Powered By Blogger

Thursday, December 31, 2020

ರಘುನಾಥ ಚ. ಹ = ಇಡುಕಿರಿದ ವಿವರಗಳ ಸೃಜನಶೀಲತೆ ಸಂಕಷ್ಟ | [ ದಂದುಗ - ಅಮರೇಶ ನುಗಡೋಣಿ ] AMARESH NUGADONI / KANNADA BEST BOOKS 2020

ಪುಸ್ತಕ ವಿಮರ್ಶೆ: ಇಡುಕಿರಿದ ವಿವರಗಳ ಸೃಜನಶೀಲತೆ ಸಂಕಷ್ಟ | Prajavani

‘ದಂದುಗ’ ಕೃತಿಯ ಕುರಿತು ಲೇಖಕ ಅಮರೇಶ ನುಗಡೋಣಿ ಅವರ ಮಾತು DANDUGA / AMARESH NUGADONI

ವಿಕ್ರಮ್ ಹತ್ವಾರ್ - ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’ { ಎಮ್. ಎಸ್. ಶ್ರೀರಾಮ್ ] M. S. SRIRAM / VIKRAM HATVAR

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’ | ಅವಧಿ । AVADHI

BVK TALKS - Prasanna ಬಿ. ವಿ. ಕಾರಂತ ----ಪ್ರಸನ್ನ / B. V. KARANTH /Prasanna

ಎಂ. ವ್ಯಾಸರ ಕೃತಿಗಳ ಕುರಿತು ಕಿ.ರಂ ಉಪನ್ಯಾಸ | Ki. Ram Nagaraj Lectureon M. Vy...

ಎಂ. ವ್ಯಾಸರ ಕೃತಿಗಳ ಕುರಿತು ಕಿ.ರಂ ಉಪನ್ಯಾಸ M VYASA / NAGARAJ

ಎಂ. ವ್ಯಾಸರ ಕೃತಿಗಳ ಕುರಿತು ಕಿ.ರಂ ಉಪನ್ಯಾಸ – ಋತುಮಾನ

Friday, December 25, 2020

Penkunju Kavitha with Lyrics | Sugathakumari ಸುಗತ ಕುಮಾರಿ

sugathakumari Life story / സുഗതകുമാരി ജീവിത കഥ ಸುಗತಕುಮಾರಿ ಮಲಯಾಳಮ್ ಕವಯಿತ್ರಿ

Honnemaradu |ಹೊನ್ನೆ ಮರಡು ತಾಳಗುಪ್ಪ.

ಹಿರಿಯ ಸಾಹಿತಿ ನಾ.ಸು. ಭರತನಹಳ್ಳಿ ನಿಧನ | N. S . Bharatanahalli

ಹಿರಿಯ ಸಾಹಿತಿ ನಾ.ಸು. ಭರತನಹಳ್ಳಿ ನಿಧನ | Prajavani: ಹಿರಿಯ ಸಾಹಿತಿ ನಾ.ಸು. ಭರತನಹಳ್ಳಿ (84), ಶಿರಸಿಯ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಪತ್ರಕರ್ತರಾಗಿ, ಪತ್ರಿಕೆಯೊಂದರ ಸಂಪಾದಕರಾಗಿ, ಸೃಜನಾತ್ಮಕ ಕಥೆ, ಕಾದಂಬರಿ ಲೇಖಕರಾಗಿ ಸಾಹಿತ್ಯಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದ ಅವರು ಅಂಕಣಕಾರರಾಗಿಯೂ ಹೆಸರು ಮಾಡಿದ್ದರು. ತಾಲ್ಲೂಕು, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳ ಸರ್ವಾಧ್ಯಕ್ಷರಾಗಿದ್ದ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ

ಕೇಶವ ಉಚ್ಚಿಲ್ ನಿಧನ | KESHAVA UCHil

ಕೇಶವ ಉಚ್ಚಿಲ್ ನಿಧನ | | ಅವಧಿ । AVADHI

Sunday, December 6, 2020

ಬಿ ಎ ವಿವೇಕ ರೈ B A VIVEK RAI: Dalit Sahitya Sammelana Inauguration -1998 ಬಿ. ಎ. ವಿವೇಕ ರೈ

The erosion of Karnataka's heritage, brick by brick -PavanKumar H ಪವನ್ ಕುಮಾರ್ ಎಚ್ .

The erosion of Karnataka's heritage, brick by brick | Deccan Herald

Tumi Dusokut Kajol Lole (Official Video), The Seventh String, a film by ...Baharul Islam{ಅಸ್ಸಾಮಿ ಹಾಡು }

ಶಶಿಧರ ಹಾಲಾಡಿ - ತಾಳಿಕೋಟೆ ಯುದ್ದದ ನಂತರವೂ ಹೋರಾಡಿದ ವಿಜಯನಗರದ ಅರಸ/ Shashidhara Halady / Talikote War

ತಾಳಿಕೋಟೆ ಯುದ್ಧದ ನಂತರವೂ ಹೋರಾಡಿದ ವಿಜಯನಗರದ ಅರಸ * ಶಶಿಧರ ಹಾಲಾಡಿ ------ ಹಂಪೆಯನ್ನು ಹಾಳು ಹಂಪೆ ಎಂದು ಬ್ರಿಟಿಷರು ಕರೆದರು. ಅವರ ಹೆಚ್ಚಿನ ವಿಚಾರಗಳನ್ನು ಅನುಕರಣೆ ಮಾಡುವ ನಮ್ಮವರು, ಹಾಳು ಹಂಪೆ ಎಂಬ `ವಿಶೇಷಣ'ವನ್ನು ನಿರಂತರವಾಗಿ ಉಪಯೋಗಿಸುತ್ತಲೇ ಬಂದರು. ಹಾಳು ಹಂಪೆ, ಅಳಿದುಳಿದ ಹಂಪೆ, ರೂಯಿನ್ಸ್ ಆಫ್ ಹಂಪಿ ಇವೇ ಮೊದಲಾದ ಶಬ್ದಗಳಿಗೆ ನಮ್ಮವರು ಎಷ್ಟು ಒಗ್ಗಿ ಹೋಗಿz್ದÉೀವೆಂದರೆ, 15-16ನೆಯ ಶತಮಾನದಲ್ಲಿ ಇಡೀ ವಿಶ್ವದಲ್ಲೇ ಎರಡನೆಯ ಅತಿ ದೊಡ್ಡ ನಗರ ಎನಿಸಿದ್ದ ಹಂಪೆಯನ್ನು ಆ ರೀತಿ ಕರೆದಾಗ, ಹೆಚ್ಚಿನವರಿಗೆ ಬೇಸರ ಎನಿಸುವುದೇ ಇಲ್ಲ! ಹಂಪೆಯ ವಿವರಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಪುಸ್ತಕಗಳು ಸಹ `ಹಾಳು ಹಂಪೆ' ಎಂಬ ಶಬ್ದವನ್ನು ಉಪಯೋಗಿಸುತ್ತಿವೆ. ಇವುಗಳ ಪೈಕಿ `ಉಳಿದ ಹಂಪಿ ಮತ್ತು ಗುರು ಬಿಷ್ಟಪ್ಪಯ್ಯನವರು' ಎಂಬ ಪುಸ್ತಕವನ್ನು ರಚಿಸಿದ ಲೇಖಕಿ, ಸಂಶೋಧಕಿ ವಸುಂಧರಾ ದೇಸಾಯಿಯವರು ಹಂಪಿಯ ಕುರಿತು ಅಭಿಮಾನವನ್ನು ತೋರಿ, ತುಸು ಭಿನ್ನವಾಗಿ ಕಾಣುತ್ತಾರೆ. ಹಾಳು ಹಂಪೆ ಎಂದು ಕರೆಯುವ ಬದಲು, ಉಳಿದಿರುವ ಹಂಪಿ ಎಂದು ಕರೆಯೋಣ ಎಂಬ ಅವರ ಅಭಿಮತ ನಿಜಕ್ಕೂ ಸಕಾರಾತ್ಮಕ. 1565ರ ಯುದ್ಧದಲ್ಲಿ ವಿಜಯನಗರ ಸೇನೆಯು ಸೋತು ಹೋದ ನಂತರ, ಹಂಪೆಯಲ್ಲಿ ಏನು ಉಳಿಯಿತು ಎಂಬುದನ್ನು ಗುರುತಿಸಿ, ಅಭಿಮಾನ ಪಟ್ಟು ಬೆಲೆಕೊಡೋಣ ಎಂಬ ವಿಚಾರವು ಒಳ್ಳೆಯದೇ. ನಮ್ಮ ನಾಡಿನ ಜನಸಾಮಾನ್ಯರಲ್ಲಿ ಒಂದು ತಿಳಿವಳಿಕೆ ಇದೆ. 1565ರ ತಾಳಿಕೋಟೆ ಯುದ್ಧದ ನಂತರ, ವಿಜಯ ನಗರ ಅರಸರು ಹಂಪೆಯನ್ನು ತೊರೆದರು ಮತ್ತು ಆ ನಂತರ ಇಡೀ ಸಾಮ್ರಾಜ್ಯವು ಅನಾಥವಾಯಿತು ಎಂಬ ಅಭಿಪ್ರಾಯ ಅದು. ಈ ತಿಳಿವಳಿಕೆಯ ಮೊದಲ ಭಾಗ ನಿಜ - ಹಂಪೆಯತ್ತ ಧಾವಿಸುತ್ತಿದ್ದ ಶತ್ರು ಸೈನ್ಯಕ್ಕೆ ಬೆದರಿ, ರಾಜಪರಿವಾರವು ಪೆನುಕೊಂಡೆಗೆ ಸಾಗಿ, ಅಲ್ಲಿಗೆ ರಾಜಧಾನಿಯನ್ನು ಬದಲಿಸಲಾಯಿತು. ಆದರೆ, ಆ ನಂತರ ಇಡೀ ಸಾಮ್ರಾಜ್ಯವು ಅನಾಥವಾಯಿತು ಎಂಬ ತಿಳಿವಳಿಕೆ ಪೂರ್ತಿ ನಿಜವಲ್ಲ. ತಾಳಿಕೋಟೆ ಯುದ್ಧದ ನಂತರ, ಹಂಪೆಯನ್ನು ಪುನರ್ ನಿರ್ಮಿಸಿ, ವಿಜಯನಗರ ಸಾಮ್ರಾಜ್ಯವನ್ನು ಮತ್ತೆ ಕಟ್ಟಲು ಪ್ರಯತ್ನಗಳೇ ನಡೆದಿಲ್ಲ ಎಂಬ ತಿಳಿವಳಿಕೆ ನಮ್ಮ ರಾಜ್ಯದ ಜನಸಾಮಾನ್ಯರಲ್ಲಿದೆ. ಇದಕ್ಕೆ ಒಂದು ಕಾರಣವೆಂದರೆ, ಆ ಸಾಮ್ರಾಜ್ಯದ ನಂತರದ ಹೋರಾಟದ ಜಾಗಗಳು, ರಾಜಧಾನಿ ಎನಿಸಿದ್ದ ಪೆನುಗೊಂಡೆ, ಚಂದ್ರಗಿರಿಗಳು ನೆರೆಯ ರಾಜ್ಯದಲ್ಲಿ ಸೇರಿಹೋಗಿದ್ದು. ಈ ಹಿನ್ನೆಲೆಯಲ್ಲೇ, ಹಂಪೆಯ ಸ್ಥಿತಿಯನ್ನು ವಿಶ್ಲೇಷಿಸುವ ಕೆಲವು ಟೀಕಾಕಾರರು, ಹಂಪೆಯಲ್ಲಿ ವೈಷ್ಣವ ದೇಗುಲಗಳು ಮಾತ್ರ ನಾಶಗೊಂಡಿವೆ, ಶೈವ ದೇವಾಲಯಗಳು ಮತ್ತು ವಿರೂಪಾಕ್ಷನ ಮಂದಿರವು ಏಕೆ ಸುಸ್ಥಿತಿಯಲ್ಲಿವೆ ಎಂಬ ವಾದವನ್ನು ಮುಂದಿಟ್ಟಿದ್ದಾರೆ. ವಿರೂಪಾಕ್ಷ ದೇಗುಲ ಮಾತ್ರ ಸುಸ್ಥಿತಿಯಲ್ಲಿರುವುದು ಹೇಗೆ ಎಂಬ ಪ್ರಶ್ನೆಯನ್ನೂ ಕೆಲವರು ಬಹುವಾಗಿ ಚರ್ಚಿಸಿದ್ದುಂಟು. ಆ ನಂತರದ ದಶಕಗಳಲ್ಲಿ, ಹಂಪೆಯನ್ನು ಮತ್ತೆ ಕಟ್ಟುವ ಪ್ರಯತ್ನಗಳು ನಡೆದಿದ್ದವು ಮತ್ತು ಬಿಷ್ಟಪ್ಪಯ್ಯನ ಗೋಪುರ ಎಂಬ ಬೃಹತ್ ನಿರ್ಮಾಣವನ್ನು ಮಾಡಿಸಿದ ಬಿಷ್ಟಪ್ಪಯ್ಯನಂತಹ ಕೆಲವು ಹೋರಾಟಗಾರರು ಅಲ್ಲಿ ಪುನರ್ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿದ್ದರು ಎಂಬ ವಿಚಾರವನ್ನು ಹೆಚ್ಚು ಪ್ರಚಾರಕ್ಕೆ ತರುವ ಅವಶ್ಯಕತೆ ಇದೆ. 1567ರ ಸಮಯದಲ್ಲಿ ಪೆನುಕೊಂಡೆಯಲ್ಲಿ ನೆಲಸಿದ್ದ ರಾಜ ತಿರುಮಲರಾಯನೂ ಹಂಪೆಯನ್ನು ಮತ್ತೊಮ್ಮೆ ಕಟ್ಟಲು ಪ್ರಯತ್ನ ನಡೆಸಿದ್ದುಂಟು. 1565ರ ಸೋಲಿನ ನಂತರ, ವಿಜಯ ನಗರ ಸಾಮ್ರಾಜ್ಯವು ತೀವ್ರ ಹೊಡೆತ ತಿಂದರೂ, ನಂತರದ ವರ್ಷಗಳಲ್ಲಿ ವಿಜಯನಗರ ಅರಸರು ಸಾಕಷ್ಟು ಹೋರಾಟ ನಡೆಸಿದ್ದರು. ತಾಳಿಕೋಟೆಯ ಯುದ್ಧದಲ್ಲಿ ರಾಜಧಾನಿಯನ್ನೇ ಕಳೆದುಕೊಳ್ಳುವಂತಹ ದೊಡ್ಡ ಸೋಲನ್ನು ಅನುಭವಿಸಿದ್ದು ನಿಜ. ಆದರೆ, ಆ ನಂತರದ ಅರಸರು ಶಕ್ತಿ ಕುದುರಿಸಿಕೊಂಡು, ತಮ್ಮ ವೈರಿಗಳ ವಿರುದ್ಧ ಸಾಕಷ್ಟು ಹೋರಾಟವನ್ನು ನಡೆಸಿದರು. ವಿಜಯನಗರ ಸಾಮ್ರಾಜ್ಯದ ರಾಜಧಾನಿಯು ಪೆನುಗೊಂಡೆಗೆ ಬದಲಾದ ನಂತರ, ಗೋಲ್ಕೊಂಡಾ ಮತ್ತು ಬಹಮನಿ ಸುಲ್ತಾನರ ಸೇನೆಯ ವಿರುದ್ಧ ಹೋರಾಟ ನಡೆಸಿದವರಲ್ಲಿ ವೆಂಕಟಪತಿ ರಾಜು ಅಥವ ಎರಡನೆಯ ವೆಂಕಟ ಪ್ರಮುಖ ರಾಜ. 1565ರಲ್ಲಿ ಅಳಿಯ ರಾಮರಾಯನು ತಾಳಿಕೋಟೆ ಯುದ್ಧದಲ್ಲಿ ಹತನಾದ ನಂತರ, ತಿರುಮಲ ದೇವರಾಯ (1565-1572) ಮತ್ತು ಒಂದನೇ ಶ್ರೀರಂಗ (1572-1586) ರಾಜ್ಯದ ಚುಕ್ಕಾಣಿ ಹಿಡಿದರು. ಪೆನುಗೊಂಡೆಯ ಹೊಸ ರಾಜಧಾನಿಯನ್ನು ಕಟ್ಟುತ್ತಾ, ಉತ್ತರದಿಂದ ನಿರಂತರವಾಗಿ ಆಕ್ರಮಣ ಮಾಡುತ್ತಿದ್ದ ವೈರಿಪಡೆಯನ್ನು ಎದುರಿಸುವ ದೊಡ್ಡ ಸವಾಲು ಅವರ ಮುಂದಿತ್ತು. ಜತೆಯಲ್ಲೇ, ಕೆಲವು ಪಾಳೇಗಾರರು ಸ್ವತಂತ್ರರಾಗಲು ಬಯಸುತ್ತಿದ್ದರು. ಈ ನಡುವೆ, ವೈರಿಪಡೆಯ ದಾಳಿ ತಾಳಲಾರದೆ ಒಂದೊಂದಾಗಿ ಪ್ರಾಂತ್ಯಗಳು ಕೈತಪ್ಪುತ್ತಾ ಹೋದವು. ರಕ್ಷಣಾತ್ಮಕ ಆಡಳಿತ ನಡೆಸುತ್ತಾ, ಶಕ್ತಿಯನ್ನು ಕುದುರಿಸಿಕೊಳ್ಳುವಲ್ಲೇ ಅವರ ಗಮನ ಕೇಂದ್ರೀಕರಿಸಬೇಕಾಯಿತು. ಕೈಲಾದಷ್ಟು ಸಾಮ್ರಾಜ್ಯವನ್ನು ತಮ್ಮ ವಶದಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸುವ ಅನಿವಾರ್ಯತೆ. ತಾಳಿಕೋಟೆ ಯುದ್ಧದಲ್ಲಿ ತಮ್ಮ ಪಡೆಯ ಬಹುದೊಡ್ಡ ಸಂಖ್ಯೆಯ ಸೈನಿಕರನ್ನುಕಳೆದುಕೊಂಡದ್ದರಿಂದ, ಹೊಸ ಸೈನ್ಯವನ್ನುಕಟ್ಟಿ, ಬೆಳೆಸುವ ಕಾರ್ಯವೂ ಆಗಬೇಕಿತ್ತು. ಕಳೆದುಕೊಂಡ ಸಾಮ್ರಾಜ್ಯದ ಭಾಗಗಳನ್ನುಮರಳಿ ಪಡೆಯುವಲ್ಲಿ ಸಕಾರಾತ್ಮಕ ಹೆಜ್ಜೆಯಿಟ್ಟ ರಾಜನೆಂದರೆ, ಎರಡನೆಯ ವೆಂಕಟ ಅಥವಾ ವೆಂಕಟಪತಿ ರಾಜು. ತಾಳಿಕೋಟೆ ಯುದ್ಧವಾಗಿ 20 ವರ್ಷಗಳ ನಂತರ ಅಧಿಕಾರಕ್ಕೆ ಬಂದ ವೆಂಕಟಪತಿರಾಜು, 1586ರಿಂದ 1614ರ ತನಕ ರಾಜನಾಗಿದ್ದ. ಮೂರು ದಶಕಗಳ ಆತನ ಆಳ್ವಿಕೆಯು, ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಮರಳಿ ಪಡೆಯುವ ಪ್ರಾಮಾಣಿಕ ಪ್ರಯತ್ನ ನಡೆಸಿತು. ತಾಳಿಕೋಟೆ ಯುದ್ಧದ ನಂತರ ಎರಡು ದಶಕಗಳ ತನಕ ಶಕ್ತಿ ಕುದುರಿಸಿಕೊಳ್ಳುವ ಪ್ರಯತ್ನ ಮಾಡಿದ ವಿಜಯನಗರ ಸಾಮ್ರಾಜ್ಯವು, ವೆಂಕಟಪತಿ ರಾಜನ ಕಾಲದಲ್ಲಿ, ಕಳೆದುಕೊಂಡಿದ್ದ ಭೂಭಾಗಗಳ್ನು ಮರಳಿ ಪಡೆಯಲು ಪ್ರಾಮಾಣೀಕ ಪ್ರಯತ್ನ ನಡೆಸಿತು. ವೆಂಕಟಪತಿ ರಾಜನ ಮೂರು ದಶಕಗಳ ಯಶಸ್ವಿ ಆಡಳಿತ ಮುಗಿಯುವ ಸಮಯದಲ್ಲಿ, ವಿಜಯನಗರದ ಗಡಿಯು ಉತ್ತರದತ್ತ ಚಲಿಸಿ, ಕೃಷ್ಣಾ ನದಿಯನ್ನು ತಲುಪಿತ್ತು ಎಂಬ ವಿಚಾರವು, ಆತನ ಹೋರಾಟದ ಯಶಸ್ಸನ್ನು ತೋರಿಸುತ್ತದೆ. ಆ ಒಂದು ಕಾಲಘಟ್ಟದ ಯಶಸ್ಸು, ಐತಿಹಾಸಿಕ ಕಾಲಮಾನದಲ್ಲಿ ಸೀಮಿತ ಎಂದೇ ಹೇಳಬಹುದಾದರೂ, ವಿಜಯನಗರದ ಅರಸು ಮನೆತನವು ಮರಳಿ ತನ್ನ ವೈಭವವನ್ನು ಪಡೆಯಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಿತ್ತು ಎಂದು ತೋರಿಸಿಕೊಡುತ್ತದೆ. ವೆಂಕಟಪತಿ ರಾಜು ಅಧಿಕಾರ ವಹಿಸಿಕೊಂಡ ಎರಡೇ ವರ್ಷದಲ್ಲಿ, 1588ರಲ್ಲಿ ನಡೆದ ಪೆನ್ನಾರ್ ಯುದ್ಧವು ಇಲ್ಲಿ ಗಮನಾರ್ಹ. ವಿಜಯನಗರ ಸೈನ್ಯವು ಗೋಲ್ಕೊಂಡಾ ಸೈನ್ಯವನ್ನು ಪೆನ್ನಾರ್ ನದಿಯ ದಡದಲ್ಲಿ ಸೋಲಿಸಿದ ನಂತರ, ಇನ್ನೂ ಉತ್ತರಕ್ಕೆ ಹೋಗಿ ಕೃಷ್ಣಾ ನದಿಯ ತನಕ ಸಾಮ್ರಾಜ್ಯವನ್ನು ವಿಸ್ತರಿಸಿತು. ಪೆನ್ನಾರ್ ಯುದ್ಧದಲ್ಲಿ ವೈರಿ ಪಡೆಯ ಸುಮಾರು 50,000 ಸೈನಿಕರು ಹತರಾದರು ಎಂದು ದಾಖಲಾಗಿದೆ. ಮದ್ದುಗುಂಡುಗಳನ್ನು ಬಳಸುತ್ತಿದ್ದ, ಫಿರಂಗಿಗಳನ್ನೂ ಬಳಸುತ್ತಿದ್ದ ಗೋಲ್ಕೊಂಡಾ ಮಿತ್ರಪಡೆಯನ್ನು ಸೋಲಿಸಿದ್ದು ಆಗಿನ ಕಾಲದ ಒಂದು ಅಭೂತಪೂರ್ವ ಸಾಧನೆ. ಗೋಲ್ಕೊಂಡದ ಕುತುಬ್ ಶಾ ಸೈನ್ಯವು 1588ರಲ್ಲಿ ಪೆನುಕೊಂಡೆಯ ಮೇಲೆ ಆಕ್ರಮಣ ನಡೆಸಿದಾಗ, ಅವನನ್ನು ನಿಯಂತ್ರಿಸಲು ವೆಂಕಟಪತಿ ರಾಜು ಅನುಸರಿಸಿದ್ದು ವಿಶಿಷ್ಟ ತಂತ್ರವನ್ನು. ಅದಕ್ಕೂ ಮೊದಲು ಅದೋನಿ, ಗಂಗಡಿಕೋಟ ಮೊದಲಾದ ಕೋಟೆಗಳನ್ನು ಸುಲಭವಾಗಿ ಸೋಲಿಸಿ, ಪೆನುಕೊಂಡೆಯನ್ನು ಆ ವೈರಿ ಸೇನೆ ಮುತ್ತಿಗೆ ಹಾಕಿತ್ತು. ಆ ಶಕ್ತಿಯುತ ಸೈನ್ಯವನ್ನು ಒಮ್ಮೆಗೇ ಎದುರಿಸುವುದಕ್ಕಿಂತ, ಕುಟಿಲತೆಗೆ ಕುಟಿಲತೆಯೇ ಮದ್ದು ಎಂಬ ತಂತ್ರವನ್ನು ಅನುಸರಿಸಲು ವೆಂಕಟಪತಿರಾಜು ನಿರ್ಧರಿಸಿದ. ತಾನು ಈಗ ಯುದ್ಧ ಮಾಡುವುದಿಲ್ಲ, ಬದಲಾಗಿ ಸಂಧಾನಕ್ಕೆ ಬರುತ್ತೇನೆ ಎಂಬ ಸಂದೇಶವನ್ನು ಕಳಿಸಲಾಯಿತು. ಗೋವಿಂದರಾಜು ತಿಮ್ಮ ಮತ್ತು ಪಾಪಯ್ಯ ಚೆಟ್ಟಿ ಎಂಬ ಇಬ್ಬರು ದಳಪತಿಗಳು ಗೋಲ್ಕೊಂಡ ಸುಲ್ತಾನರ ಬಳಿಗೆ ಸಂಧಾನಕ್ಕೆ ಹೋದರು. ಇವರ ಮಾತುಗಳನ್ನು ನಂಬಿದ ಗೋಲ್ಕೊಂಡದ ಸುಲ್ತಾನ ತುಸು ನಿರಾಳವಾದ. ಆ ಸಮಯದಲ್ಲಿ ಜಗದೇವ ಮೊದಲಾದ ದಳಪತಿಗಳು ಸುಮಾರು 30,000 ಸೈನಿಕರನ್ನು ರಹಸ್ಯವಾಗಿ ಪೆನುಕೊಂಡೆಯ ಕೋಟೆಯೊಳಗೆ ಸೇರಿಸಿದರು. ತಂಜಾವೂರಿನ ಅಚ್ಯುತಪ್ಪ ನಾಯಕನಿಗೆ ಸಂದೇಶ ಕಳಿಸಿ, ಸೈನ್ಯ ಕಳುಹಿಸುವಂತೆ ಕೇಳಿಕೊಳ್ಳಲಾಯಿತು. ತಂಜಾವೂರಿನ ರಘುನಾಥ ನಾಯಕನ ನೇತೃತ್ವದಲ್ಲಿ ಬಂದ ಸೇನಾ ತುಕಡಿಯು, ಗೋಲ್ಕೊಂಡಾ ಸೈನ್ಯದ ಮೇಲೆ ಆಕ್ರಮಣ ಮಾಡಿತು. ಇತ್ತ ಪೆನುಗೊಂಡೆಯ ಸೈನಿಕರು, ವೈರಿಪಡೆಯ ಮೇಲೆ ಆಕ್ರಮಣ ಮಾಡಿದರು. ಒಮ್ಮೆಗೇ ತಮ್ಮ ಮೇಲೆ ಆಕ್ರಮಣ ನಡೆದದ್ದು ಕಂಡು ಬೆದರಿದ ಗೋಲ್ಕೊಂಡಾ ಸೈನ್ಯವು, ಕಾಲಿಗೆ ಬುದ್ಧಿ ಹೇಳಬೇಕಾಯಿತು. ವೆಂಕಟಪತಿ ರಾಜು ಅಲ್ಲಿಗೆ ಸುಮ್ಮನಾಗಲಿಲ್ಲ. ಇದುವರೆಗೆ ರಕ್ಷಣಾತ್ಮಕ ಹೆಜ್ಜೆಗಳನ್ನು ಅನುಸರಿಸುತ್ತಿದ್ದ ವಿಜಯನಗರ ಸೈನ್ಯವು, ಈಗ ಆಕ್ರಮಣದ ತಂತ್ರವನ್ನು ಅನುಸರಿಸಿತು. ಗೋಲ್ಕೊಂಡಾ ಸೈನ್ಯವನ್ನು ಅಟ್ಟಿಸಿಕೊಂಡು ಹೊರಟಿತು. ಅಲ್ಲಲ್ಲಿ ದಾರಿಯುದ್ದಕ್ಕೂ ಸಣ್ಣಪುಟ್ಟ ಯುದ್ಧಗಳಾದವು. ಈ ಯುದ್ಧಗಳ ವಿವರಗಳನ್ನು ಬಿಂಬಿಸುವ ತಾಮ್ರಶಾಸನಗಳೂ ದೊರೆತಿವೆ. ಪ್ರತಿ ಘರ್ಷಣೆಯಲ್ಲೂ, ಗೋಲ್ಕೊಂಡಾ ಸೈನ್ಯವು ಸ್ವಲ್ಪ ಸ್ವಲ್ಪವೇ ದುರ್ಬಲಗೊಳ್ಳುತ್ತಾ ಹೋಯಿತು. ಗೋಲ್ಕೊಂಡಾದ ರಾಜು ಕುತುಬ್ ಶಾ ತನ್ನ ಸೈನ್ಯದೊಡನೆ ಬಹು ಬೇಗನೆ ತನ್ನ ಊರಿಗೆ ವಾಪಸು ಹೊರಟ. ಈ ನಡುವೆ ಮಳೆಗಾಲ ಆರಂಭವಾಯಿತು. ಗೋಲ್ಕೊಂಡ ಸೈನ್ಯವು ಮುಂದುವರಿದು ಪೆನ್ನಾ ನದಿ ತೀರಕ್ಕೆ ಬಂದು ತಲುಪಿತು. ಆಗ ಪೆನ್ನಾ ನದಿಯಲ್ಲಿ ಪ್ರವಾಹ. ತಕ್ಷಣ ನದಿಯನ್ನು ದಾಟಿ, ತನ್ನ ಸಾಮ್ರಾಜ್ಯವನ್ನು ಸೇರಿಕೊಳ್ಳಲು ಗೋಲ್ಕೊಂಡಾ ದೊರೆಗೆ ಸಾಧ್ಯವಾಗಲಿಲ್ಲ. ಅನಿವಾರ್ಯವಾಗಿ ಪೆನ್ನಾ ನದಿಯ ದಡದಲ್ಲಿ ಸಿಕ್ಕಿಹಾಕಿಕೊಂಡ ಗೋಲ್ಕೊಂಡಾ ಸೈನ್ಯವು, ತನ್ನನ್ನು ಹಿಂಬಾಲಿಸಿ ಬರುತಿದ್ದ ವೆಂಕಟಪತಿ ರಾಜುವಿನ ಸೈನ್ಯವನ್ನು ಎದುರಿಸುವ ಪ್ರಯತ್ನ ಮಾಡಿತು. ಸಾಕಷ್ಟು ಫಿರಂಗಿಗಳನ್ನು ಹೊಂದಿದ್ದ ಸೇನೆಯು, ತನ್ನ ರಕ್ಷಣೆಗಾಗಿ ಫಿರಂಗಿ ಗುಂಡುಗಳನ್ನು ಉಡಾಯಿಸತೊಡಗಿತು. ಪೆನುಕೊಂಡೆಯ ಸೈನ್ಯವು ಇದರಿಂದ ಆರಂಭಿಕ ಹಾನಿಯನ್ನು ಅನುಭವಿಸಿದರೂ, ಫಿರಂಗಿಗಳ ಹೊಡೆತವು ಕ್ರಮೇಣ ಕಡಿಮೆಯಾಗಲೇ ಬೇಕಾಯಿತು. ಆ ಕ್ಷಣವನ್ನು ಕಾಯುತ್ತಿದ್ದ ಪೆನುಗೊಂಡೆಯ ಸೈನ್ಯವು ವೈರಿ ಪಡೆಯ ಮೇಲೆ ಆಕ್ರಮಣ ಮಾಡಿತು. ಆಗ ಗೋಲ್ಕೊಂಡಾ ಸೈನ್ಯವು ಅನುಭವಿಸಿದ ಸೋಲು ಮತ್ತು ನೋವು ಅಪಾರ ಎನ್ನಲಾಗಿದೆ. ಪೆನ್ನಾರ್ ನದಿಯ ಪ್ರವಾಹವು ವೈರಿಪಡೆಯ ರಕ್ತದಿಂದ ತುಂಬಿ ಹೋಯಿತು ಎಂದು ನಂತರ ರಚಿಸಲಾದ ತೆಲುಗಿನ ಕಾವ್ಯದಲ್ಲಿ ವರ್ಣಿಸಲಾಗಿದೆ. ಆ ಯುದ್ಧದಲ್ಲಿ, ಗೋಲ್ಕೊಂಡಾ ಮಿತ್ರ ಪಡೆಯ ಸುಮಾರು 50,000 ಸೈನಿಕರು ಹತರಾದರು ಎಂದು ಹೇಳಲಾಗಿದೆ. ತನ್ನ ಸೈನ್ಯವು ಸೋಲುವುದನ್ನು ಕಂಡ, ಕುತುಬ್ ಶಾ, ಕಷ್ಟಪಟ್ಟು ನದಿ ದಾಟಿ, ತನ್ನ ರಾಜ್ಯದತ್ತ ಪಲಾಯನ ಮಾಡಬೇಕಾಯಿತು. ಪೆನ್ನಾರ್ ನದಿ ದಂಡೆಯಲ್ಲಿ ಕುತುಬ್ ಶಾ ಸೈನ್ಯವನ್ನು ನಾಶ ಮಾಡಿದ ವೆಂಕಟಪತಿ ರಾಜುವಿನ ಸೇನೆಯು, ಇನ್ನೂ ಮುಂದಕ್ಕೆ ಸಾಗಿ, ಕೃಷ್ಣಾ ನದಿಯ ತನಕ ವೈರಿಯನ್ನು ಅಟ್ಟಿಸಿಕೊಂಡು ಹೋಯಿತು. ಈ ಯುದ್ಧದ ಪ್ರಮುಖ ಸಾಧನೆ ಎಂದರೆ, ವಿಜಯನಗರ ಸಾಮ್ರಾಜ್ಯವು 1565ರ ನಂತರ ಕಳೆದುಕೊಂಡಿದ್ದ ಭಾಗದ ಸಾಕಷ್ಟು ಪಾಲನ್ನು ಮರಳಿ ಪಡೆದದ್ದು. ಜತೆಗೆ, ಸಾಮ್ರಾಜ್ಯದ ಗಡಿಯು ಉತ್ತರಕ್ಕೆ ಚಾಚಿ, ಕೃಷ್ಣಾ ನದಿಯ ದಡದ ತನಕ ವಿಸ್ತರಣೆಗೊಂಡಿತು. ಇದಾದ ನಂತರದ ಒಂದೆರಡು ದಶಕಗಳ ಕಾಲ, ವಿಜಯ ನಗರ ಸಾಮ್ರಾಜ್ಯವು ಹೊರಗಿನ ವೈರಿಪಡೆಗಳ ಆಕ್ರಮಣದಿಂದ ಸಾಕಷ್ಟು ರಕ್ಷಣೆ ಪಡೆಯಿತು. ಆದರೆ, ಆ ರಾಜಮನೆತನದ ಅದೃಷ್ಟ ಸರಿ ಇರಲಿಲ್ಲ ಎಂದೇ ಹೇಳಬಹುದು. ವಿಜಯನಗರ ಅರಸು ಮನೆತನದ ಒಳಜಗಳಗಳು, ಅಳಿಯ ರಾಮರಾಯ ನೇಮಕ ಮಾಡಿದ್ದ ಬೇಜವಬ್ದಾರಿ ಅಧಿಕಾರಿಗಳ ಕುತಂತ್ರ, ವಿವಿಧ ಪ್ರಾಂತ್ಯಗಳ ಸಾಮಂತರು ಸಾಮ್ರಾಜ್ಯದ ವಿರುದ್ಧ ತಿರುಗಿ ಬೀಳಲು ನಡೆಸಿದ ಪ್ರಯತ್ನ ಮೊದಲಾದ ವಿದ್ಯಮಾನಗಳು ಸಾಮ್ರಾಜ್ಯದ ಸುಗಮ ಆಡಳಿತಕ್ಕೆ ತೊಡಕುಗಳನ್ನು ಉಂಟುಮಾಡುತ್ತಿದ್ದವು. ಈ ನಡುವೆ 1592ರಲ್ಲಿ ರಾಜಧಾನಿಯನ್ನು ಪೆನುಕೊಂಡೆಯಿಂದ ಚಂದ್ರಗಿರಿಗೆ ಬದಲಾಯಿಸಲಾಯಿತು. ತಿರುಪತಿ ಬೆಟ್ಟಗಳ ತಪ್ಪಲಲ್ಲಿದ್ದ ಈ ಕೋಟೆಯಲ್ಲಿ ಹಿಂದೆ ಕೃಷ್ಣ ದೇವರಾಯನು ತನ್ನ ಬಾಲ್ಯ ಕಳೆದಿದ್ದ. ತಿರುಪತಿಯ ದಾರಿಯಲ್ಲಿರುವ ಚಂದ್ರಗಿರಿಯ ಕೋಟೆಯಲ್ಲಿದ್ದ ಅರಮನೆಗಳು ಇಂದಿಗೂ ಸುಸ್ಥಿತಿಯಲ್ಲಿ ಉಳಿದುಕೊಂಡಿದೆ. (ಚಿತ್ರ ನೋಡಿ) 1604ರಲ್ಲಿ ರಾಜಧಾನಿಯನ್ನು ವೆಲ್ಲೂರಿಗೆ ಬದಲಿಸಲಾಯಿತು. ವೆಂಕಟಪತಿರಾಜುವಿಗೆ ನಾಲ್ವರು ಹೆಂಡಿರಿದ್ದರೂ, ಮಕ್ಕಳಾಗದ ಕಾರಣ, ಅವರ ಸೋದರನ ಮಗ ಎರಡನೆಯ ಶ್ರೀರಂಗನನ್ನು ಉತ್ತರಾಧಿಕಾರಿಯನ್ನಾಗಿ ಆರಿಸಬೇಕಾಯಿತು. 1614ರಲ್ಲಿ ವೆಂಕಟಪತಿ ರಾಜು ಮೃತಪಟ್ಟಾಗ, ಎರಡನೆಯ ಶ್ರೀರಂಗ ಅಧಿಕಾರಕ್ಕೆ ಬಂದ. ಆದರೆ, ಆ ಸಮಯಕ್ಕಾಗಲೇ, ಅರಸೊತ್ತಿಗೆಯಲ್ಲಿ ಕುಟಿಲ ಕಾರಸ್ಥಾನಗಳು ನಡೆಯಲು ಆರಂಭವಾಗಿದ್ದು, ನಾಲ್ಕೇ ತಿಂಗಳಲ್ಲಿ ಆತ ಸಾಯುವಂತಾಯಿತು. ಜತೆಯಲ್ಲೇ ರಾಜ ಪರಿವಾರದ ಭೀಕರ ಕೊಲೆಗಳು ನಡೆದವು. ವಿಜಯನಗರ ಸಾಮ್ರಾಜ್ಯದ ನಿಜವಾದ ಪತನ ಈಗ ಆರಂಭವಾಯಿತು. ವೆಂಕಟಪತಿ ರಾಜನ ಉತ್ತರಾಧಿಕಾರಿ ಎರಡನೆಯ ಶ್ರೀರಂಗನು ಕೇವಲ ನಾಲ್ಕು ತಿಂಗಳುಗಳ ಕಾಲ ಅಧಿಕಾರ ನಡೆಸಿ, ತನ್ನ ಪರಿವಾರದೊಡನೆ ಸಾಯಬೇಕಾಗಿ ಬಂದದ್ದರಿಂದ, ಆ ಹಿಂದಿನ ಮೂರು ದಶಕಗಳ ಹೋರಾಟದ ಫಲವನ್ನು ಅನುಭವಿಸಲು ಆ ಅರಸೊತ್ತಿಗೆಯಿಂದ ಸಾಧ್ಯವಾಗಲಿಲ್ಲ. ವೆಂಕಟಪತಿ ರಾಜುವಿನ ಸೈನ್ಯವು ಕೃಷ್ಣಾ ನದಿಯ ತನಕ ಸಾಮ್ರಾಜ್ಯ ವಿಸ್ತರಿಸಿದ್ದು ನಿಜವಾದರೂ, ಅದರ ಯಶಸ್ಸು ಅರಸೊತ್ತಿಗೆಗೆ ಸಿಗಲೇ ಇಲ್ಲ. ಒಳಜಗಳಗಳಿಂದಾಗಿ, ಆ ಅರಸೊತ್ತಿಗೆ ವಿಷಣ್ಣವಾಯಿತು. ರಾಜ್ಯ ಕುಂದಿತು. ಕರ್ನಾಟಕದ ಭಾಗವಾಗಳಾಗಿ ಮುಂದುವರಿಯಬಹುದಾಗಿದ್ದ ವಿಶಾಲ ಭೂಪ್ರದೇಶಗಳು ವಿವಿಧ ರಾಜರುಗಳ ಆಳ್ವಿಕೆಗೆ ಸೇರಿಹೋದವು. ಅದೇನೇ ಇದ್ದರೂ, ವೆಂಕಟಪತಿ ರಾಜು ಅಥವಾ ಎರಡನೆಯ ವೆಂಕಟನ ಸಾಹಸವು ಆಗಿನ ಕಾಲಮಾನದಲ್ಲಿ ಅಪೂರ್ವವಾದದ್ದು. ತಾಳಿಕೋಟೆ ಯುದ್ಧದಲ್ಲಿ ಕಳೆದುಕೊಂಡಿದ್ದ ಸಾಮ್ರಾಜ್ಯವನ್ನು ಮರಳಿ ಪಡೆಯಲು ಧೀಮಂತ ಹೋರಾಟ ನಡೆಸಿದ ಈತನು, ಸಾಕಷ್ಟು ಭಾಗಗಳನ್ನು ಮರಳಿ ಪಡೆದು, ಗೋಲ್ಕೊಂಡಾ ಸುಲ್ತಾನನ್ನು ಮಣಿಸಿದ್ದ. ಈ ವಿವರಗಳು ಮತ್ತು ತಾಳಿಕೋಟೆ ಯುದ್ಧದ ನಂತರದ ಮೂರು ದಶಕಗಳ ಅವಧಿಯಲ್ಲಿ ವಿಜಯನಗರ ಅರಸರು ಪ್ರತಿ ಹೋರಾಟ ನಡೆಸಿದ ವಿವರಗಳು ಜನಸಾಮಾನ್ಯರಿಗೆ ತಲುಪಬೇಕು. ರಾಜ್ಯಗಳ ಮರು ವಿಂಗಡಣೆಯಿಂದಾಗಿ, ಪ್ರಸಿದ್ಧ ಹಂಪೆಯು ಕರ್ನಾಟಕದಲ್ಲಿ ಉಳಿದು, ಚಂದ್ರಗಿರಿ, ಪೆನುಕೊಂಡೆ, ವೆಲ್ಲೂರುಗಳು ನಮ್ಮ ನೆರೆ ರಾಜ್ಯಗಳಲ್ಲಿ ಹಂಚಿ ಹೋಗಿರುವುದರಿಂದಾಗಿ, ಈ ರಾಜಧಾನಿಗಳ ಇತಿಹಾಸದ ಪಕ್ಷಿನೋಟವನ್ನು ಸಮಗ್ರವಾಗಿ ಗ್ರಹಿಸಲು ನಮ್ಮ ರಾಜ್ಯದವರಿಗೆ ತುಸು ತೊಡಕುಗಳಿವೆ. ಅದನ್ನು ಪರಿಹರಿಸಿಕೊಂಡು, ವಿಜಯನಗರ ಸಾಮ್ರಾಜ್ಯವು, 1565ರ ಸೋಲಿನ ನಂತರವೂ ಕೆಲವು ದಶಕಗಳ ಕಾಲ ಪ್ರತಿಹೋರಾಟ ನಡೆಸಿ, ಆ ಅಭಿಯಾನದಲ್ಲಿ ಸಾಕಷ್ಟು ಯಶಸ್ಸನ್ನು ಸಹ ಗಳಿಸಿತ್ತು ಎಂಬ ಸತ್ಯವನ್ನು ಜನಸಾಮಾನ್ಯರು ಅರಿಯಬೇಕಾದ ಅವಶ್ಯಕತೆ ಇದೆ. (ಚಿತ್ರ : ಚಂದ್ರಗಿರಿಯಲ್ಲಿರುವ (ತಿರುಪತಿ) ವಿಜಯನಗರ ಅರಸರ ಅರಮನೆ) (raghothamarao c ಅವರು ಪೆನ್ನಾರ್ ಯುದ್ದದ ಕು ರಿತು , ಇಂಗ್ಲಿಷ್ ನಲ್ಲಿ ಇತ್ತೀಚೆಗೆ ಒಂದು ವಿಡಿಯೋ ಮಾಡಿದ್ದು, ಸಾಕಷ್ಟು ವಿವರ ಹಂಚಿಕೊಂಡಿದ್ದು, ಅಲ್ಲಿನ ಕೆಲವು ಮಾಹಿತಿಯನ್ನು ಇಲ್ಲಿ ಬಳಸಲಾಗಿದೆ. Thanks Raghothama Rao C

