅಹಲ್ಯೆಯನ್ನಾದರೂ ಇಂದ್ರ ಗೌತಮನ ರೂಪದಲ್ಲಿ ಬಂದು ಪ್ರೇಮಿಸಿದ್ದ. ಅಹಲ್ಯೆಗೆ ತನ್ನ ದಾಂಪತ್ಯಕ್ಕೆ ಹೊರಗಾದ ಸಂಬಂಧವಿದು ಎಂದು ಪರಿವೆಗೇ ಬರಲಿಲ್ಲ. ಹೀಗೆ ತಾನು ಮಾಡದ ತಪ್ಪಿಗಾಗಿ ಅವಳು ಗೌತಮನ ಶಾಪಕ್ಕೆ ಒಳಗಾಗಿ ಕಲ್ಲಾದಳು. “ಜಾಜಿ ಗಂಧದ ಜಾಡು..”ಕತೆಯ ನಾಯಕಿಯೂ ಅಹಲ್ಯೆಯಂತೆ ಶಾಪಗ್ರಸ್ಥಳೇ. `ಯುಗ ಯುಗಗಳಲ್ಲೂ ಪ್ರೇಮ ವಂಚಿತಳಾಗಿರು; ಗಂಡು ಸದಾ ನಿನ್ನನ್ನು ಬಳಸಲಿ ಮತ್ತು ಸದಾ ನಿನ್ನನ್ನು ಮರೆಯಲಿ’ ಎಂಬ ಶಾಪಕ್ಕೆ ಒಳಗಾದ ಹೆಣ್ಣಿನ ಸ್ಥಿತಿಗೆ ಅಹಲ್ಯೆ ಪ್ರತಿಮೆಯಾದರೆ ಪ್ರಸ್ತುತ ಕತೆಯ ಅವಳು ಸಮಕಾಲೀನ ಹೆಣ್ಣಿನ ರೂಪಕ. ಸಂಕಲನದ ಇನ್ನೊಂದು ಕಥೆ `ಕಾಳಿಂದಿ ಮಡು’ ಕೂಡ ಹೆಣ್ಣಿನ ಅಸಹಾಯಕತೆಯನ್ನು ಶೋಧಿಸುವ ಕಥೆ; ಕತೆಯಲ್ಲಿ ಬರುವ ಗಂಡು ಪಾತ್ರಗಳು ಕೂಡ ಸುಖಿಗಳಲ್ಲ. ಈ ಕತೆಯ ಹರಿಣಾಕ್ಷಿ ಒಂದು ಅರ್ಥದಲ್ಲಿ `ಜಾಜಿ ಗಂಧದ ಜಾಡು’ ಕಥೆಯ ನಾಯಕಿಯಂತೆಯೇ ಗಂಡನಿದ್ದೂ ಇಲ್ಲದಂತಾಗಿರುವವಳು; ಆದರೆ ಗೃಹಿಣಿ. ತನ್ನ ಸ್ಥಿತಿಯನ್ನು ಧಿಕ್ಕರಿಸಿ, ಉನ್ಮತ್ತಳಾಗಿ ಗುರಿ ಇಲ್ಲದೆ, ಅಲೆಯುತ್ತಿರುವ `ಜಾಜಿ ಗಂಧದ ಜಾಡು..’ಕತೆಯ ನಾಯಕಿ ಬಂಡಾಯದ ರೂಪಕ. ಹರಿಣಾಕ್ಷಿ ತನ್ನ ತನ್ನ ಗಂಡನ ಅಪಾಂಗತ್ವದ ಜೊತೆ ಏಗಿಕೊಂಡು ಹೇಗೋ ದಾಂಪತ್ಯವನ್ನೂ ಸಂಸಾರವನ್ನೂ ಕಾಪಾಡಿಕೊಳ್ಳುವ ನಿಜ ಜೀವನದ ಹೆಣ್ಣು. ತನ್ನ ಗಂಡನ ಶುಶ್ರೂಷೆಯಲ್ಲೇ ಅವಳು ತನ್ನ `ಸ್ವ’ ವನ್ನು ಕಂಡುಕೊಂಡವಳು. ಅದಕ್ಕೆ ಪ್ರತಿಯಾಗಿ ಹರಿಣಾಕ್ಷಿಯ ಗಂಡ ಜಯಂತ ಅವಳ ಆರೈಕೆಯನ್ನೇ ಕಾಮಾಪೇಕ್ಷೆ ಎಂದು ಭಾವಿಸಿ ಈಷ್ರ್ಯೆಯಲ್ಲಿ ಕೂಗಾಡುತ್ತಾನೆ. ಅವನ ಅಸಹಾಯಕತೆ ಮತ್ತು ಅತೃಪ್ತ ಕಾಮ ಅವನನ್ನು ಹಾಗೆ ಸಂದೇಹಿಸುವಂತೆ ಮಾಡುತ್ತದೆ. ಅವನ ವರ್ತನೆಗೆ ಅವನಿಗೇ ವಿಶಿಷ್ಟವಾದ ಅಪಾಂಗತ್ವ ಮಾತ್ರ ಕಾರಣವಲ್ಲ. ಲೈಂಗಿಕ ಅಸಾಮಥ್ರ್ಯದಿಂದ ಹುಟ್ಟುವ ಈರ್ಷೆ ಗಂಡಿನ ಸ್ವಭಾವದಲ್ಲೇ ಅಂತರ್ಗತವಾಗಿರುವಂತದ್ದು. ಹಾಸಿಗೆ ಹಿಡಿದ ಸ್ಥಿತಿಯಲ್ಲೂ ಜಯಂತನ ಗಂಡಸುತನ, ತನ್ನ ವೈಕಲ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತದೆ. ಕಥೆಯ ಘಟನಾವಳಿ ಕರಾವಳಿಯ ಒಂದು ಎಂಡೋಸಲ್ಫಾನ್ ಪೀಡಿತ ಹಳ್ಳಿ ಮತ್ತು ವಾರಣಾಸಿ ಕ್ಷೇತ್ರಗಳಲ್ಲಿ ಸಂಭವಿಸುತ್ತದೆ. ಆ ತೀರ್ಥಕ್ಷೇತ್ರ ಮತ್ತು ಅಲ್ಲಿ ಹರಿಯುವ ಗಂಗಾನದಿ ಕಥೆಗೆ ತಕ್ಕ ಹಿನ್ನೆಲೆ ಒದಗಿಸುತ್ತದೆ. ವಾರಣಾಸಿಯಲ್ಲಿ ಶವಯಾತ್ರೆ ದಿನದ ಇಪ್ಪತ್ನಾಲ್ಕು ಘಂಟೆಯೂ ನಡೆದೇ ಇರುತ್ತದೆ. ಶವ ಆ ಪುಣ್ಯ ನಗರಿಯಲ್ಲಿ ಅಶುಭವೂ ಅಲ್ಲವಂತೆ. ಜಯಂತನ ಜರ್ಜರಿತ ಸ್ಥಿತಿಯಿಂದ ಹರಿಣಾಕ್ಷ್ಷಿ ಮತ್ತು ಸ್ವತಃ ಜಯಂತ ಬಿಡುಗಡೆಯ ಭಾವ ಅನುಭವಿಸುವುದು, ಸದಾ ಶವಗಳ ಚಿತಾಗ್ನಿಗೆ ಸಾಕ್ಷಿಯಾಗಿ ಹರಿಯುತ್ತಿರುವ ಗಂಗಾನದಿಯ ಘಾಟ್ಗಳಲ್ಲಿ ಎಂಬ ವಿವರ ಅರ್ಥಪೂರ್ಣವಾಗಿದೆ. ಗಂಗಾನದಿ ಸಂಕೇತಿಸುವ ಪಾವಿತ್ರ್ಯ ಮತ್ತು ಹೊಲಸು ಚರಂಡಿಯಾಗಿರುವ ಅದರ ವಾಸ್ತವಗಳ ವೈದೃಶ್ಯ ಕತೆಯಲ್ಲಿ ಮಾರ್ಮಿಕವಾಗಿ ಮೂಡಿ ಬಂದಿದೆ. ಹೆಣ್ಣಿನ ಅಸಹಾಯಕತೆ ಮತ್ತು ಗಂಡಿನ ಸಂವೇದನಾ ಶೂನ್ಯತೆ ಅನುಪಮಾ ತಮ್ಮ ಕತೆಗಳಲ್ಲಿ ಮತ್ತೆ ಮತ್ತೆ ಶೋಧಿಸುವ ಎರಡು ಅಪರಿಹಾರ್ಯ ಸ್ಥಿತಿಗಳು. ಪ್ರಸ್ತುತ ಸಂಕಲನದ `ಬಣ್ಣ’ ಕತೆಯೂ ಇದೇ ವಸ್ತುವನ್ನು ಒಳಗೊಂಡಿದೆ. ಕತೆಯ ಮುಖ್ಯ ಪಾತ್ರ ಶಾರ್ವರಿಗೆ, ತನ್ನ ಹಳ್ಳಿ ಮನೆಯ ಸುತ್ತಲಿನ ಅಡಿಕೆ ತೋಟ ಮತ್ತು ವರ್ಣಚಿತ್ರ ಇವೆರಡು ಗಾಢ ಅನುರಕ್ತಿಗಳು. ಶಾರ್ವರಿಯ ತಂದೆಯೂ ವರ್ಣಚಿತ್ರ ಕಲಾವಿದ. ಆದರೆ ಶಾರ್ವರಿ ಕಲಾವಿದೆ ಎಂದು ಗುರುತಿಸುವವನು ಸೂಕ್ಷ್ಮಜ್ಞನಾದ ಸ್ಟೀಫೆನ್. ಅವಳ ತಂದೆ ಅವಳನ್ನು ಮಗಳಾಗಿ ಮಾತ್ರ ಪ್ರೀತಿಸಿದ. ಆದರೆ ಅವಳನ್ನು ಹೆಣ್ಣಾಗಿಯೇ ಕಂಡ. ಎಲ್ಲ ತಂದೆಯರೂ ತಮ್ಮ ಹೆಣ್ಣು ಮಕ್ಕಳನ್ನು ಪ್ರೀತಿಸುವುದು ಗಂಡಿನ ಯಜಮಾನಿಕೆಯಲ್ಲೇ; ಗಂಡಂದಿರು ತಮ್ಮ ಪತ್ನಿಯರನ್ನು ಪ್ರೀತಿಸುವುದೂ ಅದೇ ಬಗೆಯ ಯಜಮಾನಿಕೆಯಲ್ಲಿ. ಕೌಟುಂಬಿಕ ಸಂಬಂಧಗಳಲ್ಲ್ಲಿ ಪ್ರೀತಿ ಪುರುಷ ಪ್ರಧಾನ ಮೌಲ್ಯಗಳಿಗೆ ಸದಾ ಅಡಿಯಾಳಾಗಿ ನಿಲ್ಲುತ್ತದೆ. ಇಂತಹ ಸನ್ನಿವೇಶದಲ್ಲಿ ಹೆಣ್ಣು ತನ್ನ ವ್ಯಕ್ತಿತ್ವದ ಸ್ವಾಯತ್ತತೆಗೆ ಎರವಾಗುತ್ತಾಳೆ. ಶಾರ್ವರಿಗೆ ಅದರ ಅರಿವಿದೆ; ಆದರೆ ಅದನ್ನು ಎದುರಿಸಿ ಹಠದಲ್ಲಾದರೂ ತನ್ನ ವ್ಯಕ್ತಿತ್ವವನ್ನು ಸ್ಥಾಪಿಸುವ ಛಾತಿ ಇಲ್ಲ. ಶಾರ್ವರಿ ಮೊದಲ ಸಲ ಮೈ ನರೆದಾಗ ಮತ್ತು ಅವಳ ಮದುವೆಯ ಸಂದರ್ಭದಲ್ಲಿ ಅವಳು ತನ್ನ ಅಪ್ಪನ ಅಣತಿಯನ್ನು ಒಲ್ಲದ ಮನಸಿನಲ್ಲೇ ಪಾಲಿಸುತ್ತಾಳೆ. ಶಾರ್ವರಿಯ ಕಲೆಗೆ ಸ್ವತಃ ಕಲಾವಿದನಾದ ಅವಳ ಅಪ್ಪ ಜಡ. ಅವಳ ಗಂಡ ತನ್ನ ಕೆರಿಯರ್, ಸಂಬಳ ಮತ್ತು ಪ್ರಮೋಷನ್ ಬಿಟ್ಟು ಬೇರೆ ಯಾವುದಕ್ಕೂ ಸ್ಪಂದಿಸಲಾರದ ದ್ರಾಬೆ. ಅವನ ಮಟ್ಟಿಗೆ ಕಲೆ ಎಂದರೆ ಶಾರ್ವರಿಗೆ ಪುಕ್ಕಟೆ ದೊರೆಯುವ ಅಮೇರಿಕಾ ಪ್ರವಾಸದ ಅವಕಾಶ. ಶಾರ್ವರಿ ಅವನ ಅರಸಿಕತೆಯ ಜೊತೆಗೂ ಹೊಂದಿಕೊಂಡು ಬಾಳುವವಳು. ಅವಳು ಹುಟ್ಟಿ ಬೆಳೆದ ಮನೆಯ ಸುತ್ತಲಿನ ಕಾಡು ನಾಶವಾಗಿರುವುದು, ಅವಳ ಪರಿಸರದ ಸಂವೇದನ ಶೂನ್ಯತೆಗೆ ಸಮಾನಾಂತರವಾದ ವಿದ್ಯಮಾನವಾಗಿದೆ. ಅವಳ ಅಪ್ಪ ಅಡಿಕೆ ತೋಟದ ಸುತ್ತಲಿನ ಅನವಶ್ಯಕ (ಅಂದರೆ ಲಾಭವಿಲ್ಲದ) ಕಾಡು ಕಡಿದು ರಬ್ಬರು ತೋಟ ಎಬ್ಬಿಸಿದ್ದಾನೆ. ತೋಟದ ಹಸಿರಿನ ಸಿರಿ ಮಾಯವಾಗಿದೆ. ಕತೆಯಲ್ಲಿ ನೆಲದ ಬರಡುತನ ಮನಸಿನ ಬರಡುತನವನ್ನೇ ಪ್ರತಿಬಿಂಬಿಸುತ್ತದೆ. ಕತೆಯ ಈ ಭಾಗದ ವಿವರಗಳು, ನಿಸರ್ಗ ಮತ್ತು ಮನುಷ್ಯನ ಸಹಬಾಳ್ವೆಯ ಸಂಸ್ಕøತಿಯೊಂದರ ಅವಸಾನವನ್ನು ಸೂಚಿಸುತ್ತವೆ. ಕರಾವಳಿಯ ಕಾಸರಗೋಡು, ದಕಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಎಲ್ಲೇ ಹೋದರೂ ನಮ್ಮ ಕಣ್ಣಿಗೆ ರಾಚುವುದು ಅಡಿಕೆ, ತೆಂಗು,ರಬ್ಬರು, ಕೊಕೋ ಬೆಳೆಗಳ ಏಕತಾನ. ಕಾಡುಗಳಂತು ಯಾವತ್ತೋ ನಾಶವಾಗಿದೆ. ಈಗೀಗ ನಮ್ಮ ಮನೆ ಅಂಗಳ, ಹಿತ್ತಿಲುಗಳಲ್ಲಿ ಹುಲುಸಾಗಿ ಬೆಳೆಯುತ್ತಿದ್ದ ಗೋರಟೆ, ವಿಧವಿಧವಾದ ದಾಸವಾಳ, ಕರವೀರ, ರಥಪುಷ್ಪ, ಶಂಖಪುಷ್ಪ, ಸದಾಪುಷ್ಪ, ಅಬ್ಬಲಿಗೆ, ಸಂಜೆ ಮಲ್ಲಿಗೆ, ನಂದಿಬಟ್ಟಲು,ಸುರಿಗೆ, ಬಕುಲಗಳು ಕೂಡ ಕಣ್ಮರೆಯಗುತ್ತಿವೆ. ಕತೆಯಲ್ಲಿ ತನ್ನ ಕಲೆಯನ್ನು ಗುರುತಿಸುವವರಿಲ್ಲ ಎಂಬ ಕೊರಗಿನ ಜೊತೆ ಈ ಪರಿಸರ ನಾಶ ಕೂಡ ಶಾರ್ವರಿಯನ್ನು ಬಾಧಿಸುತ್ತದೆ. ಸಂವೇದನ ಶೂನ್ಯತೆ ಶಾರ್ವರಿ ತನ್ನ ವೈಯಕ್ತಿಕ ಬದುಕಿನಲ್ಲಿ ಮಾತ್ರ ಎದುರಿಸುತ್ತಿರುವ ಸಮಸ್ಯೆ ಮಾತ್ರವಲ್ಲ; ಅದು ಸಮಕಾಲೀನ ನಾಗರೀಕತೆಯ ದುರಂತ ಕೂಡ ಎಂಬ ಸತ್ಯವನ್ನು ಕತೆ ಹೇಳುವುದಿಲ್ಲ; ಕಾಣಿಸುತ್ತದೆ. `ಅಗೋಚರ ವಿಪ್ಲವಗಳು’ ಪ್ರಸ್ತುತ ಸಂಕಲನದ ಏಕೈಕ ರಾಜಕೀಯ ಕತೆ- ಈ ಕತೆಯನ್ನು ಹಾಗೆ ಹೆಸರಿಸಬಹುದಾದರೆ. ಕತೆಯಲ್ಲಿ ಪ್ರಾಧ್ಯಾಪಕ ಜಯರಾಜನ್ರದ್ದು ಮುಖ್ಯ ಪಾತ್ರವಾದರೂ ಕತೆಯನ್ನು ಆವರಿಸಿಕೊಂಡಿರುವುದು, ರಾಜಕೀಯ ಕಾರಣಗಳಿಗಾಗಿ ಕೊಲೆಯಾದ ತರುಣ ರಾಜೀವಲೋಚನ. ಅವನ ಕೊಲೆಗೆ ಮುನ್ನ ತನ್ನ ಊರಿನ ತಲೆ ಹೊರೆ ಕೂಲಿಗಳ ಜೊತೆ ಅವನಿಗೆ ಜಗಳವಾಗಿದೆ. ಆ ಕೂಲಿಗಳು ಮಿಲಿಟೆಂಟ್ ಎಡ ಕಾರ್ಮಿಕ ಸಂಘಟನೆಯೊಂದಕ್ಕೆ ಸೇರಿದವರು. ರಾಜೀವಲೋಚನನ ಚಿಕ್ಕಪ್ಪನಿಗೆ ಬಂದಿರುವ ಪಾರ್ಸೆಲ್ ಒಂದನ್ನು ಸಾಗಿಸುವ ಬಗ್ಗೆ ಆ ಕೂಲಿ ಆಳುಗಳು ಅವನ ಜೊತೆ ಕ್ಯಾತೆ ತೆಗೆದಿದ್ದಾರೆ. ಪಾರ್ಸೆಲ್ ಅವರ ಕೈಗೆ ಒಪ್ಪಿಸದೆ ತಾನೇ ಒಯ್ಯುತ್ತೇನೆ ಎಂದು ರಾಜೀವಲೋಚನ ಹಠ ಸಾಧಿಸಿದಾಗ ಕೂಲಿ ಆಳುಗಳು ರೊಚ್ಚಿನಲ್ಲಿ ಅವನನ್ನು ಕೊಂದೇ ಹಾಕಿದ್ದಾರೆ. ಲೇಖಕಿ ಕತೆಯಲ್ಲಿ ಕೇರಳದ ಪ್ರಚಲಿತ ರಾಜಕೀಯ ವಿದ್ಯಮಾನವೊಂದನ್ನು ಬಣ್ಣಿಸುತ್ತಿದ್ದಾರೆ. ಆ ರಾಜ್ಯದಲ್ಲಿ ಒಂದು ಕಾಲದಲ್ಲಿ ತಲೆ ಹೊರೆ ಕೂಲಿ ಕಾರ್ಮಿಕರ ಸಂಘಟನೆ ವಿಪರೀತ ಪ್ರಬಲವಾಗಿತ್ತು; ಅದರ ದುಂಡಾವರ್ತಿಯೂ ಅಷ್ಟೇ ಕುಖ್ಯಾತವಾಗಿತ್ತು. ಆರ್ಥಿಕವಾಗಿ ಆ ಕಾರ್ಮಿಕರು ಕೆಳವರ್ಗದಿಂದ ಬಂದವರಾದರೂ, ತಮ್ಮ ಸಂಖ್ಯಾ ಬಲದಿಂದಲೇ ಅವರು ಸಾಮಾನ್ಯ ಪ್ರಯಾಣಿಕರ ಮೇಲೆ ಸವಾರಿ ಮಾಡುತ್ತಿದ್ದರು. ತಮ್ಮ ತೋಳ್ಬಲದ ದಬ್ಬಾಳಿಕೆಗೆ ರಾಜೀವಲೋಚನ ಮಣಿಯಲಿಲ್ಲ ಎಂಬ ಕಾರಣಕ್ಕೆ ಕೂಲಿಯಾಳುಗಳು ಒಟ್ಟಾಗಿ ರಾಜೀವಲೋಚನನನ್ನ ಕೊಂದಿದ್ದಾರೆ. ರಾಜೀವಲೋಚನನ ಚಿಕ್ಕಪ್ಪ ಬಲಪಂಥೀಯ ಸಂಘಟನೆಯೊಂದಕ್ಕೆ ಸೇರಿದವನು ಎಂಬುದು ಅವರ ಈ ಕೃತ್ಯಕ್ಕೆ ಸೈದ್ಧಾಂತಿಕ ಸಮರ್ಥನೆಯನ್ನು ಸಹ ಒದಗಿಸಿದೆ. ಪ್ರೊ. ಜಯರಾಜನ್ ಎಡಪಂಥಿಯ ರಾಜಕೀಯ ಒಲವಿನವರು; ಕೇರಳದಲ್ಲಿ ಇಂದು ಎಡಪಂಥ ಎದುರಿಸುತ್ತಿರುವ ನೈತಿಕ ಬಿಕ್ಕಟ್ಟುಗಳ ಅರಿವು ಅವರಿಗಿದೆ. ರಾಜೀವಲೋಚನನ ಕೊಲೆ ಏನನ್ನು ಸುಚಿಸುತ್ತದೆ ಎಂಬುದನ್ನು ವಿವರಿಸುತ್ತ ಪ್ರೊ.ಜಯರಾಜನ್ ಒಂದೆಡೆ ಹೇಳುತ್ತಾರೆ,-“ದಬ್ಬಾಳಿಕೆ ತಡೆದುಕೊಳ್ಳಲಾಗದೆ ಹುಟ್ಟಿಕೊಳ್ಳುವ ವರ್ತನೆಗಳು ಕೊನೆಗೆ ತಾವೇ ದಬ್ಬಾಳಿಕೆಗಿಳಿದುಬಿಡುವುದಿದೆಯಲ್ಲ, ಅದು ನಮ್ಮ ಇವತ್ತಿನ ವ್ಯಂಗ್ಯ”. ಈ ಮಾತು, ಎಡ ರಾಜಕೀಯ ಪ್ರಬಲವಾಗಿರುವ ಕೇರಳ, ಪ.ಬಂಗಾಳಗಳಿಗೆ ಮಾತ್ರವಲ್ಲ ಸ್ಟಾಲಿನ್ನ ರಷ್ಯ ಹಾಗು ಮಾವೋನ ಚೀನಾಗಳಿಗೆ ಕೂಡ ಅನ್ವಯಿಸುತ್ತದೆ. ಪ್ರೊ.ಜಯರಾಜನ್ ಸಮಾಜವಾದ ಮತ್ತು ಮಾನವೀಯ ಅಂತಃಕರಣಗಳು ಒಂದನ್ನು ಬಿಟ್ಟು ಇನ್ನೊಂದು ಇರಲಾರದು ಎಂದು ಪ್ರಾಮಾಣಿಕವಾಗಿ ನಂಬಿದವರು ಮತ್ತು ಹಾಗೆಯೇ ಬಾಳಿದವರು. ಕತೆಯ ಕೊನೆಯಲ್ಲಿ ಅವರಿಗೆ ಆಪ್ತನಾಗಿದ್ದ ನಂಬೀಶನ ಕೊಲೆಯಾಗುತ್ತದೆ. ಹೀಗೆÉ ಒಂದು ರಾಜಕೀಯ ಕೊಲೆಯಿಂದ ಪ್ರಾರಂಭವಾಗುವ ಕತೆ ಕೇರಳಕ್ಕೆ ಇನ್ನಷ್ಟು ಕೊಲೆ ಮತ್ತು ಉಗ್ರವಾದಿತ್ವ ಕಾದಿರುವುದರ ಸೂಚನೆಯೊಂದಿಗೆ ಮುಗಿಯುತ್ತದೆ. ಕತೆ ಕೇರಳದ ಸಮಕಾಲೀನ ವಿದ್ಯಮಾನಗಳಿಂದ ತನ್ನ ವಿವರಗಳನ್ನು ಹೆಕ್ಕಿಕೊಂಡಿದ್ದರೂ ಅದರಲ್ಲಿ ರಾಜಕೀಯ ದೃಷ್ಠಿಕೋನವಿಲ್ಲ. ಪ್ರೊ.ಜಯರಾಜನ್ ಅವರ ಸ್ವವಿಮರ್ಶೆ ಮತ್ತು ಆತ್ಮ ಶೋಧನೆ ಕೇರಳಕ್ಕೆ ಈಗ ಅಗತ್ಯವಾಗಿದೆ. ಆದರೆ ಅವರು ನಿರ್ಗತಿಕ ಮಕ್ಕಳಿಗಾಗಿ ತೆರೆಯುವ ಶಾಲೆ ಅಸಮಾನತೆಗೆ ಒಂದು ಪರಿಹಾರವಾಗಲಾರದು. ಶೋಷಣೆ ಈ ಸಮಾಜದ ಒಂದು ಸ್ಥಾಯೀ ವಾಸ್ತವ; ದಾನ ಧರ್ಮ ಅದಕ್ಕೆ ಪರಿಹಾರವಲ್ಲ. ಸಂಘಟಿತ ಕಾರ್ಮಿಕರ ದುಂಡಾವರ್ತಿ ಹಾಗು ಎಡ ಸರಕಾರಗಳ ದಬ್ಬಾಳಿಕೆಗಳನ್ನು ಎದುರಿಸುತ್ತಲೇ ಅಸಮಾನತೆ ಮತ್ತು ಶೋಷಣೆಗಳ ವಿರುದ್ಧ ಹೋರಾಡಬೇಕಾದ ಅನಿವಾರ್ಯತೆ ಇದೆ. ಅನುಪಮಾ ಅವರ ಕಥೆ ಶಕ್ತಿಯುತವಾಗಿದೆ. ಸಮಕಾಲೀನ ರಾಜಕೀಯದ ದುರಂತವನ್ನು ಅದು ಯಥಾವತ್ತಾಗಿ ನಿರೂಪಿಸುತ್ತದೆ. ಆದರೆ ಸಮಕಾಲೀನ ರಾಜಕೀಯದ ಸವಾಲುಗಳನ್ನು ಅದು ಎದುರಿಸುವುದಿಲ್ಲ. ಇಷ್ಟು ಹೇಳಿದ ಮೇಲೂ, ನಾನು ಒಂದು ಸಂಗತಿಯನ್ನು ಅಗತ್ಯ ಕಾಣಿಸಬೇಕು. ರಾಜಕೀಯ ಕೊಲೆ ಒಂದು ಮಾಮೂಲು ವಿದ್ಯಮಾನ ಎಂಬ ಪರಿಸ್ಥಿತಿ ಸದ್ಯಕ್ಕೆ ಕೇರಳದಲ್ಲಿ ನೆಲೆಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಭೀಭತ್ಸವೇ ನಿತ್ಯದ ದಿನಚರಿಯಾಗಿ ಅದಕ್ಕೆ ಜನ ಒಗ್ಗಿಕೊಂಡು ಬಿಡುವ ಈ ಬರ್ಬರ ಸ್ಥಿತಿಗೆ ಕೇರಳದ ಎಡ ಹಾಗು ಬಲ ಪಕ್ಷಗಳೆಲ್ಲವೂ ಸಮಾನವಾಗಿ ಜವಾಬ್ದಾರವಾಗಿವೆ ಎಂಬುದು ಪ್ರಸ್ತುತ ಕತೆಯ ಹಿಂದಿರುವ ರಾಜಕೀಯ ಗ್ರಹಿಕೆಯಾಗಿದ್ದು ಅದರ ಜೊತೆಗೆ ನನಗೆ ಪೂರ್ಣ ಸಹಮತವಿದೆ. ತಮ್ಮ ಕಥಾ ಸಂಕಲನಕ್ಕೆ ಮುನ್ನುಡಿ ಬರೆಯುವ ಅವಕಾಶ ಕಲ್ಪಿಸಿಕೊಟ್ಟು ಅನುಪಮಾ ನನ್ನನ್ನು ಗೌರವಿಸಿದ್ದಾರೆ. ಅವರಿಗೆ ನಾನು ಕೃತಜ್ಞ. 22-5-2012 ಉಡುಪಿ. ಜಿ.ರಾಜಶೇಖರ.

Saturday, September 4, 2021

ಈ ತಿಂಗಳ ಆಕಾಶ - ಸೆಪ್ಟೆಂಬರ್ | Sky This Month - September (Kannada) with D...

Manasi Sudhir story time - Panje Mangesha Rayaru - ಗುಡುಗುಡು ಗುಮ್ಮಟ ದೇವರು

ಪ್ರೊ/ ಎಮ್ . ಜಿ. ರಂಗಸ್ವಾಮಿ - ಚಿತ್ರದುರ್ಗ ಜಿಲ್ಲೆಯಲ್ಲಿ ಬುಕಾನನ್

ರಾಷ್ಟ್ರೀಯ ಶಿಕ್ಷಣ ನೀತಿ 2020 { Read / Download Link here }

ರಾಷ್ಟ್ರೀಯ ಶಿಕ್ಷಣ ನೀತಿ 2020

Rajeshvari Tejasvi -ಪೂರ್ಣಚಂದ್ರ ತೇಜಸ್ವಿ ನೆನಪುಗಳು

Sunday, August 29, 2021

ನಿತ್ಯಾನಂದ ಬಿ ಶೆಟ್ಟಿ - ಮಾರ್ಗಾನ್ವೇಷಣೆ { ಸಾಹಿತ್ಯ ಸಂಶೋಧನೆಯ ರೀತಿ ನೀತಿ -2021 }NITHYANANDA B SHETTY

ಮಾರ್ಗಾನ್ವೇಷಣೆ { ಸಾಹಿತ್ಯ ಸಂಶೋಧನೆಯ ರೀತಿ ನೀತಿ } - ಬಿ. ನಿತ್ಯಾನಂದ ಶೆಟ್ಟಿ MARGANVESHANE { KANNADA }<-An Introduction to Kannada Literary research } Author - Nithyananda B shetty Publisher -Arathi N Shetty , BESUGE PUBLICATIONS Address - BESUGE -HOSAHALLI ROAD,DIBBURU POST-572106 - PHONE-9353877377 EMAIL-1besugetrust@gmail.com Price-rs 350 First impression-2021

Tuesday, August 24, 2021

ಎಚ್ . ಎಸ್ . ವೆಂಕಟೇಶಮೂರ್ತಿ - ಭಕ್ತಿ ಕೇವಲ ಶರಣಾಗತಿಯೇ ?: Dr. H.S. Venkateshamoorthy

ರಹಮತ್ ತರೀಕೆರೆ - ಸೂಫಿ ಪಂಥದ ಪ್ರಮುಖ ತಾತ್ವಿಕ ನೆಲೆಗಳು : Rahamath Tarikere

ರಾಜ್ಯದೆಲ್ಲೆಡೆ ಭಾಷಾ ಪ್ರಾಧ್ಯಾಪಕರು ಕಂಗಾಲು! | Udayavani – ಉದಯವಾಣಿ/National Education Policy

ರಾಜ್ಯದೆಲ್ಲೆಡೆ ಭಾಷಾ ಪ್ರಾಧ್ಯಾಪಕರು ಕಂಗಾಲು! | Udayavani – ಉದಯವಾಣಿ

ರಘುನಾಥ ಚ. ಹ ವಿಧ್ವಂಸಕ ಗುಣದ ಬುಲ್ಡೋಜರ್ ವಿಮರ್ಶೆ /Raghunath

ವಿಧ್ವಂಸಕ ಗುಣದ ಬುಲ್ಡೋಜರ್ ವಿಮರ್ಶೆ | Prajavani

ವಿಜ್ಞಾನೇಶ್ವರನ ಮಿತಾಕ್ಷರ ---------------- Vijnaneshwara's Mitakshara ----...

Sunday, August 15, 2021

ಗಿರಿಜಾ ಶಾಸ್ತ್ರಿ - ಡಿ. ಆರ್. ನಾಗರಾಜ್ ಎಂಬ ರೂಪಕ/ D. R. NAGARAJ

ಡಿ.ಆರ್. ಎನ್ ಎಂಬ ರೂಪಕ ಮೆಷ್ಟ್ರರ ಹುಟ್ಟು ಹಬ್ಬದ ನೆನಪಿಗೆ 1979 ಜೂನ್ ಜುಲೈ ತಿಂಗಳು. ನಾವು ಕನ್ನಡ ಎಂ.ಎ.ಗೆ ಸೇರಿದ ಹೊಸತು. ಒಂದು ದಿನ ಉದ್ದನೆಯ, ಗಡ್ಡ ಧಾರಿಯಾದ ‌ಶ್ಯಾಮಲವರ್ಣದ ವ್ಯಕ್ತಿಯೊಬ್ಬರು ತರಗತಿಗೆ ಬಂದರು. ಕನ್ನಡಕದ ಹಿಂದೆ ಉಜ್ವಲವಾಗಿ ಹೊಳೆಯುವ ಅಗಲ ಕಣ್ಣುಗಳು. ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ಪರಿಚಯಾತ್ಮಕ ತರಗತಿ ಎಂದೆನಿಸುತ್ತದೆ. ತಲೆಯೊಳಗೆ ಏನೂ ಹೊಗಲಿಲ್ಲ. ಕನ್ನಡ ಮಾತನಾಡುತ್ತಿದ್ದಾರೆ ಎಂದೇ ಎನಿಸಲಿಲ್ಲ. ವಿಶಿಷ್ಟ ಶಬ್ದಾರ್ಥಕೋಶ, ವಿಶಿಷ್ಟ ಐಡಿಯಾಲಜಿ ತರಗತಿಯಿಂದ ಹೊರಗೆ ಬಂದಾಗ ಎಲ್ಲವೂ ಅಯೋಮಯ. ನಾಲ್ಕೂ ಬದಿಗೆ ಸುತ್ತಲೂ ತರಗತಿಗಳು, ಅಧ್ಯಾಪಕರ ಕೊಠಡಿಗಳು. ಮಧ್ಯೆ ಕುವೆಂಪು ಅವರ ಕುಪ್ಪಳಿಯ ಮನೆಯಲ್ಲಿರುವ ಹಾಗೆ ಅಗಲ ತೊಟ್ಟಿ. ಅಲ್ಲಿ ಹುಲ್ಲು ಬೆಳೆದಿತ್ತು. ಮೂಲೆಗಳಲ್ಲಿ ಅಲ್ಲಲ್ಲಿ‌ ಶಾಸನ ಕಲ್ಲುಗಳನ್ನು ನೆಡಲಾಗಿತ್ತು. ತರಗತಿಯ ಯಾವುದೋ ಒಂದು ಕೋಣೆಯಿಂದ ಹೊರಬಂದು, ಆ ಕಟ್ಟೆ ಇಳಿದು ಮ್ಯಾಕ್ಸಿ ತೊಟ್ಟ ಹುಡುಗಿಯೊಬ್ಬಳು ನಮ್ಮ ಬಳಿಗೆ ಧಾವಿಸಿ ಬಂದು "ಹೇಗಿತ್ರೇ ಡಿ.ಆರ್.ಎನ್ ಕ್ಲಾಸು? "ಎಂದಳು. ಹೀಗೆ ಕೇಳಿದ ಹುಡುಗಿ ಬೇರಾರು ಅಲ್ಲ ನಮ್ಮ ಸೀನಿಯರ್ ತರಗತಿಯಲ್ಲಿದ್ದ ಕಮಲಾ- ಇಂದಿನ ಈ ಫೇಸ್ ಬುಕ್ಕಿನ ಹೀರೋಯಿನ್ ಕಮಲಾ ಮೇಟಿಕುರ್ಕಿ. "ಕಲ್ಕಿ ಕಲ್ಕಿ ಎನ್ನುತ‌ ಚೀರಿ ಕನಸೊಡೆದೆದ್ದೆ ಇನ್ನೆಲ್ಲಿಯ ನಿದ್ದೆ"..... "ನೆನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು......ಪೋಲೀಸರ ದೊಣ್ಣೆಗಳು ಏಜಂಟರ ಕತ್ತಿಗಳು....." ಡಿ.ಆರ್ ಎನ್ ಅವರು ನಮಗೆ ಕುವೆಂಪು ಅವರ ಕವಿತೆಗಳ ಸಂಕಲನ 'ಕೋಗಿಲೆ ಮತ್ತು ಸೋವಿಯತ್ ರಷ್ಯಾ' ಪಾಠಮಾಡುತ್ತಿದ್ದರು. ಆಧುನಿಕ ಕನ್ನಡ ಸಾಹಿತ್ಯದಲ್ಲಿ ವಿದ್ರೋಹದ ಸಾತತ್ಯದ ರೂಪವನ್ನು ಬಯಲಿಗೆಳೆಯುತ್ತಿದ್ದರೆನಿಸುತ್ತದೆ. ನನಗೋ ಕನ್ನಡ ಸಾಹಿತ್ಯದ ಅ.ಬ.ಕ. ಗೊತ್ತಿರಲಿಲ್ಲ. ಬಿ.ಎ. ತರಗತಿಯಲ್ಲಿ ಐಚ್ಛಿಕ ವಿಷಯವಾಗಿ ಮಾತ್ರ ಕನ್ನಡ ಸಾಹಿತ್ಯವನ್ನು ಓದಿದ್ದೆ. ಕುಮಾರವ್ಯಾಸ, ಭಾಸನ ನಾಟಕಗಳು, ನವ್ಯ ವಿಮರ್ಶೆ ( ಗಿರಡ್ಡಿ ಗೋವಿಂದರಾಜ), "ಜೈಸಿದನಾಯ್ಕ" ಮುಂತಾದ ಪುಸ್ತಕಗಳನ್ನು ಪರೀಕ್ಷೆಗಾಗಿ ಓದಿದ್ದೆನೇ ಹೊರತು ನನಗೆ ನಿಜವಾಗಿ ಕನ್ನಡ ಸಾಹಿತ್ಯದ ಬಗ್ಗೆ ಗಂಭೀರವಾದ ಆಸಕ್ತಿ ಇರಲಿಲ್ಲ. ಆದ್ದರಿಂದಲೇ ಕುವೆಂಪುವನ್ನೂ, ಸಿದ್ದಲಿಂಗಯ್ಯನವರನ್ನು ಸೇರಿಸಿಯೇ ಓದಿಕೊಂಡುಬಿಟ್ಟಿದ್ದೆ. ನವೋದಯ, ನವ್ಯ ಗೊತ್ತಿರಲಿಲ್ಲ. ಬಂಡಾಯವಂತೂ ಮೊದಲೇ ಗೊತ್ತಿರಲಿಲ್ಲ. ಯಾಕೆಂದರೆ ಬಂಡಾಯ ಆಗ ತಾನೇ ಕಣ್ತೆರೆಯುತಿತ್ತು. 'ಹೋರಾಟದ ಸಾಗರದೊಳ'ಕ್ಕೆ ನಮ್ಮನ್ನು ಅನಾಮತ್ತು ತಳ್ಳಿಬಿಟ್ಟವರಲ್ಲಿ ಡಿ.ಆರ್.ಎನ್ ಜೊತೆಗೆ, ಸಿದ್ಧಲಿಂಗಯ್ಯ, ಕಾಳೇಗೌಡ ನಾಗವಾರ, ಬರಗೂರು ರಾಮಚಂದ್ರಪ್ಪ, ಮುಂತಾದ ಗುರುಗಳಿದ್ದರು. ಪಕ್ಕದ ಇತಿಹಾಸ ವಿಭಾಗದಿಂದ ಚಂದ್ರಶೇಖರ್, ಹೊರಗಿನಿಂದ ಸಿ.ಜಿ.ಕೃಷ್ಣ ಸ್ವಾಮಿ ಮುಂತಾದವರು ಆಗಾಗ್ಗೆ ವಿಭಾಗಕ್ಕೆ ಬರುತ್ತಿದ್ದರು. ಡಿ ಆರ್‌ಎನ್ ಎಂದರೆ ಈ ಎಲ್ಲಾ ಪಟಾಲಂನ್ನು ಜೊತೆಗೇ ಸುತ್ತಿಕೊಂಡು ತಿರುಗುವ ಸೂರ್ಯನ ಹಾಗಿದ್ದರು. ನಾವು ಕೂಡ ಗಿರಗಿರನೆ ಸುತ್ತುತ್ತಿದ್ದೆವು. ನಾನು ಇಂಗ್ಲಿಷ್ ಎಂ.ಎ. ಮಾಡುವಾಗ ಓದಿದ ಇಂಗ್ಲಿಷ್ ಸಾಹಿತ್ಯಕ್ಕಿಂತ ಕನ್ನಡ ಎಂ.ಎ. ಕಲಿಯುವಾಗ ಓದಿದ ಇಂಗ್ಲಿಷ್ ಸಾಹಿತ್ಯವೇ ಹೆಚ್ಚು. ಕನ್ನಡ ಸಾಹಿತ್ಯದ ನೆಪದಲ್ಲಿ ಜಾಗತಿಕ ಸಾಹಿತ್ಯದ ಪರಿಚಯವಾದದ್ದು ಕನ್ನಡ ಅಧ್ಯಯನ ಕೇಂದ್ರದಲ್ಲೇ. "ಸ್ನಾನ ಮಾಡಿಕೊಂಡು ಬಂದ ಅನ್ನಾ ತನ್ನ ಕೂದಲನ್ನು ಒಣಗಿಸಿಕೊಳ್ಳುತ್ತಿದ್ದಾಗ ಅವಳ ಕೈಬೆರಳುಗಳ ಸೌಂದರ್ಯವನ್ನು ನಿಮಗ್ನವಾಗಿ ವರ್ಣಿಸುವುದನ್ನು ನೋಡಿದರೆ, ಅನ್ನಾಳ ನಿಜವಾದ ಪ್ರೇಮಿ ವ್ರೋನ್ಸ್ ಕಿ ಅಲ್ಲ, ಅದು ಟಾಲ್ ಸ್ಟಾಯೇ" ! ಡಿ.ಆರ್ ಎನ್ ಅವರು ಮಲೆಗಳಲ್ಲಿ ‌ಮದುಮಗಳು ಪಾಠಮಾಡುತ್ತಿದ್ದಾಗ ಅವರು ಟಾಲ್ ಸ್ಟಾಯ್ ಬಗ್ಗೆ ಹೇಳುತ್ತಿದ್ದಾರೋ ಇಲ್ಲ ಕುವೆಂಪು ಬಗ್ಗೆ ಹೇಳುತ್ತಿದ್ದಾರೋ? ಕನ್ನಡ ಸಾಹಿತ್ಯದ ‌ಪ್ರಾಥಮಿಕ ಶಾಲೆಯಲ್ಲಿದ್ದ ನನಗೆ ಅನುಮಾನಬರುತ್ತಿತ್ತು. ಸಾಂಸ್ಕೃತಿಕ ಸಮಾನಾಂತರತೆ ಎಂದರೆ ಏನೆಂಬುದು ತಲೆಗೆ ಹೊಗುತ್ತಿರಲಿಲ್ಲ. ಅವರು ತೀವ್ರವಾಗಿ ವ್ಯಾಖ್ಯಾನಿಸುತ್ತಿದ್ದ ಟ್ಯಾಗೋರ್ ‌ಅವರ' Later poems' ಅಂತೂ ನನಗೆ ಕಬ್ಬಿಣದ ಕಡಲೆಯೇ ಆಗಿತ್ತು. "ಮನುಷ್ಯ ಕೆ ರೂಪ್,‌ ನನ್ನಜ್ಜನಿಗೊಂದು ಆನೆ‌ ಇತ್ತು, ಪಾತುಮ್ಮಳ ಆಡು ಮತ್ತು ಬಾಲ್ಯಕಾಲ ಸಖಿ, ಸಾಹಿಬ್ ಬೀಬಿ ಔರ್ ‌ಗುಲಾಮ್ , ಏಣಿ ಮೆಟ್ಟಿಲುಗಳು" ಹೀಗೆ ನಮಗೆ ಅರೆದು ಕುಡಿಸಿದ ಇನ್ನೂ ಎಷ್ಟೋ ಪಠ್ಯಗಳು ಈಗ ನೆನಪಿಗೆ‌ ಬಾರವು. ಒಮ್ಮೊಮ್ಮೆ ಅವರು ತಮ್ಮ ಹಾಸ್ಟೆಲ್ ರೂಮಿನಲ್ಲೋ, ಸೆಂಟ್ರಲ್ ಕಾಲೇಜಿನ ಮರದಡಿಯಲ್ಲೋ ನಮಗೆ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಅವರ ಹಾಸ್ಟೆಲ್ ರೂಮಿನಲ್ಲಿ ಇದ್ದದ್ದು ಒಂದು ಮಂಚ ಮತ್ತು ಒಂದ.ಕುರ್ಚಿ. ಮಂಚದ ಮೇಲೆ ಹುಡುಗರೆಲ್ಲಾ ಕುಳಿತುಕಡೊಂಡು ಬಿಡುತ್ತಿದ್ದರು. ನಾವು ಹುಡುಗಿಯರು ನೆಲದ ಮೇಲೆ ವಿಧೇಯವಾಗಿ‌ ಕುಳಿತುಕೊಳ್ಳುತ್ತಿದ್ದೆವು. ಮೇಷ್ಟ್ರ ಗಮನ ಎಷ್ಟು ಸೂಕ್ಷ್ಮವಾಗಿ ಇರುತ್ತಿತ್ತೆಂದರೆ "ಮೇಲೆ ಕೂತ್ಕೋಳ್ಳದನ್ನ ಕಲಿಬೇಕ್ರೀ" ಎಂದು ಹೇಳುತ್ತಿದ್ದರು. ಇನ್ನೊಮ್ಮೆ ಅವರ ಮನೆಗೆ ಹೋದಾಗ "ರೇಷ್ಮೆ ಸೀರೆ ಉಡುವುದನ್ನು ನಿರಾಕರಿಸಬೇಕ್ರಿ" ಎಂದಿದ್ದರು. ಹುಡುಗಿಯರು ಸರಳವಾಗಿರುವುದನ್ನು, ‌ಸಬಲವಾಗಿರಬೇಕೆನ್ನುವ ಪಾಠ, ನಮಗೆ ಪಠ್ಯವಲ್ಲದೇ, ತರಗತಿಯ ಹೊರಗೆ ಅವರ ಜೊತೆಗೆ ನಡೆಸುವ ಮಾತುಕತೆಗಳ ಮೂಲಕವೂ ದೊರಕುತ್ತಿತ್ತು. ನಾನು ಬಿ.ಎ. ಓದುವಾಗಲೇ ಸನಾತನ ಧರ್ಮ, ಪಾವಿತ್ರ್ಯ ಅಲೌಕಿಕ ಸತ್ಯ ಹೀಗೆ ಏನೇನೋ ಅಸಂಬದ್ಧ ಪ್ರಲಾಪಗಳನ್ನು ಒಂದು ನೋಟ್ ಬುಕ್ಕಿನಲ್ಲಿ ಬರೆದಿದ್ದೆ. ಅವುಗಳನ್ನು ಕವಿತೆಗಳೆಂದು ನನಗೆ ನಾನೇ ಕರೆದುಕೊಂಡುಬಿಟ್ಟಿದ್ದೆ. ಒಮ್ಮೆ ಡಿ.ಆರ್.ಎನ್ ಅವರ ಕೈಯಲ್ಲಿ ಆ ನೋಟ್ ಪುಸ್ತಕ ವನ್ನಿಟ್ಟು ಅವರ ಅಭಿಪ್ರಾಯ ಕೇಳಿದ್ದೆ. ಸ್ವಲ್ಪ ದಿನಗಳಾದವು ಮೇಷ್ಟ್ರು ಸಿಕ್ಕಾಗಲೆಲ್ಲಾ ನನ್ನ ಕವಿತೆಗಳನ್ನು ಹೊಗಳಿಯಾರೆಂಬ ಆಸೆ. ಕಾಯುತ್ತಿದ್ದೆ. ನನಗೆ ಯಾವತ್ತೂ ರಿಜೆಕ್ಟ್ ಆಗುವ‌ ಭಯ ಒಳಗೊಳಗೇ ಕಾಡುತ್ತಿದ್ದರೂ ಭಂಡ ಧೈರ್ಯ ಮಾಡಿ ನಾಲ್ಕೈದು ಬಾರಿ 'ಕವಿತೆಗಳ' ಬಗ್ಗೆ ಕೇಳಿದ್ದೆ. ಕೊನೆಗೆ ಒಮ್ಮೆ ಕರ್ನಾಟಕಾನ ಗ್ರಂಥಾಲಯದ ಮೇಲೆ ‌ಭೂತಬಂಗಲೆಯಂತಿದ್ದ ಅವರ ಕೋಣೆಯೊಳಗೆ ನುಗ್ಗಿ ಬಿಟ್ಟೆ. ಅವರ ಎದುರಿನ ಕುರ್ಚಿಯಲ್ಲಿ ಕೂರಲು ಹೇಳಿದರು. ಬೇರೆಯವರ ಕೆಲವು ಸಶಕ್ತ ಕವಿತೆಗಳನ್ನು ಓದಿದರು. ಏನೂ ಹೇಳದೆ ನನ್ನ ಪುಸ್ತಕ ನನಗೆ ಮರಳಿ ಕೊಟ್ಟರು. ಮನೆಗೆ ಬಂದವಳೇ ಅದನ್ನು ನೀರೊಲೆಯೊಳಗೆ ಹಾಕಿಬಿಟ್ಟೆ. ಬದುಕಿನ ವಾಸ್ತವ ಅನುಭವಗಳ ಆಧಾರವಿಲ್ಲದ ಆ ನನ್ನ 'ಸನಾತನ ಮೌಲ್ಯಗಳು' ಉರಿದು ಬೂದಿಯಾಗಿ ಹೋದವು. ಎಂ.ಎ. ಎರಡನೆಯ ವರುಷದ ಕೊನೆಗೆ ಬಂದಾಯಿತು. ಸ್ನೇಹಿತರಾದ ಕೃಷ್ಣಮೂರ್ತಿ ಮತ್ತು ಗೀತಾಚಾರ್ಯ ಅವರ ಸಂಪಾದಕತ್ವದಲ್ಲಿ "ಸಂವಾದ" ಎನ್ನುವ ಅಧ್ಯಯನ ಕೇಂದ್ರದ ಕನ್ನಡ ಸಂಘದ ಪತ್ರಿಕೆ ಪ್ರಕಟವಾಯಿತು. ಅದಕ್ಕೆ ನನ್ನ ಹೊಸ ಕವಿತೆಯೊಂದನ್ನು , ಅದು ತಿರಸ್ಕೃತವಾಗಬಹುದೆಂಬ ಅನುಮಾನದಿಂದಲೇ ಕೊಟ್ಟಿದ್ದೆ. ಒಂದು ದಿನ ಹೀಗೆಯೇ ನಾವೆಲ್ಲಾ ಗೆಳತಿಯರು ತರಗತಿಯ ಕಟ್ಟೆಯೇಲೆ ಕುಳಿತಿದ್ದೆವು. ಎದುರಿಗೇ ಡಿ.ಆರ್ ಎನ್ ಅವರ ಸ್ಟ್ಯಾಫ್ ರೂಂ. ಯಾರೋ ಬಂದು ಡಿ.ಆರ್.ಎನ್ ಮೇಷ್ಟ್ರು ಕರೆಯುತ್ತಿದ್ದಾರೆಂದು ನನಗೆ ಹೇಳಿದರು. ನಾನು ಒಳಗೆ ಹೋದೆ . ಅವರ ಕೈಯಲ್ಲಿ ಸಂವಾದ ಪತ್ರಿಕೆ ! "ಚೆನ್ನಾಗಿ ಬರೆದಿದ್ದೀರಲ್ರೀ" ಎಂದರು. ನನಗೆ ತಲೆ ಗಿರ್ರನೆ ತಿರಗುವಂತಾಯ್ತು.,"keep it up" ಎಂದರು. ಅದೇ ನನ್ನ ಮೊದಲ ಕವನ ಸಂಕಲನದ ಮೊದಲ ಕವಿತೆಯಾಯಿತು "ಹೆಣ್ಣೊಬ್ಬಳ ದನಿ" ಎಂದು ಅದಕ್ಕೆ ಹೆಸರಿಟ್ಟೆ. ಸುಖಸಾಗರ್ ಹೊಟೆಲ್ ನಲ್ಲಿ ಎಂ.ಎ. ವಿದಾಯ ಕೂಟ ಮುಗಿದು ಹೊರಟಾಗ, ನನ್ನ ಬಳಿ ಬಂದು ‌" you are an intelligent girl" ಎಂದಿದ್ದರು. ನನಗೆ ಕೋಡು ಮೂಡಿತ್ತು!!! ಕನ್ನಡ ಅಧ್ಯಯನ ಕೇಂದ್ರದ ಎರಡು ‌ವರುಷಗಳ ಅನುಭವ ಕೊಟ್ಟ ಸಂಸ್ಕಾರ ವಿಶಿಷ್ಟವಾದುದು. ಮಹತ್ವವಾದುದು. ಮಾನವೀಯ ಮೌಲ್ಯಗಳ ಜಾಡು ಹಿಡಿಸಿದ ವಿಭಾಗವನ್ನೂ ಅಲ್ಲಿನ ಗುರುಗಳನ್ನೂ ನಾನು ಮರೆಯುವಂತೆಯೇ ಇಲ್ಲ. ಎಂ. ಎ. ಮುಗಿದನಂತರವೂ ಡಿ.ಆರ್.ಎನ್ ಮೇಷ್ಟ್ರ ಮನೆಗೆ ಅನೇಕ ಬಾರಿ ಹೋಗಿದ್ದೇನೆ. ಅವರ ಪಾಠ ಕೇಳಲು ಜೀವ ಬಿಡುತ್ತಿದ್ದವರು ಎಷ್ಟೋ ಮಂದಿ. ಅವರಲ್ಲಿ ನನ್ನ ಸಹಪಾಠಿ ಗಿರಿಜಾ ಕೂಡ ಒಬ್ಬಳು. ಅವಳು ಎಷ್ಟು ಗಟ್ಟಿಗಿತ್ತಿಯಂದರೆ ಕೊನೆಗೆ ಅವರನ್ನೇ ಜೀವನದ ಸಂಗಾತಿಯನ್ನಾಗಿಸಿಕೊಂಡುಬಿಟ್ಟಳು. ಶಂಕರಾಚಾರ್ಯ, ನಾಗಾರ್ಜುನ ಕುರಿತ ಅವರ ಶಾಸ್ತ್ರಾರ್ಥಗಳು, ಸಂವಾದಗಳು, ಅಲ್ಲಮನ ಬಗಗೆ ಚರ್ಚೆಗಳು, ಅಭಿನವಗುಪ್ತನ ಚಿಂತನೆ,ಗೃಹವಾದಿನಿ ಮತ್ತು ಬ್ರಹ್ಮವಾದಿನಿ ಕುರಿತಾದ ಸ್ತ್ರೀವಾದದ ಹೊಸನೆಲೆ, ಶಕ್ತಿ ಶಾರದೆಯ ಮೇಳ ಮುಂತಾದವು ಕನ್ನಡ ಸಾಹಿತ್ಯದಲ್ಲಿ ಬಹಳ ಪ್ರಸಿದ್ಧವಾಗಿವೆ. ನನಗೆ ಇವುಗಳನ್ನು ಓದಿ ಪೂರ್ತಿಯಾಗಿ ಅರಗಿಸಿಕೊಳ್ಳುವ ಸಾಮರ್ಥ್ಯ ಇನ್ನೂ ಬಂದಿಲ್ಲ. ಇನ್ನು ಬರುವುದೂ ಕಾಣೆ! ತಮಿಳು ಕಾವ್ಯ ಮೀಮಾಂಸೆಯ ಹಾಗೆ ಪ್ರತ್ಯೇಕವಾದ ಕನ್ನಡ ಸಾಹಿತ್ಯ ಮೀಮಾಂಸೆಯೊಂದು ಇರಬೇಕೆಂದು ಪ್ರಯತ್ನಿಸಿದ ಮೊದಲಿಗರಲ್ಲಿ ಅವರೂ ಒಬ್ಬರು. ಸಾಹಿತ್ಯ ವಿಮರ್ಶೆಗೆ ಹೊಸ ರೂಪ ತೊಡೆಸಿದವರು. 'ಬಂಡಾಯ ಸಾಹಿತ್ಯ' ವೇದಿಕೆ ಹತ್ತಿದ ಮೊದಲ ದಿನಗಳಲ್ಲಿ ತಮ್ಮ ಸಹೋದ್ಯೋಗಿಗಳ ಜೊತೆ ಅವರ ಲಗುಬಗೆಯ ಓಡಾಟ ಕಣ್ಣಿಗೆ ಕಟ್ಟಿದಂತಿದೆ. ಅಂತಹ ಹರಿಕಾರರೊಬ್ಬರ ಶಿಷ್ಯ ಕೋಟಿಯಲ್ಲಿ ನಾನೂ ಒಬ್ಬಳೂ ಎನ್ನುವ ಹೆಮ್ಮೆ ನನಗೆ ಎಂದಿಗೂ ಇದೆ. ಅವರೆಂದರೆ ಕಣ್ಣಿಗೆ ಕಾಣುವಷ್ಟು ವಿಸ್ತರಿಸಿಕೊಳ್ಳುವ ಸಮುದ್ರದ. ನಾವು ಮೊಗೆಯುವಷ್ಟೇ ನಮಗೆ ದಕ್ಕುವುದು. ಅಂತಹ‌ ಗುರು ಬದುಕಿದ್ದರೆ ಅವರಿಗೆ‌ ಈಗ ಅರವತ್ತೇಳು ತುಂಬುತ್ತಿತ್ತು. ಆದರೆ ಅವರು ತಮ್ಮ ನಲವತ್ತೇಳರ ವಯಸ್ಸಿನಲ್ಲೇ ವಿದಾಯ ಹೇಳಿಬಿಟ್ಟರು. ಆದರೆ ಕನ್ನಡ ಸಾಹಿತ್ಯ ವಿಮರ್ಶೆಯ ಹಾದಿಯಲ್ಲಿ ಗಾಢವಾದ ಗೆರೆ ಮೂಡಿಸಿ ನಡೆದು ಬಿಟ್ಟರು. ಸುಮಾರು ಮೂವತ್ತೈದು ವರುಷಗಳ ಹಿಂದೆ ಮುಂಬಯಿ ವಿ. ವಿ. ಕನ್ನಡ ವಿಭಾಗದಲ್ಲಿ ಶ್ರೀನಿವಾಸ ಹಾವನೂರರು ಏರ್ಪಡಿಸಿದ "ರಸ ವ್ಯಾಖ್ಯಾನ" ಕಾರ್ಯಕ್ರಮಕ್ಕೆ ಬಂದು 'ಒಡಲಾಳದ' ದ ಬಗ್ಗೆ ಮಾತನಾಡಿದ್ದರು. ನಾವು ಆಗ ಮುಂಬಯಿಯ ಮುಲುಂಡ್ ಎಂಬ ಪ್ರದೇಶದಲ್ಲಿ ಒಂದು ಬಾಡಿಗೆ‌ ಮನೆಯಲ್ಲಿದ್ದೆವು. ಆಗ ಅಲ್ಲಿಗೆ ಬಂದು ‌ನಮ್ಮ ಆತಿಥ್ಯ‌ ಸ್ವೀಕರಿಸಿದ್ದರು ಪುಟ್ಟ ಗೌರಿ ಗೋಡೆಯ ಮೇಲೆ ಬಿಡಿಸುವ ನವಿಲಿನ ಚಿತ್ರದಂತೆ ಅವರ ನೆನಪುಗಳು ಗರಿಗೆದರುತ್ತಿವೆ. ಅವರ ಸೃಜನಶೀಲತೆಯ ರೂಪಕವಾಗಿ ಹೊಳೆಯುತ್ತಿದೆ.

Sunday, August 8, 2021

ವಿವೇಕ ಶ್ಯಾನುಭಾಗ - ಸಂದರ್ಶನ Vivek Shanabhaga | Mukha Mukhi | Face To Face | Interview | Devu Pattar ...

ಸವಿತಾ ನಾಗಭೂಷಣ -- ಭಾವ ಶುದ್ದಿ ಮಾಡೋ {Savitha Nagabhushana}

ಭಾವ ಶುದ್ಧಿ ಮಾಡೋ....... ******************* ಸಿಟ್ಟು ಮಾಡಲೇನು ಬೆಟ್ಟು ತೋರಲೇನು ಗೀರಿ ಗೀರಿ ಗೀರಿ ಗಾಯಗೊಳಿಸಲೇನು.... ಹೊಡೆದು ಹಾಕಲೇನು ಬಡಿದು ಹಾಕಲೇನು ಸಿಗಿದು ಸಿಗಿದು ಸಿಗಿದು ಸಿಪ್ಪೆ ಮಾಡಲೇನು..... ನೇಣು ಹಾಕಲೇನು ಗೋಣು ಮುರಿಯಲೇನು ಉಗಿದು ಉಗಿದು ಉಗಿದು ಉರಿಯ ಹಚ್ಚಲೇನು.... ಭಂಗ ಮಾಡಿ ಲಿಂಗ ಮಾಡದಂತೆ ಸಂಗ ಬಗೆದು ಬಗೆದು ಬಗೆದು ಭಿನ್ನ ಮಾಡಲೇನು..... ಬುಸ್ಸೆಂದರೇನು ಉಸ್ಸೆಂದರೇನು ಹಲ್ಲು ಕಡಿದರೇನು ಹುಲ್ಲು ತುಳಿದರೇನು ಬೇಶಾಯಿತೇನು ಲೇಸಾಯಿತೇನು..... ಸೊಕ್ಕಿದವನ ಕುಕ್ಕಿ ಕುಕ್ಕಿ ಕುಕ್ಕಿ ಕುಕ್ಕಿ ಜೀವ ತೆಗೆದರೇನು ಗರುವ ಅಳಿವುದೇನು.... ಬಿಕ್ಕಿ ಬಿಕ್ಕಿ ಅತ್ತೆ ಮುಕ್ಕಿ ಮುಕ್ಕಿ ಸತ್ತೆ ಎಷ್ಟು ಬೆಂದರೇನು ಎಷ್ಟು ನೊಂದರೇನು ತಗ್ಗಲಿಲ್ಲ ಅವನು ಬಗ್ಗಲಿಲ್ಲ ಅವನು ತಿದ್ದಿ ತಿದ್ದಿ ತೀಡಿ ಭಾವ ಶುದ್ದಿ ಮಾಡೋ ಗುದ್ದಿ ಗುದ್ದಿ ಬುದ್ಧಿ ಭಾವ ಶುದ್ದಿ ಮಾಡೋ.... ಬೇಡಿಕೊಂಡೆ ಶಿವನ ಹಾಡಿಕೊಂಡೆ ಕವನ *★ಸವಿತಾ ನಾಗಭೂಷಣ

