Powered By Blogger

Tuesday, January 11, 2022

ರಹಮತ್ ತರೀಕೆರೆ -ಚಂಪಾ " ಒಂದಾನೊಂದು ಕಾಲಕ್ಕ "

ಚಂಪಾ: 'ಒಂದಾನೊಂದು ಕಾಲಕ್ಕ' ನನ್ನ ಬರೆಹದ ಬದುಕಿನ ಮೊದಲ ಘಟ್ಟದಲ್ಲಿ, ಗಾಢ ಪ್ರಭಾವ ಬೀರಿದ ಸಂಗತಿಗಳಲ್ಲಿ ಚಂಪಾರ ಬರೆಹ, ಚಳುವಳಿಗಾರ ವ್ಯಕ್ತಿತ್ವ, `ಸಂಕ್ರಮಣ’ ಪತ್ರಿಕೆ ಮತ್ತು ಅವರಿದ್ದ ಬಂಡಾಯ ಸಾಹಿತ್ಯ ಚಳುವಳಿಗಳೂ ಸೇರಿವೆ. ನನ್ನನ್ನು ಸದಾ ಕಾಡುವ, ಅಷ್ಟೇನೂ ದಿಟ್ಟತನವಿಲ್ಲದ ನನ್ನ ವ್ಯಕ್ತಿತ್ವದ ಮಿತಿಯನ್ನೂ ಕಾಣಿಸುವ ಅವರ ಕವನಗಳಲ್ಲಿ 'ಒಂದಾನೊಂದು ಕಾಲಕ್ಕ' ಕೂಡ ಒಂದು. ಕಾವ್ಯದ ಪ್ರೇರಣೆಯನ್ನು ಸಾಮಾನ್ಯವಾಗಿ ಕವಿಗಳ ಪ್ರತಿಭೆಯಲ್ಲಿ, ಅವರಿಗೆ ಇಂಬಾಗಿ ನಿಂತ ಪರಂಪರೆಯ ಕಸುವಿನಲ್ಲಿ, ಕವಿಯ ವಿಶಿಷ್ಟಾನುಭವದಲ್ಲಿ, ಅವರ ಕೈವಶವಾಗಿರುವ ಕಸುಬುದಾರಿಕೆಯಲ್ಲಿ ಹುಡುಕುವ ಪದ್ಧತಿಯಿದೆಯಷ್ಟೆ. ಆದರೆ ಕವಿತೆ ಹುಟ್ಟುವ ಈ ಪ್ರೇರಣ ಮೂಲಗಳಲ್ಲಿ ಚಾರಿತ್ರಿಕ ಒತ್ತಡವೂ ಒಂದು. ಸಾಮಾನ್ಯವಾಗಿ ಉಸಿರುಗಟ್ಟುವ ಒತ್ತಡಗಳಲ್ಲಿ ಹುಟ್ಟುವ ಎಲ್ಲ ನಮೂನೆಯ ಬರೆಹಗಳು, ತಮ್ಮ ಸಂವೇದನೆಯ ಪ್ರಾಮಾಣಿಕತೆಯಿಂದ ಸಹಜತೆಯಿಂದ ಓದುಗರ ಎದೆತಾಕಿ ಸಂವಾದ ಮಾಡುವ ಸ್ಪಂದನಶೀಲ ಗುಣವನ್ನು ಪಡೆದಿರುತ್ತವೆ. ಹೀಗಾಗಿಯೇ ಸಾಧಾರಣ ಕವಿಗಳೂ ಮೃತ್ಯುವಿನ ಅಂಚಿನಲ್ಲಿ ತಲ್ಲಣಭಾವದಿಂದ ಧಗಧಗಿಸುವ ಕವಿತೆಗಳನ್ನು ಬರೆದಿರುವ ನಿದರ್ಶನಗಳಿವೆ. ಕಾಫ್ಕಾನ `ರೂಪಾಂತರ’, ಕಾಮೂನ `ಪ್ಲೇಗ್’, ಬ್ರಿಟಿಶರ ಆಳ್ವಿಕೆಯಲ್ಲಿದ್ದಾಗ ಬೇಂದ್ರೆಯವರ `ನರಬಲಿ’ ಕವಿತೆ, ಸಿದ್ಧಲಿಂಗಯ್ಯನವರ `ಹೊಲೆಮಾದಿಗರ ಹಾಡು’ಅಥವಾ ಟಿಪ್ಪು ಕುರಿತ ಜನಪದರ ಲಾವಣಿಗಳು ಹುಟ್ಟಿದ್ದು ಇಂತಹ ಅದಮನೀಯ ಒತ್ತಡಗಳಲ್ಲೇ. `ಬಡವರು ಸತ್ತರೆ ಸುಡಲಿಕ್ಕೆ ಸೌದಿಲ್ಲೊ’ ಎಂಬ ಚೀತ್ಕಾರ ಕೇಳಿಸುವಂತಿರುವ ಜನಪದ ತ್ರಿಪದಿಯೂ ಸನ್ನಿವೇಶದ ಕೂಸೇ ಆಗಿದೆ. ದರ್ವಿಶ್ ಮುಂತಾದ ಪ್ಯಾಲಸ್ತೈನೀ ಕವಿಗಳ ಕವಿತೆಗಳಲ್ಲಿ ತಮ್ಮ ಮನೆ-ತೋಟಗಳನ್ನು ಉಳಿಸಿಕೊಳ್ಳುವುದು ಜೀವನ್ಮರಣದ ಪ್ರಶ್ನೆಯನ್ನಾಗಿಸಿಕೊಂಡು ನಡೆಸುತ್ತಿರುವ ಸೆಣಸಾಟವು, ತುಂಬಿದ ಅಣೆಕಟ್ಟೆಯಿಂದ ರಭಸವಾಗಿ ಧುಮಿಕ್ಕುವ ಜಲದಂತೆ ಭಾವಾವೇಗದಲ್ಲಿ ಹೊಮ್ಮುವುದಕ್ಕೂ ಇದುವೇ ಕಾರಣ. ಕುಮಾರವ್ಯಾಸನಲ್ಲಿ ಬರುವ `ಅರಸುರಾಕ್ಷಸ ಮಂತ್ರಿ ಮೊರೆವ ಹುಲಿ ಪರಿವಾರ ಹದ್ದಿನ ನೆರವಿ, ಬಡವರ ಬಿನ್ನಪವನಿನ್ನಾರು ಕೇಳುವರು’ ಎಂಬ ಸಾಲುಗಳು, ರಾಜಧರ್ಮದ ನಿರ್ಲಿಪ್ತ ಬೋಧೆಯ ಭಾಗವಾಗಿ ಅಳವಡಿಕೆಯಾಗಿರುವುದು ದಿಟ. ಆದರೆ ಕವಿ ಅವನ್ನು ರಚಿಸುವಾಗ ತಾನು ಪಟ್ಟಿರುವ ಯಾವುದೊ ಆಳವಾದ ಸಂವೇದನೆಯನ್ನು ತುಂಬಿರಬಹುದು ಎಂಬಂತೆ ಅಲ್ಲಿ ವಿಷಾದವೂ ಮಡುಗಟ್ಟಿದೆ. ಎಂತಲೇ ಈ ಸಾಲುಗಳು ಬಿಕ್ಕಟ್ಟಿನಲ್ಲಿ ನಾಡು ಹಾಯುವಾಗೆಲ್ಲ ಬಳಕೆಗೊಳ್ಳುತ್ತ, ನಮಗಾಗೇ ಈಗ ರಚಿತವಾದವು ಎಂಬಂತೆ ಆವರ್ತನೆಗೊಳ್ಳುತ್ತಿವೆ. ತುರ್ತುಪರಿಸ್ಥಿತಿ ವಿರುದ್ಧ ಬಂದ ಕವಿತೆಗಳ ಸಂಕಲನದ (`ಆಪತ್ಕಾಲೀನ ಕವಿತೆಗಳು’ ಸಂ. ಕಿ.ರಂ.