Powered By Blogger

Thursday, April 7, 2022

ಕುಸುಮಾ ಆಯರನಹಳ್ಳಿ- ಕವಿತೆ ಅಂದರೆ ವಿಪರೀತ ಭಯ ಅವನಿಗೆ

ಅದ್ಯಾಕೋ ಏನೋ ಕವಿತೆ ಅಂದರೆ ವಿಪರೀತ ಭಯ ಅವನಿಗೆ ನಿನ್ನ ಮೇಲೊಂದು ಕವಿತೆ ಬರೆಯುತ್ತೇನೆ ಅಂದಾಗೆಲ್ಲ. ನಿನ್ನ ಮೇಲೆ ಹಾವು ಬಿಸಾಡುತ್ತೇನೆ ಅಂದಂತೆ ಬೆಚ್ಚುತ್ತಾನೆ. ಅವನು ಕವಿತೆಗಳನ್ನು ಓದಿಯೇ ಇಲ್ಲ ಪಾಪ ಅವನಿಗೊಬ್ಬ ಸರಿಯಾದ ಕನ್ನಡ ಮೇಷ್ಟ್ರಾದರೂ ಸಿಗಬೇಕಿತ್ತು! ಕವಿತೆ ಹೂವೆನ್ನುವುದು ಹೂವಿಗಲ್ಲ, ಕಲ್ಲಂದರೆ ಕಲ್ಲಲ್ಲ, ಮುಳ್ಳೆಂದರೆ ಮುಳ್ಳಲ್ಲ ಅಷ್ಟೇ ಅಲ್ಲ ಪೆದ್ದಾ ನೀನೆಂದರೆ ನೀನಲ್ಲ, ನಾನೆಂದರೆ ನಾನೂ ಅಲ್ಲ ಅಂದರೆ... ಅಯ್ಯಯ್ಯೋ..ಅದೆಲ್ಲ ಹೇಗೆ ಸಾಧ್ಯ? ಕೇಳುತ್ತಾನೆ. ಕಾವ್ಯವೆಂದರೆ ರೂಪಕಗಳಪ್ಪಾ ಅಂದರೆ ಅದ್ಯಾಕೆ ಬೇಕು? ಅನ್ನುತ್ತಾನೆ. ಪದ್ಯವೊಂದು ವಿಸ್ಮಯ ಕಣೋ ಅಂದರೆ ನಕ್ಷತ್ರದ ಕಡೆ ನೋಡುತ್ತಾ ಒಬ್ಬನೇ ನಗುತ್ತಾನೆ. ಕವಿತೆ ಅಂದರೆ ಹ್ಯೂಮನ್ ಬಾಂಬೇನೋ ಎಂಬಂತಾಡುವ ಅವನನ್ನು ಕಂಡಾಗೆಲ್ಲ ರಾಶಿ ಕವಿತೆ ಹುಟ್ಟುತ್ತದೆ. ವಿಚಿತ್ರ!! ಹ್ಞಾಂ ..ಮುಂದಿನ ಸಲ ಸಿಕ್ಕಾಗ ನಾನೂ ನೀನೂ ಸಾಯಬಹುದು ಪೆದ್ದಾ ನಮ್ಮಿಬ್ಬರ ನಡುವೆ ವಿನಿಮಯಗೊಂಡ ಭಾವಗಳನ್ನು ಹಿಡಿದಿಟ್ಟ ಪದ್ಯ ಬದುಕುತ್ತದೆ ಬಹುಕಾಲ ಅಂತ ಹೇಳಿ ನೋಡುತ್ತೇನೆ. ಹೌದಲ್ಲಾ..! ಅಂದರೂ ಅನ್ನಬಹುದು ಅಥವಾ...

No comments:

Post a Comment