Powered By Blogger

Thursday, June 29, 2023

ಡಾ / ಎಚ್ . ವಿ . ನಾಗರಾಜ ರಾವ್ ಮೈಸೂರು- -ಆನಂದರ ಬದುಕು ಬರಹ-ANANDA

ಸಂಸ್ಕೃತಿ ಚಿಂತನಾ : ಡಾ. ಹೆಚ್.ವಿ. ನಾಗರಾಜರಾವ್ ಮೈಸೂರು ಆನಂದರ ಬದುಕು-ಬರಹ ಆನಂದ ಎಂಬ ಕಾವ್ಯನಾಮದಿಂದ ಬರೆ ಯುತ್ತಿದ್ದವರು ಎ. ಸೀತಾರಾಮ್. ಇವರದು ಅರವತ್ತು ವರ್ಷಗಳ ಬದುಕು (೧೮.೮.೧೯೦೨ ರಿಂದ ೧೭.೧೧.೧೯೬೩), ಇವರು ಕೆಲವು ಕಥೆಗಳನ್ನು ಕನ್ನಡದಲ್ಲಿ ಬರೆದಿದ್ದರು ಎಂದು ಮಾತ್ರ ನನಗೆ ತಿಳಿದಿತ್ತು. ಅವರ 'ನಾನು ಕೊಂದ ಹುಡುಗಿ' ಎಂಬ ಒಂದು ಕಥೆಯನ್ನು ಮಾತ್ರ ನಾನು ಓದಿದ್ದೆ. ಈ ಆನಂದರನ್ನು ಕುರಿತು ಡಾ. ವಿಜಯಾಹರನ್ ಗಂಭೀರ ಅಧ್ಯಯನವನ್ನು ಮಾಡಿ ಮಹಾಪ್ರಬಂಧವನ್ನು ರಚಿಸಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದಿದ್ದರು. ೧೯೯೮ರಲ್ಲಿ ಆ ಮಹಾ ಪ್ರಬಂಧ ಪ್ರಕಟಗೊಂಡಿತ್ತಂತೆ. ಅದರ ಮರು ಮುದ್ರಣ ಈಚೆಗೆ (೨೦೨೨) ಆಗಿದೆ. ಅಲ್ಲದೆ ಆನಂದ ಅವರ ಸಮಗ್ರ ಕತೆಗಳು' ಎಂಬ ಪುಸ್ತಕವನ್ನು ವಿಜಯಾಹರನ್ ಅವರೇ ೨೦೧೭ರಲ್ಲಿ ಬೆಳಕಿಗೆ ತಂದಿದ್ದಾರೆ. ಈ ಎರಡನ್ನೂ ಓದಿದವರಿಗೆ ಆನಂದ (ಅಜ್ಜಂಪುರ ಸೀತಾ ರಾಮ್) ಅವರ ವ್ಯಕ್ತಿತ್ವದ ಸಂಪೂರ್ಣ ಚಿತ್ರಣ ಲಭ್ಯವಾಗುತ್ತದೆ. ಕನ್ನಡ ಸಾಹಿತ್ಯದ ಅತಿರಥ -ಮಹಾರಥರಾದ ಕುವೆಂಪು, ಕಾರಂತ ಮುಂತಾದವರನ್ನು ಅರಿತುಕೊಳ್ಳಲು ಅವರ ಆತ್ಮಚರಿತ್ರೆಗಳಿವೆ. ಆದರೆ ಅಷ್ಟು ಪ್ರಸಿದ್ದರಲ್ಲದ, ಆದರೆ ಕನ್ನಡಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿರುವ ಆನಂದರಂತಹವರ ಬಗೆಗೆ ಓದುಗರ ಕುತೂಹಲವನ್ನು ತಣಿಸುವ ಗ್ರಂಥಗಳ ಕೊರತೆ ಇದೆ. ಅದನ್ನು ತುಂಬುವ ದಿಶೆಯಲ್ಲಿ ಇದು ಸ್ವಾಗತಾರ್ಹ ಪ್ರಯತ್ನ. ಆನಂದ ಅವರ ಸಮಗ್ರ ಕಥೆಗಳು ಎಂಬ ಪುಸ್ತಕದಲ್ಲಿ ಅವರೇ ರಚಿಸಿದ ಇಪ್ಪತ್ತು ಕತೆಗಳೂ ಅವರು ಅನು ವಾದಿಸಿದ ಅಥವಾ ರೂಪಾಂತರಿಸಿದ ಹನ್ನೆರಡು ಕತೆಗಳೂ ಇವೆ. ಗುಣ, ಗಾತ್ರ ಎರಡು ದೃಷ್ಟಿಯಿಂದಲೂ ಅನಂದರ ಕೊಡುಗೆ ದೊಡ್ಡದೇ. ಆನಂದರ ಬದುಕು-ಬರಹ: ಡಾ. ವಿಜಯಾ ಹರನ್ ಅವರ ಕಾರ್ಯಶ್ರದ್ಧೆಯನ್ನು ಬಿಂಬಿಸುವ ಕೃತಿ. ಅವರು ಯಾವ ಕೆಲಸವನ್ನು ಮಾಡಿದರೂ ಅದರಲ್ಲಿ ಅಚ್ಚುಕಟ್ಟುತನ ಎದ್ದು ಕಾಣುತ್ತದೆ. ಈ ಪುಸ್ತಕದಲ್ಲಿ ಯಾವ ಪರಿಚ್ಛೇದವನ್ನೂ, ಅಷ್ಟೇಕೆ, ಯಾವ ವಾಕ್ಯವನ್ನೂ ಅವರು ವ್ಯರ್ಥವಾಗಿ ಅಥವಾ ಕಾಟಾಚಾರಕ್ಕಾಗಿ ಬರೆದಿಲ್ಲ. ಅರವತ್ತೆರಡು ಪುಟಗಳಲ್ಲಿ ಅವರು ಆನಂದರ ಬದುಕನ್ನು ಚಿತ್ರಿಸಿದ್ದಾರೆ. ಇದು ವಾಸ್ತವ ಜೀವನದ ಚಿತ್ರವಾದರೂ ಕಥೆಯಂತೆ, ಕಾದಂಬರಿಯಂತೆ ಓದಿಸಿಕೊಂಡು ಹೋಗುತ್ತದೆ. ಒಬ್ಬ ಸಾಹಿತಿಯ ಜೀವನ ಹೇಗೆ ಸಾಗುತ್ತದೆ, ದೊಡ್ಡ ಸಾಹಿತ್ಯಕಾರರು ಒಬ್ಬರನ್ನೊಬ್ಬರು ಹೇಗೆ ಗೌರವಿಸುತ್ತಿದ್ದರು, ಅವರ ಆತ್ಮೀಯ ವರ್ತನೆಗಳು ಯಾವ ರೀತಿಯಲ್ಲಿ ಇರುತ್ತಿದ್ದವು ಎಂಬುದನ್ನು ನೋಡಲು ಈ ಭಾಗ ಅತ್ಯಂತ ಸ್ವಾರಸ್ಯಮಯವಾಗಿದೆ. ಕುವೆಂಪು ಮತ್ತು ಆನಂದರ ರಸಮಯ ಸಂಭಾಷಣೆಗಳನ್ನೂ ನೆನಪಿನ ದೋಣಿಯಲ್ಲಿ ಎಂಬ ಆತ್ಮ ಚರಿತ್ರೆಯಲ್ಲಿ ಕುವೆಂಪು ಆನಂದರ ಸಖ್ಯದ ರಸನಿಮಿಷಗಳ ಬಗೆಗೆ ಬರೆದಿರುವ ಮಾತುಗಳನ್ನೂ ಡಾ.ವಿಜಯಾ ಹರನ್ ಉದಾ ಹರಿಸಿ ಈ ಭಾಗಕ್ಕೆ ಮೆರುಗನ್ನು ತಂದಿದ್ದಾರೆ. ಕುವೆಂಪು ಅವರಿಗೆ ಆನಂದರು ತಮ್ಮ ಕೃತಿ ಲಿಯೋಟಾಲ್‌ಸ್ಟಾಯ್ ಅರ್ಪಿಸಿದಾಗ ಅದರಲ್ಲಿದ್ದ ಒಕ್ಕಣೆಯನ್ನು ಡಾ. ವಿಜಯಾಹರನ್ ಉದಾಹರಿಸಿದ್ದಾರೆ : “ಸಿರಿಗನ್ನಡ ನುಡಿವೆಣ್ಣ ಹೊಂಗನಸು ಮೈತಳೆದ ರೂಪರೂ ವಿವಿಧ ಸಾಹಿತ್ಯ ಶಿಲ್ಪಕಲಾ ಕೋವಿದರೂ, ಕನ್ನಡ ಕುಲ ಹೃತ್ಕುಮುದಚಂದ್ರರೂ ನನ್ನ ಪರಮಸಖರೂ ಆದ ಪದ್ಮಭೂಷಣ, ಡಾಕ್ಟರ್ ಕೆ.ವಿ. ಪುಟ್ಟಪ್ಪ, ಎಂ.ಎ. ಡಿ.ಲಿಟ್. ಅವರಿಗೆ ಈ ಕೃತಿಯನ್ನು ಅನನ್ಯ ಸ್ನೇಹ ಭಾವದಿಂದ ಅರ್ಪಿಸಿದ್ದೇನೆ -ಆನಂದ” ಅನೇಕ ಸಾಹಿತಿಗಳೊಡನೆ ಆನಂದರ ಸಂಬಂಧ ಚೆನ್ನಾಗಿತ್ತು. ಆದರೆ 'ಸಂಸ'ರೊಡನೆ ಮೊದಲು ಚೆನ್ನಾಗಿದ್ದ ಮೈತ್ರಿ ಆಮೇಲೆ ಸಂಸರ ಸಂಶಯ ಪ್ರವೃತ್ತಿಯ ಕಾರಣದಿಂದ ಕಡಿದು ಬೀಳುವಂತಾಯಿತು. ಸಂಸರಂತಹ ಪ್ರತಿಭಾಶಾಲಿ ಆತ್ಮಹತ್ಯೆಯಿಂದ ದಾರುಣ ಅಂತ್ಯವನ್ನು ಕಂಡಾಗ ಅಪಾರ ದುಃಖವನ್ನು ಅನುಭವಿಸಿದರು ಎಂಬುದನ್ನು ವಿಜಯಾಹರನ್ ನಿರೂಪಿಸಿದ್ದಾರೆ. ಆನಂದರ ವ್ಯಕ್ತಿ ಸ್ವಭಾವ ವನ್ನು ಹೇಳುತ್ತಾ ಹೀಗೆಂದಿದ್ದಾರೆ: “ಜಾತೀಯತೆ ಅಸ್ಪೃಶ್ಯತೆಗಳು ಮಾನವರೇ ನಿರ್ಮಿಸಿಕೊಂಡ ಕಂಟಕಗಳು. ಅವುಗಳನ್ನು ತೊಲಗಿಸಲು ಪ್ರಯತ್ನಿಸಿ ಪರಸ್ಪರರನ್ನು ಅರಿತು ಕೊಳ್ಳುವ ಹೊಂದಾಣಿಕೆ, ಮಾನವೀಯತೆ ಬೆಳೆಸಿಕೊಂಡಾಗಲೇ ವ್ಯಕ್ತಿಯ ಉದ್ಧಾರ ಎಂಬುದನ್ನು ಅಚಲವಾಗಿ ನಂಬಿದ್ದರು. ಮೂಢ ನಂಬಿಕೆಗಳನ್ನು ತೀವ್ರವಾಗಿ ವಿರೋಧಿಸುತ್ತಿದ್ದರು.” (ಪು. ೭೭) ತಮ್ಮ ಅನುಭವಕ್ಕೆ ಗೋಚರವಾಗುವ ವಸ್ತುವನ್ನಿಟ್ಟುಕೊಂಡು ಕತೆಗಾರ ಕತೆಯನ್ನು ರಚಿಸಿದಾಗ ಅದರಲ್ಲಿ ವಿಶ್ವಸನೀಯತೆ (Credibility) ಇರುತ್ತದೆ. ಅಂದಿನ ಪ್ರಪಂಚದಲ್ಲಿ ಆನಂದರು ಇದ್ದುದು ಮಧ್ಯಮ ವರ್ಗದಲ್ಲಿ, ಅದೂ ಕೆಳ ಮಧ್ಯಮ ವರ್ಗದಲ್ಲಿ ಅದಕ್ಕೆ ಅನುಗುಣವಾಗಿ ವಸ್ತುಗಳನ್ನೇ ಅವರು ಆಯ್ದುಕೊಂಡದ್ದು ಸಹಜ. ಒಂದು ಕಥೆಯಲ್ಲಿ ಆನಂದರು ಮುರಳಿ ಎಂಬ ಚಿತ್ರ ಕಲಾವಿದನನ್ನು ಚಿತ್ರಿಸಿದ್ದಾರೆ. ಇದು ಯುಕ್ತ. ಏಕೆಂದರೆ ಅವರೂ ಚಿತ್ರಕಾರರಾಗಿದ್ದರು. ಇದನ್ನು ಡಾ. ವಿಜಯಾಹರನ್ ನಿಷ್ಪಕ್ಷಪಾತವಾಗಿ ಹೇಳಿದ್ದಾರೆ: “ಇವರ ಕಥಾ ಜಗತ್ತು ಬಹುಸೀಮಿತ ಎನ್ನಬಹುದು. ಇವರ ಸತ್ತ್ವಶಾಲಿ ಕಥೆಗಳೆಲ್ಲ ಸರಸ ಶೃಂಗಾರದ ಸುಂದರ ಚಿತ್ರಗಳೇ ಆಗಿರುತ್ತವೆ. ರೇಷಿಮೆಯ ನಯ, ನುಣುಪು, ಹೊಳಪು ಮತ್ತು ಹೂವಿನ ಕೋಮಲತೆ, ಮಾಧುರ್ಯ ಇವರ ಕತೆಗಳ ಆಕರ್ಷಕ ಗುಣಗಳಾಗಿವೆ” ಎಂಬ ಎಚ್.ಜಿ. ಲಕ್ಕಪ್ಪಗೌಡರ ಅಭಿಪ್ರಾಯವನ್ನು ಉದಾಹರಿಸಿ ಅನುಮೋದಿಸಿದ್ದಾರೆ. ಯಾವಾಗಲೂ ಆನಂದರನ್ನು ಹೊಗಳಿದ್ದಾರೆ ಎಂದೇನಿಲ್ಲ. ಅವರ ಇತಿಮಿತಿಗಳನ್ನು ಗುರುತಿಸಿ ಗುಣ ದೋಷಗಳನ್ನು ತೋರಿಸಿದ್ದಾರೆ. ಸಾಹಿತ್ಯ ವಿಮರ್ಶೆ ಸಾಗಬೇಕಾದ ದಾರಿ ಇದೇ. ಚಿನ್ನವನ್ನು ಹಿತ್ತಾಳೆ ಎಂದು ಜರಿಯಬಾರದು. ಹಿತ್ತಾಳೆಯನ್ನು ಚಿನ್ನವೆಂದು ಶ್ಲಾಘಿಸಬಾರದು. ಡಾ. ವಿಜಯಾಹರನ್ ನಿಷ್ಪಕ್ಷಪಾತ ದೃಷ್ಟಿಯಿಂದ ವಿಮರ್ಶೆಮಾಡಿ ನ್ಯಾಯವನ್ನು ಒದಗಿಸಿದ್ದಾರೆಂದು ಹೇಳಲು ಎರಡು ಉದಾಹರಣೆಗಳನ್ನು ನೋಡೋಣ: ೧) “ನಲವತ್ತೆಂಟು ಪುಟವಿರುವ ಪದ್ಮಪಾಕ ಕಥೆಯಲ್ಲಿ ಪದ್ಮಳಿಗೆ 'ಮಡ್ಲು' ತುಂಬುವ ಪತಿಯ ಆಶಯವೇ ಕತೆಯ ಗುರಿ. ಅದಕ್ಕಾಗಿ ನಡೆಯುವ ಬೇಸರ ತರಿಸುವ ಸಂಭಾಷಣೆಗಳಲ್ಲಿ ಪ್ರಬಂಧಗಳಿಗಾಗುವಷ್ಟು ವಿಷಯಗಳು ಸೇರಿರುವುದು, ಕಥೆಯು ಸೋಲುವುದಕ್ಕೆ ದಾರಿ ಮಾಡಿಕೊಟ್ಟಂತಿದೆ” (ಪುಟ. ೯೮). ೨) “ದೌಪದಿ 'ವಸ್ತ್ರಾಪಹರಣ'ಕ್ಕೆ ಒಳಗಾದ ಅನಂತರ ಅಂತಃಪುರಕ್ಕೆ ಹಿಂದಿರುಗಿದಾಗ ಇದ್ದಿರಬಹುದಾದ ಆಕೆಯ ಸ್ಥಿತಿಗತಿಯನ್ನು ಚಿತ್ರಿಸಬೇಕೆಂದು ಚಿತ್ರಗಾರಪತಿ ಕಥಾನಾಯಕ ಕಟ್ಟಿಸಿಕೊಂಡು, ಆ ಚಿತ್ರ ರಚನೆಗೆ ತನ್ನ ಮುದ್ದಿನ ಮಡದಿ ಪದ್ಮಳನ್ನು ರೂಪದರ್ಶಿಯಾಗಿ ಕೂರಲು ಮನ ಒಲಿಸುವುದು, ದ್ರೌಪದಿಯ ವ್ಯಕ್ತಿತ್ವವನ್ನು ನಿರೂಪಿಸುವುದು ಕರೀಹುಡುಗಿ ಕತೆಯ ವಸ್ತು, ಮಹಾಭಾರತದಲ್ಲಿನ ಈ ಗಂಭೀರ ಘಟನೆಯ ಬಗ್ಗೆ ಪ್ರಸ್ತಾಪಿಸುವಾಗಲೂ ಪದ್ಮಾನಂದರ ಸರಸ ಸಂಭಾಷಣೆಗಳ ಜಾಡು ಬದಲಾಗುವುದಿಲ್ಲ. ಹಾಸ್ಯದ ಹೆಸರಿನಲ್ಲಿ ಮಹಾಭಾರತದಲ್ಲಿನ ಪೌರಾಣಿಕ ಪಾತ್ರವನ್ನೇ ಲೇವಡಿ ಮಾಡುವುದು ಎಷ್ಟು ಉಚಿತ ಎಂಬ ಪ್ರಶ್ನೆ ಬರದೇ ಇರುವುದಿಲ್ಲ. ಇಲ್ಲಿನ ಪದ್ಮಳ ಪಾತ್ರದ ಅತಿ ಮಾತುಗಾರಿಕೆಯ ಅನುಚಿತ ವರ್ತನೆಯಿಂದಾಗಿ ಕಥೆಯ ಬಂಧವೇ ಸಡಿಲವಾಗಿದೆ ಎನಿಸುವುದರೊಂದಿಗೆ ಅನುಚಿತ, ಅಸಹಜ ಸಂಭಾಷಣೆಗಳು, ಸಮರ್ಥವಾಗಿ ಮೂಡಿಬರಬಹುದಾಗಿದ್ದ ಕಥಾವಸ್ತುವಿನ ಜಾಡನ್ನು ತಪ್ಪಿಸಿ ಹೇಗೆ ಬಾಳು ಜಾಳಾಗಿಸಬಹುದು ಎಂಬುದಕ್ಕೂ ನಿದರ್ಶನದಂತಿದೆ”(ಪು. ೯೯). ಈ ಮಾತುಗಳಲ್ಲಿ ಆನಂದರನ್ನು ಟೀಕಿಸುವ ವಿಜಯಾಹರನ್ ಯೋಗ್ಯ ಸ್ಥಳಗಳಲ್ಲಿ ಪ್ರಶಂಸೆಯನ್ನೂ ಹರಿಸಿದ್ದಾರೆ. “ಜೀವಂತಿಕೆಯಿಂದ ನಳನಳಿಸುವ ಈ ಪಾತ್ರಗಳ ಮೂಲಕ ಸ್ನೇಹ, ಪ್ರೇಮ, ನಿರ್ಮಲ ಪ್ರಾಮಾಣಿಕತೆಗಳೆಂಬ ಬದುಕಿನ ಸಾರಸ್ವತದ ಕಡೆಗೆ ಓದುಗನ ಮನಸ್ಸು ಚಲಿಸುವಂತೆ ಮಾಡುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ (೧೪೩). “ಆನಂದರ ಕೆಲವು ಕತೆಗಳಲ್ಲಿನ ಸೊಗಸಾದ ಮುಕ್ತಾಯ. ಅವರ ಚಿತ್ರಕ್ಕೆ ಶಕ್ತಿಗೆ ದ್ಯೋತಕವಾಗಿದ್ದು ಓದುಗರ ಮೇಲೆ ತೀವ್ರ ಪರಿಣಾಮವನ್ನು ಬೀರುವುದರಲ್ಲಿ ಯಶಸ್ವಿಯಾಗುತ್ತದೆ; ಕತೆಗೆ ಪೂರಕವಾಗುವಂತಹ ರೂಪಕ ಚಿತ್ರಗಳಂತೆ ಪರಿಣಮಿಸಿ ವಾಚಕರ ಸ್ಮೃತಿ ಪಟಲದಲ್ಲಿ ಶಾಶ್ವತವಾಗಿ ಉಳಿಯುತ್ತದೆ” (ಪು.೧೬೪). ಆನಂದ ಕಾವ್ಯನಾಮದ ಅಜ್ಜಂಪುರ ಸೀತಾರಾಮ್ ಆಂಗ್ಲ ಸಾಹಿತ್ಯವನ್ನು ಆಳವಾಗಿ ಅಭ್ಯಾಸಮಾಡಿ ಅಲ್ಲಿರುವ ಶ್ರೇಷ್ಠ ಕಥೆಗಳ ಮತ್ತು ಕೆಲವು ಕಾದಂಬರಿಗಳ ಅನುವಾದನವನ್ನು ರೂಪಾಂತರವನ್ನೂ ಮಾಡಿರುವ ವಿಷಯವನ್ನು ವಿಜಯಾಹರನ್ ಓದುಗರ ಗಮನಕ್ಕೆ ತಂದಿದ್ದಾರೆ. ಇದು ಕನ್ನಡ ಸಾಹಿತ್ಯಕ್ಕೆ ಸಂದ ವಿಶಿಷ್ಟ ಸೇವೆ ಎಂದು ನಾವು ಪರಿಗಣಿಸಬೇಕು. ಯಾವುದೇ ಭಾಷೆಯದಾದರೂ ಸರಿ, ಅದು ಉತ್ತಮ ಕಥೆಯಾಗಿದ್ದರೆ ಕನ್ನಡದಲ್ಲಿ ಬರಬೇಕು. ನಮಗೆ ವಿಶಾಲ ಜಗತ್ತಿನ ಅನುಭವವಿಲ್ಲ. ಮಹಾನ್ ಲೇಖಕನು ತನ್ನ ಅನುಭವದ ಮೂಸೆಯಲ್ಲಿ ಜೀವನ ಸುವರ್ಣವನ್ನು ಕರಗಿಸಿ ಕಥೆ, ಕಾದಂಬರಿ, ಕವಿತೆ ಎಂಬ ಆಭರಣಗಳನ್ನು ರಚಿಸಿರುತ್ತಾನೆ. ಅವು ನೇರವಾಗಿ ಅನುವಾದದಿಂದ ಅಥವಾ ಬಳಸು ದಾರಿಯಾದ ರೂಪಾಂತರದಿಂದ ಕನ್ನಡಕ್ಕೆ ಬರಬೇಕು. ಅದೇ ರೀತಿಯಲ್ಲಿ ಕನ್ನಡದ ಶ್ರೇಷ್ಠ ಕೃತಿಗಳು ಭಾರತ ದೇಶದ ಬೇರೆ ಭಾಷೆಗಳಿಗೂ ವಿಶ್ವದ ಪ್ರಮುಖ ಭಾಷೆಗಳಿಗೂ ತರ್ಜುಮೆ ಮೂಲಕ ತಲುಪಬೇಕು. ಆನಂದರ ಕಥೆಗಳು ಹೀಗೆ ಎಷ್ಟು ಭಾಷಾಂತರಗೊಂಡಿವೆ ಎಂಬುದನ್ನೂ ವಿಜಯಾಹರನ್ ತಿಳಿಸಿದ್ದಾರೆ. ಆನಂದರಿಗೆ ಇಂಗ್ಲೀಷ್ ಭಾಷೆಯಲ್ಲಿ ನೈಪು,ಣ್ಯ ವಿದ್ದುದರಿಂದ ತಮ್ಮ ಕೆಲವು ಕತೆಗಳನ್ನು ಅವರೇ ಇಂಗ್ಲೀಷ್‌ಗೆ ಅನುವಾದಿಸಿದ್ದರು ಎಂಬ ಮಾಹಿತಿಯೂ ಇಲ್ಲಿ ಸಿಕ್ಕುತ್ತೆ. ಆನಂದರು ಏಕಾಂಕ ನಾಟಕಗಳನ್ನೂ ಬರೆ ಅವುಗಳ ಗುಣಗಳನ್ನೂ ದೋಷಗಳನ್ನೂ ವಿಜಯಾಹರನ್ ಸೂಚಿಸಿದ್ದಾರೆ. ಅಲ್ಲದೆ ಆನಂದರು ಪದ್ಯಗಂಧಿ ಗದ್ಯದಲ್ಲಿ ರಚಿಸಿದ್ದ 'ಪಕ್ಷಿಗಾನ' ಎಂಬ ಕೃತಿಯ ಪರಿಚಯವನ್ನೂ ಮಾಡಿಕೊಟ್ಟಿದ್ದಾರೆ. ಇಲ್ಲಿ ಆನಂದರ ಕಾವ್ಯ ಸುಧಾಗಂಗೆ ಹರಿದಿದೆ. ಕತ್ತಲ್ಗಡಲ ತಳದಲ್ಲಿತ್ತು ಲೋಕ ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ ನಿಶಾಸುಂದರಿಯ ವಜ್ರಖಚಿತ ನೀಲಾಂಬರದ ಹರಡಿದ ಸೆರಗಿನಂತೆ ಶೋಭಿಸುತ್ತಿತ್ತು ನೀರವ! ನಿಶ್ಚಲ! ಇತ್ಯಾದಿ ವಚನಗಳು. ಇವುಗಳನ್ನೆಲ್ಲ ಅದ್ಭುತವಾಗಿ ವಿಮರ್ಶಿಸಿದ್ದಾರೆ ವಿಜಯಾ ಹರನ್. ಇಷ್ಟಲ್ಲದೆ ಆನಂದರ ಅಪ್ರಕಟಿತ ಸಾಹಿತ್ಯದ ಮೇಲೂ ಬೆಳಕನ್ನು ಚೆಲ್ಲಿದ್ದಾರೆ. ಹೀಗಾಗಿ ಆನಂದರ ಸಮಗ್ರ ಜೀವನದ ಮತ್ತು ಸಂಪೂರ್ಣ ಸಾಹಿತ್ಯದ ಗಂಭೀರ ನಿರೂಪಣೆ ಈ ಗ್ರಂಥದಲ್ಲಿದೆ. ಇದೊಂದು ಸಾರ್ಥಕ ಅಧ್ಯಯನ. ಡಾ.ವಿಜಯಾಹನ್ ಅವರಿಗೆ ಹಾರ್ದಾಭಿನಂದನೆ. ಆಕರ : ಮೈಸೂರು ಮಿತ್ರ ೨೮.೬.೨೦೨೩

Saturday, June 24, 2023

ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರಕ್ಕೆ ಮಂಜುನಾಯಕ ಚಳ್ಳೂರು ಭಾಜನ-2023

ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರಕ್ಕೆ ಮಂಜುನಾಯಕ ಚಳ್ಳೂರು ಭಾಜನ: ಯುವ ಕತೆಗಾರ ಮಂಜುನಾಯಕ ಚಳ್ಳೂರು ಅವರ 'ಫೂ ಮತ್ತು ಇತರ ಕಥೆಗಳು' ಕಥಾ ಸಂಕಲನಕ್ಕೆ 2023ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಲಭಿಸಿದೆ.

Sunday, June 18, 2023

ರಾಮು ಕವಿತೆಗಳು- -ಮಳೆ , ನೀನಾದರೂ

ಮಳೆ ಬಂತು ಮಳೆ ಆಹ ಮುಳ್ಳುಬೇಲಿಯಲ್ಲೂ ಹಾಡು ಉಕ್ಕಿ ಉಕ್ಕಿ. ಅದೋ ಮಳೆ ಅಲ್ಲಿ, ಓ ಇಲ್ಲಿ, ಎಲ್ಲೆಲ್ಲು – ನನ್ನ ಹುಡುಗಿಯ ಕೆನ್ನೆಗುಳಿ ಮೇಲು, ಈ ಹಾಡ ಮೇಲು. ಆ ದಿಕ್ಕು ಈ ಗಾಳಿ ಆ ಬಾನು ಎಲ್ಲ ದರೊಳಗೆ ತಲ್ಲೀನ. ಹದಿಹರೆಯ ನೆಲಗನ್ನೆ ಮೀಯುವುದ ಕದ್ದು ಇಣುಕುತಿರೊ ಖುಷಿಗಾರ ಲೋಕ. ನಾದ ಅಲ್ಲ ಇದು ಗುಡುಗು ಆದರೂ ಹಾಡೆ. ಆ ಮರಳ ತೊಡೆಯೇರಿ ಇಳಿದಾಡೊ ತೊರೆ. ಆ ತೊರೆಯ ಕಂಡು ಜಾರುವ ಮರಳು ಎಲ್ಲ ದೇವರು ಈಗ, ಕಂಡದ್ದೆಲ್ಲ ಮೂರ್ತಿ - ಈ ಮಂದ ಬೆಳಕಲ್ಲಿ ಅನಿಸಿದ್ದೆಲ್ಲ ಮಂತ್ರ – ನನ್ನ ಹಸುವಿಗೆ ಮೇವು ಇಕ್ಕಿ ನಾನಿಗೆ ಮುತ್ತು ನೆನೆದ ನಾಯಿಗೆ ಹಸುಬೆ ಎಲ್ಲ ನೈವೇದ್ಯ. ಮುಳ್ಳು ಮುಳ್ಳಿಗೆ ಹೂವು ಎಲ್ಲೆಲ್ಲು ಅವತಾರ’ ಈ ಕಾಫಿ ಬಟ್ಟಲೊಳಗೆ, ಈ ರೊಟ್ಟಿ ತುಂಡೊಳಗೆ ಅವನ ಅಂಬಲಿಯೊಳಗೆ, ಈ ಚಿಟುಕೆ ನಶ್ಯದೊಳಗು ತುದಿಯಲ್ಲಿ ಚಿಗುರಿ ಒಣ ಚೆಕ್ಕೆ ಸುಕ್ಕುಗಳ ಮೈಯ ಬಿಟಕೊಂಡು ತೊಯ್ದು ಪಟ ಪಟ ನಿಂತ ಈ ಮರದ ವಾಸನೆಯಂಥ ವಾಸನೆಯ ಜೀವಂತ ದೇವರು ಬಂತು, ಇದೊ ಹಿಡಕೊ ಮುಟ್ಟು. ಯಾವುದೋ ನಿಸ್ಸೀಮ ದೀಪದ ಕುಡಿಯ ನೆಟ್ಟ ಹಾಗೆ ನೆನ್ನೆ ಬೋಳುಬೋಳಾಗಿದ್ದ ಮರದಿಂದ ಇವತ್ತು ಥರಾವರಿ ಚಿಗುರು ಕಣ್ಣು ಈ ಮಳೆದನಿಯಲ್ಲಿ ಹೊಳೆದನಿ ಮಲಗಿ, ಹೊಳೆದಡದ ಬಳೆದನಿ ಮಲಗಿ ಖುಷಿಯ ಕಣ್ಣೀರಲ್ಲಿ ಪಿಸುಮಾತು ಸ್ವಪ್ನ ದನಿ ಮಲಗಿ ಮಳೆಬೆರಳಲ್ಲಿ ರೋಮಾಂಚತಂತಿಯ ಮೀಟಿ ದೇವಜಾತಿ ಎಂಥ ಲಯವಿನ್ಯಾಸ ಅಮೃತ ಗಾನ ನಾಳೆ ತರಗಾಗೊ ನಿನ್ನೆಯ ಚಿಗುರೆ, ತರಗಾಗಿ ಮತ್ತೆ ಚಿಗುರಾಗಿ ಬಿದ್ದೆದ್ದು ಜನ್ಮಗಳ ಹರಿಸುತಿಹ ಮಳೆಯೆಂಬ ಹೊಳೆಯೇ ಈ ಚಿಗುರ ಮುಟ್ಟುತಲೆ, ನಾಳಿನ ತರಗ ಮುಟ್ಟಿದ ಹಾಗೆ ಎನಿಸಿಬಿಟ್ಟರೆ ನನಗೆ! ಹಾಗಾಗದಿರಲಿ ನಿನ್ನ ತೆರೆ ನಿನ ಹಕ್ಕಿ ನಿನ ಚಿಗುರು ನನ್ನ ಅಂಗೈಯೊಳಗೆ ಕುಣಿದಾಡಲಿ ಕುಣಿಕುಣಿದು ಉದಿರಾಡಲಿ. ಇದೊ ಇನ್ನೊಂದು ಹನಿ ಬಿತ್ತು ಈ ಬೀಜ ಕಣ್ತೆರೆದು ಚಿಗುರಾಡಲಿ ********* ನೀನಾದರೂ ಚಿಟ್ಟೆಯಾಗಬೇಕಿರೊ ಹುಳ ಚಿಗುರೆಲೆಯ ಮುಕ್ಕುತ್ತ ಗಿಡದ ಮೇಲೆ ಅದ ಹಿಡಿದು ಹಸಿದ ಮರಿಗಳಿಗೆ ಗುಟುಕಿಡಲಿರೊ ಹಕ್ಕಿ ಕೊಕ್ಕು ಗಿಡದ ಚಿಗುರ ಸಂಕಟವನ್ನೂ ಹಕ್ಕಿಯ ಹಸಿವನ್ನೂ ಹುಳದ ನೋವನ್ನೂ ಒಟ್ಟಿಗೆ ನೋಡುತ್ತ ನಾನು ಯಾರ ಪರ ನಿಲ್ಲಲಿ ಹಸಿವೆಂಬ ಸುಡುಗಾಡ ಹೆಜ್ಜೆಹೆಜ್ಜೆಗು ಸೃಷ್ಟಿಸಿದ ದೈವವೇ ನೀನಾದರೂ ಒಂದು ನಿಲುವ ತಾಳು. ರೈತನ ಸಾವು ಇಂದಿನನುವರಕ್ಕೆ ತನ್ನ ಬಾಳೆ ಬಲಿ ಎಂದು ತನ್ನನ್ನೆ ನೈವೇದ್ಯ ತಣಿಗೆಯಲ್ಲಿಟ್ಟುಕೊಂಡ. ಇಂದೆ ತೀರಲಿದೆ ಕರುಳ ತೊಡಕು. ಬಗೆಯ ತಂಬಿಗೆಯಲ್ಲಿ ನೂರೊಂದು ದೇವನದಿಗಳ ನೀರ ನೆನೆದು ಕರೆಸಿ ಅಂಗುಲಂಗುಲ ತೊಳೆದು ಆ ಮೈಗೆ ನಿಟ್ಟುಸಿರ ಘನವಸನ ತೊಡಿಸಿ ಅಂಗೈಗೆ ಮನದ ಮನೆದೈವ ಬರಿಸಿಕೊಂಡು ಕರುಳತುದಿ ಚಿವುಟಿ ಎಡೆಯಿಟ್ಟು ತಾ ಹಿಡಿದ ನೀರಾಜನದಲ್ಲಿ ಬೆಳಗಿದ್ದು ತನ್ನದೇ ಪ್ರೇತ-ಮುಖ – ಬಿದ್ದ ತೋಳು. ತಾನು ಬಿತ್ತದ ಬೀಜ ಮೊಳಕೆಯಲೆ ಸತ್ತಿತ್ತು ಹೊಲದ ತುಂಬಾ ಬೆಳೆದಿದ್ದು ವಿಷತೀಟೆ ಹಾವು ಮೆಕ್ಕೆ’ ತನ್ನ ಕರುಳಕುಡಿಯೊಂದದನ್ನೂ ದಿನದಿನದ ಸೇನಾನಿ ಪಟ್ಟಕ್ಕೆ ನಿಗದಿ ಮಾಡಿ. ಪೈರಹುಳಕ್ಕೆಸೆದ ಪಾಷಾಣಬಾಣವನ್ನೇ ತನ್ನೆದೆಗೆ ಗುರಿಯಿಟ್ಟು ಹೆದೆಯೆಳೆದು ಭೋರ್ಗರೆಸಿ ಜೀವ ತೆಗೆದ. ನಾಳೆ ನಾಳಿದರೊಳಗೆ ತೀರುತ್ತದೆ ಇಡೀ ಸಂಸಾರದ ಋಣದ ತೊಡಕು. ಮೋಡದೊಳಗಿದ್ದಾಗ ಸಿಡಿಲ ಮಗ್ಗುಲಲ್ಲೇ ಇದ್ದ ಪುಟ್ಟ ಹನಿ ಹೇಗೋ ಬಚಾವಾಗಿ ಇಳಿದು ಬಂದು ಈಗ ಈ ಕೆಸವಿನೆಲೆ ಮೇಲೆ ಕೂತಿದೆ ಇನ್ನೂ ನಡುಗುತ್ತಿದೆ. ************* Chittanna Navar ಅವರಿಗೆ Reply3h H.S.raghavendra Rao 6h ·

ಎಚ್ ಎಸ್ ರಾಘವೇಂದ್ರ ರಾವ್ - ರಾಮು ಕವಿತೆಗಳ ಕವಿ ರಾಮು

ನೊಂದ ಜೀವಂ ತಣ್ಣಗಾಯ್ತು…” ಈ ರಾಮು ಬಗ್ಗೆ ಏನು ಬರೆಯುವುದು? ಹೀಗೆ ಬರೆಯುತ್ತಿರುವೆನೆಂದು ಗೊತ್ತಾದರೆ, “ದಮ್ಮಯ್ಯ ಅಂತೀನಿ. ಬೇಡ ಸಾರ್” ಎಂದು ಕಾಲು ಹಿಡಿಯುವವರು ಅವರು. ಈಗ ಅವರು ಇಲ್ಲ, ನನ್ನಂತಹವರು ಬರೆಯಬಹುದು. ಅವರ ಕ್ಷಮೆ ಕೇಳಿ ಈ ಬರೆಹ. ಸಕಲ ಜೀವಾತ್ಮರನ್ನೂ ಎದೆಯೊಳಗಿಟ್ಟುಕೊಂಡು ಪೊರೆಯುತ್ತಿದ್ದ ಈ ಗೆಳೆಯನ ಕವಿತೆ ಮತ್ತು ಜೀವನ ಎರಡರ ಮೂಲಸೆಲೆಯೂ ಒಂದೇ. ಆದು ಎಂದಿಗೂ ಬತ್ತದ ಪ್ರೀತಿಯ ಒರತೆ. ಅವರ ಜೀವನದ ಹಲವು ಹಂತಗಳನ್ನು ಒಟ್ಟಂದದಲ್ಲಿ ನೋಡುವ, ಇಂಥ ಬರೆಹದ ಪುಟ್ಟ ಚೌಕಟ್ಟಿನಲ್ಲಿ ನೋಡುವ ಪ್ರಯತ್ನ ನನ್ನದು. ಇವರು ತೀವ್ರಗಾಮಿಯಾದ ಎಡಪಂಥೀಯ ಹೋರಾಟಗಾರನಾಗಿ, ಜನಪರವಾದ, ಜನರನ್ನು ತಲುಪಿದ ಪತ್ರಕರ್ತನಾಗಿ, (ಮೈಸೂರಿನ ‘ಆಂದೋಲನ’ ಪತ್ರಿಕೆಯ ‘ಹಾಡು-ಪಾಡು’ ಪುರವಣಿಯಲ್ಲಿ) ಕನ್ನಡ ಮತ್ತು ಬೇರೆ ಹಲವು ಭಾಷೆಗಳ ಮತ್ತು ಎಲ್ಲ ಕಾಲದ ಕವಿತೆಗಳ ಲಯವಿನ್ಯಾಸಗಳನ್ನು ಒಳಗು ಮಾಡಿಕೊಂಡು, ವಿಶಿಷ್ಠ ‍ಶೈಲಿಯನ್ನು ಕಟ್ಟಿಕೊಂಡು ತನ್ನದೇ ಆದ ಲೋಕದರ್ಶನವಿದ್ದ ಕವಿಯಾಗಿ, ಎಳೆಯ ಕವಿಗಳ ಕಿವಿಯಾಗಿ, ನೋವು ತುಂಬಿದ ಬಾಣ-ಹಾಸಿಗೆಯಲ್ಲಿ ಮಲಗಿದ್ದರೂ “ಶುಭ ನುಡಿವ” ಶಕುನದ ಹಕ್ಕಿಯಾಗಿ ‘ತುಂತುಂಬಿ’ ಬದುಕಿದರು. ‘ಅಗ್ನಿಸೂಕ್ತ’, ‘ರಾಮು ಕವಿತೆಗಳು’ ಮತ್ತು ‘ವಿಷ್ಣುಕ್ರಾಂತಿ’ ಇವು ಇವರ ಅನುಮತಿಯಿಲ್ಲದೆ ಅಥವಾ ಇವರಿಂದ ಬೈಸಿಕೊಂಡು ಗೆಳೆಯರು ಹೊರತಂದ ಸಂಕಲನಗಳು. ‘ಅವು ಅಗ್ನಿಗೇ ಸೂಕ್ತ ಸಾರ್’ ಎಂದು ಅವರೇ ಜೋಕ್ ಮಾಡುತ್ತಿದ್ದರು. ಅವರು ಇಷ್ಟು ಕಡಿಮೆ ಬರೆದರೂ ಕನ್ನಡದ ಬಹಳ ಒಳ್ಳೆಯ ಕವಿಗಳಲ್ಲಿ ಒಬ್ಬರೆಂದು ನಾನು ಪ್ರಾಣವನ್ನೇ ಪಣವಾಗಿಟ್ಟು ಹೇಳಬಲ್ಲೆ. ಕವಿತೆಗೆ ಬೇಕಾದ ಸಾಮಗ್ರಿಗಳು ಅವರಲ್ಲಿ ಇಡಿಕಿರಿದಿದ್ದ ಬಗೆ ಒಂದು ವಿಸ್ಮಯ. ವಿಷ್ಣುಕ್ರಾಂತಿ, ಬೀಬಿ ನಾಚ್ಚಿಯಾರ್, ಅಮ್ಮು-ವಂಕಿಳಂತಹ ನೀಳ್ಗವನಗಳು, ‘ಮಳೆ’, ‘ಅವನು-ಅವಳು’, ‘ಸುಗ್ಗಿ’, ‘ಅವಳು’ ಮುಂತಾದ ನೀಳ್ಗವನಗಳು ಮತ್ತು ಹತ್ತು ಹಲವು ಭಾವನಿಬಿಡವಾದ ಸಂಕೀರ್ಣ ಕವಿತೆಗಳು ಈ ಮಾತಿಗೆ ಸಾಕ್ಷಿ. ಇವುಗಳಿಂದ ಬಿಡಿ ಸಾಲುಗಳನ್ನು ತೆಗೆದು ಕೊಡುವುದು ಅಂತಹ ಕವಿತೆಗೆ ಮಾಢುವ ಅವಮಾನ. ನಾನು ಒಂದೋ ಎರಡೋ ಕವಿತೆಗಳನ್ನು ಇಡಿಯಾಗಿ ಕೊಡುತ್ತೇನೆ. ದಯವಿಟ್ಟು ಅವರ ಕವಿತೆಗಳನ್ನು ಓದಿ. ಸೃಜನಶೀಲತೆಯಂತೆಯೇ ಇವರ ವಿಮರ್ಶನ ಶಕ್ತಿಯೂ ಹರಿತವಾದುದು. ಬರವಣಿಗೆಯ ಹೃದಯವನ್ನು ಗುರುತಿಸುವ, ಅದರ ಕೊರತೆಗಳನ್ನೂ ಗ್ರಹಿಸುವ ಶಕ್ತಿ ಅವರಿಗ ಇತ್ತು. ಅವರು ‘ಐಕಾನು’ಗಳಿಗೆ ಮರುಳಾಗದೆ ದಿಟವನ್ನು ಅರಸುತ್ತಿದ್ದರು. ‘ಕುಮಾರವ್ಯಾಸ ಭಾರತ’ ಮತ್ತು ‘ಆದಿಪುರಾಣ’ಗಳನ್ನು ಕುರಿತು ಬರೆದ ಲೇಖನಗಳು ಮತ್ತು ತೋಂಡಿಯಲ್ಲಿ ಹಂಚಿಕೊಂಡ ಅನಿಸಿಕೆಗಳು ಈ ಮಾತಿಗೆ ಸಾಕ್ಷಿ. ಹಾಗೆ ನೋಡಿದರೆ ಅವರು ಕಿ.ರಂ. ನಾಗರಾಜ ಅವರ ಫಿರ್ಕಾಗೆ ಸೇರಿದವರು. ಆದರೆ ಅವರಂತೆ ನಾಡು ತಿರುಗಿ ಭಾಷಣಗಳನ್ನೂ ಮಾಡಲಿಲ್ಲ. ತಮ್ಮ ಆಸುಪಾಸಿನಲ್ಲಿ ಬಂದವರನ್ನು ಅವರು ಬೆಳೆಸಿದ ಬಗೆ ಅನುಪಮವಾದುದು. ಕೇವಲ ಸಾಹಿತ್ಯವಲ್ಲ, ಅದು ಲೋಕಶಿಕ್ಷಣ. ಈ ಮಾತಿಗೆ ಮೈಸೂರಿನ ಕುಕ್ಕರಹಳ್ಳಿಯ, ಅಷ್ಟೇ ಏಕೆ, ಇಡೀ ಕರ್ನಾಟಕದ ಹತ್ತು ಹಲವು ಗಂಡು ಹೆಣ್ಣು ಜೀವಗಳು ಸಾಕ್ಷಿ. ದೇಹದೇಗುಲದ ಬಗ್ಗೆ ಒಂದಿನಿತು ಲಕ್ಷ್ಯ ಕೊಟ್ಟಿದ್ದರೆ, ಸ್ವಾವಲಂಬನೆ-ಪರಾವಲಂಬನೆಗಳ ದ್ವಂದ್ವದ ಒಳಗುದಿ ನರಳಿಸದಿದ್ದರೆ ಈ ಬಾಳು ಇನ್ನಷ್ಟು ಮುಂದುವರೆಯುತ್ತಿತ್ತೇನೋ. ನಮ್ಮೆಲ್ಲರಿಗಾಗಿ, ಇವರನ್ನು ಇಷ್ಟು ಕಾಲ ಕಾಪಾಡಿಕೊಂಡ ರಾಮು ಅವರ ತಾಯಿ ಸುಶೀಲಮ್ಮನವರು, ರಾಜಿ, ಕುಮುದ, ವೇಣು, ಶೈಲಜ, ತುಕಾರಾಮ್, ರಾಘವೇಂದ್ರ, ಸಚ್ಚಿ, ಸ್ನೇಹ, ಓಂಕಾರ್, ಓ.ಎಲ್ ಎನ್, ದೂರವಿದ್ದರೂ ಅವರಿಗೆ ತುಂಬ ಹತ್ತಿರವಿದ್ದ ಆತ್ಮೀಯ ಜೀವಗಳು ಎಲ್ಲರಿಗೂ ಕೈಯೆತ್ತಿ ಮುಗಿಯುತ್ತೇನೆ. ‘ರಾಮು ಯೂನಿವರ್ಸಿಟಿ’ ಮುಗಿಯದಿರಲಿ. ಅದು ನಮ್ಮಲ್ಲಿ ನಿಮ್ಮಲ್ಲಿ ಉಳಿಯಲಿ, ಬೆಳೆಯಲಿ.