Tuesday, December 1, 2020

Kannada Telugu Sahitya Badhavya - 1/1 ಕನ್ನಡ ತೆಲುಗುಸಾಹಿತ್ಯ ಬಾಂಧವ್ಯ -ಡಾ/ ಎಮ್. ಎನ್ ಅನಂತರಾಮನ್

ಒಂದು ಕನ್ನಡಪದ ರತ್ನನ್ ಪದ | Ratnan Padha | Sangeeta Katti

ರಾಜು ಹೆಗಡೆ - ಹಂಸ ಏಕಾಂಗಿ {ಕಬೀರನ ಪದಗಳು - ಕೇಶವ ಮಳಗಿ }

ಹಂಸ ಏಕಾಂಗಿ' ಕಬೀರರ ಮೌಲ್ಯಯುತ ಹಾಡುಗಳ, ತತ್ವಪದಗಳ ಧಾಟಿಯಲ್ಲಿರುವ ಸುಂದರ ಪದ್ಯಗಳ ಸಂಗ್ರಹ. ಮೌಲ್ಯಯುತವಾದ ಮಾತುಗಳನ್ನು ಬಾಯ್ಮಾತಿನಲ್ಲಿಯೇ ಹೇಳಿಮುಗಿಸುವ ಪರಿ ನಮಗೆ ರೂಢಿಯಾಗಿಯೇ ಬಂದ ಬಳುವಳಿ. ಹಿಂದಿನಿಂದಲೂ ಜಾನಪದ ಸೊಗಡಲ್ಲದೇ, ತತ್ವಪದ ಹರಿಕಾರರು ತಾವು ನಿಂತ ಜಾಗೆಯಲ್ಲಿಯೇ ಸಮಾಜಕ್ಕೆ ಮಾದರಿಯಾಗುವ ಮೌಲ್ಯವನ್ನು ಹೊತ್ತ ತಿಳುವಳಿಕೆ ರೂಪದ, ಬದುಕಿನ ಬದಲಾವಣೆಗೆ ಕಾರಣವಾಗುವಂತಹ ಸುಂದರ ರೂಪಕಗಳನ್ನು ಹೊತ್ತ ಪದಗಳನ್ನು ಜುಳು ಜುಳು ನದಿಯಂತೆ ಹರಿಬಿಡುತ್ತಿದ್ದರು. ಅವುಗಳ ಅರ್ಥ ಮೇಲ್ನೋಟಕ್ಕೆ ಒಂದು ರೀತಿಯಿಂದ ಗೋಚರಿಸಿದರೆ, ಆಂತರ್ಯ ಇನ್ನೊಂದು ಅರ್ಥವನ್ನು ನೀಡುತ್ತಿರುತ್ತದೆ. ಅಂತಹ ಮೌಲ್ಯಯುತವಾದ ಪದ್ಯರೂಪದ ಬರಹಗಳನ್ನು ಓದುವುದೇ ಒಂಥರಾ ಪುಳಕ. ಮೊದಲ‌ ಓದಿಗೆ ಮೋಲ್ನೋಟಕ್ಕೆ ಭಿನ್ನವಾಗಿ ಕಂಡರೂ, ಓದುತ್ತ ಓದುತ್ತ ಅದರ ಭಾವದೊಂದಿಗೆ ಬೆರೆತು ಹೆಜ್ಜೆಹಾಕುತ್ತಾ ಸಾಗಿದಂತೆ ಅದರ ಆಧ್ಯಾತ್ಮದ ಸೆಳಕಿನ ಭಾವ ಓದುಗನಿಗೆ ಆಪ್ತವಾಗಿ ಹೃದಯಕ್ಕೆ ತಟ್ಟಲಾರಂಭಿಸುತ್ತದೆ. ಅಂತಹ ಆಪ್ತವಾದ ಭಾವಸ್ಪರ್ಶ ಕಬೀರನ ಪದಗಳ ಮೂಲಕ ನನಗೆ ತಟ್ಟಿತು. ದಾರ್ಶನಿಕರ ಚಿಂತನೆಗಳೇ ಅಂತಹುದು. ಅವುಗಳಿಗೆ ಒಂಥರಾ ಮಿಂಚಿನ ಸೆಳೆತವಿರುತ್ತದೆ, ತಪ್ಪನ್ನು ತಪ್ಪೆಂದು ನೇರವಾಗಿ ಹೇಳುವ ಭಾವವಿರುತ್ತದೆ, ಸಮಾಜದ ಓರೆಕೋರೆಗಳನ್ನು ಖಂಡಿಸುವ ಗುಣವಿರುತ್ತದೆ, ಸಾಮಾಜಿಕ ಸಾಮರಸ್ಯವನ್ನು ಒಂದುಗೂಡಿಸುವ ಗುಣವಿರುತ್ತದೆ, ಜಾತಿಮತಗಳ‌ ಭೇದ ಮರೆತು ಒಂದುಗೂಡಿರೋ ಎಂಬ ಒಗ್ಗಟ್ಟಿನ ಮಂತ್ರವಿರುತ್ತದೆ. ಒಟ್ಟಿನಲ್ಲಿ ಸಮಾಜವನ್ನು ಸುಂದರಗೊಳಿಸುವ ಎಲ್ಲ ಮೌಲ್ಯಯುತವಾದ ಅಂಶಗಳು ದಾರ್ಶನಿಕರ ನಡೆನುಡಿಗಳಲ್ಲಷ್ಟೇ ಅಲ್ಲ, ಅವರಾಡುವ ಮಾತುಗಳಲ್ಲೂ ಸತ್ಯ, ನಿಷ್ಟೆ, ಪ್ರಾಮಾಣಿಕತೆ ಸ್ಪುರಿಸುತ್ತವೆ. "ಹೆಡ್ಡರಹೆಡ್ಡ, ನೀ ಬಲುದಡ್ಡ ವಿಚಾರ ಏನೈತಿ ತಿಳಕೋವಲ್ಲಿ ತೊಗಲು, ಎಲುಬು, ಉಚ್ಚೆ, ಹೇಲು ಅಷ್ಟೇ ಐತಿ ಅದರಾಗಲ್ಲಿ ಒಂದೇ ರಗತ, ಒಂದೇ ಮಾಂಸ, ಹನಿ ಒಂದರಾಗ ಜಗಾ ಐತಲ್ಲಿ. ಯಾರಂವ ಬ್ರಾಮ್ಮಣ, ಮತ್ಯಾರಂವ ಸೂದ್ರ?" ಮನುಷ್ಯನ ಅಂತರಾಳದ ಅವಲೋಕನವನ್ನೇ ಮೇಲಿನ‌ ಸಾಲುಗಳಲ್ಲಿ ಕಾಣಬಹುದು. ನಾನು ನನ್ನದು ಅಂತ ಎಷ್ಟೆಲ್ಲ ಚೌಕಟ್ಟನ್ನು ಹಾಕಿಕೊಂಡು ಬಾಳುವ, ಮೇಲ್ಜಾತಿ ಕೆಳಜಾತಿ ಎಂಬ ಗೋಡೆ ಕಟ್ಟಿಕೊಂಡ ನಮಗೆ ಮೇಲಿನ ಸಾಲುಗಳು ಚಾಕುವಿನಿಂದ ತಿವಿದಂತಿವೆ. "ಎಲ್ಲರೂ ದಹಿಸತಿರುವುದನು ಕಂಡೆ ಪ್ರತಿಯೊಬ್ಬರಿಗೂ ಅವರದೇ ಬೆಂಕಿ ಮುಟ್ಟಬಹುದಾದವರನು ನಾನಿನ್ನೂ ಭೇಟಿಯಾಗಿಲ್ಲ." "ಲೋಕ ಹುಟ್ಟಿದ್ದು ಒಬ್ಬ ತಾಯಿಯಿಂದ ಯಾವ ವಿವೇಕ ಬೋಧಿಸುವುದು ಅಗಲಿಕೆಯನ್ನು?" ಹೀಗೆ ಒಂದೊಂದು ಸಾಲುಗಳೂ ಒಂದೊಂದು ಜೀವನದರ್ಶನದ ಸತ್ಯವನ್ನು, ವೈಚಾರಿಕತೆಯ ಬೆಳಕನ್ನು ಹರಡಿಸುತ್ತವೆ. ಕತೆ, ಕಾದಂಬರಿಗಳ ಏಕತಾನತೆಯ ಓದಿನ ನಡುವೆ ಇಂತಹ ಕೃತಿಗಳ ಓದು ಹೊಸ ಚೈತನ್ಯವನ್ನು ನೀಡುತ್ತವೆ. ಹೊಸಭಾವವನ್ನು ಸ್ಪುರಿಸುತ್ತವೆ. - ರಾಜು ಹಗ್ಗದ, ಇಣಚಗಲ್ * * * 'ಹಂಸ ಏಕಾಂಗಿ' ಕೃತಿ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ಕಿಸಬಹುದು... https://imojo.in/239txiz

ಮುರಳಿಧರ ಉಪಾಧ್ಯ ಹಿರಿಯಡಕ -ವಾಸಂತಿ ಅಂಬಲಪಾಡಿ "ನಾ ಕಂಡ ಜಗವು ಇಂತಿಹುದಯ್ಯಾ"(ಆಧುನಿಕ ವಚನಗಳು-2020)

ಇಪ್ಪತ್ತು, ಇಪ್ಪತ್ತೋಂದನೇ ಶತಮಾನಗಳಲ್ಲಿ ಆಧುನಿಕ ವಚನ ಸಾಹಿತ್ಯ ಸಾಕಷ್ಟು ಸಮೃದ್ಡವಾಗಿ ಬೆಳೆಯುತ್ತಿದೆ.ತೀ.ನಂ.ಶ್ರೀ,ಕುವೆಂಪು,ಬೇಂದ್ರೆ(ಕರುಳಿನ ವಚನಗಳು) ಜಚನಿ, ಎಸ್.ವಿ.ರಂಗಣ್ಣ,ಸಿಂಪಿ ಲಿಂಗಣ್ಣ ಹೀಗೆ ಹಲವರು ವಚನಗಳನ್ನು ಬರೆದಿದ್ದಾರೆ. ನನ್ನಗುರುಗಳಲ್ಲಿ ಮೂವರು ಎಸ್.ವಿ.ಪರಮೇಶ್ವರ ಭಟ್ (ಉಪ್ಪು ಕಡಲು),ಗುಂಡ್ಮಿ ಚಂದ್ರಶೇಖರ ಐತಾಳ , ರಾಮದಾಸ್ [ ಸ್ವಾತಂತ್ರೇಶ್ವರ ವಚನಗಳು ] -ವಚನಗಳನ್ನು ಬರೆದಿದ್ದಾರೆ.ಒಂದು ಅಂದಾಜಿನ ಪ್ರಕಾರ ಹದಿನೈದು ಸಾವಿರಕ್ಕೂ ಹೆಚ್ಚು ಆಧುನಿಕ ವಚನಗಳು ಪ್ರಕಟವಾಗಿವೆ. ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದ ಉಡುಪಿ ದೊಡ್ದನಗುಡ್ಡೆಯ ಲೇಖಕಿ ವಾಸಂತಿ ಅಂಬಲಪಾಡಿ ಇದೀಗ ಆಧುನಿಕ ವಚನಗಳನ್ನು ಬರೆದು ಕೃತಿಯನ್ನು ಹೊರ ತರುತ್ತಿದ್ದಾರೆ. ಮೂಢ ಭಕ್ತಿ, ಡಾಂಭಿಕತೆಯ ವಿಡಂಬನೆ,ಕರಭಾರ(ತೆರಿಗೆ) ಅಧಿಕಾರಮದ, ನಮ್ಮ ಸೋಲಿಗೆ ಇತರರಮೇಲೆ ದೋಷಾರೋಪಣೆ ಹೊರಿಸುವುದು,ತಥಾಕಥಿತ ನಾಗರೀಕ ಸಮಾಜದಲ್ಲಿ ನಡೆಯುವ ಹತ್ತ್ಯಾಕಾಂಡಗಳು ಬದುಕಿನ ಇತಿ ಮಿತಿ,ಕೃಚೌಯ೯,ಕೋಮು ದ್ವೆಷ,ಪರನಿಂದೆ,ಮತ್ಸರ,ಮನದ ವ್ಯಾಧಿ,ಸಾವಿನ ಚಿಂತನೆ-ಹೀಗೆ ಖಾಸಗಿ ಮತ್ತು ಸಾಮಾಜಿಕ ಜೀವನಕ್ಕೆ ಸಂಬಂಧ ಪಟ್ಟ ವಿವಿಧ ವಸ್ತು ವಿಷಯಗಳನ್ನು ಕುರಿತು ವಚನಗಳು ಇಲ್ಲಿವೆ. ದಾಂಪತ್ಯದಲ್ಲಿರಬೆಕಾದ ಹದವನ್ನು ಕುರಿತು ವಚನಗಳು ವಿಶೇಷವಾಗಿ ಗಮನ ಸೆಳೆಯುತ್ತವೆ.ಪತಿಯ ಅಡಿಗಡಿಗೆ ನಿಂದಿಸುವ, ಸತಿಯ ಪದ ಪದಕೂ ಹಂಗಿಸುವ,ಸತಿಪತಿಗಳೀವ೯ರೂ ಜಕ್ಕವಕ್ಕಿಗಳಂತೆ ಲೋಕದೆದುರು ನಟನೆ ಮಾಡುವ ದಂಪತಿಗಳ ಬಗ್ಗೆ ಬರೆದ ವಚನಗಳು ಇಲ್ಲಿ ಗಮನ ಸೆಳೆಯುತ್ತವೆ.ಹಾಗೆಯೇ - ಕೆರೆ ಹಳ್ಳ ನದಿಯ ಉದಕ ಬತ್ತ ಬಹುದಯ್ಯಾ ಲವಣವುಳ್ಳ ಶರಧಿಯುದಕ ಬತ್ತುವುದೇನು? ಸತಿಪತಿಸುತ ಸಂಬಂಧಗಳು ಹಳಸಬಹುದಯ್ಯಾ ಕುಡಿಯಲಾರದ ಜಲದೊಳಗಡೆ ಅಮೂಲ್ಯ ಮಣಿಗಳು ಇರುವಂತೆ ಹದವರಿತು ಬೆರೆತೊಡೆ ಸಂಬಂಧ ಉಳಿವುದು ದಿಟ ಶ್ರೀ ಚಂದ್ರಮೌಳೀಶ್ವರಾ ಎಂದು ಹೇಳುತ್ತಾರೆ ಈ ಕವಯತ್ರಿ.ದಂಪತಿಗಳು ಮಾಗಿದರೆ, ಹದವರಿತು ಬಾಳಿದರೆ ಮನೆ ಸುಖಕರವಾಗಿ ಇರಬಲ್ಲದು ಎನ್ನುವುದರೊಂದಿಗೆ ಸಂಬಂಧಗಳನ್ನು ಉಳಿಸಿಕೊಳ್ಳಬೇಕು ಮತ್ತು ಸತಿಪತಿಯರು ಮಿತ್ರರಂತೆ ಬಾಳಬೇಕು ಎಂಬ ಚಿಂತನೆ ಇಲ್ಲಿದೆ. ಇನ್ನೊಂದು ವಿಶೇಷವೆಂದರೆ ವಾಸಂತಿ ಅಂಬಲಪಾಡಿ ಯವರ ವಚನಗಳ ಅಂಕಿತ ನಾಮ "ಚಂದ್ರಮೌಳೀಶ್ವರಾ"-ಉಡಪಿ ಶ್ರೀ ಕೃಷ್ಣ ಮಠದ ರಥಬೀದಿಯಲ್ಲೇ ಇತಿಹಾಸ ಪ್ರಸಿದ್ದ ಶ್ರೀ ಚಂದ್ರಮೌಳೀಶ್ವರನ ದೇವಸ್ಠಾನವು ಇದೆ. ಸಾಮಾಜಿಕ ಜೀವನದ, ಕುಟುಂಬದ ಸಣ್ಣ ಸಣ್ಣ ಸಂಗತಿಗಳನ್ನು ಕೂಡಾ ಅಲಕ್ಷಿಸಬಾರದು ಎಂಬ ವಿವೇಕ ಈ ವಚನಗಳಲ್ಲಿದೆ.ವಾಸಂತಿ ಅಂಬಲಪಾಡಿ, ಮೆಲುದನಿಯ, ಪಿಸುಮಾತಿನ ಕವಯತ್ರಿ.ಇವರ ಪಿಸುಮಾತಿನಲ್ಲಿ ಆಧುನಿಕ ಬದುಕಿನ ಪಿಸುರುಗಳನ್ನು ತೊಳೆಯಬೇಕು ಎನ್ನುವ ವಿವೇಚನೆ ಇದೆ. ಹಿಂಸೆಯನ್ನುಸಮಥಿ೯ಸುವ ಸಮೂಹ ಸನ್ನಿಯ ನಿರಾಕರನೆ ಇದೆ.ಇವರ ವಚನಗಳು ವಚನ ಶೈಲಿಯಲ್ಲಿ ವಚನ ಕಾಲವನ್ನು, ವೈಚಾರಿಕತೆಯಲ್ಲಿ ಆಧುನಿಕ ಕಾಲವನ್ನು ನೋಡುವಂತಹ ವಚನಗಳು. "ಹುಂಡಿಯ ಕದ್ದವರಿಹರು" "ಪರಬರಹವ ಕದ್ದವರಿಹರು" "ನಿಮ್ಮ ದೇವರು, ನಮ್ಮ ದೇವರು ಎಂಬ ಭೇದ" "ಎನಗೆ ಸೆಗಣಿ ಸಾರಿಸುವ ಗೆರಸೆಯೇ ಸಾಕಯ್ಯಾ"-ಇಂಥ ನೆನಪಿನಲ್ಲಿ ಉಳಿಯುವಂತಹ ಅನೇಕ ಸಾಲುಗಳು ಈ ವಚನಗಳಲ್ಲಿವೆ. ಕವಯಿತ್ರಿ ವಾಸಂತಿ ಅಂಬಲಪಾಡಿ ವಚನಕಾರರ ಅನುಭವ ಮಂಟಪದ ಒಳಗಿರುವ ಅಕ್ಕ,ಮುಕ್ತಾಯಕರಂಥಹ ಸಂಗಾತಿಗಳಿವೆ ಇವರ ಪಿಸುದನಿ ಕೇಳಿಸಲಿ. ಅವರು ಬಾಗಿಲು ತೆರೆದು ಈ ಆಧುನಿಕ ವಚನಕಾತಿ೯ಯ ಕೈ ಹಿಡಿದು ಮುನ್ನಡೆಸಲಿ ಎಂದು ಹಾರೈಸುತ್ತೇನೆ -ಮುರಳೀಧರ ಉಪಾಧ್ಯ ಹಿರಿಯಡಕ ಮುನ್ನುಡಿ (೧-೧೧-೨೦೨೦)