ನಾಗರಾಜ), ಈ ಸಾಲುಗಳನ್ನು ಮೊದಲಿಗೇ ಉದ್ಧರಿಸಲಾಗಿದೆ. ಚಂಪಾ ಅವರು ಎಮರ್ಜನ್ಸಿಯ ಹೊತ್ತಲ್ಲಿ ಬರೆದ `ಒಂದಾನೊಂದು ಕಾಲಕ್ಕೆ’ ಕವನವು, ಮೇಲ್ಕಾಣಿಸಿದ ತಾತ್ವಿಕ ರಾಜಕಾರಣದ ಮತ್ತು ಕಾವ್ಯಮೀಮಾಸೆಯ ಚೌಕಟ್ಟಿನೊಳಗೇ ಹುಟ್ಟಿದೆ.. ಇದೇನೂ ಕನ್ನಡದ ಶ್ರೇಷ್ಠ ಕವಿತೆಗಳ ಪಟ್ಟಿಯಲ್ಲಿ ಒಂದಾಗಿ ಪರಿಗಣಿತವಾಗಿಲ್ಲ. ಆದರೆ ಸರಳವಾದ ಸಾದಾಸೀದಾ ಪದ್ಯವಾಗಿರುವ ಇದರೊಳಗೆ ತುಂಬಿಕೊಂಡಿರುವ ದುಗುಡ ಮತ್ತು ಉತ್ಕಟತೆಗಳು, ಸ್ವಾತಂತ್ರ್ಯದ ಬೇಡಿಕೆಯ ಭಾವವನ್ನು ನಮ್ಮ ಹೃದಯದೊಳಗೆ ಹುಗಿಸಿ ಕಂಪನ ಹುಟ್ಟಿಸುವಷ್ಟು ತೀವ್ರವಾಗಿವೆ. `ಓ ಎನ್ನ ದೇಶಬಾಂಧವರೇ’ (೧೯೭೭) ಸಂಕಲನದಲ್ಲಿರುವ ಆ ಕವಿತೆ ಹೀಗಿದೆ: ಒಂದಾನೊಂದು ಕಾಲಕ್ಕೆ, ಗೆಳೆಯರೆ ಈ ಬಾನಿಗೆ ಅಂಚೆಂಬುದು ಇರಲಿಲ್ಲ. ಈ ನೆಲಕ್ಕೆ ಗಡಿಯೆಂಬುದು ಇರಲಿಲ್ಲ. ನೀವು ಕೂಗಿದ್ದೇ ಆಗ ಕಾವ್ಯವಾಗಿತ್ತು. ಕೇಳುವವರಿರಲಿಲ್ಲ ನೀವು ಹಿಡಿದದ್ದೇ ಆಗ ಹಾದಿಯಾಗಿತ್ತು ತುಳಿಯುವವರಿರಲಿಲ್ಲ ನಿಮ್ಮ ಬಾಯಿಗೆ ಈಗ ಬಟ್ಟೆ ತುರುಕಿದ್ದಾರೆ. ನಿಮ್ಮ ಕಾಲಿಗೆ ಈಗ ಬೇಡಿ ಬಿಗಿದಿದ್ದಾರೆ ನೀವೀಗ ಸ್ವಲ್ಪ ಝಾಡಿಸಿದರೆ ಕಾಲು, ಬೇಡಿ ಹರಿಯಲಿಕ್ಕಿಲ್ಲ; ಆದರೆ ಬಾನಲ್ಲಿ ಹಾಲುಹಾದಿ ಮೂಡುತ್ತದೆ. ಮೌನ ಮುರಿಯಲು ಸ್ವಲ್ಪ ಹೆಣಗಿದರೆ ನೀವು ಶಬ್ದ ಹೊರಡಲಿಕ್ಕಿಲ್ಲ; ಆದರೆ ನೆಲವೇ ಎದೆ ಬಿರಿತು ಹಾಡುತ್ತದೆ. ಕವನವು `ಒಂದಾನೊಂದು ಕಾಲಕ್ಕೆ’ ಎಂಬ ಕಾಲಸೂಚಕ ಪದಗುಚ್ಛದ ಮೂಲಕ ಗತಕಾಲದ ಚರಿತ್ರೆಯಲ್ಲಿದ್ದ ಒಂದು ಸ್ವತಂತ್ರ ಅವಸ್ಥೆಯನ್ನು ಸೂಚಿಸುವ ಮೂಲಕ ಆರಂಭವಾಗುತ್ತದೆ. ಆಗಿದ್ದ ಸ್ವಾತಂತ್ರ್ಯವನ್ನು ಗಡಿಯಿಲ್ಲದ ನೆಲ, ಅಂಚಿಲ್ಲದ ಬಾನು, ಕೂಗಿದರೂ ಕಾವ್ಯವಾಗುವ ಮತ್ತು ಹಿಡಿದಿದ್ದೇ ಹಾದಿಯಾಗುವ ಮುಕ್ತತೆಯ ಚಿತ್ರಗಳ ಮೂಲಕ ಮುಂದಿಡಲಾಗುತ್ತದೆ. ಆದರೆ ಲೋಕದ ಚರಿತ್ರೆ ಬಲ್ಲವರಿಗೆ ತಿಳಿದಿದೆ, ಎಲ್ಲ ಕಾಲಕ್ಕೂ ಸ್ವಾತಂತ್ರ್ಯ ಕಸಿದುಕೊಳ್ಳುವ ಶಕ್ತಿಗಳಿದ್ದವು. ಅವುಗಳ ವಿರುದ್ಧ ದನಿಯೆತ್ತಿ ಸತ್ತವರೂ ಗೆದ್ದವರೂ ಕೂಡ ಇದ್ದರು. ಸ್ವಾತಂತ್ರ್ಯ ಹರಣ ಮತ್ತು ಅದನ್ನು ಪಡೆಯುವುದಕ್ಕೆ ಮಾಡುವ ಸಂಘರ್ಷ, ಅದಕ್ಕಾಗಿ ಸಿಕ್ಕ ಮರಣ-ಗೆಲುವುಗಳು ನಿರಂತರವಾಗಿವೆ. ಆದರೆ ಗತದಲ್ಲಿ ಅನಿರ್ಬಂಧಿತವಾದ ಸ್ವಾತಂತ್ರ್ಯವಿತ್ತು ಎಂದು ಕವಿತೆ ಪ್ರಕೃತಿಯ ಚಿತ್ರಗಳ ಮೂಲಕ ತುಸು ಉತ್ಪ್ರೇಕ್ಷೆಯಲ್ಲಿ ಹೇಳುತ್ತಿರುವುದು ವರ್ತಮಾನದಲ್ಲಿ ಅದಿಲ್ಲ ಎಂದು ವಾಸ್ತವವನ್ನು ಸೂಚಿಸಲು; ಚರಿತ್ರೆಯ ನೆನಪುಗಳ ಜಡವಾದ ವರ್ತಮಾನದಲ್ಲಿ ಕ್ರಿಯಾಶೀಲತೆ ಹುಟ್ಟಿಸಲಿ ಎಂದು ಪ್ರೇರಿಸಲು. ಇಲ್ಲಿ ಕವಿಯು ಜನತೆಯ ನಾಯಕನಾಗಿದ್ದಾನೆ. ಹೀಗಾಗಿ ಜನರ ಸ್ವಾತಂತ್ರ್ಯ ಮತ್ತು ಅವನ ಸ್ವಾತಂತ್ರ್ಯಗಳೆರಡೂ ಇಲ್ಲಿ ಏಕೀಭವಿಸಿವೆ. ಎರಡನೇ ಚಿಕ್ಕದಾದ ಪದ್ಯಖಂಡವು ವರ್ತಮಾನದಲ್ಲಿ ಈ ಸ್ವಾತಂತ್ರ್ಯಗಳು ಕಸಿಯಲ್ಪಟ್ಟ ದಾರುಣ ಸನ್ನಿವೇಶದ ಚಿತ್ರವನ್ನು ಮುಂದಿಡುತ್ತದೆ. ಆದರೆ ಈ ಬಂಧನದ ದಾರುಣತೆ ಖಾಯಮ್ಮೇನಲ್ಲ. ಅದನ್ನು ನಿವಾರಿಸಬಹುದು. ಇದಕ್ಕಾಗಿ ದಂಗೆ ಚಳುವಳಿ ಹೋರಾಟ ಮುಂತಾದ ಮಹತ್ವಾಕಾಂಕ್ಷೆಯ ಭಾರವಾದ ಪ್ರಯತ್ನಗಳನ್ನು ಕವಿತೆ ಮುಂದಿಡುತ್ತಿಲ್ಲ. ಬದಲಾಗಿ `ಸ್ವಲ್ಪ ಕಾಲು ಝಾಡಿಸಲು’ `ಮೌನ ಮುರಿಯಲು’ `ಸ್ವಲ್ಪ ಹೆಣಗಲು’ ಸೂಚಿಸುತ್ತದೆ. ವ್ಯಕ್ತಿಗಳು ತಮ್ಮ ಪರಿಮಿತಿಯಲ್ಲೇ ಮಾಡುವ ಇಂತಹ ಸಣ್ಣಪುಟ್ಟ ಮಿಸುಗಾಟದಿಂದ ಇಡೀ ವ್ಯವಸ್ಥೆಯನ್ನು ಪಲ್ಲಟಿಸುವ ಮಹಾಕ್ರಾಂತಿ ಸಂಭವಿಸಿದೆ ಹೋಗಬಹುದು. ಆದರೆ ಅಂತಹ ಅದಕ್ಕೆ ಬೇಕಾದ ನಡಿಗೆಯಂತೂ ಶುರುವಾಗುತ್ತದೆ. ಸಂಪೂರ್ಣ ಸ್ವಾತಂತ್ರ್ಯವು ನಾಡಿನ ಸಮುದಾಯವು ಪ್ರಜ್ಞೆ ಮತ್ತು ಪ್ರತಿರೋಧ ಗುಣವನ್ನು ಪಡೆದುಕೊಂಡು ಕೆಟ್ಟ ವ್ಯವಸ್ಥೆಯ ವಿರುದ್ಧ ಸಂಘಟಿತ ದನಿಯೆತ್ತಿದಾಗ ಮಾತ್ರ ಸಾಧ್ಯ. ಅದು ಸದ್ಯಕ್ಕೆ ತಕ್ಷಣ ಸಾಧ್ಯವಾಗುವ ಸನ್ನಿವೇಶವಿಲ್ಲ. ಆದರೆ ಅದುವೇ ನಿಷ್ಕ್ರಿಯತೆಗೂ ಕಾರಣವಾಬೇಕಿಲ್ಲ. ಬದಲಾವಣೆ ಎಂಬ ದೀರ್ಘ ಯಾನವು ಸಣ್ಣಹೆಜ್ಜೆಗಳ ಮೂಲಕವೇ ಆರಂಭವಾಗುತ್ತದೆ. ಅಂತಹ ಮಿಸುಕಾಟ ಮಾಡಿದರೆ ಪರಿಣಾಮ ಹಾಲಹಾದಿ ಮೂಡುತ್ತದೆ; ನೆಲವೇ ಎದೆಬಿರಿತು ಹಾಡುತ್ತದೆ. ನಿರ್ದಿಷ್ಟ ಹಾಡಿನ ಭಾವವು ಮನುಕುಲವು ಮತ್ತೆಮತ್ತೆ ಎದುರಿಸುವ ಸಮಸ್ಯೆಯನ್ನು ಕುರಿತು ಇದ್ದಾಗ, ಅದು ನಾನಾ ವಿನ್ಯಾಸದಲ್ಲಿ ಬೇರೆಬೇರೆ ಭಾಷೆಯಲ್ಲಿ ಎಲ್ಲ ಕಾಲಘಟ್ಟದಲ್ಲೂ ಪುನರಾವರ್ತನೆ ಆಗುತ್ತಲೇ ಇರುತ್ತದೆ. ದುಷ್ಟ ಸರ್ವಾಧಿಕಾರಗಳ ಅಡಿಯಲ್ಲಿ ಉಸಿರುಗಟ್ಟುವ ಸನ್ನಿವೇಶದಲ್ಲಿ ಬದುಕುವ ಎಲ್ಲ ಸಮಾಜಗಳು, ತಮ್ಮ ಎದೆಯ ದನಿಯೆಂದೇ ಹಾಡಿಕೊಳ್ಳುವಷ್ಟು ಈ ಕವಿತೆ ಸಾಧಾರಣೀಕರಣವನ್ನು ಪಡೆದಿದೆ. ಹೀಗಾಗಿಯೇ ಇದರ ಭಾವವು