ರಂಗನಾಥ ಕಂಟನಕುಂಟೆ - ಕಣ್ಣಳತೆಯಲ್ಲಿ ಸುಳಿದಾಡುತ್ತಿದ್ದ ಸಾವು { ಕಿ. ರಂ. ನಾಗರಾಜ್ }

ಕಣ್ಣಳತೆಯಲ್ಲಿ ಸುಳಿದಾಡುತ್ತಿದ್ದ ಸಾವು ಮೇಶ್ಟ್ರು ಕಿರಂ ಎಂಬ ‘ಶಕ್ತಿ’ ನಮ್ಮನ್ನು ಅಗಲಿ ಇಂದಿಗೆ ಹನ್ನೊಂದು ವರ್ಶಗಳು ಕಳೆದಿವೆ. ಅವರು ಇಲ್ಲವಾಗಿ ಕನ್ನಡ ವಿದ್ವತ್ ಲೋಕ ಅನಾಥವಾಯಿತು ಎಂಬುದು ಎಶ್ಟು ನಿಜವೋ ವೈಯಕ್ತಿಕವಾಗಿ ನನಗೆ ವಿಪರೀತ ಅನಾಥ ಭಾವ ಕಾಡಿದೆ. ಇಂದಿಗೂ ಕಾಡುತ್ತಿದೆ. ಅವರು ತೋರಿದ ಸ್ವಾರ್ಥವಿಲ್ಲದ ಕಕ್ಕುಲತೆಯನ್ನು ಮತ್ತೊಬ್ಬರಿಂದ ಪಡೆಯಲಾಗದು. ಅದನ್ನು ಪಡೆಯಲು ಮನಸ್ಸು ಕೂಡ ಒಪ್ಪಿಕೊಳ್ಳದು. ವಿದ್ವತ್ ವಲಯದ ಅಸಂಖ್ಯ ಜನರ ಜೊತೆಗೆ ನಂಟಿದ್ದರೂ ಮೇಶ್ಟ್ರು ಜೊತೆಗಿನ ಆ ನಂಟು ಬೇರೆಯ ಬಗೆಯದು. ಅವರ ಮನದ ಮತ್ತು ಮನೆಯ ಬಾಗಿಲು ಸದಾ ತೆರೆದೇ ಇರುತ್ತಿತ್ತು. ಅದರೊಳಗೆ ಹೊಗಲು ಯಾವುದೇ ಅನುಮತಿ ಬೇಕಿರಲಿಲ್ಲ. ಒಂದಿಶ್ಟು ಜ್ಞಾನಾಸಕ್ತಿ, ವಿಶ್ವಾಸ, ನಂಬಿಕೆ ಮತ್ತು ಅವರ ಮಾತನ್ನು ಕೇಳಿಸಿಕೊಳ್ಳುವ ತಾಳ್ಮೆ ಹಾಗೂ ಅವರು ಇದ್ದಂತೆ ಅವರನ್ನು ಒಪ್ಪಿಕೊಳ್ಳುವ ಮನಸ್ಸಿದ್ದರೆ ಸಾಕಿತ್ತು. ಎಂತಹ ವಿಶಮ ಪರಿಸ್ಥಿತಿಯಲ್ಲಿಯೂ ಅರಿವಿನ ಕಡಲಿಗೆ ಇಳಿದುಬಿಡುತ್ತಿದ್ದರು. ವಿಶಮ ಸ್ಥಿತಿಯಲ್ಲಿಯೂ ಗಾಢಮೌನದ ಪ್ರಪಾತದಿಂದ ಮೇಲೆದ್ದು ಬಂದು ಅರಿವಿನ ಬೆಳಕಿನಲ್ಲಿ ಹೊಳೆದುಬಿಡುತ್ತಿದ್ದರು. ಅದ್ಯಾವ ಶಕ್ತಿಯೋ ಏನೋ ಮತ್ತೆ ಮತ್ತೆ ಅವರ ಬಳಿ ಕೂರುವಂತೆ ಸೆಳೆಯುತ್ತಿತ್ತು. ಸಮಯ ಸಿಕ್ಕಾಗಲೆಲ್ಲ ಯಾವ ಪೂರ್ವಾನುಮತಿಯೂ ಇಲ್ಲದೆ ಅವರ ಮನೆಗೆ ಹೋಗುತ್ತಲೇ ಇದ್ದೆ. ಈ ನಡುವೆ ಪಿಎಚ್.ಡಿ ಅಧ್ಯಯನಕ್ಕೆ ಅವರನ್ನೇ ಮಾರ್ಗದರ್ಶಕರನ್ನಾಗಿ ಪಡೆದಿದ್ದೆ. ಅವರನ್ನೇ ಮಾರ್ಗದರ್ಶಕರನ್ನಾಗಿ ಪಡೆಯುವ ಹಂಬಲದಿಂದ ಹಲವು ತಾಂತ್ರಿಕ ತೊಡಕುಗಳನ್ನು ಎದುರಿಸಿದ್ದೆ. ಮತ್ತೋರ್ವ ‘ದಿಗ್ಗಜ’ರ ಮೋಟುಕಾಲುಗಳು ತೊಡರಿಕ್ಕಿದ ಕಾರಣ ವರ್ಶಗಳ ಕಾಲ ಕಾದು ಅವರನ್ನೇ ಮಾರ್ಗದರ್ಶಕರನ್ನಾಗಿ ಪಡೆದಿದ್ದೆ. ಅವರೂ ಸಂತೋಶದಿಂದ ಒಪ್ಪಿ ಮಾಗದರ್ಶಕರಾಗಿದ್ದರು. ಇದು ಅವರನ್ನು ಮತ್ತೆ ಮತ್ತೆ ಭೇಟಿ ಮಾಡಲು, ಅವರ ಜೊತೆಗೆ ಕಾಲ ಕಳೆಯಲು ಅವಕಾಶವನ್ನು ಒದಗಿಸಿಕೊಟ್ಟಿತ್ತು. ಪಿಎಚ್.ಡಿ ಅಧ್ಯಯನದ ಅನುಭವದ ತೂಕ ಒಂದು ಕಡೆಯಾದರೆ, ಅವರ ಜೊತೆಗೆ ಕಳೆದ ಕಾಲದ ಅನುಭವ ಮತ್ತು ಪಡೆದ ಅರಿವಿನದು ಮತ್ತೊಂದು ತೂಕ. ಅವರು ಪಿಎಚ್.ಡಿ ಮಾರ್ಗದರ್ಶಕರಾಗಿದ್ದರೆಂಬುದೇ ಒಂದು ಪದವಿಗೆ ಸಮವೆನ್ನಿಸಿದೆ. ಅಂತಹ ಪದವಿಯನ್ನು ನೀಡಿ ಹೋಗಿರುವ ಕಿರಂ ಸದಾ ಕಾಡಿಸುವುದರಲ್ಲಿ ಯಾವ ಅಚ್ಚರಿಯೂ ಇಲ್ಲ. ಅವರು ಇಲ್ಲವಾದ ಮೊದಲ ದಿನಗಳಲ್ಲಿ ದಿನವೂ ನೆನಪಾಗಿದ್ದಾರೆ. ಕನಸುಗಳಲ್ಲಿಯೂ ಮತ್ತೆ ಮತ್ತೆ ಪ್ರತ್ಯಕ್ಶರಾಗಿದ್ದಾರೆ. ಅದೇನು ಕಾಂತಗುಣವೋ ಏನೋ ಅಂತು ಮೇಶ್ಟ್ರು ಕಾಡಿಸುತ್ತಲೇ ಇದ್ದಾರೆ. ಹೀಗೆ ಕಾಡುವ ಕಿರಂ ಜೊತೆಗೆ ದಶಕಗಳ ಕಾಲ ಒಡನಾಡುವ ಅವಕಾಶ ದೊರೆತದ್ದೇ ಒಂದು ಮಹತ್ವದ ಮತ್ತು ಹೆಮ್ಮೆಯ ಸಂಗತಿಯೆಂದು ಭಾವಿಸಿರುವೆ. ಹೀಗೆ ಒಡನಾಟವಿದ್ದ ಕಿರಂ ಅವರನ್ನು ಯಾವುದೇ ಅನುಮತಿಯಿಲ್ಲದೆ ಭೇಟಿ ಮಾಡಬಹುದಿತ್ತು. ಅವರು ಔಪಚಾರಿಕತೆಗೆ ಫೋನ್ ಮಾಡಿ ಬನ್ನಿ ಎಂದು ಹೇಳುತ್ತಿದ್ದರೂ ಹದಿನೈದು ವರ್ಶಗಳ ಒಡನಾಟದಲ್ಲಿ ಎಂದೂ ಫೋನ್ ಮಾಡಿ ಭೇಟಿಯಾಗಿಲ್ಲ. ಇದರಿಂದ ‘ಬಂದ ದಾರಿಗೆ ಸುಂಕವಿಲ್ಲ’ ಎಂಬಂತೆ ಎಶ್ಟೋ ಸಾರಿ ಅವರಿಲ್ಲದೆ ಸುಮ್ಮನೆ ಮರಳಿ ಬಂದದ್ದಿದೆ. ಆದರೂ ಅವರನ್ನು ಭೇಟಿಯಾಗುವಾಗ ಎಂದೂ ಫೋನ್ ಮಾಡಿ ಅನುಮತಿ ಪಡೆದು ಭೇಟಿ ಮಾಡಿಲ್ಲ. ಅನುಮತಿಯಿಲ್ಲದೆ ಭೇಟಿ ಮಾಡಿದಾಗ ಅವರೆಂದೂ ವಾಪಸ್ಸು ಕಳಿಸಿಲ್ಲ. ಕೊನೆಯ ಭೇಟಿಯೂ ಹೀಗೆಯೇ ನಡೆದಿತ್ತು. ಆಗಸ್ಟ್ 7, 2010ರಂದು ಕೂಡ ಎಂದಿನಂತೆಯೇ ಭೇಟಿ ಮಾಡಿದ್ದೆ. ಆದರೆ ಈ ಭೇಟಿಗೆ ಒಂದು ಸಂದರ್ಭ ಸೃಶ್ಟಿಯಾಗಿತ್ತು. ಅದೇನೆಂದರೆ ಆ ವರ್ಶ ನ್ಯಾಶನಲ್ ಪದವಿ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರ ಆರಂಭವಾಗಿತ್ತು. ಅಲ್ಲಿಗೆ ಕಿರಂ ಅವರು ಸಂದರ್ಶಕ ಪ್ರಾಧ್ಯಾಪಕರಾಗಿ ಹೋಗುತ್ತಿದ್ದರು. ಅಧ್ಯಯನ ಕೇಂದ್ರ ಸ್ವಾಯತ್ತವಾಗಿದ್ದ ಕಾರಣ ಅದರ ಪಠ್ಯಕ್ರಮ ಸಿದ್ದಪಡಿಸುವುದು ಮತ್ತು ಮೌಲ್ಯಮಾಪನ ಮಾಡುವುದು ಕಾಲೇಜಿನಲ್ಲಿಯೇ ನಡೆಯುತ್ತಿದ್ದವು. ಎಂ.ಎ. ತರಗತಿಗಳ ಉತ್ತರ ಪತ್ರಿಕೆಗಳಿಗೆ ಎರಡು ಮೌಲ್ಯಮಾಪನಗಳು ನಡೆಯುವ ಕಾರಣ ಬಾಹ್ಯ ಮೌಲ್ಯಮಾಪನಕ್ಕೆ ನನ್ನನ್ನು ಆಹ್ವಾನಿಸಿದ್ದರು. ಕಿರಂ ಅವರೇ ನನ್ನ ಹೆಸರನ್ನು ಸೂಚಿಸಿದ್ದರಂತೆ. ಆ ಹೊತ್ತಿಗೆ ನನ್ನ ಪಿಎಚ್.ಡಿ. ಮುಗಿದು ಅದು ಪುಸ್ತಕರೂಪದಲ್ಲಿ ಪ್ರಕಟವಾಗಿ ಸಾಕಶ್ಟು ಚರ್ಚೆಯಾಗತೊಡಗಿತ್ತು. ಹಾಗಾಗಿ ಭಾಶಾವಿಜ್ಞಾನದ ಪತ್ರಿಕೆಗಳ ಮೌಲ್ಯಮಾಪನಕ್ಕೆ ಕಾಲೇಜಿನ ಆಹ್ವಾನದ ಮೇರೆಗೆ ಭಾಗಿಯಾಗಿದ್ದೆ. ಮೌಲ್ಯಮಾಪನದ ಕೆಲಸವು ಮಧ್ಯಾಹ್ನ ಎರಡು ಗಂಟೆಯ ಹೊತ್ತಿಗೆ ಮುಗಿದಿತ್ತು. ಆ ನಂತರ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಎಚ್.ಎಸ್. ಮಾಧವರಾವ್ ಮತ್ತು ಇತರರ ಜೊತೆಗೆ ಊಟ ಮಾಡಿದೆವು. ಊಟದ ನಡುವೆ ಸಂದರ್ಶಕ ಪ್ರಾಧ್ಯಾಪಕರಾಗಿ ಆಗಮಿಸಿ ಭಾಶಾವಿಜ್ಞಾನ ವಿಶಯ ಬೋಧಿಸಲು ಮಾಧವರಾವ್ ಅವರು ಕೇಳಿದ್ದರು. ನಾನು ಬರುವುದಾಗಿ ಒಪ್ಪಿಕೊಂಡಿದ್ದೆ. ಊಟ ಮುಗಿಸಿದಾಗ ಸುಮಾರು ಮೂರು ಗಂಟೆಗಳಾಗಿದ್ದವು. ಕಿರಂ ಮೌಲ್ಯಮಾಪನಕ್ಕೆ ಬಾರದ ಕಾರಣ ಅವರನ್ನು ಭೇಟಿಯಾಗಲು ಬಯಸಿದೆ. ನ್ಯಾಶನಲ್ ಕಾಲೇಜಿನಿಂದ ಅವರ ಆರ್.ವಿ. ರಸ್ತೆಯ ಮನೆ ಕಾಲ್ನಡಿಯ ದೂರವಶ್ಟೇ ಇತ್ತು. ಹಾಗಾಗಿ ಮೌಲ್ಯಮಾಪನ ಮುಗಿಸಿ ನೇರವಾಗಿ ಮೇಶ್ಟ್ರ ಮನೆಯ ಕಡೆಗೆ ನಡೆದುಕೊಂಡೇ ಹೊರಟೆ. ಮನೆ ತಲುಪುವ ಹೊತ್ತಿಗೆ ಸಮಯ ಮೂರುಕಾಲಾಗಿತ್ತು. ಮೇಶ್ಟ್ರು ಒಬ್ಬರೇ ಮನೆಯಲ್ಲಿದ್ದರು. ಹಾಸಿಗೆಯ ಮೇಲೆ ಕೂತಿದ್ದರು. ಆದರೆ ವಿಪರೀತ ದಣಿದಂತೆ ಕಾಣುತ್ತಿದ್ದರು. ಒಂದೇ ಸಮನೇ ಬೆವರುತ್ತಲೂ ಇದ್ದರು. ಸ್ವಲ್ಪ ಹೊತ್ತಾದ ಮೇಲೆ, ‘ಸರ್, ಆರೋಗ್ಯ ಸರಿಯಿಲ್ಲವೇ?’ಎಂದೆ. ಹಾಗೇನಿಲ್ಲ. ಯಾಕೋ ಸ್ವಲ್ಪ ಅನ್‍ಈಸಿ ಕಣ್ಡ್ರೀ ಅಂದರು. ಮತ್ತೆ ಯಾಕೋ ಬೆನ್ನು ಹಿಡಿದಂತೆ ಅನ್ನಿಸುತ್ತಿದೆ ಎಂದರು. ಮತ್ತೆ, ‘ಸರ್ ಊಟವಾಯಿತೇ?’ ಎಂದೇ ಇನ್ನೂ ಇಲ್ಲ ಎಂದರು. ಸರ್, ಅಸಿಡಿಟಿ ಇರಬಹುದು. ಏನನ್ನಾದರೂ ತಿನ್ನಿ ಎಂದೇ. ಮನೆಯಲ್ಲಿ ಆಗ ಅಡಿಗೆ ಇದ್ದಂತೆ ಕಾಣಲಿಲ್ಲ. ರೆಡಿಯಿದ್ದ ಆಪಲ್ ಜೂಸ್ ಅನ್ನು ಫ್ರಿಜ್‍ನಿಂದ ತೆಗೆದರು. ಅಡಿಗೆ ಮನೆಯಿಂದ ಗ್ಲಾಸ್ ತಂದುಕೊಟ್ಟೆ. ಒಂದು ಲೋಟ ಜ್ಯೂಸ್ ಕುಡಿದರು. ಆ ನಂತರ ಕೊಂಚ ರಿಲ್ಯಾಕ್ಸ್ ಆದಂತೆ ಕಂಡರು. ಇದೆಲ್ಲಾ ಸುಮಾರು ಹೊತ್ತು ನಡೆಯಿತು. ಆದರೆ ನಿರಂತರವಾಗಿ ಬೆವರುತ್ತಲೇ ಇದ್ದರು. ನನಗೆ ಇವರ ಆರೋಗ್ಯವೇನೋ ಹದಗೆಟ್ಟಿದೆ ಎಂದು ಅನ್ನಿಸುತ್ತಲೇ ಇತ್ತು. ಆದರೆ ಅವರಿಗೆ ಏನನ್ನೂ ಹೇಳಲಾಗುತ್ತಿರಲಿಲ್ಲ. ಈ ನಡುವೆ ಮೌಲ್ಯಮಾಪನದ ಬಗೆಗೆ ಕೇಳಿದರು. ಎಲ್ಲವನ್ನೂ ವಿವರಿಸಿ ಹೇಳಿದೆ. ನಂತರ ನ್ಯಾಶನಲ್ ಕಾಲೇಜಿಗೆ ಸಂದರ್ಶಕ ಪ್ರಾಧ್ಯಾಪಕನಾಗಿ ಬರಲು ಆಹ್ವಾನಿಸಿರುವುದನ್ನು ಹೇಳಿದೆ. ‘ಒಳ್ಳೆಯದಾಯಿತು ಬಿಡ್ರಿ’ ಎಂದು ಸಂತಸಪಟ್ಟರು. ಅವರು ತೀರಿಕೊಂಡ ನಂತರ ನಾನು ನ್ಯಾಶನಲ್ ಕಾಲೇಜಿನಲ್ಲಿ ಪೂರ್ಣಾವಧಿಗೆ ಕೆಲಸಕ್ಕೆ ಸೇರಿಕೊಂಡೆ. ಅಂದು ಅವರಿಗೆ ಬೆಳಗಿನಿಂದಲೇ ಆರೋಗ್ಯ ಸರಿಯಿರಲಿಲ್ಲ. ಇದನ್ನು ಬೆಳಗ್ಗೆ ಅವರ ಜೊತೆಗಿದ್ದ ಅಪ್ಪು ಖಚಿತಪಡಿಸಿದ್ದಾರೆ. ಅವರು ಒಂದು ಬಗೆಯ ಸಂಕಟ ಮತ್ತು ಅನ್ಯಮನಸ್ಕತೆಯನ್ನು ಅನುಭವಿಸುತ್ತಿದ್ದರಂತೆ. ಬೆಳಗ್ಗೆ ತಿಂಡಿ ತಿನ್ನದೆ ಮಧ್ಯಾಹ್ನ ಒಟ್ಟಿಗೆ ಊಟ ಮಾಡುವುದಾಗಿಯೂ ಅಪ್ಪುಗೆ ತಿಳಿಸಿದ್ದರಂತೆ. ಅವರಿಗೆ ಕೆಲಸವಿದ್ದ ಕಾರಣ ಊಟದ ಸಮಯಕ್ಕೆ ಬರಲು ಸಾಧ್ಯವಾಗಿಲ್ಲವೆಂದು ಅಪ್ಪು ಹೇಳಿದರು. ಹಾಗಾಗಿ ಅಂದು ಒಬ್ಬರೇ ಮನೆಯಲ್ಲಿದ್ದು ತಮ್ಮೊಳಗೆ ನರಳಿದ್ದರೆನ್ನಿಸುತ್ತದೆ. ಸಂಜೆ ಸುಚಿತ್ರ ಸಭಾಂಗಣದಲ್ಲಿ ಬೇಂದ್ರೆಯವರ ಸಾಹಿತ್ಯದ ಕುರಿತು ಉಪನ್ಯಾಸವಿದ್ದ ಕಾರಣ ಸಂಕಟದ ನಡುವೆಯೇ ಅದಕ್ಕೂ ಸಿದ್ದವಾಗುತ್ತಿದ್ದರು. ಐದು ಗಂಟೆಯಾದ ಕಾರಣ ಮನೆಯಿಂದ ಆಟೋದಲ್ಲಿ ಹೊರಟೆವು. ಗಾಂಧಿ ಬಜಾರಿಗೆ ಬಂದು ಅಲ್ಲಿ ಅಸಿಡಿಟಿಗೆ ಮತ್ತು ಇತರೆ ಕೆಲವು ಮಾತ್ರೆಗಳನ್ನು ತೆಗೆದುಕೊಂಡು ತಿಂದರು. ನಂತರ ಅಲ್ಲಿಂದ ನೇರವಾಗಿ ಸುಚಿತ್ರಾಗೆ ತಲುಪಿದೆವು. ಆಗಲೂ ಮೇಶ್ಟ್ರು ದಣಿದೇ ಇದ್ದರು. ವಿಪರೀತ ಬೆವರುತ್ತಿದ್ದರು. ಮೇಶ್ಟ್ರನ್ನು ಸ್ವಾಗತಿಸಲು ವಿಜಯಮ್ಮ ಬಂದರು. ಅವರು ಮೇಶ್ಟ್ರನ್ನು ನೋಡಿ ಕೊಂಚ ಗಲಿಬಿಲಿಗೊಂಡರು. ಮಧ್ಯಾಹ್ನದಿಂದ ನಡೆದ ಎಲ್ಲವನ್ನು ಅವರಿಗೆ ವಿವರಿಸಿದೆ. ಅವರು ಊಟ ಮಾಡದೇ ಇದ್ದದ್ದನ್ನು ತಿಳಿಸಿದೆ. ಕೂಡಲೇ ಇಡ್ಲಿ ತರಿಸಿ ತಿನ್ನಲು ವ್ಯವಸ್ಥೆ ಮಾಡಲಾಯಿತು. ಅವರಿಗೆ ತರಿಸಿದ್ದ ಎರಡು ಇಡ್ಲಿಯಲ್ಲಿ ಒಂದನ್ನು ಮಾತ್ರ ತಿಂದರು. ಮತ್ತೊಂದು ಉಳಿಸಿದರು. ನಂತರ ಕಾಫಿ ಕುಡಿದು ಸಿಗರೇಟು ಸೇದಿದರು. ಆರು ಗಂಟೆಗೆ ಉಪನ್ಯಾಸ ಆರಂಭವಾಯಿತು. ಬೇಂದ್ರೆಯ ಸಾಹಿತ್ಯ ಕುರಿತು ದೀರ್ಘವಾಗಿ ಮಾತನಾಡಿದರು. ‘ಜೋಗಿ’ ಪದ್ಯ ಓದಿ ವಿವರಿಸಿದರು. ಎಂಟುಗಂಟೆಯವರೆಗೂ ಮಾತುಕತೆ ನಡೆಯಿತು. ಮಾತುಕತೆ ಮುಗಿಯುವ ಹೊತ್ತಿಗೆ ಮತ್ತಶ್ಟು ದಣಿದಿದ್ದರು. ಬೆವರುತ್ತಲೇ ಇದ್ದರು. ಹಾಗಾಗಿ ಅವರು ವಿಶ್ರಾಂತಿ ತೆಗೆದುಕೊಳ್ಳಲಿ ಎಂದು ಬೇಗನೆ ಮನೆಗೆ ಕರೆದುಕೊಂಡು ಬಂದೆವು. ನಾನು ಮತ್ತು ಅಪ್ಪು ಜೊತೆಯಲ್ಲಿ ಬಂದೆವು. ನಂತರ ವಾಸುದೇವಮೂರ್ತಿ ಮತ್ತು ಪ್ರದೀಪ್ ಮಾಲ್ಗುಡಿ ಬಂದರು. ಕೆಲ ಸಮಯದ ನಂತರ ವಾಸುದೇವ್ ಮತ್ತು ಪ್ರದೀಪ್ ಅವರನ್ನು ಮನೆಗೆ ಹೋಗಲು ಮೇಶ್ಟ್ರು ತಿಳಿಸಿದರು. ನಾವಿಬ್ಬರೂ ಅಲ್ಲಿಯೇ ಇದ್ದೆವು. ಅವರನ್ನು ಆಸ್ಪತ್ರೆಗೆ ಹೋಗಲು ಒಪ್ಪಿಸುತ್ತಿದ್ದೆವು. ಮನೆಗೆ ಬಂದ ನಂತರ ಅವರಲ್ಲಿ ಮತ್ತಶ್ಟು ಬಳಲಿಕೆ ಚಡಪಡಿಕೆ ಇತ್ತು. ಇದನ್ನು ಗಮನಿಸಿ ಸರ್, ಆರೋಗ್ಯದಲ್ಲೇನೋ ವ್ಯತ್ಯಾಸವಾಗಿದೆ. ಡಾಕ್ಟರನ್ನು ಭೇಟಿ ಮಾಡೋಣವೆಂದೆ. ಅವರಿಗೂ ಅದೇನನ್ನಿಸಿತೋ ಏನೋ? ಆಗಲಿ ನಡೀರಿ ಎಂದರು. ಆಟೋ ಹತ್ತಿ ಗಾಂಧಿ ಬಜಾರಿಗೆ ಬಂದೆವು. ಅಲ್ಲಿ ಅವರಿಗೆ ಯಾರೋ ಪರಿಚಯದ ವೈದ್ಯರು ಇದ್ದರಂತೆ. ಆದರೆ ರಾತ್ರಿ ಎಂಟೂವರೆ ಹೊತ್ತಿಗೆ ಪರಿಚಯದ ಕ್ಲಿನಿಕ್ ಮುಚ್ಚಿತ್ತು. ಅಲ್ಲಿಂದ ನಿಧಾನವಾಗಿ ಗಾಂಧಿ ಬಜಾರ್ ಸರ್ಕಲ್ ಬಂದೆವು. ಅಲ್ಲಿ ದಿಢೀರ್ ಕುಸಿದು ಬಿದ್ದರು! ನಾವು ಗಾಬರಿಗೊಂಡೆವು. ಕೂಡಲೇ ಪಕ್ಕದಲ್ಲಿದ್ದ ಆಟೋ ಒಳಗೆ ಮೇಶ್ಟ್ರನ್ನು ಎತ್ತಿಹಾಕಿಕೊಂಡು ಸಮೀಪದಲ್ಲಿದ್ದ ಶೇಖರ್ ಆಸ್ಪತ್ರೆಗೆ ಹೋದೆವು. ಅದೇನನ್ನಿಸಿತ್ತೋ ಮೇಶ್ಟ್ರು ಹೇಳಿದರೂ ಕೂಡ ವಾಸುದೇವ್ ಹೋಗಿರಲಿಲ್ಲ. ನಮ್ಮನ್ನೇ ಹಿಂಬಾಲಿಸಿ ಬಂದಿದ್ದರು. ಅವರೂ ಸೇರಿದಂತೆ ಆಸ್ಪತ್ರೆಗೆ ಹೋದೆವು. ಅಲ್ಲಿನ ವೈದ್ಯರು ಹೃದಯಾಘಾತ ಆಗಿರುವುದನ್ನು ಖಚಿತ ಪಡಿಸಿದರು. ಅಲ್ಲಿಯವರೆಗೂ ಪ್ರಜ್ಞಾಹೀನರಾಗಿದ್ದ ಮೇಶ್ಟ್ರರು ದಿಡೀರನೇ ಮೇಲೆದ್ದು ಕೂತರು. ಮೈಕೊಡವಿಕೊಂಡರು. ‘ನನ್ನನ್ನು ಇಲ್ಲಿಗ್ಯಾಕೆ ಕರೆತಂದಿರಿ’ ಎಂದರು. ನಾವು ಅವರಿಗೆ ಏನನ್ನೂ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ. ಎಲ್ಲರೂ ಮೌನವಾಗಿದ್ದೆವು. ನಂತರ ‘ಸರ್, ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕೆಂದು ವೈದ್ಯರು ಹೇಳಿದ್ದಾರೆ ಎಂದೆವು. ಅದಕ್ಕೆ ನನಗೇನಾಗಿದೆ? ಡಾಕ್ಟ್ರ್ ಸುಮ್ಮನೇ ಏನೇನೋ ಹೇಳುತ್ತಾರೆ ಎಂದರು. ನಾವು ಮತ್ತೂ ಒತ್ತಾಯಿಸಿದಾಗ ಮೇಶ್ಟ್ರು ಕೊಂಚ ಯೋಚಿಸಿ ಇಲ್ಲಿ ಬೇಡ. ಸೌತ್ ಎಂಡ್ ಸರ್ಕಲ್‍ನಲ್ಲಿರುವ ಬೆಂಗಳೂರು ಆಸ್ಪತ್ರೆಗೆ ದಾಖಲಾಗುವೆನೆಂದರು. ಆಗಲಿ ಎಂದು ಎಲ್ಲರೂ ಒಪ್ಪಿದೆವು. ನಂತರ ಆಚೆಗೆ ಬಂದು, ನನಗೆ ಏನೂ ಆಗಿಲ್ರಿ. ಸ್ವಲ್ಪ ಅನ್‍ಈಸಿ ಆಗಿದೆ ಅಶ್ಟೇ ಅಂದರು. ಅವರ ಜೊತೆಗೆ ಹೆಚ್ಚು ಮಾತನಾಡುವ ಹಾಗೆ ಇರಲಿಲ್ಲ. ಅವರನ್ನು ಹೇಗೋ ಒಪ್ಪಿಸಿ ‘ಸರ್, ಕೂಡಲೇ ಆಸ್ಪತ್ರೆಗೆ ದಾಖಲಾಗಲೇಬೇಕೆಂದು ಡಾಕ್ಟ್ರ್ ಹೇಳಿದ್ದಾರೆ ಎಂದೆವು. ‘ನಡೀರಿ ಹೊರಡೋಣ’ ಎಂದು ಹೇಳಿ ಹೊರಡಿಸಿಕೊಂಡು ಶೇಖರ್ ಆಸ್ಪತ್ರೆಯಿಂದ ಹೊರಟೆವು. ಆಟೋದಲ್ಲಿ ಬರುವಾಗ ಮತ್ತೆ ಮನೆಯ ಸಮೀಪದಲ್ಲಿ ಹಾದುಹೋಗುತ್ತಿದ್ದ ಕಾರಣ ‘ಮನೆಗೆ ಹೋಗಿ ನಂತರ ಆಸ್ಪತ್ರೆಗೆ ಹೋಗೋಣ’ ಎಂದರು. ಮನೆಗೆ ಹೋಗಿ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಹೋಗುವುದೆಂದು ಭಾವಿಸಿ ಮನೆಗೆ ತೆರೆಳಿದೆವು. ಮನೆಯನ್ನು ಹೊಕ್ಕವರೇ ‘ಏನ್ ಪುಟ್ದೆ, ಒಂಚೂರು ಅಕ್ಕಿಯಿಟ್ಟು ಅನ್ನ ಮಾಡಾಕಾಗಲ್ವ? ಎಂದರು. ಬಹುಶ ಹಸಿವು ಹೆಚ್ಚಾದಂತೆ ಅನ್ನಿಸುತ್ತದೆ. ಬೆಳಗ್ಗೆಯಿಂದಲೂ ಸರಿಯಾಗಿ ಏನನ್ನೂ ತಿಂದಿರಲಿಲ್ಲ. ಸುಚಿತ್ರಾದಲ್ಲಿ ಒಂದು ಇಡ್ಲಿ ತಿಂದದ್ದು ಬಿಟ್ಟರೆ ಮತ್ತೇನನ್ನೂ ತಿಂದಿರಲಿಲ್ಲ. ಮಧ್ಯಾಹ್ನ ಕುಡಿದಿದ್ದ ಆಪಲ್ ಜ್ಯೂಸ್ ಕೊಡಿ ಎಂದು ಕೇಳಿ ಒಂದು ಗುಟುಕು ಕುಡಿದರು. ನಂತರ ನೀರು ತರಲು ಹೇಳಿ ವಾಶ್ ರೂಮಿಗೆ ಹೋದರು. ಅಡಿಗೆ ಮನೆಗೆ ಹೋಗಿ ನೀರು ತರಲು ಹೋದೆ. ಮರಳಿ ಹೊತ್ತಿಗೆ ವಾಶ್ ರೂಮಿನಿಂದ ಬರುತ್ತಿದ್ದವರು ಅಲ್ಲಿಯೇ ಕುಸಿದು ಬಿದ್ದರು. ಕುಡಿದ ಆಪಲ್ ಜ್ಯೂಸ್ ವಾಂತಿಯಾಯಿತು. ಎರಡನೇ ಬಾರಿಗೆ ಕುಸಿದು ಬಿದ್ದರು. ತಂದ ನೀರನ್ನೂ ಕುಡಿಯಲಿಲ್ಲ. ಇದನ್ನು ಕಂಡ ಕೊನೆಯ ಮಗಳು ಚಂದನ ಜೋರಾಗಿ ಕೂಗಿಕೊಂಡಳು. ನಮಗೆ ಇನ್ನಶ್ಟು ಗಾಬರಿಯಾಗಿ ಕೂಡಲೇ ಆಟೋ ತಂದು ಮೇಶ್ಟ್ರನ್ನು ಎತ್ತಿಹಾಕಿಕೊಂಡು ಬೆಂಗಳೂರು ಆಸ್ಪತ್ರೆಗೆ ಕಡೆ ತೆರಳಿದೆವು. ಸ್ವಾದೀನ ಕಳೆದುಕೊಂಡು ಕುಸಿದು ಬಿದ್ದವರನ್ನು ಎತ್ತುವುದು ಅದೆಶ್ಟು ಕಶ್ಟದೆಂದೂ ಆಗ ಅರ್ಥವಾಯಿತು. ಅಪ್ಪು ಜಾಧವ್ ಮತ್ತು ನಾನು ಅವರನ್ನು ಎತ್ತಿಕೊಂಡು ಆಟೋದಲ್ಲಿ ಮಲಗಿಸಿಕೊಂಡೆವು. ಅವರು ನಮ್ಮ ತೊಡೆಯ ಮೇಲೆ ಮಗುವಿನಂತೆ ಮಲಗಿದ್ದರು. ದೇಹ ತಣ್ಣಗಾಗುತ್ತಲೇ ಇತ್ತು. ಮಂಕುಬಡಿದವರಂತಿದ್ದ ನಾವಿಬ್ಬರು ಆಸ್ಪತ್ರೆ ಬಳಿ ಇಳಿದೆವು. ತುರ್ತುಘಟಕದ ಸಿಬ್ಬಂದಿ ಸ್ಟ್ರೆಚರ್ ತಂದರು. ಮೇಶ್ಟ್ರನ್ನು ಇಳಿಸಿ ಸ್ಟ್ರೆಚರ್ ಮೇಲೆ ಮಲಗಿಸಿದೆವು. ಒಳಗೆ ಹೋದ ಕೂಡಲೇ ಪರೀಕ್ಶಿಸಿದ ವೈದ್ಯರು ‘ಹಿ ಇಸ್ ನೋ ಮೋರ್’ ಎಂದರು! ನಮ್ಮ ಬಳಿ ಮಾತು ಉಳಿದಿರಲಿಲ್ಲ. ಆ ಹೊತ್ತಿಗೆ ನಾನು ಗರಬಡಿದಂತಾಗಿದ್ದೆ. ಮಧ್ಯಾಹ್ನ ಮೂರುಕಾಲಿನಿಂದ ಪ್ರತಿಕ್ಶಣವೂ ಮೇಶ್ಟ್ರ ದೇಹದ ಚಲನೆಯದೇ ಭಯವಿತ್ತು. ಎಲ್ಲವೂ ಕೈಮೀರಿ ನಡೆಯುತ್ತಲೇ ಇತ್ತು. ಆದರೆ ನಮ್ಮ ಕಣ್ಣಳತೆಯಲ್ಲಿಯೇ ಸಾವು ಸುಳಿದಾಡುತ್ತಿತ್ತೆಂದು ಕಲ್ಪಿಸಿಕೊಳ್ಳುವುದಾದರೂ ಹೇಗೆ? ಇಲ್ಲಿ ಯೋಚಿಸುವುದಕ್ಕೂ ಅಳುವುದಕ್ಕೂ ಪುರಸೊತ್ತಿರಲಿಲ್ಲ. ಮಾರನೆಯ ದಿನ ಅವರ ಶವಸಂಸ್ಕಾರವಾದ ನಂತರ ರಾತ್ರಿ ಮನೆಗೆ ಬಂದ ಮೇಲೆ ಕಣ್ಣಳತೆಯಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಳ್ಳುತ್ತಿದ್ದೆ. ಅರಿವಿಲ್ಲದೆಯೇ ಕಣ್ಣೀರು ಕೋಡಿಗರಿಯುತ್ತಿತ್ತು. ಆ ನಂತರವೇ ಮನಕ್ಕಿಡಿದಿದ್ದ ಮಂಕುತನ ಇಳಿದಿದ್ದು. ಇಂದು ಯಾಕೋ ಎಲ್ಲ ನೆನಪಾಯಿತು. ಇದನ್ನು ಬರೆಯಬೇಕೆನ್ನಿಸಿತು. ಇಂದು ಬರೆದೆ. ನಡುವೆ ಅಪ್ಪುಗೆ ಫೋನ್ ಮಾಡಿದೆ. ಎರಡು ಗಂಟೆಗಳ ಕಾಲ ಮಾತಾಡಿದೆವು. ಅಸಂಖ್ಯ ವಿಚಾರಗಳು ನಡುವೆ ಹಾದುಹೋದವು. ಮಾತಿನ ಮಧ್ಯೆ ಅಪ್ಪು ಕಣ್ಣುಗಳು ಒದ್ದೆಯಾಗುತ್ತಲೇ ಇದ್ದವು. ಅವರು ದಶಕದ ನಂತರವೂ ಇಂದು ದುಖಿಃತರಾದರು. ವಾರದಿಂದಲೂ ಕಿರಂ ಧ್ಯಾನದಲ್ಲಿಯೇ ಇರುವೆ. ಅವರು ಕಾಡುತ್ತಲೇ ಇದ್ದಾರೆ. ಇದು ಹೀಗೆಯೇ ಇರುತ್ತದೆ. ಯಾಕೆಂದರೆ ಅವರು ತಮಗೆ ಸಮನಾಗಿ ನನ್ನನ್ನು ಭಾವಿಸಿದ್ದು ಅಂತಹ ಪ್ರೀತಿ ತೋರಿಸಿದ್ದನ್ನು ಮರೆಯಲು ಹೇಗೆ ಸಾಧ್ಯ? ಹೀಗಿದೆ. ಮೇಶ್ಟ್ರ ಜೊತೆಗಿನ ನನ್ನ ಕೊನೆಯ ಭೇಟಿ. ಅವರಿಲ್ಲ. ಅವರ ವಿಚಾರ ನನ್ನೊಳಗಿವೆ. ಅವರ ವ್ಯಕ್ತಿತ್ವ ಕೈಹಿಡಿದು ಮುನ್ನಡೆಸುತ್ತಿದೆ. ಇದಲ್ಲವೇ ಅವರು ಅಸಂಖ್ಯರಲ್ಲಿ ಉಳಿಸಿಹೋಗಿರುವ ಬೆಳಕು? -ರಂಗನಾಥ ಕಂಟನಕುಂಟೆ

Tuesday, August 3, 2021

ಲಲಿತಾ ಸಿದ್ದಬಸವಯ್ಯ - " ಮತ್ತೆ ಮತ್ತೆ ಮರ್ತ್ಯಕ್ಕಿಳಿಯುತ್ತೇನೆ " { ಭಾವನಾ ಹಿರೇಮಠ }Lalta Siddabasavayya / Bhavana Hiremath /

ಪ್ರಿಯ ಭುವನಾ, ಪ್ರೀತಿಯಿಂದ ಸಂಕಲನ ಕಳುಹಿಸಿದ್ದೀರಿ. ಧನ್ಯವಾದಗಳು. ನೀವು ಒಬ್ಬ ಭರವಸೆಯ ಕವಿ ಎಂಬುದನ್ನು ಎರಡನೆಯ ಸಲ ಸಾಬೀತು ಮಾಡಿದ್ದೀರಿ. ವಿಶೇಷವೆಂದರೆ ಮೊದಲ "ಟ್ರಯಲ್......." ಸಂಕಲನದಿಂದ ಈ "ಮತ್ತೆ ಮತ್ತೆ ಮರ್ತ್ಯಕ್ಕಿಳಿಯುತ್ತೇನೆ" ಸಂಕಲನದವರೆಗೆ ನೀವೇನು ನಡೆದಿರೋ ಆ ನಡಿಗೆ ಫಲ ಕೊಟ್ಟಿದೆ. ಉದಾಹರಣೆಗೆ, ಎರಡನೆಯದರಲ್ಲಿ ನೀವು ಮತ್ತಷ್ಟು ಸ್ಪಷ್ಟರಾಗಿದ್ದೀರಿ ಮತ್ತು ಕವಿತೆಯೊಂದನ್ನು ನಿಷ್ಚಿತ ವಸ್ತುವಿನ ಪ್ರತಿಪಾದನೆಗೆ ಹೇಗೆ ಹೇಗೆ ಕವಿ ಬಾಗಿಸಬಹುದೋ ಆ ಎಲ್ಲ ಮಾರ್ಗಗಳಲ್ಲೂ ಪ್ರಯತ್ನಿಸಿದ್ದೀರಿ. ವೈಯಕ್ತಿಕ ಅನುಭವಗಳು ಕವಿತೆಯಾಗುವುದು ಕವಿಯ ಸ್ವಗತಗಳಾಗಿ ಬಿಟ್ಟರೆ ಓದುಗ ಕಕ್ಕಾಬಿಕ್ಕಿಯಾಗುವನು. ಮೊದಲ ಸಂಕಲನದಲ್ಲಿ ಆ ತೊಡಕು ಹೆಚ್ಚಾಗಿತ್ತು. ಈ ಸಂಕಲನ ಆ ಸ್ವಗತಗಳನ್ನು ಮೇಲುಹಂತಕ್ಕೇರಿಸಿ ಕವಿತೆ ಓದುಗ ಸ್ನೇಹಿಯಾಗುವಂತೆ ಮಾಡಿದೆ. ಅವು ಇನ್ನೂ ಸಂಪೂರ್ಣವಾಗಿ ಸ್ವಗತಗಳಿಂದ ಮೇಲೇರುವ ಮಾರ್ಗವನ್ನು ನೀವು ಕಂಡುಹಿಡಿದುಕೊಳ್ಳಬಲ್ಲರಿ. ನೀವು ಸಂಭಾಷಣೆ ನಡೆಸುವುದು ನಿಮ್ಮೊಂದಿಗೇ, ಲೋಕದೊಂದಿಗಲ್ಲ. ಕವಿಗಳು ಎರಡು ಬಗೆ, ತಮ್ಮೊಂದಿಗೇ ಮಾತನಾಡಿಕೊಳ್ಳುವ ಅಂತರ್ಮುಖದವರು.ಲೋಕದೊಂದಿಗೆ ನೇರ ಸಂವಾದಕ್ಕೆ ಇಳಿಯುವ ಬಹಿರ್ಮುಖದವರು. ನೀವು ಮೊದಲ ಪೈಕಿ. ಈ ಎರಡೂ ಬಗೆಗೆ ಕನ್ನಡದಲ್ಲಿ ಅತೀ ಹಳೆಯ ಉದಾಹರಣೆಗಳಾಗಿ ಪಂಪ ಮತ್ತು ನಾರಣಪ್ಪನನ್ನು ಕೊಡಬಹುದೇನೋ! ಪಂಪ ಜನಕ್ಕೊಪ್ಪಿಸುವುದಕ್ಕಿಂತ ತನ್ನ ಒಳ ಒಪ್ಪಿಗೆಗೆ ಮಹತ್ವ ಕೊಡುವವನು. ನಾರಣಪ್ಪ ಸಿಕ್ಕ ಅವಕಾಶದಲ್ಲೆಲ್ಲ ಲೋಕವನ್ನು ಒಪ್ಪಿಸಲು ತವಕಿಸುವವನು. ಅದಕ್ಕೇ ಅವನಿಗೆ ಹೆಚ್ಚು ಮಾತು ಬೇಕು. ಒಂದೇ ವಿಷಯವನ್ನು ಪರಿಪರಿಯಾಗಿ ವರ್ಣಿಸಬೇಕು. ನನ್ನಂಥವರು ಕಾವ್ಯಮಾರ್ಗದಲ್ಲಿ ನಾರಣಪ್ಪನ ಉಪಾಸಕರು. ನೀವು, ಜ.ನಾ.ತೇಜಶ್ರೀ ಮುಂತಾದವರು ಪಂಪ ಮಾರ್ಗಸ್ಥರು. ಹಾಗಾಗಿ ಪದಗಳ ಖರ್ಚು ನಿಮಗೆ ಕಡಿಮೆ. ಎರಡೂ ಮಾರ್ಗವನ್ನು ಕನ್ನಡದಲ್ಲಿ ನಾವು ಕಾಣಬಹುದು. ಒಬ್ಬ ಕವಿಯೇ ಎರಡೂ ಮಾರ್ಗದಲ್ಲಿ ನಡೆಯುವ ಸಾಧ್ಯತೆಯನ್ನೂ ನಾನು ಕಂಡಿದ್ದೇನೆ. ಈ ಮೂರು ಬಗೆಯ ಉದಾಹರಣೆಗೆ ಎಷ್ಟೊಂದು ಹೊಸಬರ ಹೆಸರುಗಳೇ ಮನದಲ್ಲಿ ಬರುತಲಿವೆ. ನಿಮ್ಮ ಭಾಷೆ ಈ ಸಂಕಲನದಲ್ಲಿ ಐನೋರ ಮನೆಯ ಹುಡುಗಿಯೊಬ್ಬಳು ಅಪ್ರಯತ್ನವಾಗಿ ಕೇಳುವ ಪರಂಪರೆಯ ನುಡಿಗಟ್ಟುಗಳನ್ನು ಚೆನ್ನಾಗಿ ಬಳಸಿಕೊಂಡಿದೆ. ಬಹುಶಃ ಕೊಂಚ ನಿಗವಿಟ್ಟು ಬರೆದರೆ ಆಧುನಿಕ ವಚನಗಳನ್ನೋ ತತ್ವಪದಗಳನ್ನೋ ನೀವು ಸಮರ್ಥವಾಗಿ ಬರೆಯಬಲ್ಲಿರಿ. ಇದಕ್ಕೆ ತದ್ವಿರುದ್ಧವಾಗಿ ಮುಲಾಜಿಲ್ಲದೆ ಇಂಗ್ಲಿಷ್ ನುಡಿಗಟ್ಟನ್ನು ಬಳಸಿ ಕನ್ನಡದ ತಂತಿಯಲ್ಲಿ ಇಂಗ್ಲಿಷ್ ಸುತ್ತುವ ಅಕ್ಕಸಾಲೆಯ ಸೂಕ್ಷ್ಮ ಕೆಲಸವನ್ನೂ ಸಮರ್ಪಕವಾಗಿ ಮಾಡಿದ್ದೀರಿ. ಇಷ್ಟಾದರೂ ನಿಮ್ಮ ಪ್ರಾದೇಶಿಕ ಮುದ್ರೆಹೊತ್ತ ಭಾಷೆಯನ್ನು ಬಳಸುವುದಿಲ್ಲವೆಂಬ ನನ್ನ ಹಳೆಯ ಆಕ್ಷೇಪವಿದ್ದೇ ಇದೆ. ಈ ಸಂಕಲನದ ಮೂಲಸ್ರೋತ ನನಗನಿಸಿದ ಹಾಗೆ ವಿಷಾದ ಮತ್ತು ವಿಷಾದ ಲೇಪಿತ ವ್ಯಂಗ್ಯ.... ಎಲ್ಲ ಕವನಗಳನ್ನು ಅದು ಒಂದಿಲ್ಲೊಂದು ಬಗೆಯಾಗಿ ನೆತ್ತಿಯನ್ನಾಕ್ರಮಿಸಿದೆ. ಸಂಕಲನದ ಬಹುತೇಕ ಕವನಗಳು ನನಗಿಷ್ಟವಾದವು. ಹೆಸರಿಸ ಹೋದರೆ ಅದೇ ಯಾದಿಯಾಗುತ್ತದೆ. ಕಾವ್ಯ ನಿಮಗೊಲಿದಿದೆ. ನಿಮ್ಮ ಮುಂದಿನ ನಡಿಗೆಗೆ ಶುಭಹಾರೈಕೆಗಳು. ಲಲಿತಾ ಸಿದ್ಧಬಸವಯ್ಯ ಜುಲೈ 31 2021, ಬೆಂಗಳೂರು. 8 Comments ವೀರೂ ವಸಂತ ಅಭಿನಂದನೆಗಳು

Tuesday, July 27, 2021

M.N. Srinivas - Sociologist- English Interview/ಎಮ್. ಎನ್. ಶ್ರಿನಿವಾಸ್ ಸಂದರ್ಶನ

90 ವರ್ಷದ ಸರಸ್ವತಿ ಭಟ್ ಹಾಡುವ 'ಜನ ಗಣ ಮನ' | ರಾಷ್ಟ್ರಗೀತೆಯ ಸಂಪೂರ್ಣ ಸಾಹಿತ್ಯ | N...

Dr. K. Shivaram Karanth - Interview In English by Pro Inamdar/ ಶಿವರಾಮ ಕಾರಂತ ಸಂದರ್ಶನ

Raghunath Krishnamachar -ಕೆ. ಸತ್ಯನಾರಾಯಣ ಅವರ " ಕಪಾಳ ಮೋಕ್ಷ "

ಕೆ.ಸತ್ಯನಾರಾಯಣ ಅವರ' ಸ್ವಭಾವ ಚಿತ್ರಗಳೆಂಬ ಕಾಲಯಾನದ ರೂಪಕಗಳು : ಈ ರೂಪಕಗಳಿಗೆ ಹಲವು ಆಯಾಮಗಳು ಇವೆ. ಅವುಗಳ ಪೈಕಿ ‌ಕೆಲವು: ೧: ಭಾಷಿಕ : ನಮ್ಮ ‌ತಲೆಮಾರು‌ ಎದುರಿಸಿದ ಪೆಡಂಭೂತಗಳಲ್ಲಿ ಇಂಗ್ಲಿಷ್ ಭಾಷೆಯು ಒಂದು. ಅದು ಹೇಗೆ ಭಯಾನಕವೊ ಹಾಗೆ ಆಕರ್ಷಕವೂ ಆದ ಮಾಯಾವಿನಿ .ಹದಿಹರೆಯದವರ ಈ ತಲ್ಲಣಗಳನ್ನು ಅವರ. ಮೂರು ಸ್ವಭಾವ ಚಿತ್ರಗಳು ಬಿಂಬಿಸುತ್ತವೆ( ನೆಹರೂ ಎಂಬ ಗೌಡರು, ಕ್ಲೋಸ್‌ ಪೇಟೆ ಅಯ್ಯನವರ ಇಂಗ್ಲಿಷ್ ಗೀಳು, ಖಾದ್ರಿ‌ಯವರ ಇಂಗ್ಲಿಷ್ ಪ್ರೀತಿಗೆ ಜೈ) ಅದರ ‌ವಿರುದ್ದ ಅವರು ನಡೆಸಿದ ಹೋರಾಟ , ನಂತರ ‌ನಡೆಸಿದ ಅನುಸಂಧಾನಗಳು ವೈನೋದಿಕ ದಾಟಿಯಲ್ಲಿ ಅಭಿವ್ಯಕ್ತಿ ಪಡೆದಿವೆ. ೨: ಸ್ತ್ರೀ ಲೋಕ: ಗರತಿಯರಿಂದ ವೇಶ್ಯೆಯವರೆಗೆ ಇವರ ವ್ಯಾಪ್ತಿ ಇದೆ. ಅಮ್ಮಯಪ್ಪ ಮತ್ತು ಶನಿವಾರದ ಸ್ವರ್ಣಾಂಬ ಗರತಿಯರಿಗೆ ನಿದರ್ಶನಗಳು. ಮೊದಲಿನದರಲ್ಲಿನ ಗರತಿ ಬದುಕಿರುವಾಗ ಗಂಡನ ಕರೆಗೆ ಕ್ಯಾರೆ ಅನ್ನದೆ ಶೃಂಗಾರದಲ್ಲಿ ತೊಡಗಿ ,ಸತ್ತ ಮೇಲೆ ಅವನ ಕರೆಗಾಗಿ ಗೋಳಾಡುತ್ತಾಳೆ. ಎರಡನೆಯದರಲ್ಲಿ ಗಂಡ ಕರೆದುಕೊಂಡು ಹೋಗಲು ಬರುವನೆಂದು ಶೃಂಗಾರ ಮಾಡಿಕೊಂಡು ಅವನ ಪ್ರತೀಕ್ಷೆಯಲ್ಲಿ ಕಳೆದ ಶನಿವಾರಗಳು ಕಡೆಗೆ ಅವನು ಬಾರದೆಯೆ ಹೋದಾಗ ಮಾಮೂಲು ಶನಿವಾರಗಳಾಗಿ ಬಿಡುವ ದುರಂತವನ್ನು ಚಿತ್ರಿಸಲಾಗಿದೆ. ಎರಡನೇ ಬಗೆಯ ಗರತಿಯರಲ್ಲಿ ಎರಡನೇ ಹೆಂಡತಿಯರು ಬರುತ್ತಾರೆ. ಅದು ಬಹುತೇಕ ಗಂಡಸರಿಗೆ ಒಂದು ಪ್ರತಿಷ್ಠೆಯ ಸಂಗತಿ. ಕೆಲವು ಮಾಡೆಲ್ ಗಳಿಗೆ ಎರಡನೇ ‌ಹೆಂಡತಿ ಎನಿಸಿಕೊಳ್ಳಲು ಪೈಪೋಟಿ. ಮೂರನೆಯ ಹಂತದಲ್ಲಿ ಬರುವ ವೇಶ್ಯೆ ಗರತಿಯಾಗಿ ಇರಲು ಬಿಡದ ಸಮಾಜ ಅವಳು ಅನಿವಾರ್ಯವಾಗಿ ವೇಶ್ಯೆಯಾದಾಗ ಅವಳ ಬಳಿಗೆ ಗರತಿಯರು ತಮ್ಮ ಸಂಸಾರವನ್ನು ನೇರ್ಪುಗೊಳಿಸಲು ಸಲಹೆಗಾಗಿ ಬರುವ ವೈಪರೀತ್ಯ( ನಂಜಮ್ಮ). ಕಾರಂತರ ಮೈಮನಗಳ ಮಂಜುಳೆಯ ವಿಸ್ತೃತ ರೂಪ ‌. ಇದರ ನಡುವೆ ಇರುವ ಇನ್ನೊಂದು ಬಗೆ ಮಿಡ್ ವೈಫ್ ಮತ್ತು ಮೇಡಂಗಳದು‌. ಅವರದು ಸಡಿಲ ನೈತಿಕತೆಯೆಂದು ಸಮಾಜವೆ ತೀರ್ಮಾನಕ್ಕೆ ಬಂದು ಅವರ ಸ್ಥಿತಿಯ ದುರುಪಯೋಗ ಪಡಿಸಿಕೊಳ್ಳಲು ನೋಡುವ ವೈಪರೀತ್ಯ. ೩:ಅಲ್ಪಸಂಖ್ಯಾತ ಸಮುದಾಯದವರು: ಹದಿಹರೆಯದ ಸಮಯದಲ್ಲಿ ಕೇವಲ ಮನುಷ್ಯ ಸಂಬಂಧವಾಗಿದ್ದುದು , ಕಾಲ ಸರಿದಂತೆ ತಮ್ಮ ಅಸ್ಮಿತೆಯನ್ನು ಅನಿವಾರ್ಯವಾಗಿ ತಮ್ಮ ಸಮುದಾಯದ ಜತೆಗೆ ಗುರುತಿಸಿಕೊಳ್ಳಬೇಕಾದ ಸ್ಥಿತಿಗೆ ಬರುವ ತಲ್ಲಣಗಳನ್ನು ಯಾಕೂಬ ಎನ್ನುವ ಪ್ರಬಂಧ ದಲ್ಲಿ ಆರ್ದ್ರವಾಗಿ ಸೆರೆಹಿಡಿಯಲಾಗಿದೆ. ೪: ಭದ್ರತೆಯ ನಡುವಿನ ಅಭದ್ರತೆಯ ತಲ್ಲಣಗಳನ್ನು ಅದರ ಹಿಂದಿನ ಸರ್ಕಾರದ ಕ್ರೌರ್ಯವನ್ನು ಅಂಚೆಯ ಣ್ಣ ಪದ್ಮನಾಭನನ್ನು ಕುರಿತ ಪ್ರಬಂಧದಲ್ಲಿ ಬಯಲುಗೊಳಿಸಿದ ರೀತಿ ಅನನ್ಯವಾಗಿದೆ. ನಾಲ್ಕು ದಶಕಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿದರು ಖಾಯಂ ಆಗದ ಅಂಚೆಪೇದೆಗಳ ದುರಂತ ಇದು . ‌ ‌ ‌‌ ೫ ರಾಜಕೀಯ ವ್ಯಕ್ತಿಗಳು: ಲೇಖಕರ. ಹದಿಹರೆಯದಲ್ಲಿ‌ ಇವರ ಜತೆಯಲ್ಲಿ ಕುಳಿತು ಪೇಪರ್ ಓದುತ್ತಿದ್ದ ಶಾಸಕರು , ಇವರು ಸರ್ಕಾರದ ಅಧಿಕಾರಿಗಳಾದಾಗ ‌ಪಕ್ಕದಲ್ಲಿ ಕೂಡಲು‌ ಬಿಡದೆ, ಚಾಲಕನ ಪಕ್ಕ ಕೂರಲು ನಿರ್ದೇಶಿಸುವುದು ಆದ ಬದಲಾವಣೆಯ ದ್ಯೋತಕವಾಗಿದೆ. ೬: ಕ್ರೌರ್ಯದ ಒಡಲಲ್ಲಿ ಜಿನುಗುವ ವಾತ್ಸಲ್ಯ: ಪುಸ್ತಕದ ಶೀರ್ಷಿಕೆಯ ಪ್ರಬಂಧ ಕಪಾಳಮೋಕ್ಷ ಮತ್ತು ಸಾಮಿಲ್ ನ ಜಗಣ್ಣ ಮೇಲ್ನೋಟಕ್ಕೆ ಕ್ರೂರವಾಗಿ ನಡೆದುಕೊಂಡರು, ಮೊದಲ ಪ್ರಬಂಧದಲ್ಲಿ ತಂಗಿಯ ಬಗೆಗಿನ ವಾತ್ಸಲ್ಯ ಅವಳಿಗೆ ಅನ್ಯಾಯ ಮಾಡುವವರ ವಿರುದ್ಧ ನೀಡುವ ಶಿಕ್ಷೆಯಾಗಿ ಪ್ರಕಟವಾದರೆ, ಎರಡನೆಯ ಪ್ರಬಂಧದ ಜಗಣ್ಣ ಜತೆಗೆ ‌ಕೆಲಸಮಾಡುವವರಿಗೆ ಕ್ರೂರವಾಗಿ ದಂಡಿಸಿದರೂ, ಮನೆಯಲ್ಲಿ ಮೊಮ್ಮಗನನ್ನು ತೊಡೆಯ ಮೇಲೆ ಕೂಡಿಸಿಕೊಂಡು ತಿನ್ನಿಸುವುದರ ಮೂಲಕ ಅವನ ವಾತ್ಸಲ್ಯ ಭಾವನೆ ವ್ಯಕ್ತಗೊಳ್ಳುತ್ತದೆ. ೭: ಪರಸ್ಥಳದವರನ್ನು ತನ್ನಲ್ಲಿ ಒಬ್ಬನನ್ನಾಗಿ ಸ್ವೀಕರಿಸಬಲ್ಲ ಗ್ರಾಮೀಣ ಜಗತ್ತಿನ ಔದಾರ್ಯದ ನಿದರ್ಶನವಾಗಿ ಇಲ್ಲಿಗೆ ತಮಿಳು ನಾಡಿನಿಂದ ಬಂದು ನೆಲೆಸಿದ ‌ಪಳನಿಸ್ವಾಮಿಯನ್ನು ಕುರಿತ ಪ್ರಬಂಧವನ್ನು ನೋಡಬಹುದು. ‌‌‌ ಹೀಗೆ ಬಹುಮುಖಿಯಾಗಿ ವ್ಯಕ್ತಿತ್ಚವನ್ನು ಗ್ರಹಿಸಲು ಕಲಿಸಿದ ವಾರ್ತಾ ಇಲಾಖೆಯ ಜವಾನ ಚೌಡಯ್ಯ ಮತ್ತು ರಾಜ್ಯಶಾಸ್ತ್ರ ಕಲಿಸಿದ ಗುರುಗಳು ಶಿವಶಂಕರ ಪ್ಪನವರನ್ನು ನೆನಪು ಮಾಡಿಕೊಳ್ಳುತ್ತಾರೆ. ಅಂತೆಯೇ ಸಾಹಿತ್ಯಕವಾಗಿ ಗಿರೀಶ್ ವಾಘ್ ರಿಂದ ಪಡೆದ ಮಾರ್ಗದರ್ಶನವನ್ನು . ಇದು ‌ಲೇಖಕರ ಪ್ರಾಮಾಣಿಕತೆ ಮತ್ತು ಕೃತಜ್ಞತೆಗೆ ನಿದರ್ಶನ.‌ ಈ ಎಲ್ಲಾ ಸ್ವಭಾವಚಿತ್ರಗಳ ಹಿಂದಿನ ಮೂಲ ದ್ರವ್ಯವೆಂದರೆ ಅನುಭೂತಿ. ಇದಕ್ಕೆ ನಿದರ್ಶನವಾಗಿ ಅವರ ಸೊಸೆ ಮದುವೆ ‌ಮಂಟಪದಲ್ಲಿ ಬೆವರು ಸುರಿಸುತ್ತಿದ್ದ ಮಗನ ಬೆವರನ್ನು ಒರೆಸಿ ,‌ಸಂತೈಸುವ ಚಿತ್ರದಲ್ಲಿ ಅದರ ಸ್ವರೂಪವನ್ನು ಮನಗಾಣಬಹುದು. ಅವರು ಬಳಸುವ ಭಾಷಾಶೈಲಿ : ಬೇಕೂಪ, ಯೋಕ್ತಿ, ಲವಡಿಮಗ, ಕೌನ್ಸಿಲಿಂಗ್, ಪದಾರ್ಥ, ಇತ್ಯಾದಿ, ಅವರು ಚಿತ್ರಿಸುವ ಸ್ವಭಾವಗಳನ್ನು ಪರಿಣಾಮ ಕಾರಿಯಾಗಿ ವ್ಯಕ್ತಪಡಿಸುವಲ್ಲಿ ಸಮರ್ಥವಾಗಿವೆ. ಈ ಪ್ರಬಂಧಗಳ ಮೂಲಕ ನಮ್ಮ ಕಾಲಯಾನದ ಪಲ್ಲಟಗಳನ್ನು ಅನನ್ಯವಾಗಿ ಸೆರೆಹಿಡಿಯಲು ಸಾಧ್ಯವಾಗಿರುವುದು ಲೇಖಕರ ಸಂವೇದನಾಶೀಲತೆಗೆ ಸಾಕ್ಷಿಯಾಗಿದೆ. ಅಭಿನಂದನೆ.

Tuesday, July 20, 2021

ಕೆ. ಸತ್ಯನಾರಾಯಣ - ಕಪಾಳಮೋಕ್ಷ ಪ್ರವೀಣ { ಸ್ವಭಾವ ಚಿತ್ರಗಳು } 2021

ಕೆ. ಸತ್ಯನಾರಾಯಣ - ಕಪಾಳ ಮೋಕ್ಷ KAPALA MOKSHA PRAVEENA -K SATYANARAYANA Published by Talukina Venkannayya Smaraka Granthamale Kattaraguppe , B S K Third Stage , BENGALURE -85 FIRST EDITION-2021 Pages- 192 Price- rs 150

Sunday, July 11, 2021

ಆರ್ . ವಿಜಯರಾಘವನ್ - ಮೌಲ್ಯ ಸ್ವಾಮಿಅವರ : ಸುಮ್ಮನೆ ಬಿದ್ದಿರುವ ಬಿಕ್ಕುಗಳು{ ಕವನ ಸಂಕಲನ }MOULYA SWAMI

ಮೌಲ್ಯ ಸ್ವಾಮಿ ಪುಸ್ತಕದ ಕುರಿತು ಆರ್. ವಿಜಯರಾಘವನ್ ಬರಹ | ಕೆಂಡಸಂಪಿಗೆ

ಡಾ/ ಪಾದೇಕಲ್ಲು ವಿಷ್ಣು ಭಟ್ - ಹಿರಿಯರಿವರು / Dr.Padekallu Vishnu Bhat

ಹಿರಿಯರಿವರು - ಡಾ/ ಪಾದೇಕಲ್ಲು ವಿಷ್ನು ಭಟ್ ಪ್ರಕಾಶಕರು - ಬ್ರಹ್ಮಶ್ರೀ ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಟಾನ ಅನೂಚಾನ ನಿಲಯ ಅಂಚೆ -ಇಡ್ಕಿದು ಬಂಟ್ವಾಳ ತಾಲೂಕು-574220 [ದ. ಕ } HIRIYARIVARU { A collection of Bigraphical Sketchs of elderly scholars , written on various occasions } Written by Dr PADEKALLU VISHNU BHATTA DHATRI ATHRADI POST 576107 Udupi Taluk Published by Brahmashri MITTURU PUROHITA THIMMAYYA BHATTA SAMPRATHISHTHANA { R } ANUCHANA NILAYA IDKIDU BANTWAL TALUK 574220 EMAIL- samprathishtaana@gmail.com 2021 Pages-248 Prtice-Rs 180 Size- 1/8 Demmi Printed at Vishvas Printers Bangalore

Sunday, July 4, 2021

ಶೋಭಾ ನಾಯಕ ಅನುವಾದಿಸಿದ ಕವನ ಸಂಕಲನಕ್ಕೆ ಡಾ.ಪುರುಷೋತ್ತಮ ಬಿಳಿಮಲೆ ಬರೆದ ಮಾತುಗಳು | Dr/ SHOBHA NAYAK/ GOBINDA PRASAD/

ಶೋಭಾ ನಾಯಕ ಅನುವಾದಿಸಿದ ಕವನ ಸಂಕಲನಕ್ಕೆ ಡಾ.ಪುರುಷೋತ್ತಮ ಬಿಳಿಮಲೆ ಬರೆದ ಮಾತುಗಳು | ಕೆಂಡಸಂಪಿಗೆ

Don't ask address ವಿಳಾಸವನೆಂದೂ ಕೇಳಬೇಡ-Dr Shobha Nayak

ಕನ್ನಡ ಕಾದಂಬರಿ: ಜೀವನ ಯಾನ | ಚಿಕ್ಕವೀರ ರಾಜೇಂದ್ರ | Dr S R ವಿಜಯಶಂಕರ್ | Masti / Chikaveerarajendra .S R Viyayashankar

A Siddalingaiah omnibus | S. R. Ramakrishna / ಸಿದ್ದಲಿಂಗಯ್ಯ /

A Siddalingaiah omnibus | Deccan Herald

Friday, July 2, 2021

ಹಾಲ್ದೊಡ್ಡೇರಿ ಸುಧೀಂದ್ರ - Sudhindra Haldodderi: Challenges of Communicating Science ...

ನಾಗೇಶ್ ಹೆಗಡೆ - " ಬೆಳಕಿನ ಬೆಳಕಿಂಡಿ "’ ಯನ್ನೇಕೆ ಮುಚ್ಚಿ ಹೋದಿರಿ ಸುಧೀಂದ್ರ ? /Haldodderi Sudhindra

"ಬೆರಗಿನ ಬೆಳಕಿಂಡಿ"ಯನ್ನೇಕೆ ಮುಚ್ಚಿ ಹೊರಟಿರಿ ಸುಧೀಂದ್ರ? ಇಂದು ನಮ್ಮನ್ನಗಲಿದ ಮಿತ್ರ ಸುಧೀಂದ್ರ ಹಾಲ್ದೊಡ್ಡೇರಿಯವರ ಕುರಿತ ನನ್ನ ಪುಟ್ಟ, ಅವಸರದ ಶ್ರದ್ಧಾಂಜಲಿ ಇಲ್ಲಿದೆ. "ಬುಕ್‌ಬ್ರಹ್ಮ" ಜಾಲತಾಣದ ದೇವು ಪತ್ತಾರ್‌ ಕೋರಿಕೆಯ ಮೇರೆಗೆ ಬರೆದ ಈ ಲೇಖನವನ್ನು ಇಲ್ಲೂ ಪ್ರಕಟಿಸಲು ಅವರು ಅನುಮತಿ ನೀಡಿದ್ದಾರೆ. * ಸೂಪರ್‌ ಸಾನಿಕ್‌ ಕಕ್ಷೆಯಲ್ಲಿ ಕಣ್ಮರೆಯಾದ ಸುಧೀಂದ್ರ ಅವರು ರಾಕೆಟ್‌ ತಜ್ಞರಾಗಿದ್ದರು. ರಾಕೆಟ್‌ ವೇಗದಲ್ಲಿ ಅವರ ಬರೆವಣಿಗೆ ಸಾಗಿತ್ತು. ಅವರ ಕೊನೆಯ ಬರಹ ಜುಲೈ ೧ರ ʼಸುಧಾʼದಲ್ಲಿ ಪ್ರಕಟವಾಗಿತ್ತು. ಅದು ಸೂಪರ್‌ಸಾನಿಕ್‌ “ಕಾಂಕಾರ್ಡ್‌” ವಿಮಾನಗಳ ಬಗೆಗಿತ್ತು. ಅದರ ಶಿರೋನಾಮೆ “ಮೀರಬಹುದೆ ಸದ್ದನೂ -ವೇಗದಾ ಸರಹದ್ದನೂ” ಎಂದಿತ್ತು. ಬರೆವಣಿಗೆಯ ವಿಷಯದಲ್ಲಿ ಅವರು ವೇಗದ ಸರಹದ್ದನ್ನು ಮೀರಿ ಸಾಗುತ್ತಿದ್ದರು. ಅದೆಷ್ಟು ವೇಗ ಎಂದರೆ ಅವರಿಗೆ ಇಂದೇ ಅನುಪಮಾ ನಿರಂಜನ ಪ್ರಶಸ್ತಿ ಘೋಷಣೆಯಾಗಿದ್ದನ್ನು ಗಮನಿಸಲೂ ಪುರುಸೊತ್ತಿಲ್ಲದಂತೆ ದೂರ ಸಾಗಿಬಿಟ್ಟರು. ಹಿಂದೆಂದೂ ಮರಳದ ಕಕ್ಷೆಯಲ್ಲಿ. ಹತ್ತು ದಿನಗಳ ಹಿಂದೆ ಅವರು ಕಾರನ್ನು ಓಡಿಸುತ್ತ ಹಟಾತ್‌ ಅಸ್ವಸ್ಥರಾಗಿ ಆಸ್ಪತ್ರೆ ಸೇರುವ ಮುನ್ನಾ ದಿನ, ಉತ್ಸಾಹದ ಪುಟಿಚೆಂಡಾಗಿ ನನ್ನೊಂದಿಗೆ ಸುದೀರ್ಘ ವಾಟ್ಸಾಪ್‌ ಸಂವಾದದಲ್ಲಿ ತೊಡಗಿದ್ದರು. ನಾನು ಅವರಿಗೆ ಶಾಭಾಸ್‌ ಹೇಳಿದ್ದೆ -ಏಕೆಂದರೆ ಆ ಒಂದು ವಾರದಲ್ಲಿ ಅವರ ನಾಲ್ಕು ಲೇಖನಗಳು “ಪ್ರಜಾವಾಣಿ”ಯಲ್ಲಿ ಪ್ರಕಟವಾಗಿದ್ದವು. ಹಾಲ್ಡೊಡ್ಡೇರಿ, ಸುಕ್ಷೀರಸಾಗರ, ಸುಧೀಂದ್ರ ಹೀಗೆ ವಿವಿಧ ಹೆಸರುಗಳಲ್ಲಿ ಬಂದಿದ್ದವು. ಜೊತೆಗೆ “ಸುಧಾ”ದಲ್ಲಿ 5G ಕುರಿತು ಅವರದ್ದೇ ಮುಖಪುಟ ಲೇಖನವೂ ಪ್ರಕಟವಾಗಿತ್ತು. ಅದರ ಮುಂದಿನ ಸಂಚಿಕೆಯಲ್ಲೇ ಕಾಂಕಾರ್ಡ್‌ ವಿಮಾನಗಳ ಕುರಿತ ವಿಶೇಷ ಲೇಖನವೂ ಶೆಡ್ಯೂಲ್‌ ಆಗಿತ್ತು. ಅದೂ ಈಗ ಪ್ರಕಟವಾಗಿದೆ. ಅದಕ್ಕಿಂತ ತುಸು ಮುಂಚೆ “ತರಂಗ” ವಾರಪತ್ರಿಕೆಯಲ್ಲಿ ಲೇಖನ ಪ್ರಕಟವಾಗಿತ್ತು. “ಸುಕ್ಷೀರಸಾಗರ” ಎಂಬ ಅವರ ಹೊಸ ಹೆಸರಿನ ಬಗ್ಗೆ ಅವರನ್ನು ನಾನು ತುಸು ಚುಡಾಯಿಸಿದ್ದೆ. ಶುಭ ಹಾರೈಸಿದ್ದೆ: “ಕ್ಷೀರಧಾರೆಯಂತೆ ನಿಮ್ಮ ಲೇಖನಗಳು ಹೀಗೆ ನಿರಂತರ ಹರಿದು ಬರುತ್ತಿರಲಿ” ಎಂದು ವಾಟ್ಸಾಪ್‌ ಮಾಡಿದ್ದೆ. ಅದಕ್ಕೆ ಅವರು, "ಸರ್. ನೀವೆಲ್ಲಾ ನನ್ನ ಆರಂಭಿಕ ಬರಹಗಳನ್ನು ಪ್ರೋತ್ಸಾಹಿಸಿದವರುˌ ಪ್ರೀತಿಯ ಒತ್ತಾಯದಿಂದ ಬರೆಸಿದವರು. ಜತೆಗೆ ಬರಹದ ಉತ್ಕೃಷ್ಟತೆಯ ಬೆಂಚ್'ಮಾರ್ಕ್ ಎಳೆದು ಅದನ್ನು ಮೇಲೇರಿಸುತ್ತಲೇ ಹೋದವರು. ಆ ಬೆಂಚ್'ಮಾರ್ಕ್ ನನಗೆಂದೂ ಗಗನಕುಸುಮವಾಗಿಸಿದವರು. ಎಲ್ಲಕ್ಕೂ ಮಿಗಿಲಾಗಿˌ ಕೋಡು ಮೂಡುವಷ್ಟು ಪ್ರೋತ್ಸಾಹಿಸಿದವರು. ವಂದನೆಗಳು ಎಂದರೆ ತೀರಾ ಔಪಚಾರಿಕವಾಗಿಬಿಡುತ್ತದೆ." ಎಂದು ಉತ್ತರಿಸಿದ್ದರು. ಕನ್ನಡ ವಿಜ್ಞಾನ ಲೇಖಕರಲ್ಲಿ ಶರವೇಗದ ಬರಹಗಾರರು ಅವರಾಗಿದ್ದರು. ವಿಜಯ ಕರ್ನಾಟಕದಲ್ಲಿ ʼನೆಟ್‌ನೋಟ” ಅಂಕಣ ಬರೆಯುತ್ತಿದ್ದರು. ಸಂಯುಕ್ತ ಕರ್ನಾಟಕದಲ್ಲಿ “ಸೈನ್ಸ್‌ ಕ್ಲಾಸ್‌” ಎಂಬ ಅಂಕಣ ಮತ್ತು ಕಸ್ತೂರಿಯಲ್ಲಿ “ನವನವೋನ್ಮೇಷ” ಎಂಬ ಅಂಕಣಗಳನ್ನು ಬರೆಯುತ್ತಿದ್ದರು. ತನ್ನ ಅಕ್ಷರದಾಟಕ್ಕೆ ಮೂರು ಅಂಕಣಗಳು ಸಾಲದೇನೊ ಎಂಬಂತೆ ಈಚೆಗೆ ಸುಧಾ-ಪ್ರಜಾವಾಣಿ ಬಳಗಕ್ಕೂ ಪುಂಖಾನುಪುಂಖ ಬರೆಯತೊಡಗಿದ್ದರು. ದಿನದಿನದ ತಮಾಷೆಯ ʼಚುರುಮುರಿʼ ಅಂಕಣಕ್ಕೂ ಅವರು ಬರೆಯತೊಡಗಿದ್ದರು. ಜ್ಯೋತಿ ಆರುವ ಮುನ್ನ ಪ್ರಖರವಾಗಿ ಉರಿಯುತ್ತದೆ ಎಂಬ ಮಾತು ನಿಜವಿದ್ದೀತೆ? ಇಂದಿನ ವಿಜ್ಞಾನ- ತಂತ್ರಜ್ಞಾನದ ಪೈಪೋಟಿಯನ್ನು ಒಂದು ಶೀತಲ ಸಮರವೆಂದೇ ಕರೆಯುವುದಾದರೆ ಆ ಸಮರಾಂಗಣದ ಪ್ರತ್ಯಕ್ಷ ವೀಕ್ಷಕ ವಿವರಣೆ ಇವರಿಂದಲೇ ಬರುತ್ತಿತ್ತು. ಕನ್ನಡದ ಮಟ್ಟಿಗೆ ಇವರು ವಾರ್‌ ರಿಪೋರ್ಟರ್‌! ಅದು ಯುದ್ಧವಿಮಾನಗಳ ಬಗ್ಗೆ ಇರಲಿ, ಕ್ಷಿಪಣಿಗಳ ಬಗ್ಗೆ ಇರಲಿ, ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಇರಲಿ ಅಥವಾ ಜೈವಿಕ ತಂತ್ರಜ್ಞಾನದ ʼಕಟಿಂಗ್‌ ಎಜ್‌ʼನಲ್ಲಿರುವ ತಂತ್ರಕ್ರಾಂತಿಯ ವಿಷಯವೇ ಇರಲಿ. ಇವರ ತಾಜಾ ವಿಶ್ಲೇಷಣೆ ಅಂದೇ ರೆಡಿ ಇರುತ್ತಿತ್ತು. ಅದು ಮತ್ತೆ ನೀರಸ ವಿಶ್ಲೇಷಣೆ ಆಗಿರುತ್ತಿರಲಿಲ್ಲ. ಸರಸ ಸಂವಹನವಾಗಿರುತ್ತಿತ್ತು. ಅದರಲ್ಲಿ ತಮಾಷೆ ಇರುತ್ತಿತ್ತು. ಚುರುಕಿನ ಮಾತು ಇರುತ್ತಿದ್ದವು, ಕೊಂಕುಗಳಿರುತ್ತಿದ್ದವು. ಉದಾಹರಣೆಗೆ, ಯಂತ್ರೋಪಕರಣಗಳ ಬಿಸಿಯನ್ನು ಕಡಿಮೆ ಮಾಡಲೆಂದು ಈಗೀಗ ಬಳಕೆಯಾಗುತ್ತಿರುವ ಬೆಳ್ಳಿ ಮತ್ತು ವಜ್ರದ ಹರಳುಗಳ ಬಗ್ಗೆ ಬರೆಯುತ್ತ, “ಇವನ್ನೇ ತುಸು ದೊಡ್ಡ ಪ್ರಮಾಣದಲ್ಲಿ ಖರೀದಿಸಿ ಮಡದಿಯರ ತಾಪ ಕಡಿಮೆ ಮಾಡುವ ಸದವಕಾಶ ಗಂಡಂದಿರಿಗೆ ಸಿಕ್ಕಿದೆ” ಎನ್ನುತ್ತಾರೆ. ಏಕಾಣುಜೀವಿಗಳೊಂದಿಗೆ ಸಹಬಾಳ್ವೆ ಮಾಡುವ ಕುರಿತ ಲೇಖನದ ಕೊನೆಯಲ್ಲಿ “ಬ್ಯಾಕ್ಟೀರಿಯಾಗಳ ಬಗ್ಗೆ ನಮಗಿರುವ ತಿಳುವಳಿಕೆ ಬ್ಯಾಕ್ಟೀರಿಯಾ ಗಾತ್ರದಷ್ಟೇ ಅಲ್ಪ ಪ್ರಮಾಣದ್ದು” ಎಂದೊಮ್ಮೆ ಬರೆದಿದ್ದರು. ತೀರ ಈಚಿನ ಲೇಖನದಲ್ಲಿ “ನಮ್ಮ ಇಡೀ ದೇಶದ ಜಾಳಾಗಿರುವ ಸಂಪರ್ಕ ಬಲೆಯನ್ನು ಹೊಲಿಯಲೆಂದೇ 5ಜಿ ಎಂಬ ಸೂಜಿ ಬಂದಿದೆ. ಚಿನ್ನದ ಸೂಜಿ ಎಂದ ಮಾತ್ರಕ್ಕೇ ಕಣ್ಣಿಗೆ ಅದನ್ನು ಚುಚ್ಚಿಕೊಳ್ಳಲಾಗುವುದಿಲ್ಲ” ಎಂದು ಬರೆದಿದ್ದರು. ಹೇಳಿಕೇಳಿ ಪತ್ರಕರ್ತರ ಗರಡಿಯ ನೆರಳಲ್ಲೇ ಬೆಳೆದವರು. ಅವರ ತಂದೆ ಎಚ್‌ ಆರ್‌ ನಾಗೇಶ ರಾವ್‌ “ಸಂಯುಕ್ತ ಕರ್ನಾಟಕ”ದ ಸಹಾಯಕ ಸಂಪಾದಕರಾಗಿದ್ದರು. ಹಾಗಾಗಿ ಕನ್ನಡ ಭಾಷೆಯ ಬಗ್ಗೆ, ಸಾಹಿತಿಗಳ ಬಗ್ಗೆ, ಸಾಹಿತ್ಯದ ಬಗ್ಗೆ ಮೊದಲಿನಿಂದಲೂ ಅಭಿರುಚಿಯನ್ನು ಸುಧೀಂದ್ರ ಬೆಳೆಸಿಕೊಂಡಿದ್ದರು. ತಮ್ಮ ತಂದೆಯ ಅಗಲಿಕೆಯ ಹೊಸದರಲ್ಲಿ ಪತ್ರಿಕಾರಂಗದ ಎಲ್ಲ ಖ್ಯಾತರನ್ನು ಒಗ್ಗೂಡಿಸಿ “ಸುದ್ದಿ ಜೀವಿ ನಾಗೇಶರಾವ್‌” ಹೆಸರಿನ ಸಂಸ್ಮರಣ ಸಂಚಿಕೆಯನ್ನು ಹೊರತಂದರು (ಅದರಲ್ಲಿ ಎಚ್‌.ಎಸ್‌.ದೊರೆಸ್ವಾಮಿಯವರದೇ ಆಶಯ ಮಾತು ಇತ್ತು). ಮದ್ರಾಸ್‌ ಐಐಟಿಯಲ್ಲಿ ಎಮ್‌ ಟೆಕ್‌ ಪದವಿ ಪಡೆದು ಬೆಂಗಳೂರಿನ IISc, DRDO, HAL ಮುಂತಾದ ಎಲ್ಲ ಸುವಿಖ್ಯಾತ ತಂತ್ರಜ್ಞಾನ ಸಂಸ್ಥೆಗಳಲ್ಲೂ ಕೆಲಸ ಮಾಡುತ್ತಿರುವಾಗಲೂ ಕನ್ನಡದ ವಿಜ್ಞಾನ ಲೇಖನಗಳನ್ನು ಓದಿ ನನ್ನೊಂದಿಗೆ ಚರ್ಚಿಸುತ್ತಿದ್ದರು. ನಾನವರಿಗೆ ಬರೆಯಲು ಪ್ರೋತ್ಸಾಹಿಸುತ್ತಿದ್ದೆ. ತನ್ನದು ಬರೀ ಎಂಜಿನಿಯರಿಂಗ್‌ ಕ್ಷೇತ್ರವೆಂತಲೂ ಅದನ್ನು ಕನ್ನಡದಲ್ಲಿ ಬರೆಯುವುದು ಹೇಗಪ್ಪಾ ಅಂತ ಅವರು ಹಿಂಜರಿಯುತ್ತಿದ್ದರು. ವೈಮಾಂತರಿಕ್ಷ ಕಂಪನಿಯ ತಾಂತ್ರಿಕ ಸಲಹೆಗಾರರಾಗಿದ್ದಾಗ ಅವರೊಮ್ಮೆ ಬ್ರಝಿಲ್‌ ದೇಶಕ್ಕೆ ಹೋಗಿದ್ದರು. ತಿರುಗಿ ಬಂದ ತಕ್ಷಣ ಪ್ರವಾಸ ಕಥನವನ್ನು ಬರೆದು ಕೊಡಲು ಅವರಿಗೆ ಹೇಳಿದೆ. ಅದರಲ್ಲಿ ತಾಂತ್ರಿಕ ವಿಷಯಗಳನ್ನು ಬದಿಗಿಟ್ಟು ಬರೀ ಮಾನವಿಕ ಸಂಗತಿಗಳನ್ನು ಬರೆಯಿರಿ ಎಂದೆ. ಅದು ಸುಧಾದಲ್ಲಿ ಪ್ರಕಟವಾಯಿತು. ಅವರೊಳಗಿದ್ದ ಕನ್ನಡ ಸಂಪದ ಸಮೃದ್ಧವಾಗಿ ಹೊರಬಂತು. ಕ್ರಮೇಣ ತಾಂತ್ರಿಕ ವಿಷಯಗಳನ್ನೂ ಸರಳ ಭಾಷೆಯಲ್ಲಿ ಬರೆಯತೊಡಗಿದರು. ವಿಜ್ಞಾನ ಬರಹಗಾರರ ಕಮ್ಮಟಗಳಿಗೆ ಹಾಜರಾಗಿ ತಮ್ಮ ಪ್ರತಿಭೆಗೆ ಹೊಸ ಹೊಳಪು ಪಡೆದು ಸೊಗಸಾಗಿ ಬರೆಯತೊಡಗಿದರು. ಅಂಕಣ ಬರಹಗಾರರಾದರು. “ನಿಮ್ಮ ಅಂಕಣ ಬರಹಗಳನ್ನೆಲ್ಲ ಸಂಕಲನವಾಗಿ ತರುತ್ತಾ ಇರಿ” ಎಂದು ಅವರಿಗೆ ಆಗಾಗ ನಾನು ಹೇಳುತ್ತಿದ್ದೆ. “ಕಳೆದ ವಾರ ಬರೆದಿದ್ದು ಈಗಲೇ ಹಳಸಾಗಿ ಹೊಸದು ಬರ್ತಾ ಇರುತ್ತವಲ್ಲ? ಪುಸ್ತಕ ರೂಪದಲ್ಲಿ ಬರೋದರಲ್ಲಿ ಅದು ಪೂರ್ತಿ ಹಳಸಲು ಆಗಿರುತ್ತದೆ” ಎನ್ನುತ್ತಿದ್ದರು. ಆದರೂ ಅವರಿವರ ಒತ್ತಾಯದಿಂದ “ನೆಟ್‌ ನೋಟ”, “ಸದ್ದು! ಸಂಶೋಧನೆ ನಡೆಯುತ್ತಿದೆ”, “ಬಾಹ್ಯಾಕಾಶವೆಂಬ ಬೆರಗಿನಂಗಳ” ಮತ್ತು “ಬೆರಗಿನ ಬೆಳಕಿಂಡಿ” ಹೆಸರಿನ ಪುಸ್ತಕಗಳನ್ನು ಹೊರತಂದರು. [ಈ ಪುಸ್ತಕದ ಬಿಡುಗಡೆಗೆ ನನ್ನನ್ನೇ ಕರೆದಿದ್ದರು. ಸಂಯುಕ್ತ ಕರ್ನಾಟಕ ಕಚೇರಿಯಲ್ಲಿ ಆ ದಿನಪತ್ರಿಕೆಯ ವಾರ್ಷಿಕ "ಅಕ್ಷಯ ತದಿಗೆ" ಹಬ್ಬದ ದಿನ ಬಿಡುಗಡೆ ಇತ್ತು. ಅಂದು ನಾನಾಡಿದ ಮಾತುಗಳನ್ನು ಈಚಿನ ಅಕ್ಷಯ ತದಿಗೆಯಂದು ಸುಧೀಂದ್ರ ನನಗೆ ಮತ್ತೆ ನೆನಪಿಸಿದ್ದರು. ] ಅವರ ಪುಸ್ತಕಗಳಲ್ಲಿನ ವಿಷಯ ಸೂಚಿಯನ್ನು ನೋಡಿದರೇ ಅವರ ಕನ್ನಡ ಪ್ರತಿಭೆಯ ಬಗ್ಗೆ ನಾವು ಬೆರಗಾಗುತ್ತೇವೆ. ಬೇಹುಗಾರ ಉಪಗ್ರಹಗಳ ಲೇಖನಕ್ಕೆ “ದೊಡ್ಡಣ್ಣನ ಹದ್ದಿನ ಕಣ್ಣು”; ಕೊಳೆನೀರಲ್ಲಿ ಸೊಳ್ಳೆಗಳು ಜನಿಸದಂತೆ ಮಾಡುವ ತಂತ್ರಜ್ಞಾನಕ್ಕೆ “ಸೊಳ್ಳೆಗೆ ಕೊಳ್ಳಿ, ನ್ಯಾನೊ ಈರುಳ್ಳಿ”, ಅರಿವಳಿಕೆ ಔಷಧಗಳ ಲೇಟೆಸ್ಟ್‌ ಅವತಾರಗಳ ಬಗೆಗಿನ ಲೇಖನಕ್ಕೆ “ಮಿದುಳಿನ ನರಳಿಕೆ ತಪ್ಪಿಸುವ ಅರಿವಳಿಕೆ” ಹೀಗೆ... ಈ ಅರಿವಳಿಕೆ ಲೇಖನಕ್ಕೆ ಅವರು ಎಷ್ಟೊಂದು ದೇಶಗಳ ಈಚಿನ ಮಾಹಿತಿಗಳನ್ನು ಕಲೆಹಾಕಿದ್ದರು. ಮಿದುಳಿನ ಕಾರ್ಯಾಚರಣೆ ಹೇಗಿರುತ್ತದೆ ಎಂಬುದರ ಕುರಿತು ವಿಜ್ಞಾನಿಗಳು ಕಂಡುಕೊಂಡ ಇಇಜಿ, ಎಮ್‌ಆರ್‌ಐ, ಎಫ್‌ಎಮ್‌ಆರ್‌ಐ ಸಾಧನಗಳ ಬಗ್ಗೆ ಚರ್ಚಿಸುತ್ತ ಅವರು ಬರೆದ ಕೊನೆಯ ಪ್ಯಾರಾವನ್ನು ನಾನಿಲ್ಲಿ ಕಾಪಿ ಮಾಡುತ್ತೇನೆ: [ಅದಕ್ಕೊಂದು ವಿಶೇಷ ಕಾರಣವಿದೆ] “ಎಲ್ಲವೂ ಎಣಿಕೆಯಂತೆ ನಡೆದರೆ ಕೆಲ ವರ್ಷಗಳಲ್ಲಿ ಮಿದುಳಿನ ಎಲ್ಲ ಕಾರ್ಯಚಟುವಟಿಕೆಗಳೂ ನಮ್ಮ ಎಣಿಕೆಗೆ ಸಿಗಬಹುದು. ಇದು ಸಾಧ್ಯವಾದಲ್ಲಿ ಮಿದುಳನ್ನು ನಮ್ಮ ಕೈಗೊಂಬೆಯಂತೆ ಕುಣಿಸಬಹುದೆ? ಹೌದಾದರೆ ಇಲ್ಲಿ “ನಮ್ಮ” ಎಂಬುದು ಯಾರಿಗೆ ಅನ್ವಯವಾಗುತ್ತದೆ? ಆ ಮಾತು ಬದಿಗಿರಲಿ, ಇಡೀ ಮಿದುಳಿನ ನರಮಂಡಲವನ್ನು ʼಕಾಪಿʼ ಮಾಡಲು ಸಾಧ್ಯವಾದಲ್ಲಿ, ಅತ್ಯಂತ ಉತ್ತಮ ಕಾರ್ಯಕ್ಷಮತೆಯ ರೊಬಾಟ್‌ಗಳನ್ನು ರೂಪಿಸಬಹುದು. ಅವುಗಳಿಗೆ ತುಂಬಬಹುದಾದ ಬುದ್ಧಿಮತ್ತೆಯನ್ನು ನಮ್ಮ ಮಟ್ಟಕ್ಕೇರಿಸಿಕೊಳ್ಳಲು ಪ್ರಯತ್ನಿಸಬಹುದು”. ಇದನ್ನು ಬರೆದ ಸುಧೀಂದ್ರ ಹಾಲ್ಡೊಡ್ಡೇರಿಯವರು ಕಳೆದ ಹತ್ತು ದಿನಗಳಿಂದ ಪ್ರಜ್ಞಾಶೂನ್ಯರಾಗಿ ಹೈಟೆಕ್‌ ಆಸ್ಪತ್ರೆಯಲ್ಲಿ ಕೃತಕ ಉಸಿರಾಟದಲ್ಲಿದ್ದರು. ಅವರ ಮಿದುಳಿಗೆ ಚೇತರಿಕೆ ನೀಡಲೆಂದು ಬೆಂಗಳೂರಿನ ಲೇಟೆಸ್ಟ್‌ ಟೆಕ್ನಾಲಜಿಯೆಲ್ಲ -ಸಿಟಿ ಸ್ಕ್ಯಾನ್‌, ಎಮ್‌ ಆರ್‌ಐ, ಎಪ್‌-ಎಮ್‌ಆರ್‌ಐ ಎಲ್ಲವುಗಳ ಪ್ರಯೋಗ ನಡೆಯಿತು. ಅವರ ಮಿದುಳು ಹೊರಜಗತ್ತಿನ ಸಂಪರ್ಕವನ್ನು ಕಳೆದುಕೊಂಡಿತ್ತೊ, ನಾಳಿನ ಜಗತ್ತನ್ನು, ಆಚಿನ ಜಗತ್ತನ್ನು ಸ್ಕ್ಯಾನ್‌ ಮಾಡುತ್ತಿತ್ತೊ ಒಂದೂ ಗೊತ್ತಾಗಲಿಲ್ಲ. ಅವರ ಮಿದುಳನ್ನು ಕಾಪಿ ಮಾಡುವಂತಾಗಿದ್ದಿದ್ದರೆ, ಅದೆಷ್ಟೊಂದು ಜ್ಞಾನ, ತಂತ್ರಜ್ಞಾನದ ಬಗ್ಗೆ ಅದೆಷ್ಟು ಕುತೂಹಲ, ಅದೆಷ್ಟು ಕನ್ನಡ ಪ್ರಜ್ಞೆ, ಅದೆಷ್ಟು ಸಂವಹನ ಪ್ರತಿಭೆ, ಅದೆಷ್ಟು ವಿನಯವಂತಿಕೆ, ಅದೆಷ್ಟು ತಮಾಷೆ, ಅದೆಷ್ಟು ಸಜ್ಜನಿಕೆ, ಅದೆಷ್ಟು ಬಗೆಯ ಸಂವಹನ ಕೌಶಲ, ನಾಳಿನ ಪೀಳಿಗೆಯ ಬಗ್ಗೆ ಅದೆಷ್ಟು ಆಸ್ಥೆ, ಅದೆಷ್ಟೊಂದನ್ನು ನಮಗೆ ತಿಳಿಸಬೇಕೆಂಬ ತವಕ ಎಲ್ಲವುಗಳ ಬಹುದೊಡ್ಡ ನಿಕ್ಷೇಪವೇ ನಮಗೆ ಸಿಗುತ್ತಿತ್ತು. ತುಸು ಅವಸರ ಮಾಡಿದಿರಿ ಸುಧೀಂದ್ರ; ಅದ್ಯಾವುದನ್ನೂ ನಾಳಿನ ಜಗತ್ತಿಗೆ ವರ್ಗಾವಣೆ ಮಾಡುವ ಮೊದಲೇ ಹೊರಟುಬಿಟ್ಟಿರಿ. ಗ್ರಹತಾರೆಗಳನ್ನು ತಲುಪಬೇಕೆಂಬ ಮನುಷ್ಯ ಅದಮ್ಯ ಆಸಕ್ತಿಗಳ ಬಗ್ಗೆ ಅಷ್ಟೊಂದು ಬರೆದ ನೀವು ತುಸು ತ್ವರಿತವಾಗಿ ಖುದ್ದಾಗಿ ತಾರಾಲೋಕವನ್ನು ಸೇರಿಕೊಂಡಿರಿ. ನಾವು, ಕನ್ನಡದ ಕೆಲವೇ ಕೆಲವು ವಿಜ್ಞಾನ ಲೇಖಕರು “ಅಳಿವಿನಂಚಿನ ಜೀವಿಗಳು, ಹುಷಾರಾಗಿರಬೇಕು” ಎಂದು ನಾನು ಆಗಾಗ ನಮ್ಮ ಗುಂಪಿನಲ್ಲಿ ತಮಾಷೆ ಮಾಡುತ್ತಿದ್ದುದು ನೆನಪಿದೆಯೆ ಸುಧೀಂದ್ರ? ಈ ಪುಟ್ಟ ಗುಂಪಿನಿಂದ ವಿದಾಯ ಹೇಳಿದ್ದು ಸರಿಯೆ?

ಕನ್ನಡ ಕಾದಂಬರಿ: ಜೀವನ ಯಾನ | ಎಂ. ಎಸ್. ಪುಟ್ಟಣ್ಣ ಅವರ ಮಾಡಿದ್ದುಣ್ಣೋ ಮಹಾರಾಯ / T. P. Ashoka