Monday, November 30, 2020

ಉಡುಪಿಯ ಕೆ ಸುರಭಿಗೆ ವಿದ್ಯಾಸಾಗರ ಬಾಲ ಪುರಸ್ಕಾರ |

ಉಡುಪಿಯ ಕೆ ಸುರಭಿಗೆ ವಿದ್ಯಾಸಾಗರ ಬಾಲ ಪುರಸ್ಕಾರ | | ಅವಧಿ । AVADHI: ರಾಜಶೇಖರ ಕುಕ್ಕುಂದಾ ಮಕ್ಕಳ ಸಾಹಿತ್ಯದ ಚಟುವಟಿಕೆಗಳಿಂದ ರಾಜ್ಯದಾದ್ಯಂತ ತನ್ನನ್ನು ಗುರುತಿಸಿಕೊಂಡು, ಕಲಬುರ್ಗಿಯ ಶಹಾಪುರವನ್ನು ಕೇಂದ್ರವಾಗಿರಿಸಿಕೊಂಡು, ಬೆಳ್ಳಿ ಹಬ್ಬವನ್ನೂ ಆಚರಿಸಿಕೊಂಡು ಕಳೆದ ೨೦ ವರ್ಷಗಳಿಂದ ಸಂಧ್ಯಾ ಸಾಹಿತ್ಯ ವೇದಿಕೆಯವರು

ಡಾ/ ಶುಭಶ್ರೀ ಪ್ರಸಾದ್ , ಮಂಡ್ಯ - ಕನ್ನಡ ಸಾಹಿತ್ಯ – ಪರಂಪರೆ: ಭಾಗ- 30 ಕೆ . ಸತ್ಯನಾರಾಯಣ Dr Shubhashree Prasad/ k. Satyanarayana

ಕನ್ನಡ ಸಾಹಿತ್ಯ – ಪರಂಪರೆ: ಭಾಗ- 30 – Newsnap Kannada

Thursday, November 26, 2020

Dr. S R. Arunkumar - - ಹಿರಿಯಡಕ ಒಂದು ಸಾಂಸ್ಕೃತಿಕ ಕೇಂದ್ರ

Manasi Sudhir - C Pha. Kattimani - Marula kaage ಸಿ ಫ ಕಟ್ಟೀಮನಿ - ಮರುಳ ಕಾಗೆ

ಗಿರಿಜಾ ಶಾಸ್ತ್ರಿ - ಕೆ. ಸತ್ಯನಾರಾಯಣ ಅವರ " ಮಹಾ ಕಥನದ ಮಾಸ್ತಿ "

ಮಾಸ್ತಿಯವರ ಬೃಹತ್ ಕಥಾಕೋಶವನ್ನು ಹೊಕ್ಕು ಹೊರಬಂದಿದ್ದಾಯಿತು. ಕೇವಲ ಕಾದಂಬರಿಯೇ ಏಕೆ, ಕಥೆಗಳೂ ಅವುಗಳ ಅಖಂಡ ಓದು, ಗ್ರಹಿಕೆ ಮತ್ತು ಕಾಣ್ಕೆಗಳಿಂದ ಮಹಾಕಥನವಾಗಬಹುದೆಂದು (grand narrative) ನಿರೂಪಿಸಿದ್ದೀರಿ. ಅಭಿನಂದನೆಗಳು ನಿಮಗೆ. ಮಾಸ್ತಿಯವರ ಕತೆಗಳ ಓದಿನ ಬಗೆಗಿನ ನಿಮ್ಮ ಗ್ರಹಿಕೆ ವಿಶ್ಲೇಷಣೆಗಳು ನಿಮ್ಮ ಓದಿನ ಆಳ ಅಗಲಗಳನ್ನು ಪರಿಚಯಿಸುತ್ತದೆ. ಅವರ ಕತೆಗಳನ್ನು ನೀವು ಕೇಳಿಸಿಕೊಂಡ, ಗ್ರಹಿಸಿದ, ಪ್ರಸ್ತುತಗೊಳಿಸಿದ ರೀತಿಗೆ "ಮಹಾಕಥನದ ಮಾಸ್ತಿ " ಎಂಬ ನಿಮ್ಮ ಅನನ್ಯ ಅಧ್ಯಯನವೇ ಸಾಕ್ಷಿ. ಅವು ಇಂದಿಗೂ ಹೇಗೆ ಪ್ರಸ್ತುತ ಎಂಬುದನ್ನು ಬಾದಶಹನ ನ್ಯಾಯ, ಪಂಡಿತನ ಮರಣ ಶಾಸನ, ಸುಶೀಲಾ ರಜಾಕಾರ್ ಮುಂತಾದ ಮುಸ್ಲಿಂ ಕತೆಗಳು ಮೂಲಕ ವಿಶ್ಲೇಷಣೆ ಮಾಡಿದ್ಸೀರಿ. ಅವರ ಕತೆಗಳನ್ನು ನಾವು ಕೇಳಿಸಿಕೊಳ್ಳದೇ, ಕಾಣದೇ ಹೋದದ್ದರಿಂದಲೇ ರಾಮಜನ್ಮ ಭೂಮಿ, ಟಿಪ್ಪು ಕುರಿತ ವಾಗ್ವಾದ ಮುಂತಾದವುಗಳನ್ನು ನಿಭಾಯಿಸುವುದರಲ್ಲಿ ಹೆಣಗಾಡುತ್ತಿದ್ದೇವೆ ಎಂಬ ನಿಮ್ಮ ಅಭಿಪ್ರಾಯ ತುಂಬಾ ಸರಿಯಾದುದು. ಟಾಲ್ಸ್ಟಾಯ್ ಮತ್ತು ಮಾಸ್ತಿಯವರನ್ನು ಒಟ್ಟಿಗೇ ಓದುವುದರ ಮಹತ್ವವನ್ನು ತಿಳಿಸಿದ್ದೀರಿ. ಸಾವಿನ ಸನ್ನಿಧಿಯಲ್ಲಿ ಬದುಕಿನ ಅಗಾಧತೆಯ ಪರಿಚಯ ಆಗುವುದರ ಬಗ್ಗೆ ಹೇಳಿರುವುದು ವಿಶಿಷ್ಟವಾಗಿದೆ. ಹೀಗೆ ಜೊತೆಯಾಗಿ ಓದುವುದರಿಂದಲೇ ನಮಗೆ 'ಯಾವ ದರ್ಶನ ಹೆಚ್ಚು ಪ್ರಸ್ತುತ ಆತ್ಮೀಯ ಎಂಬುದು ಜಾಗೃತವಾಗುತ್ತಲೇ ಹೋಗುತ್ತದೆ" ಎಂದು ಅಭಿಪ್ರಾಯ ಪಟ್ಟಿರುವುದು ಕತೆಗಳ ಹೊಸ ರೀತಿಯ ಓದಿಗೆ ದಾರಿ ಮಾಡಿಕೊಡುತ್ತದೆ. ಮಾಸ್ತಿಯವರ ಪ್ರಾರಂಭದ ಕತೆಗಳೇ ಅವರ ಭವಿಷ್ಯದ ಕತೆಗಳಿಗೆ ತಾತ್ವಿಕ ತಳಹದಿಯನ್ನು ನಿರ್ಮಾಣ ಮಾಡಿದವು ಎಂಬುದನ್ನು, ಅವರ ಹಾಸ್ಯ ಪ್ರಜ್ಞೆಯ ರಂಗಪ್ಪನ ಕತೆಗಳಿಂದ ಹಿಡಿದು ದರ್ಶನರೂಪೀ “ಮಾಯಣ್ಣನ ಕನ್ನಡಿ" (“ಬದುಕಿನ ಉದ್ದೇಶವೇನು. ಬದುಕಿನಲ್ಲಿ ಕರುಣೆ, ಪ್ರೀತಿ ತಿಳುವಳಿಕೆಯ ಸ್ಥಾನವೇನು ಮುಂತಾದ ಜಿಜ್ಞಾಸೆ”)ಯವರೆಗಿನ ಕಥಾವಿಸ್ತಾರದಲ್ಲಿ ಈ ತಾತ್ವಿಕತೆಯ ವಿಕಾಸವನ್ನೂ ಅದರ ಎತ್ತರವನ್ನೂ ತೆರೆದು ತೋರಿಸಿದ್ದೀರಿ. ದಾಂಪತ್ಯ, ಕುಟುಂಬ, ಗಂಡು ಹೆಣ್ಣಿನ ಸಂಬಂಧ, ಸಾಮಾಜಿಕ , ರಾಜಕೀಯ ಧಾರ್ಮಿಕ ಸಮಸ್ಯೆಗಳು, ನೈತಿಕತೆ, ರಾಜಧರ್ಮ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಕತೆಗಳನ್ನು ಆರಿಸಿಕೊಂಡು ಅವುಗಳ ಅನನ್ಯತೆ, ಪ್ರಸ್ತುತೆಯನ್ನು ವಿಶ್ಲೇಷಣೆ ಮಾಡುತ್ತಲೇ ಆ ಕತೆಗಳಿಗೆ ಪೂರಕವಾದ ಉಳಿದ ಕತೆಗಳನ್ನೂ ಉಲ್ಲೇಖ ಮಾಡಿದ್ದೀರಿ. ಇದು ಮಾಸ್ತಿಯವರ ಅಖಂಡ ದೃಷ್ಟಿಕೋನವನ್ನು ಎತ್ತಿ ಹಿಡಿಯಬೇಕೆನ್ನುವ ನಿಮ್ಮ ನಿಲುವಿಗೆ ಉದಾಹರಣೆಯಾಗಿದೆ. ಇನ್ನು ಮಾಸ್ತಿಯವರ ಹೆಣ್ಣು ಪಾತ್ರಗಳ ಕುರಿತು. 'Woman is, man ಇನ್ನು ಮಾಸ್ತಿಯವರ ಹೆಣ್ಣು ಪಾತ್ರಗಳ ಕುರಿತು. 'Woman is, man and woman put together' ಎಂದು ಮಾಸ್ತಿಯವರೇ ಒಮ್ಮೆ ಹೇಳಿದ್ದರೆಂದು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಬರೆಯುತ್ತಾರೆ. (ಶ್ರೀನಿವಾಸ : ಅಭಿನಂದನಾ ಗ್ರಂಥ). ಅವರು ಮುಂದುವರೆದು " ಸ್ತ್ರೀ ಯು ತುಳಿಯಲ್ಪಟವಳೆಂಬ ಕಾರಣಗಳಿಂದಲೋ ಏನೋ ಅವರ ಆದರವು ಅವರ ಕಡೆಗೇ ಇದೆ. ಸ್ತ್ರೀಯ ಪ್ರಾಧಾನ್ಯವನ್ನು ಹೆಚ್ಚಿಸಿ ಆ ಮೂಲಕ ಪುರುಷನ ಪರಿಚಯ ಮಾಡಿಸುವುದು ಶ್ರೀನಿವಾಸರ ಮಾರ್ಗ" ಎಂದು ಹೇಳುತ್ತಾರೆ. ನೀವೂ ಕೂಡ ನಿಮ್ಮ ಕೃತಿಯಲ್ಲಿ ಮಾಸ್ತಿಯವರ ಕತೆಗಳಲ್ಲಿ ಎಲ್ಲಾ ಸ್ತ್ರೀಯರು ಅನ್ಯಾಯದ ವಿರುದ್ಧ ಒಂದಲ್ಲಾ ಒಂದು ಬಗೆಯ ಪ್ರತಿರೋಧವನ್ನು ವ್ಯಕ್ತಪಡಿಸುತ್ತಾರೆ ಎಂದಿದ್ದೀರಿ. ಇದು ಮಾಸ್ತಿಯವರ ಕೆಳವರ್ಗದ ಹೆಣ್ಣುಮಕ್ಕಳ ( ಚೆನ್ನಮ್ಮ, ಎಮ್ಮೆ ಕಳವು,ಮುನೀಶ್ವರನ ಮರ, ಪಕ್ಷಿಜಾತಿ, ದುರದೃಷ್ಟದ ಹೆಣ್ಣು) ಪಾತ್ರಗಳಿಗಾಗಲೀ, ವಿದೇಶಿ ಪಾತ್ರಗಳಿರುವ (ಚಟ್ಟೆಕ್ಕಾರ ತಾಯಿ, ಆಂಗ್ಲ ನೌಕಾ ಕ್ಯಾಪ್ಟನ್) ಕತೆಗಳಿಗಗಾಲೀ ಸರಿಯಿರಬಹುದೇನೋ. ಕೃಷ್ಣಮೂರ್ತಿಯ ಹೆಂಡತಿಗೆ (ಗಂಡ ಸತ್ತ ಸುದ್ದಿ ತಿಳಿದು) "ಬಾವಿಗೆ ಬೀಳುವುದನ್ನು ಬಿಟ್ಟು ಬೇರೆ ಯಾವ ದಾರಿ ಇದೆ" ಎನ್ನುವ ಮಾತನ್ನು‌ ನೀವು ಒಪ್ಪುತ್ತೀರಿ. ಮಾಸ್ತಿಯವರಿಗಿಂತ ಹತ್ತಿಪ್ಪತ್ತು ವರುಷಗಳಷ್ಟು ಹಿಂದೆಯೇ ಗುಲ್ವಾಡಿ ವೆಂಕಟರಾಯರಾಗಲೀ, ಕೆರೂರು ವಾಸುದೇವಾಚಾರ್ಯರಾಗಲೀ, ಕಲ್ಯಾಣಮ್ಮನವರಾಗಲೀ 'ಇಂದಿರೆಯರ'ನ್ನು ನಿರ್ಮಾಣ ಮಾಡಲಿಲ್ಲವೇ? ಪ್ರಶ್ನೆಯೆಂದರೆ ಮೇಲುಜಾತಿಯ ಹೆಣ್ಣು ಪಾತ್ರಗಳಾದ 'ಮೇಲೂರಿನ ಕುರುಡಿ ಲಕ್ಷಮ್ಮ,', 'ಕಾಮನ ಹಬ್ಬದ ಒಂದು ಕತೆ'ಯ ಸಾವಿತ್ರಮ್ಮ, 'ಕೃಷ್ಣಮೂರ್ತಿ ಯ ಹೆಂಡತಿ', 'ಸನ್ಯಾಸವಲ್ಲದ ಸನ್ಯಾಸ'ದ ನರಸಿಂಹಯ್ಯನ ಹೆಂಡತಿ ಈ ಪಾತ್ರಗಳ ಪ್ರತಿರೋಧವು ಪ್ರತಿರೋಧದಂತೆ ಕಾಣದೆ ಬಲಿಪಶುಗಳಂತೆ ಕಾಣುತ್ತದೆ. ಇದನ್ನು ಪ್ರತಿರೋಧ ಎಂದರೂ ಇವರೆಲ್ಲರ ಈ ಪ್ರತಿರೋಧವು ಇಷ್ಟು ದುರ್ಬಲವಾಗಲು ಕಾರಣವೇನು? ಬಹುಶಃ ಅವು ಪ್ರಾರಂಭದ ಕತೆಗಳು ಎನ್ನುವ ಸಮಾಧಾನ ಸಾಕೆ? ಅಥವಾ ಮೇಲು ಜಾತಿಯ ಹೆಣ್ಣುಮಕ್ಕಳಿಗೆ ಮಾತ್ರ ಸಂಸ್ಕೃತಿಯನ್ನು ಜತನವಾಗಿ ಕಾಪಾಡಿಕೊಂಡು ಹೋಗಲು ಬೇಕಾದ ಮೌಲ್ಯಗಳಿವೆ ಎಂಬುದನ್ನು ಸಾರುವುದೋ?. ಈ ಅನುಮಾನಕ್ಕೆ ಕಾರಣ, ತಿರುಮಲಾಂಬ ಅವರ ನಭ, ವಿರಾಗಿನಿ ಕಾದಂಬರಿಗಳಿಗೆ ಮಾಸ್ತಿಯವರು ಕಟುವಾಗಿ ವಿಮರ್ಶಿಸಿದ್ದು (ಆಮೇಲೆ ಅವರು ಪಶ್ಚಾತ್ತಾಪ ಪಟ್ಟದ್ದು ಬೇರೆಯ ಮಾತು). ಚಿ.ನ. ಮಂಗಳ ತಿರುಮಲಾಂಬ ಅವರನ್ನು ಮೊದಲ ಬಾರಿಗೆ ನೋಡಲು ಮದ್ರಾಸಿಗೆ ಹೋಗಿದ್ದರಂತೆ ಆಗ ಅವರ ಎದುರಿಗೆ ಬಂದ ತಿರುಮಲಾಂಬ 'ಅವಳು ಸತ್ತು ಹೋದಳು' ಎಂದು ಹೇಳಿದರಂತೆ. ತಿರುಮಲಾಂಬ ಅವರ ಪ್ರಸ್ತಾಪವನ್ನು ನೀವು ಮಾಡಿದ್ದೀರಿ. 'ಬಾದಶಹನ ನ್ಯಾಯ' ಬರೆದ ಮಾಸ್ತಿಯವರು, ಸ್ತ್ರೀಪಕ್ಷಪಾತಿಯಾದ ಮಾಸ್ತಿಯವರು ತಿರುಮಲಾಂಬ ಅವರನ್ನು ಹೀಗೆ ಹಣಿದದ್ದು ಸರಿಯೇ ಎನ್ನುವುದು ನನಗೆ ಇಂದಿಗೂ ಕಾಡುವ ಸಂಗತಿ. ಮಾಸ್ತಿಯವರನ್ನು ಇಂತಹ ಎಲ್ಲಾ ಋಣಾತ್ಮಕ ಅಂಶಗಳ ಜೊತೆಗೇ ನಾವು ಒಪ್ಪಿಕೊಳ್ಳ ಬೇಕಲ್ಲವೇ? ಕೆ.ವಿ. ನಾರಾಯಣ ಮತ್ತು ಎಚ್.ಎಸ್ ರಾಘವೇಂದ್ರರಾವ್ ಅವರು ಮಾಸ್ತಿಯವರೊಡನೆ ನಡೆಸಿದ ಸಂದರ್ಶನದಲ್ಲಿ ಅವರ ಮಿತಿಗಳನ್ನು (ಪ್ರಶ್ನೆಗಳನ್ನು ಎದುರಿಸುವ ರೀತಿ) ನೀವು ನಿಷ್ಪಕ್ಷಪಾತಿಯಾಗಿ ಗುರುತಿಸಿದ್ದೀರಿ ಇದು ಇತ್ಯಾತ್ಮಕ ಅಂಶ. ಮಾಸ್ತಿಯವರನ್ನು ಅವರ ಕತೆಗಳನ್ನು ನವೋದಯದ ಆನಂತರದವರು, ಮುಖ್ಯವಾಗಿ ನವ್ಯ ವಿಮರ್ಶಕರು ಅರ್ಥಮಾಡಿಕೊಂಡಿದ್ದಕ್ಕಿಂತ ಅಪಾರ್ಥಮಾಡಿಕೊಂಡಿದ್ದೇ ಹೆಚ್ಚು. ಅವರ ಕತೆಗಳಲ್ಲಿ ಕಾಣುವ ಮನುಷ್ಯನ ಧಾರಣ ಶಕ್ತಿಯನ್ನು, ಕೇಡಿನ ಪರಿಕಲ್ಪನೆಯನ್ನು ಲೇವಡಿಮಾಡಿದವರೇ ಬಹಳ. ಇಂತಹ ಒಂದು ತಪ್ಪು ಕಲ್ಪನೆಯನ್ನು ನಿಮ್ಮ ಅಧ್ಯಯನ ಶೀಲ ಕೃತಿಯಲ್ಲಿ ಸರಿಪಡಿಸಲು ಪ್ರಯತ್ನಿಸಿದ್ದೀರಿ. ಮಾಸ್ತಿಯವರ ಕಥಾ ಲಕ್ಷ್ಯವಾದ “ಜೊತೆಯ ಜೀವದ ಜೀವನದಲ್ಲಿ ಸಹಾನುಭೂತಿಯಿಂದ ಬೆರೆತು ಅದರ ಸಂಗತಿಯನ್ನು ಬೇರೆ ಜೀವಕ್ಕೆ ತಿಳಿಸುವ ಆಸೆಯಲ್ಲಿ” (ಯಶವಂತ ಚಿತ್ತಾಲರು) ಮಾಸ್ತ್ತಿಯವರು ಗ್ರ್ರಹಿಸಿದ್ದೆಷ್ಟು, ಕಂಡೆದ್ದೆಷ್ಟು?, ಕಂಡದ್ದನ್ನು ಇನ್ನೊಬ್ಬರಿಗೆ ಕತೆಮಾಡಿ ಹೇಳುವಲ್ಲಿ ಮಾಸ್ತಿಯವರ ಯಾವ ನಂಬಿಕೆಗಳು ಬದುಕಿನ ಧೋರಣೆಗಳು ಕೆಲಸಮಾಡಿವೆ