ಗಂಡಾಳಿಕೆ ಸಮಾಜದಲ್ಲಿರುವ ವಿವಾಹ ಮತ್ತು ಕುಟುಂಬ ಮುಂತಾದ ವ್ಯವಸ್ಥೆಗಳಲ್ಲಿ ನಲುಗುತ್ತಿರುವ ಸ್ತ್ರೀಯರ ದನಿಯಾಗುವಂತಿದೆ; ಕನ್ನಡದ ಮಹಿಳಾ ಸಂವೇದನೆಯ ಕಾವ್ಯದಲ್ಲಿ ಇದರ ಪ್ರತಿಬಿಂಬಗಳನ್ನು ಕಾಣಬಹುದು; ಜೆಎನ್ಯು ವಿದ್ಯಾರ್ಥಿಗಳು ಕೂಗಿದ ಆಜಾದಿ ಘೋಷಣೆಯಲ್ಲಿ ಇದು ಅನುರಣನಗೊಂಡಿತು; ಈಗಲೂ ಟರ್ಕಿಯ ಕುರ್ದಿಶರ, ಇಸ್ರೇಲಿ ಹುಕೂಮತ್ತಿನಲ್ಲಿರುವ ಪ್ಯಾಲಸ್ತೇನಿಯರ, ಚೀನಾದ ಪಾದದಡಿ ಅಪ್ಪಚ್ಚಿಯಾಗಿರುವ ವುಗೈರ್ ಮುಸ್ಲಿಮರ ಹಾಗೂ ಟಿಬೆಟಿಯನ್ ಬೌದ್ಧರ, ಬರ್ಮಾದ ರೋಹಿಂಗ್ಯಾಗಳ ಎದೆಯೊಳಗೆ ಈ ಕವನ ಹಲವಾರು ವಿನ್ಯಾಸಗಳಲ್ಲಿ ರೂಪುಗೊಳ್ಳುತ್ತಿರಬಹುದು. ಬಾಬಾ ಸಾಹೇಬರು ಬೌದ್ಧಧರ್ಮವನ್ನು ಸ್ವೀಕಾರ ಮಾಡುವ ಮುನ್ನ ಇದೇ ಭಾವವುಳ್ಳ ಮಾತುಗಳನ್ನು ಆಡಿದರು ಮತ್ತು ಬರೆದರು. ಸಾರಾ ಅಬೂಬಕರ್ ಅವರ ಕಥನದ ನಾಯಕಿಯರಲ್ಲಿ ಈ ಪದ್ಯವು ಬೇರೆ ಧಾಟಿಲಯದಲ್ಲಿ ಕಟ್ಟಲ್ಪಟ್ಟಿದೆ. ಸಿದ್ಧಲಿಂಗಯ್ಯನವರ `ಎಲ್ಲಿಗೆ ಬಂತು ಯಾರಿಗೆ ಬಂತು ಸ್ವಾತಂತ್ರ್ಯ' ಕವನದಲ್ಲಿ ಈ ಹಾಡಿನ ಭಾವವು ಹೋರಾಟದ ಮೊದಲು ಹುಟ್ಟುವ ಸಹಜವಾದ ಕಟುಪ್ರಶ್ನೆಯಂತೆ ಕೇಳಲ್ಪಟ್ಟಿದೆ. ಶತಮಾನದ ಹಿಂದೆ ರವೀಂದ್ರನಾಥ ಟಾಗೂರರು ಗೀತಾಂಜಲಿ ಸಂಕಲನದಲ್ಲಿ ಸೇರಿಸಿದ `ವೇರ್ ದಿ ಮೈಂಡ್ ಈಸ್’ ಎಂಬ ಗೀತೆಯಲ್ಲಿ ಈ ಕವನದ ಭಾವವು ದೇಶಕಟ್ಟುವ ತತ್ವವಾಗಿ ಈಗಾಗಲೇ ಹೇಳಲ್ಪಟ್ಟಿದೆ. `ಆನುಒಲಿದಂತೆ ಹಾಡುವ’ ಎಂಬ ಬಸವಣ್ಣನವರ ವಚನ, ಕುವೆಂಪು ಅವರ `ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಲೇಖನ ಈ ಪದ್ಯದ ಮೂಲಮಾತೃಕೆಗಳಾಗಿದ್ದರೆ ಆಶ್ಚರ್ಯವಿಲ್ಲ. ಎಲ್ಲ ದಮನಿತ ಸಮಾಜ ಕುಟುಂಬ ಧರ್ಮ ದೇಶಗಳಲ್ಲಿ ಬದುಕುವ ಪ್ರಜ್ಞಾವಂತರಿಗೂ, ಸಂವೇದನಶೀಲರಿಗೆ ಸ್ವಾತಂತ್ರ್ಯ ಬಯಸುವವರಿಗೂ, ಈ ಕವನ ತಮ್ಮದೇ ಸ್ವಾತಂತ್ರ್ಯದ ಅಭೀಪ್ಸೆಯ ಹಾಡೆನಿಸುತ್ತದೆ. ಈಗ ತಾಲಿಬಾನಿಗಳ ಕೋವಿಗೈಯಲ್ಲಿ ಸಿಲುಕಿರುವ ಆಫಘಾನಿಸ್ಥಾನದ ಮಹಿಳೆಯರು ಮತ್ತು ಕಲಾವಿದರು ಇಂತಗ ಗೀತೆಗಳನ್ನು ಒಳಗೇ ಹಾಡುತ್ತಿರಬಹುದು. ನಿರ್ದಿಷ್ಟ ಲಿಂಗ, ಜಾತಿ, ಧರ್ಮಗಳಲ್ಲಿ ಹುಟ್ಟಿದ ಕಾರಣಕ್ಕೇ ಈಗ ಇಂಡಿಯಾದ ಬೀದಿಹಾದಿಗಳಲ್ಲಿ ಬಡಿಸಿಕೊಂಡು ಸಾಯುತ್ತಿರುವ ಮಹಿಳೆಯರೂ ದಲಿತರೂ ಮುಸ್ಲಿಮರೂ ಕ್ರೈಸ್ತರೂ ಈ ಹಾಡನ್ನು ಹಾಡಬಹುದು. ನಾಡಿನ ಇಕ್ಕಟ್ಟಿನ ಗಳಿಗೆಗಳಲ್ಲಿ ಚಂಪಾ, ನಮ್ಮ ಆತ್ಮಗಳಿಗೆ ಹತ್ತಿದ ತುಕ್ಕನ್ನು ತೆಗೆದು ಅರದಲ್ಲಿ ಉಜ್ಜಿ ಝಗಝಗಿಸುವ ಕತ್ತಿಯಾಗಿಸಬಲ್ಲ ಇಂತಹ ಕವನಗಳನ್ನು, ಯಾವುದೇ ಶ್ರೇಷ್ಠತೆಯ ಮಹಾತ್ವಾಕ್ಷಾಂಕ್ಷೆಯಿಲ್ಲದೆ ಸಹಜ ತುಡಿತದಲ್ಲಿ ಬರೆದರೆಂಬುದೇ, ಅವರ ಚಾರಿತ್ರಕ ಮಹತ್ವವನ್ನು ಸಾಬೀತುಗೊಳಿಸುವ ಸಂಗತಿಯಾಗಿದೆ. ಪಟ: ೩೧ ವರುಷಗಳ ಹಿಂದೆ ಬೀದರದಲ್ಲಿ ನಡೆದ ಕಾರ್ಯಕ್ರಮದ್ದು: ನನ್ನ ಬದಿ ಬಿಳಿಮಲೆ, ಚೆನ್ನಣ್ಣ, ಚಂಪಾ, ಸಬರದ ಹಾಗೂ ಕಾರ್ಯಕ್ರಮದ ನಿರೂಪಕಿ ಯಶೋದಮ್ಮ ಸಿದ್ದಬಟ್ಟೆ) 45 Comments Giridhar Karkala ನಮನಗಳು · Reply · 23h

No comments:

Post a Comment