Powered By Blogger

Sunday, June 18, 2023

ರಾಮು ಕವಿತೆಗಳು- -ಮಳೆ , ನೀನಾದರೂ

ಮಳೆ ಬಂತು ಮಳೆ ಆಹ ಮುಳ್ಳುಬೇಲಿಯಲ್ಲೂ ಹಾಡು ಉಕ್ಕಿ ಉಕ್ಕಿ. ಅದೋ ಮಳೆ ಅಲ್ಲಿ, ಓ ಇಲ್ಲಿ, ಎಲ್ಲೆಲ್ಲು – ನನ್ನ ಹುಡುಗಿಯ ಕೆನ್ನೆಗುಳಿ ಮೇಲು, ಈ ಹಾಡ ಮೇಲು. ಆ ದಿಕ್ಕು ಈ ಗಾಳಿ ಆ ಬಾನು ಎಲ್ಲ ದರೊಳಗೆ ತಲ್ಲೀನ. ಹದಿಹರೆಯ ನೆಲಗನ್ನೆ ಮೀಯುವುದ ಕದ್ದು ಇಣುಕುತಿರೊ ಖುಷಿಗಾರ ಲೋಕ. ನಾದ ಅಲ್ಲ ಇದು ಗುಡುಗು ಆದರೂ ಹಾಡೆ. ಆ ಮರಳ ತೊಡೆಯೇರಿ ಇಳಿದಾಡೊ ತೊರೆ. ಆ ತೊರೆಯ ಕಂಡು ಜಾರುವ ಮರಳು ಎಲ್ಲ ದೇವರು ಈಗ, ಕಂಡದ್ದೆಲ್ಲ ಮೂರ್ತಿ - ಈ ಮಂದ ಬೆಳಕಲ್ಲಿ ಅನಿಸಿದ್ದೆಲ್ಲ ಮಂತ್ರ – ನನ್ನ ಹಸುವಿಗೆ ಮೇವು ಇಕ್ಕಿ ನಾನಿಗೆ ಮುತ್ತು ನೆನೆದ ನಾಯಿಗೆ ಹಸುಬೆ ಎಲ್ಲ ನೈವೇದ್ಯ. ಮುಳ್ಳು ಮುಳ್ಳಿಗೆ ಹೂವು ಎಲ್ಲೆಲ್ಲು ಅವತಾರ’ ಈ ಕಾಫಿ ಬಟ್ಟಲೊಳಗೆ, ಈ ರೊಟ್ಟಿ ತುಂಡೊಳಗೆ ಅವನ ಅಂಬಲಿಯೊಳಗೆ, ಈ ಚಿಟುಕೆ ನಶ್ಯದೊಳಗು ತುದಿಯಲ್ಲಿ ಚಿಗುರಿ ಒಣ ಚೆಕ್ಕೆ ಸುಕ್ಕುಗಳ ಮೈಯ ಬಿಟಕೊಂಡು ತೊಯ್ದು ಪಟ ಪಟ ನಿಂತ ಈ ಮರದ ವಾಸನೆಯಂಥ ವಾಸನೆಯ ಜೀವಂತ ದೇವರು ಬಂತು, ಇದೊ ಹಿಡಕೊ ಮುಟ್ಟು. ಯಾವುದೋ ನಿಸ್ಸೀಮ ದೀಪದ ಕುಡಿಯ ನೆಟ್ಟ ಹಾಗೆ ನೆನ್ನೆ ಬೋಳುಬೋಳಾಗಿದ್ದ ಮರದಿಂದ ಇವತ್ತು ಥರಾವರಿ ಚಿಗುರು ಕಣ್ಣು ಈ ಮಳೆದನಿಯಲ್ಲಿ ಹೊಳೆದನಿ ಮಲಗಿ, ಹೊಳೆದಡದ ಬಳೆದನಿ ಮಲಗಿ ಖುಷಿಯ ಕಣ್ಣೀರಲ್ಲಿ ಪಿಸುಮಾತು ಸ್ವಪ್ನ ದನಿ ಮಲಗಿ ಮಳೆಬೆರಳಲ್ಲಿ ರೋಮಾಂಚತಂತಿಯ ಮೀಟಿ ದೇವಜಾತಿ ಎಂಥ ಲಯವಿನ್ಯಾಸ ಅಮೃತ ಗಾನ ನಾಳೆ ತರಗಾಗೊ ನಿನ್ನೆಯ ಚಿಗುರೆ, ತರಗಾಗಿ ಮತ್ತೆ ಚಿಗುರಾಗಿ ಬಿದ್ದೆದ್ದು ಜನ್ಮಗಳ ಹರಿಸುತಿಹ ಮಳೆಯೆಂಬ ಹೊಳೆಯೇ ಈ ಚಿಗುರ ಮುಟ್ಟುತಲೆ, ನಾಳಿನ ತರಗ ಮುಟ್ಟಿದ ಹಾಗೆ ಎನಿಸಿಬಿಟ್ಟರೆ ನನಗೆ! ಹಾಗಾಗದಿರಲಿ ನಿನ್ನ ತೆರೆ ನಿನ ಹಕ್ಕಿ ನಿನ ಚಿಗುರು ನನ್ನ ಅಂಗೈಯೊಳಗೆ ಕುಣಿದಾಡಲಿ ಕುಣಿಕುಣಿದು ಉದಿರಾಡಲಿ. ಇದೊ ಇನ್ನೊಂದು ಹನಿ ಬಿತ್ತು ಈ ಬೀಜ ಕಣ್ತೆರೆದು ಚಿಗುರಾಡಲಿ ********* ನೀನಾದರೂ ಚಿಟ್ಟೆಯಾಗಬೇಕಿರೊ ಹುಳ ಚಿಗುರೆಲೆಯ ಮುಕ್ಕುತ್ತ ಗಿಡದ ಮೇಲೆ ಅದ ಹಿಡಿದು ಹಸಿದ ಮರಿಗಳಿಗೆ ಗುಟುಕಿಡಲಿರೊ ಹಕ್ಕಿ ಕೊಕ್ಕು ಗಿಡದ ಚಿಗುರ ಸಂಕಟವನ್ನೂ ಹಕ್ಕಿಯ ಹಸಿವನ್ನೂ ಹುಳದ ನೋವನ್ನೂ ಒಟ್ಟಿಗೆ ನೋಡುತ್ತ ನಾನು ಯಾರ ಪರ ನಿಲ್ಲಲಿ ಹಸಿವೆಂಬ ಸುಡುಗಾಡ ಹೆಜ್ಜೆಹೆಜ್ಜೆಗು ಸೃಷ್ಟಿಸಿದ ದೈವವೇ ನೀನಾದರೂ ಒಂದು ನಿಲುವ ತಾಳು. ರೈತನ ಸಾವು ಇಂದಿನನುವರಕ್ಕೆ ತನ್ನ ಬಾಳೆ ಬಲಿ ಎಂದು ತನ್ನನ್ನೆ ನೈವೇದ್ಯ ತಣಿಗೆಯಲ್ಲಿಟ್ಟುಕೊಂಡ. ಇಂದೆ ತೀರಲಿದೆ ಕರುಳ ತೊಡಕು. ಬಗೆಯ ತಂಬಿಗೆಯಲ್ಲಿ ನೂರೊಂದು ದೇವನದಿಗಳ ನೀರ ನೆನೆದು ಕರೆಸಿ ಅಂಗುಲಂಗುಲ ತೊಳೆದು ಆ ಮೈಗೆ ನಿಟ್ಟುಸಿರ ಘನವಸನ ತೊಡಿಸಿ ಅಂಗೈಗೆ ಮನದ ಮನೆದೈವ ಬರಿಸಿಕೊಂಡು ಕರುಳತುದಿ ಚಿವುಟಿ ಎಡೆಯಿಟ್ಟು ತಾ ಹಿಡಿದ ನೀರಾಜನದಲ್ಲಿ ಬೆಳಗಿದ್ದು ತನ್ನದೇ ಪ್ರೇತ-ಮುಖ – ಬಿದ್ದ ತೋಳು. ತಾನು ಬಿತ್ತದ ಬೀಜ ಮೊಳಕೆಯಲೆ ಸತ್ತಿತ್ತು ಹೊಲದ ತುಂಬಾ ಬೆಳೆದಿದ್ದು ವಿಷತೀಟೆ ಹಾವು ಮೆಕ್ಕೆ’ ತನ್ನ ಕರುಳಕುಡಿಯೊಂದದನ್ನೂ ದಿನದಿನದ ಸೇನಾನಿ ಪಟ್ಟಕ್ಕೆ ನಿಗದಿ ಮಾಡಿ. ಪೈರಹುಳಕ್ಕೆಸೆದ ಪಾಷಾಣಬಾಣವನ್ನೇ ತನ್ನೆದೆಗೆ ಗುರಿಯಿಟ್ಟು ಹೆದೆಯೆಳೆದು ಭೋರ್ಗರೆಸಿ ಜೀವ ತೆಗೆದ. ನಾಳೆ ನಾಳಿದರೊಳಗೆ ತೀರುತ್ತದೆ ಇಡೀ ಸಂಸಾರದ ಋಣದ ತೊಡಕು. ಮೋಡದೊಳಗಿದ್ದಾಗ ಸಿಡಿಲ ಮಗ್ಗುಲಲ್ಲೇ ಇದ್ದ ಪುಟ್ಟ ಹನಿ ಹೇಗೋ ಬಚಾವಾಗಿ ಇಳಿದು ಬಂದು ಈಗ ಈ ಕೆಸವಿನೆಲೆ ಮೇಲೆ ಕೂತಿದೆ ಇನ್ನೂ ನಡುಗುತ್ತಿದೆ. ************* Chittanna Navar ಅವರಿಗೆ Reply3h H.S.raghavendra Rao 6h ·

No comments:

Post a Comment