Wednesday, November 18, 2020

ವಾಚಕರ ವಾಣಿ: ಪ್ರಜಾಪ್ರಭುತ್ವ ಅಂದರೆ ಇದೇನಾ...? |ಡಿ. ಎಸ್. ನಾಗಭೂಷಣ - D. S. NAGABHUSHANA

ವಾಚಕರ ವಾಣಿ: ಪ್ರಜಾಪ್ರಭುತ್ವ ಅಂದರೆ ಇದೇನಾ...? | Prajavani

Deepavali celebrations!! Full of music and dance!! ಸಖೀಗೀತದಲ್ಲಿ ದೀಪಾವಳಿ 2020

Ancient Folk Art | ನಶಿಸಿ ಹೋಗುತ್ತಿರುವ ಪ್ರಾಚೀನ ಕಲೆ | Togalugombe Aata | Puppet Show

ಸಂದರ್ಶನ: ಜನ ಕಾಂಗ್ರೆಸ್ಸನ್ನು ಪರ್ಯಾಯವೆಂದು ಭಾವಿಸುತ್ತಿಲ್ಲ -ಕಪಿಲ್ ಸಿಬಲ್ Kapil Sibal

ಸಂದರ್ಶನ: ಜನ ಕಾಂಗ್ರೆಸ್ಸನ್ನು ಪರ್ಯಾಯವೆಂದು ಭಾವಿಸುತ್ತಿಲ್ಲ | Udayavani – ಉದಯವಾಣಿ

ವಾದಿರಾಜ್| ದಲಿತ ರಾಜಕಾರಣ, ಬಿಹಾರದ ಜಾಡು | Dalits in Bihar Politics

ಸಂಗತ| ದಲಿತ ರಾಜಕಾರಣ, ಬಿಹಾರದ ಜಾಡು | Prajavani

ಬರಗೂರು ರಾಮಚಂದ್ರಪ್ಪ : ಯಾವುದೇ ಅಲೆಯಿಲ್ಲದ ಬಿಹಾರ ಚುನಾವಣೆ / BARAGURU RAMACHANDRAPPA

ವಾಚಕರ ವಾಣಿ: ಯಾವುದೇ ಅಲೆಯಿಲ್ಲದ ಬಿಹಾರ ಚುನಾವಣೆ | Prajavani

Monday, November 16, 2020

ಎಮ್ ಆರ್. ಕಮಲ - ಅವು ಪದಗಳಲ್ಲ , ದನಿಗಳಲ್ಲ /M R. Kamala / Pablo Neruda

ಅವು ಪದಗಳಲ್ಲ, ದನಿಗಳಲ್ಲ -ಎಂ. ಆರ್. ಕಮಲ ಪ್ಯಾಬ್ಲೋ ನೆರೂಡನ ಸಮಗ್ರ ಕಾವ್ಯವನ್ನು ಪರೀಕ್ಷೆಗಾಗಿ ಓದುವಾಗ ಅವಳಿಗೆ ಹತ್ತೊಂಬತ್ತು ವರ್ಷ. ಅವನ ಒಂದೊಂದೇ ಕವಿತೆಯನ್ನು ಎದೆಗಿಳಿಸಿಕೊಳ್ಳುತ್ತಿದ್ದಾಗ ವಿಚಿತ್ರವಾಗಿ ಕಾಡಿದ್ದು ಅವನ `ಕಾವ್ಯ' ಎಂಬ ಕವಿತೆ! ಕವಿತೆಯೇ ಕವಿಯನ್ನು ಅರಸಿಕೊಂಡು ಬಂದು ಬರೆಸಿಕೊಳ್ಳುವುದೇ ಕವಿತೆಯ ವಸ್ತು. ಅದು ಎಲ್ಲಿಂದ ಹೇಗೆ ಬಂತು ಎನ್ನುವುದು ಕವಿಗೆ ತಿಳಿಯುವುದೇ ಇಲ್ಲ. ನದಿಯಿಂದಲೋ, ಶಿಶಿರ ಋತುವಿನಿಂದಲೋ ಒಟ್ಟಿನಲ್ಲಿ ನಿಸರ್ಗದಿಂದ ಬಂದಿದ್ದರೂ ಬಂದಿರಬಹುದೇನೋ ಎಂದು ಕವಿಗೆ ಅನ್ನಿಸುತ್ತದೆ. ಆದರೆ ಅವು ಪದಗಳಲ್ಲ, ದನಿಗಳಲ್ಲ, ಮೌನವಲ್ಲ . ಕತ್ತಲಿನ ಕೊಂಬೆಯಿಂದ, ಭಾವಾತಿರೇಕದ ಬೆಂಕಿಯಿಂದ, ಯಾವುದೋ ರಸ್ತೆಯಲ್ಲಿ, ಒಬ್ಬಂಟಿ ಇದ್ದವನನ್ನು, ಯಾರಿಗೂ ಗುರುತು ಪರಿಚಯವಿಲ್ಲದವನನ್ನು ಬಂದು ಮುಟ್ಟಿ ಎಳೆದು ತಂದುಬಿಟ್ಟಿತು! ಕವಿಗೆ ಏನು ಹೇಳಬೇಕೆಂಬುದೇ ತಿಳಿಯಲಿಲ್ಲ. ಆತ್ಮದೊಳಗೊಂದು ಕದಲಿಕೆ ಆರಂಭವಾಗಿದ್ದು ನಿಜ. ಆ ಬೆಂಕಿ ಎಂಥದ್ದೆಂದು ಕಂಡುಕೊಳ್ಳಲು ಪ್ರಯತ್ನಪಟ್ಟು ದುರ್ಬಲವಾದ ಮೊದಲ ಸಾಲೊಂದನ್ನು ಬರೆದ. ಅವನು ಬರೆದದ್ದರ ಬಗ್ಗೆ ಅಂಥ ಆತ್ಮವಿಶ್ವಾಸವು ಇರಲಿಲ್ಲ. ಆ ಸಾಲಿನಲ್ಲಿ ಸತ್ವವೇ ಇರಲಿಲ್ಲ. ಆದರೂ ಅದು ಸ್ವರ್ಗದ ಬಾಗಿಲನ್ನು ತೆರೆಸಿತು. ಗ್ರಹ, ತಾರೆಗಳತ್ತ ಒಯ್ದಿತು. ಮರುಭೂಮಿಯಂತಿದ್ದ ಭೂಮಿಯಲ್ಲಿ ಗಿಡಗಳು ಹುಟ್ಟಿ, ಹೂವರಳಿ ಜೀವಂತಿಕೆ ಮೂಡಿತು. ಕಾವ್ಯದ ಗುಲಾಮನಾಗಿ ಕೆಲವೊಮ್ಮೆನೋವನ್ನು ಅನುಭವಿಸಬೇಕಾಯಿತು. ಆದರೆ ನಕ್ಷತ್ರಗಳೊಂದಿಗೆ ಓಡುತ್ತ, ಎದೆ ಹಗುರಾಗಿ ಗಾಳಿಯಲ್ಲಿ ತೇಲಿತು. ಈ ಇಂಥ ಮಂಕು ಕವಿದ ಗಳಿಗೆಗಳಲ್ಲಿ ತನ್ನನ್ನು ಕೈಹಿಡಿದು ನಡೆಸುತ್ತಿರುವುದೇನು, ನಕ್ಷತ್ರದಿಂದ ನಕ್ಷತ್ರಕ್ಕೆ ಕಾಲಿಡಲು ಅನುವು ಮಾಡಿಕೊಡುತ್ತಿರುವ ಶಕ್ತಿ ಯಾವುದು? ಅಂಗೈ ಅಗಲದ ಜಾಗದಲ್ಲಿ ಕಣ್ಮನ ಸೆಳೆವ ಹೂದೋಟವನ್ನು ನಿರ್ಮಿಸಿಕೊಂಡ ಬಗೆ ಹೇಗೆ? ಎದೆಯ ಕತ್ತಲನ್ನು ಬಗೆದು ಬಗೆದು ಮಿಂಚು ಮರಿಗಳ ತಂದಿದ್ದು ಹೇಗೆ ಎಂದೆಲ್ಲ ಯೋಚಿಸುತ್ತಾಳೆ. ಬಹುಶಃ ಓದು, ಬರವಣಿಗೆಯೇ! `ಅರ್ಥಶಾಸ್ತ್ರ'ವನ್ನೇ ವ್ಯಾಸಂಗಕ್ಕೆ ಪ್ರಮುಖ ವಿಷಯವಾಗಿ ತೆಗೆದುಕೊಂಡಿದ್ದರೂ `ಅರ್ಥ' ಅವಳ ಬದುಕಿನಲ್ಲಿ ವಿಶೇಷ ಅರ್ಥ ಪಡೆದುಕೊಳ್ಳಲೇ ಇಲ್ಲ. ಬದುಕಿನ ಕಾವ್ಯ ಅರ್ಥವಾದ ಹಾಗೆ ಗಣಿತ ತಿಳಿಯಲೇ ಇಲ್ಲ . ಅದರ ಬಗ್ಗೆ ಹೆಮ್ಮೆ, ಕೀಳರಿಮೆ ಯಾವುದೂ ಇಲ್ಲ. ಅವಳು ತನ್ನನ್ನು ಕವಿಯೆಂದು ಗುರುತಿಸಿಕೊಳ್ಳುತ್ತಾಳೆ. ಹಾಗೆ ನೋಡಿದರೆ ಯಾರು ಕವಿಯಲ್ಲ? ಬರೆದವರು ಮಾತ್ರವೇ ಎಂಬ ಪ್ರಶ್ನೆ ಅವಳನ್ನು ಕಾಡುತ್ತಿರುತ್ತದೆ. ಬರೆದವರಲ್ಲೂ `ಆಹಾ ಕವಿ' `ಓಹೋ ಕವಿ' ಎನಿಸಿಕೊಂಡವರು ಕವಿಗಳೇ? ಮೊದಲಿನಿಂದಲೂ ಅವಳು ಈ ಸಾಂಸ್ಕೃತಿಕ ರಾಜಕಾರಣಗಳಿಂದ ದೂರ, ಬಹುದೂರ! ಯಾರಾದರೂ ತನ್ನ ಬರಹವನ್ನು ಮೆಚ್ಚಿದರೆ ಮನಸ್ಸು ಅರಳುವುದು ಮಾತ್ರ ಸುಳ್ಳಲ್ಲ. ಬದುಕಿನ ಕವಿತೆಯೇ ಅವಳಿಗೆ ಬರೆದ ಕವಿತೆಗಳಿಗಿಂತ ಹೆಚ್ಚು ಪ್ರಿಯ. ಅಲ್ಲೇ ಬಡಿದಾಡಿ ಹೊಸ ಲಯ, ಛಂದಸ್ಸನ್ನು ಕಂಡುಕೊಂಡಿದ್ದಾಳೆ, ಮಾರ್ಗವನ್ನು ಅರಸಿದ್ದಾಳೆ, ದೇಸಿಯಲ್ಲಿ ನಿಂತಿದ್ದಾಳೆ. ದಿನ ದಿನದ ರಗಳೆಯ ಸಾಂಗತ್ಯವೂ ಅಲ್ಲೇ. ಪ್ರತಿಕ್ಷಣ ತನ್ನ ವಿದ್ಯಾರ್ಥಿಗಳ ಬದುಕನ್ನು ಕವಿತೆಯಾಗಿಸುವುದು ಹೇಗೆ ಎಂದೇ ಆಲೋಚಿಸಿದ್ದಾಳೆ. * ಚಿಕ್ಕ ಹುಡುಗಿಯಾಗಿದ್ದಾಗಿನಿಂದ ಅವಳು ಕವಿತೆ ಬರೆಯುತ್ತಲೇ ಇದ್ದಾಳೆ. ಯಾರೋ ಬೈದಾಗ, ಅವಮಾನಿಸಿದಾಗ, ಎದೆಯ ತಳಮಳಗಳನ್ನು ತಾಳದೆ ಹೋದಾಗ, ಪ್ರೀತಿ ಹುಟ್ಟಿದಾಗ, ಖುಷಿಯಾದಾಗ, ನಿಸರ್ಗದೊಂದಿಗೆ ಒಡನಾಡಿದಾಗ, ಕೆಲಸದ ಒತ್ತಡ ತಾಳಿಕೊಳ್ಳುವುದು ಅಸಾಧ್ಯವಾಗಿದ್ದಾಗ ಹೀಗೆ ಎಲ್ಲ ಗಳಿಗೆಗಳಲ್ಲೂ ಕವಿತೆಗಳನ್ನೇ ಆಶ್ರಯಿಸಿದ್ದಾಳೆ. ಬರೆದ ಕವಿತೆಗಳಲ್ಲಿ ಶೇಕಡಾ ಹತ್ತನ್ನು ಕೂಡ ಪ್ರಕಟಿಸಲಿಲ್ಲ. ಪ್ರಕಟಣೆ ಮಾಡಬೇಕು ಎಂದೂ ಅನ್ನಿಸಲಿಲ್ಲ. ಕವಿತೆ ತನ್ನನ್ನೇಕೆ ಅರಸಿ ಬಂದಿತು ಎಂದು ನೆರೂಡನಂತೆ ಅವಳು ಯೋಚಿಸಿದ್ದಾಳೆ. ಅವಳು ಬಹಳ ಹಿಂದೆ ವಿಸಾವ ಸಿಂಬೋಸ್ಕಳ ಕವಿತೆಯೊಂದನ್ನು ಅನುವಾದಿಸಿದ್ದಳು. ಅದರ ಕೆಲವು ಸಾಲುಗಳು ಇಂದು ನೆನಪಿಗೆ ಬರುತ್ತಿವೆ. `ಕವಿತೆ ಬರೆಯದ ಎಷ್ಟೋ ಕುಟುಂಬಗಳು ನಮ್ಮ ಸುತ್ತಮುತ್ತೆಲ್ಲ ಇವೆ. ಈ ಸಾಂಕ್ರಾಮಿಕ ಒಮ್ಮೆ ಹರಡಿತೆಂದರೆ ತಡೆಯುವುದು ಕಷ್ಟ ಜಲಪಾತದಂತೆ ಧುಮ್ಮಿಕ್ಕುತ್ತದೆ ತಲೆತಲಾಂತರಕ್ಕೆ ಹರಿದು ಸುಳಿಗೆ ಸಿಕ್ಕಿಸುತ್ತದೆ' ಕವಿತೆ ಮತ್ತು ಬದುಕಿನ ಕವಿತೆ ಸೃಷ್ಟಿಸಿದ ಸುಳಿಯಲ್ಲಿ ಅವಳು ಸಂತೋಷದಿಂದಲೇ ಸಿಕ್ಕಿಕೊಂಡಿದ್ದಾಳೆ. ಬಿಟ್ಟುಬಿಡಿ. * ಈ ಭಾರದ ದಿನಗಳಲ್ಲಿ ಎಷ್ಟೊಂದು ಕಲೆಗಳು, ಎಷ್ಟೊಂದು ಜನರ ಮನಸ್ಸನ್ನು ಹಗುರಗೊಳಿಸುತ್ತಿವೆ. `ಕಲೆ' (Arts ) ಯನ್ನೇ ತಿರಸ್ಕರಿಸಿ ನಿರ್ಮಿಸಿದ ಕೃತಕ ಸಮಾಜ ಬಹುಶಃ ಈಗ ಆತ್ಮಾವಲೋಕನ ಮಾಡಿಕೊಳ್ಳಬಹುದೇನೋ! (#ಕ್ವಾರಂಟೈನ್ ಪುಸ್ತಕದಿಂದ ಈ ಲೇಖನ ...ಪುಸ್ತಕ ಬೇಕಾದವರು ಸಂಪರ್ಕಿಸಬಹುದು...ಬದುಕು ಬಣ್ಣವೇ ಆಗಿದ್ದ ಕಾಲದ ಒಂದು ಫೋಟೋ )

ಗಿರಿಧರ ಕಾರ್ಕಳ - ಯಾವ ಗುರುವು ತೊಡಿಸಬಲ್ಲ ಬೆಳಕಿನಂಗಿಯ ? Giridhara Karkala

 

Giridhara Karkala


Saturday, October 31, 2020

ಎಸ್. ಟಿ. ಆರ್ - ಬಾಗವಾಳಿನ ಶಾಸನ -ಕಂಪಣ ಒಡೆಯರ್ BAGEVALU INSCRIPTION KAMPANA ODEYAR

 ಬಾಗವಾಳಿನ ಈ ಶಾಸನ (ಬಾಗಿವಾಳು) ಮೊತ್ತೊಂದು ಬಹಳ ಮಹತ್ವದ ಶಾಸನ.

ಈ ಶಾಸನವೂ ಕುಮಾರ ಕಂಪಣ ಒಡೆಯರನ ಉಲ್ಲೇಖಿಸುತ್ತದೆ. ಕ್ರಿ.ಶ 1352ರ ಕಾಲಮಾನದ್ದಾಗಿದೆ. ಈ ಶಾಸನವೂ ವಾಸ್ತವವಾಗಿ ಒಂದು ವೀರಗಲ್ಲು. ಈ ಶಾಸನದಲ್ಲಿ ಬೇಲೂರಿನ ಮೇಲೆ ಕುಮಾರ ಕಂಪಣ್ಣೊಡೆಯನು ಮಾಡಿದ ದಾಳಿಯೊಂದನ್ನು ಉಲ್ಲೇಖಿಸುತ್ತದೆ. ವೀರನೊಬ್ಬ ಈ ಸಂದರ್ಭದಲ್ಲಿ ಹೋರಾಡಿ ಮಡಿದ. ಇದುವರೆಗೆ ಈ ಅಂಶ ತಿಳಿದಿರಲಿಲ್ಲ. ಕಂಚಿಯ ಸಮೀಪವಿರುವ ರಾಜಗಂಭೀರಮಲೈಯನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಅಳುತ್ತಿದ್ದ ಶಂಬುವರಾಯನ ವಿರುದ್ದ, ಒಂದನೇ ಬುಕ್ಕನ ಮಗನಾದ ಕಂಪಣನು ಹೋರಾಡಿದನೆಂಬುದು ತಿಳಿದ ಸಂಗತಿ. ಯುವರಾಜ ಕಂಪಣನು ಶಂಬುವರಾಯನನ್ನು ಸೋಲಿಸಿ ವಿಜಯನಗರ ಸಾಮ್ರಾಜ್ಯದ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳುವಂತೆ ಮಾಡಿದನು. ಅನಂತರ ಕಂಪನು ಮದುರೆಯತ್ತ ಮುಂದುವರೆದು ಪ್ರಾಂತೀಯ ರಾಜ್ಯಪಾಲನಾದ ಜಲಾಲುದ್ದಿನ್ ಅಹ್ಸಾನ್ ಷಾಹನನ್ನು ಸೋಲಿಸಿದರು, ಕಣ್ಣಾನೂರುಕೊಪ್ಪಂ ಆತನ ಕೈವಶವಾಯಿತು. ತರುವಾಯ ಆತ ತಿರುಪತಿಯಲ್ಲಿ ಇಡಲಾಗಿದ್ದ ಶ್ರೀರಂಗನಾಥನ ಪ್ರತಿಮೆಯನ್ನು ಮರಳಿ ಶ್ರೀರಂಗಕ್ಕೆ ತಂದು ಪ್ರತಿಷ್ಠಾಪನೆ ಮಾಡಿಸಿದನು. ಹಾಗೆಯೇ ಕಣ್ಣಾನೂರುಕೊಪ್ಪಂ ನಲ್ಲಿ ಪೊಯ್ಸಳೇಶ್ವರ (ಹೊಯ್ಸಳೇಶ್ವರ) ದೇವರ ಪ್ರತಿಷ್ಠೆಯನ್ನು ಮಾಡಿಸಿದನು. ಮುನ್ನೆಡೆದ ಆತ ಮದುರೆ ಸುಲ್ತಾನನನ್ನು ಸೋಲಿಸಿ ಮಧುರಾನಗರವನ್ನು ಸ್ವಾಧೀನಪಡಿಸಿಕೊಂಡನು. ಈ ಮಹಾವಿಜಯವನ್ನು ಆತನ ಪತ್ನಿಯಾದ ಗಂಗಾಂಬಿಕೆ ತನ್ನ "ಮಧುರಾವಿಜಯಂ" ಎಂಬ ಕಾವ್ಯದಲ್ಲಿ ವರ್ಣಿಸಿದ್ದಾಳೆ. ಹೀಗೆ ಕಂಪಣ ಒಡೆಯರನು ದಖ್ಖನನಲ್ಲಿ ವಿಜಯನಗರದ ಆಳ್ವಿಕೆಗೆ ಭದ್ರಬುನಾದಿಯನ್ನು ಹಾಕಿದನು. ಮದುರೆಯತ್ತ ಸಾಗುವ ಮೊದಲು ಆತ ಬೇಲೂರು ರಾಜ್ಯದ ಮೇಲೆ ದಾಳಿಮಾಡಿದ್ದಿರಬೇಕು ಹಾಗೂ ಅದನ್ನು ಒಂದನೇ ಬುಕ್ಕನ ರಾಜ್ಯಕ್ಕೆ ಸೇರಿಸಿದ್ದಿರಬೇಕು. ಈ ಶಾಸನವೂ ಕಂಪಣ ಒಡೆಯರನ ದಿಗ್ವಿಜಯವನ್ನು ತಿಳಿಸಿಕೊಡುತ್ತದೆ.
ಅರಿಸೀಕೆರೆಯ ಬಾಗವಾಳು(ಬಾಗಿವಾಳು) ಗ್ರಾಮದ ಪ್ರಾಚೀನ ಕಲ್ಲೇಶ್ವರ ದೇವಾಲಯ ಮುಂದೆ ಇದೆ, ಈ ಕಲ್ಲೇಶ್ವರ ದೇವಾಲಯವೂ ಬಹಳ ಪ್ರಾಚೀನವಾಗಿಯೇ ಅವನತಿಯಾಗಿದೆ, ಅದೇ ಸ್ಥಳದಲ್ಲಿ ಸೋಮೇಶ್ವರ ದೇವಾಲಯ ನಿರ್ಮಾಣಗೊಂಡಿದೆ. ಈಗಲೂ ಈ ಶಾಸನವೂ ದೇವಾಲಯದ ಮುಂದೆ ಬಿಲ್ವಪತ್ರೆಯ ಮರದ ಕೆಳಗಡೆ ಇದೆ, ಊರಿನ ಜನ ಶಾಸನ ಸಂರಕ್ಷಿಸಿದ್ದಾರೆ. ಹಾಗಾಗಿ ಊರಿನ ಸಮಸ್ತ ಜನತೆಗೆ ಅಭಿನಂದನೆಗಳು.
ಎಸ್ ಟಿ ಆರ್
10

Friday, October 30, 2020

ಡಾ/ ಮಹೇಶ್ವರಿ ಯು- ಶಂಬಾ ಜೋಶಿ { ಮಲ್ಲೇಪುರಂ ವೆಂಕಟೇಶ -]

 ಶಂಬಾ ಜೋಶಿ- ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕøತ ಕನ್ನಡ ಲೇಖಕರ ಕೃತಿಸರಣಿ

                ನವ ಕರ್ನಾಟಕ ಪ್ರಕಟಣೆ

                ಲೇಖಕರು: ಮಲ್ಲೇಪುರಂ ವೆಂಕಟೇಶ ಸಂ: ಪ್ರಧಾನ ಗುರುದತ್ತ

                ಒಟ್ಟು 96 ಪುಟಗಳ ಈ ಕಿರುಹೊತ್ತಗೆಯಲ್ಲಿ ಕನ್ನಡದ ಈ  ನುಡಿದಿಗ್ಗಜನ ಭವ್ಯ ವ್ಯಕ್ತಿತ್ವವನ್ನು  ಅವರ ಕೃತಿಗಳ ಸಂಕ್ಷಿಪ್ತ ಪರಿಶೀಲನೆಯೊಂದಿಗೆ  ಮಾಡಿಕೊಡುವ ದಿಟ್ಟತನವನ್ನು ಮೆರೆದವರು ಮಲ್ಲೇಪುರಂ ವೆಂಕಟೇಶರು.

                ಶಂಕರ ಬಾಳಾ ದೀಕ್ಷಿತ ಜೋಷಿ 1896-1991ರ ನಿಡುಗಾಲದ ಬದುಕಿನಲ್ಲಿ ಅನನ್ಯ ಸಂಶೋಧಕರಾಗಿ, ಸಂಸ್ಕತಿ ಚಿಂತಕರಾಗಿ ಮೂಡಿಸಿದ ಛಾಪು ವಿಶೇಷವಾದದ್ದು.ಪರಿಮಿತವಾದ ಶೈಕ್ಷಣಿಕ ಹಿನ್ನೆಲೆಯೊಂದಿಗೆ ಅವರು ಆಶ್ರಯಿಸಿದ್ದು ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಅಧ್ಯಾಪನ ವೃತ್ತಿಯನ್ನು. ಯಾವುದೇ ವಿಶ್ವವಿದ್ಯಾಲಯಗಳ ಆಸರೆ ಬೆಂಬಲಗಳಿಲ್ಲದೆಯೇ ಒಂಟಿಸಲಗನಂತೆ ಜ್ಞಾನಪಿಪಾಸುವಾಗಿ ಒಂದರ ಮೇಲೊಂದರಂತೆ ಅವರು ಕೈಗೆತ್ತಿಕೊಂಡ ಶೋಧನೆಗಳು ದಂಗುಪಡಿಸುತ್ತವೆ.  ಮಲ್ಲೇಪುರಂ ಪರಿಚಯಿಸುವ  ಶಂಬಾ ಅವರ -ಕಣ್ಮರೆಯಾದ ಕನ್ನಡ, ಕನ್ನುಡಿಯ ಹುಟ್ಟು,ಕನ್ನಡದ ನೆಲೆ ಹಾಗೆಯೇ ಶೀಖರಪ್ರಾಯವಾದ ಕರ್ಣಾಟಕ ಸಂಸ್ಕøತಿಯ ಪೂರ್ವಪೀಠಿಕೆ- ಈ ಮುಂತಾದ  ಕೃತಿಗಳು  ಅವರ ಬಹುಶ್ರುತತ್ವವನ್ನು , ಬಹುಶಿಸ್ತೀಯ ನೆಲೆಗಳಿಂದ ಸಾಗುವ ಅವರ ಸಂಶೋಧನೆಯ ದಾರಿಯನ್ನು ಶ್ರುತಪಡಿಸುತ್ತವೆ.ಮರಾಠಿಪ್ರಾಬಲ್ಯದ ಪರಿಸರದಲ್ಲಿ ಕನ್ನಡವನ್ನು ಒಲಿಸಿಕೊಂಡು ಕರ್ನಾಟಕ ಏಕೀಕರಣದಲ್ಲಿಯೂ ತೊಡಗಿಸಿಕೊಂಡು  ಅದಕ್ಕೆ ಅಗತ್ಯವಾಗಿದ್ದ ಬೌದ್ಧಿಕ ತಳಹದಿಯನ್ನು ಗಟ್ಟಿಗೊಳೊಸಿದ ಗಟ್ಟಿಗನಾಗಿ ಶಂಬಾ ಮೆರೆದದ್ದನ್ನು ಈ ಕೃತಿಗಳ ತಿರುಳು ಸಾರುತ್ತದೆ.

                ಭಾಷಾ ಶಾಸ್ತ್ರ, ಸಮಾಜ ಶಾಸ್ತ್ರ,ಮೌಖಿಕ ಆಕರಗಳು, ಲಿಖಿತ ಆಕರಗಳು ,ಏನೆಲ್ಲವನ್ನೂ ಬಳಸಿಕೊಂಡು ಕಂನುಡಿಯ ಹುಟ್ಟಿನ ಬಗ್ಗೆ ತಲಸ್ಪರ್ಶಿಯಾಗಿ ಅವರು ಶೋಧಿಸಿದ್ದನ್ನು ,ದ್ರಾವಿಡ ಪದಕ್ಕೆ ಪರ್ಯಾಯವಾಗಿ ಅವರೇ ಸೃಷ್ಟಿಸಿದ 'ಕಂದಮಿಳು' ಎಂಬ ಪದದ ಮೂಲಕವಾಗಿ ನುಡಿಯ ಪ್ರಾಚೀನತೆಯನ್ನು 

ನಾಡಿನಲ್ಲಿ ಅದು ಹಬ್ಬಿದ ರೀತಿಯನ್ನು ಕೆದಕಿ ಕೆದಕಿ ಅವರು ಬಣ್ಣಿಸಿದ ಬಗೆ ಇತ್ಯಾದಿಗಳನ್ನು ಲೇಖಕರು ಮನೋಜ್ಞವಾಗಿ ನಿರೂಪಿಸಿದ್ದಾರೆ.ನುಡಿಶೋಧದ ಹಿನ್ನೆಲೆಯಾಗಿ ಶಂಬಾ ಅವರ ಪ್ರಾರ್ಥನೆಯ ಸೊಲ್ಲುಗಳು ಗಮನೀಯ.

                 ಹೊನ್ನ ಮುಸುಕನ್ನು ಓಸರಿಸಿ ತಾಯ್ ನನ್ನಿಯೇ

                ನಿನ್ನ ಮೊಗವನ್ನು ತೋರೆ

                ಬನ್ನಬಡುತಿಹೆ ನಾನು ನಿನ್ನ ದರುಶನಕಾಗಿ

                ಹಡೆದಮ್ಮ ವರವ ನೀಡೆ

                ( ಶಂಬಾ ಅವರ ಮೊದಲ ಸ್ವತಂತ್ರ ಕವಿತೆಯಾಗಿ ಮಲ್ಲೇಪುರಂ ಇದನ್ನು ದಾಖಲಿಸಿದ್ದಾರೆ.)

                ಮಹಾರಾಷ್ಟ್ರಕ್ಕೆ ಇರುವ ಕನ್ನಡದ ಋಣ, ಕನ್ನಡವು ತನ್ನ ವ್ಯಾಪಕತೆಯಿಂದ ಸೀಮಿತತೆಗೆ ಇಳಿದದ್ದು- ಇತ್ಯಾದಿಗಳನ್ನು ಶಂಬಾ ಸಾಧಾರ ಚರ್ಚಿಸುತ್ತಾರೆ.ಆಲೂರು ವೆಂಕಟರಾಯರ ಕರ್ನಾಟಕ ಗತವೈಭವದ್ದು ಕನ್ನಡ ಪ್ರಜ್ಞೆಯ ಜಾಗೃತಿಯ ಒಂದು ದಾರಿಯಾದರೆ ಶಂಬಾ ಅವರ ಕೃತಿಗಳದ್ದು ಇನ್ನೊಂದು ದಾರಿ. ನಾಡಿನ ಸಾಂಸ್ಕತಿಕ ಪುನಾರಚನೆಗೆ ಎರಡೂ ಅಗತ್ಯವಾಗಿದ್ದುವು.ಚರಿತ್ರೆಯನ್ನು ವೈಭವೀಕರಿಸುವುದಾಗಲೀ ಆಧ್ಯಾತ್ಮೀಕರಿಸುವುದಾಗಲೀ ಮಾಡದೆ ಸತ್ಯದ ನವದರ್ಶನವಾಗಬೇಕಾದರೆ-"ಭಾಷಾ ಶಾಸ್ತ್ರವು ಕೊಡುವ ಸಲಹೆ ಸೂಚನೆಗಳು ಸಮಾಜವಿಕಾಸ ಶಾಸ್ತ್ರ,ವಂಶವಿಜ್ಞಾನ,ಪುರಾಣಶಾಸ್ತ್ರಪರಂಪರೆ,ಧರ್ಮ, ಮಾನವ ಶಾಸ್ತ್ರ ಅಥವಾ ಪುರಾತನ ವಸ್ತುವಿಜ್ಞಾನ- ಇಂತಹ ಬೇರೆ ಬೇರೆ ಶಾಖೆಯ ಶಾಸ್ತ್ರಗಳ ಬೆಂಬಲವೂ ದೊರೆತರೆ ಮಾತ್ರ ಆ ಮಾತನ್ನು ನಿಶ್ಚಿತಸಿದ್ಧಾಂತವಲ್ಲದಿದ್ದರೂ ವಿಚಾರಾರ್ಹವೆಂದು ಸಂಗ್ರಹಿಸಿ ಮುಂದಡಿಯಿಡಲು ಅಡ್ಡಿಯಿಲ್ಲ. ಇವೆಲ್ಲ ಶಾಸ್ತ್ರಗಳಲ್ಲಿ ಪಾರಂಗತರಾದ ವಿದ್ವಾಂಸರು ಈ ಕೆಲಸವನ್ನು ಎಂದು ಕೈಗೊಳ್ಳುವರೋ ಅದು ಕರ್ನಾಟಕದ ಇತಿಹಾಸದ ಸುವರ್ಣದಿನ. ಆದರೆ ಅಲ್ಲಿಯವರೆಗೆ ಉಳಿದವರು ತಮ್ಮ ಅಭ್ಯಾಸದಲ್ಲಿ ಹೊಳೆದುದನ್ನು ತಿಳಿದುದನ್ನು ಅರಿತುದನ್ನು , ಕುರಿತುದನ್ನು ಸಂಗ್ರಹಿಸಿ ತಮ್ಮ ಅಳಿಲು ಸೇವೆಯನ್ನು ಸಲ್ಲಿಸುವುದು ಅಪರಾಧವಾದೀತೆ?" ಎಂದು ಶಂಬಾಜೋಶಿಯವರು( ಕಂನಾಡು ಕರ್ನಾಟಕ- ಶಂಬಾ 

ಕೃತಿಸಂಪುಟ- 1999- ಪು266ರಲ್ಲಿ) ಓರ್ವ ನಿಜವಿದ್ವಾಂಸನಿಗೆ ಸಹಜವಾದ ವಿನಯದಿಂದಲೂ ಕಾಳಜಿಯಿಂದಲೂ ಪ್ರಶ್ನಿಸಿದ್ದನ್ನು ಮಲ್ಲೇಪುರಂ ಅವರು ಉಲ್ಲೇಖಿಸುತ್ತಾರೆ.

                ಮಲ್ಲೇಪುರಂ ಅವರು ಗುರುತಿಸುವಂತೆ ಶಂಬಾ ಇಡಿಯಾದ ಆಕೃತಿಯ ಮುಖಾಂತರ ಒಟ್ಟುಸಂಸ್ಕತಿಯ ಆಶಯವನ್ನು ಗ್ರಹಿಸಿಕೊಳ್ಳುವ ತವಕದಿಂದ ಮುಂದುವರಿದವರು.ಕನ್ನಡ ಸಂಸ್ಕತಿಸಮಸ್ಯೆಗಳ ಬೇರನ್ನು ಭಾರತೀಯ ಸಂಸ್ಕತಿಯ ಅಂತರ್ ನೆಲೆಗಳ ಹಾಸು ಮತ್ತು ಹೊಕ್ಕುಗಳಲ್ಲಿ ಹುಡುಕಿಕೊಳ್ಳುವ ಪ್ರಯತ್ನ ಮಾಡಿದರು.

                ಶಂಬಾ ಅವರ ಸಂಶೋಧನೆಯ ಹೆಜ್ಜೆಗಳು ಯಾವ ಯಾವ ನೆಲೆಗಳಲ್ಲಿ ಸಾಗಿದ್ದವು ಎನ್ನುವುದು ಕುತೂಹಲಕರ.

                1. ಭೌಗೋಳಿಕ ವ್ಯಾಪ್ತಿಯ ನೆಲೆಗಳು(ನರ್ಮದಾ, ಕಾವೇರಿ ಸೀಮೆಗಳು)

                2.ಜಾನಾಂಗೀಯ ಅಧ್ಯಯನದ ನೆಲೆಗಳು( ಹಟ್ಟಿಗಾರರು- ದ್ರವಿಡ, ಹಟ್ಟೀಕಾರ, ತುರುವ,ಕುರುವ, ಪಶುಪಾಲನೆಯ ಪತ್ತಿಜನ- ಪಟ್ಟಿಜನ- ಹೀಗೆ)

                3.ಭಾಷಿಕ ಅಂತ:ಪ್ರಮಾಣದ ನೆಲೆಗಳು( ಸ್ಥಳನಾಮಗಳು, ಇನ್ನಿತರ ಶಬ್ದಮೂಲಗಳು)

                4.ಆಚರಣಾ ಮೂಲದ ನೆಲೆಗಳು( ಮಾನವಮಿ, ದೀಪಾವಳಿ, ಗೋಕ್ರೀಡನ ಇತ್ಯಾದಿ)

                5.ದೈವತ ಕತೆಗಳು, ಸಾಂಕೇತಿಕ ಆಕೃತಿಗಳ ನೆಲೆಗಳು( ಗೊಂಡರದೇವ, ಖಂಡೋಬಾ,ಮಲ್ಲಯ್ಯ, ಮಾಳವ್ವೆ, ಗ್ರಾಮದೇವತೆಗಳು ಇತ್ಯಾದಿ)

                 ಕನ್ನಡ ಸಂಸ್ಕತಿಯ ಶೋಧನೆಯೊಂದಿಗೆ ಆರಂಭಗೊಂಡ ಅವರ ಪಯಣವು ಮರಾಠಿ ಸಂಸ್ಕತಿಶೋಧನೆ, ವೀರಶೈವಮತದ ಬೇರುಗಳನ್ನು ಪತ್ತೆ ಮಾಡುವಲ್ಲಿ, ಋಗ್ವೇದಸಾರ,ನಾಗಪ್ರತಿಮಾವಿಚಾರದ ಕುರಿತಾದ ಅನ್ವೇಷಣೆಯಲ್ಲಿ ಭಾರತೀಯ ಸಂಸ್ಕತಿಯ ಶೋಧದ ಕಡೆಗೆ ಮುಂದುವರಿಯುತ್ತದೆ.ಮುಂದೆ ಅದು ಜಾಗತಿಕ ಸಂಸ್ಕೃತಿಯತ್ತ

ವಿಸ್ತರಿಸುತ್ತದೆ.ಪ್ರವಾಹಪತಿತರ ಕರ್ಮ ಹಿಂದೂ  ಎಂಬ ಧರ್ಮ,ಬುದ್ಧನ ಜಾತಕ ಮುಂತಾದ ಕೃತಿಗಳು ಇದಕ್ಕೆ ಸಾಕ್ಷಿಯಾಗಿವೆಯೆಂದು ಮಲ್ಲೇಪುರಂ ಹೇಳುತ್ತಾರೆ.ಗ್ರೀಕ್, ಈಜಿಪ್ಟ್,ಮೆಸಪೊಟೇಮಿಯಾ ಹಾಗೂ ಭಾರತೀಯ ಸಾಮಾಜಿಕ ಧಾರ್ಮಿಕ ನೆಲೆಗಳ ತುಲನಾತ್ಮಕ ವಿವೇಚನೆ ಮಾನವ ಸಂಸ್ಕತಿಯನ್ನು ವಿವರಿಸಿಕೊಳ್ಳುವ ಅವರ ಪ್ರಯತ್ನವಾಗಿ ಅದರ ಹಿಂದೆ ವಿಶಾಲವಾದ ಮಾನವ ಧರ್ಮದತ್ತ ತುಡಿಯುವ ಶಂಬಾ ಅವರ ಮನಸ್ಸನ್ನು ಲೇಖಕರು  ಗುರುತಿಸುತ್ತಾರೆ.

                 ಸಂಸ್ಕ್ರತಿಯ ಒಳಸುಳಿಗಳು ಜಾನಪದದಲ್ಲಿ ಬೇರುಬಿಟ್ಟಿರುವುದನ್ನು  ಮಾತೃದೇವತೆಯ ಆರಾಧನೆ ಆದಿಮ ಸಂಸ್ಕತಿಯಲ್ಲಿ ನೆಲೆಗೊಂಡದ್ದನ್ನು, ಮಾತೃಪ್ರಧಾನ ಮೌಲ್ಯಗಳು ಪುರುಷಪ್ರಧಾನ ವೈದಿಕ ಸಂಸ್ಕತಿಗಿಂತ ಮೊದಲೇ ಇಲ್ಲಿ ಬದುಕಿದ್ದನ್ನು ಕೊನೆಗೆ ವೈದಿಕ ಸಂಸ್ಕತಿಯು ತನ್ನೊಡಲಲ್ಲಿ ಅವುಗಳನ್ನು ಸ್ವೀಕರಿಸಿದ್ದನ್ನು ಶಂಬಾ ಅನಾವರಣಗೊಳಿಸಿದ ಬಗ್ಗೆ ಲೇಖಕರು ಪ್ರಸ್ತಾಪಿಸುತ್ತಾರೆ.ಕನ್ನಡದ ಮೂಲ ಸ್ಥಾನ ನರ್ಮದಾ ನದಿಯ ತೀರಪ್ರಾಂತವಿರಬೇಕೆನ್ನುವ ಅವರ ತರ್ಕ, ಅದಕ್ಕೆ ಅವರು ಕಂಡು ಕೊಳ್ಳುವ ಆಧಾರಗಳು ಮಹತ್ವಪೂರ್ಣವಾದವು.

                ಇಂದಿನ ಅವಗತಿಗಳಿಗೂ ಅವಸರ್ಪಿಣಿ ರೂಪಕ್ಕೂ ನಿನ್ನೆಯೇ ಕಾರಣವಾಗಬಲ್ಲದೆಂಬುದನ್ನ ತಮ್ಮ ಬರಹಗಳ ಮೂಲಕ ಅವರು ಮಂಡಿಸಿದ್ದು ವಿಶೇಷ.ಇಂದಿನ ಪಡಿಪಾಟಲು ಮತ್ತು ವಿಸಂಗತಿಗಳನ್ನು ಸರಿಪಡಿಸಿಕೊಳ್ಳದೆ ನಾಳೆಯ ಭವಿಷ್ಯಕ್ಕೆ ಅರ್ಥ ಇರುವುದಿಲ್ಲವೆಂಬ  ಶಂಬಾ ತತ್ವಚಿಂತನೆಯು ಕೂಡ ಬಹಳ ಮುಖ್ಯವಾದದ್ದು.' ನಿನ್ನೆ ಮುಖ್ಯ ಎಂದರೆ ಅದು ಪರಿಮಿತ. ನಾಳೆಯೂ ಮುಖ್ಯ ಎಂದರೆ ಅದು ಅಪರಿಮಿತ " ಈ ಎಚ್ಚರ ಬೇಕು ಎನ್ನುವುದು ಅವರ ಇಂಗಿತವಾಗಿ ಮಲ್ಲೇಪುರಂ ಅವರು ಕಾಣುತ್ತಾರೆ.

                 ಒಟ್ಟಿನಲ್ಲಿ ಶಂಬಾ ಅವರ ವಿದ್ವತ್ತು ಪ್ರತಿಭೆಗಳ ಕುರಿತು ಅಪ್ಪಟ ಅಭಿಮಾನವೂ ಅರಿವೂ ಉಳ್ಳ  ಲೇಖಕರು  ಈ ಕೃತಿಯಲ್ಲಿ ಅವರ ಮಹೋನ್ನತ ಚೇತನಕ್ಕೆ ನ್ಯಾಯ ಒದಗಿಸಿದ್ದಾರೆ. ಮುಂದಿನ ಪೀಳಿಗೆಗೆ ಒಂದು ಸ್ಫೂರ್ತಿಯನ್ನು ನೀಡಿದ್ದಾರೆ


ಶಂಬಾ ಅವರ ಸಾವಿನ ಬೆನ್ನಲ್ಲೆ ಅವರ ಬಾಳ ಸಂಗಾತಿ ಪಾರ್ವತಿಯ ಮರಣವೂ ಜರಗಿ ಇಬ್ಬರನ್ನೂ ಒಂದೇ ಚಿತೆಯಲ್ಲಿ ಸಂಸ್ಕಾರ ಮಾಡಲಾಯಿತು ಎನ್ನುವ ವಿಚಾರವನ್ನು  ಲೇಖಕರು ಉಲ್ಲೇಖಿಸಿದ್ದು ಒಂದು ವಿಶೇಷ ಘಟನೆಯಾಗಿ ಮನಸ್ಸಿನಲ್ಲಿ ಉಳಿಯುತ್ತದೆ.

 

ಮಹೇಶ್ವರಿ.ಯು